ತಮಿಳುನಾಡಿನಲ್ಲಿ ಕೊರೊನಾ ಲಾಕ್ಡೌನ್ ಅವಧಿಯನ್ನು ಕೆಲವು ವಿನಾಯಿತಿಯೊಂದಿಗೆ ಜೂನ್ 14 ರವರೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ವಿಸ್ತರಿಸಿದ್ದಾರೆ. ರಾಜ್ಯದ ಕೋವಾಯಿ, ನೀಲಗಿರಿ, ತಿರುಪ್ಪೂರು, ಈರೋಡ್, ಸೇಲಂ, ಕರೂರ್, ನಾಮಕ್ಕಲ್, ತಂಜಾವೂರು, ತಿರುವರೂರು, ನಾಗಪಟ್ಟಣಂ ಮತ್ತು ಮಯಿಲಾಡುತುರೈ ಎಂಬ 11 ಜಿಲ್ಲೆಗಳಲ್ಲಿ ಸೋಂಕು ಅಧಿಕವಾಗಿದೆ ಎಂದು ಮುಖ್ಯಮಂತ್ರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇಲಿನ ಜಿಲ್ಲೆಗಳಲ್ಲಿ, ಜೂನ್ 7 ರಿಂದ ಕೆಲವು ನಿರ್ಬಂಧಗಳೊಂದಿಗೆ, ಕಿರಾಣಿ, ತರಕಾರಿ, ಮಾಂಸ ಮತ್ತು ಮೀನುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6.00 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ಮಾರಾಟ ಮಾಡುವ ಬೀದಿಬದಿ ಅಂಗಡಿಗಳಿಗೆ ಕೂಡಾ ಬೆಳಿಗ್ಗೆ 6.00 ರಿಂದ ಸಂಜೆ 5.00 ರವರೆಗೆ ಅನುಮತಿ ನೀಡಿಲಾಗಿದೆ.
ಇದನ್ನೂ ಓದಿ: ಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ
ಎಲೆಕ್ಟ್ರಿಷಿಯನ್, ಪ್ಲಂಬರ್ಗಳಿಗೆ, ಮೋಟಾರ್ ತಂತ್ರಜ್ಞರು ಮತ್ತು ಬಡಗಿಗಳಿಗೆ ಬೆಳಿಗ್ಗೆ 6.00 ರಿಂದ ಸಂಜೆ 5.00 ರ ನಡುವೆ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ವಿದ್ಯುತ್ ವಸ್ತುಗಳು, ಬಲ್ಬ್ಗಳು, ಕೇಬಲ್ಗಳು, ಸ್ವಿಚ್ಗಳು ಮತ್ತು ತಂತಿಗಳನ್ನು ಮಾರಾಟ ಮಾಡುವ ಅಂಗಡಿಗಳು ಬೆಳಿಗ್ಗೆ 6.00 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸಬಹುದಾಗಿದ್ದು, ಸೈಕಲ್ ಮತ್ತು ದ್ವಿಚಕ್ರ ವಾಹನಗಳನ್ನು ದುರಸ್ತಿ ಮಾಡುವ ಅಂಗಡಿಗಳು ಬೆಳಿಗ್ಗೆ 6.00 ರಿಂದ ಸಂಜೆ 5.00 ರವರೆಗೆ ಕಾರ್ಯನಿರ್ವಹಿಸಬಹುದಾಗಿದೆ. ಹಾರ್ಡ್ವೇರ್ ಅಂಗಡಿಗಳಿಗೂ ಬೆಳಿಗ್ಗೆ 6.00 ರಿಂದ ಸಂಜೆ 5.00 ರ ನಡುವೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ. ಕಾಲ್ ಟ್ಯಾಕ್ಸಿಗಳು, ಬಾಡಿಗೆ ವಾಹನಗಳು ಮತ್ತು ಆಟೋ ರಿಕ್ಷಾಗಳನ್ನು ಇ-ನೋಂದಣಿಯೊಂದಿಗೆ ನಿರ್ವಹಿಸಬಹುದು ಎಂದು ಸರ್ಕಾರ ಹೇಳಿದೆ.
ಗುರುವಾರಂದು ಜೂನ್ 7 ರ ವರೆಗೆ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಜೂನ್ 14 ರ ವರೆಗೆ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಆದರೆ ಯಾವುದೆ ವಿನಾಯಿತಿಯನ್ನು ಅವರು ಘೋಷಿಸಿಲ್ಲ.
ದೇಶದಲ್ಲೆ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ತಹಬದಿಗೆ ಬಂದಿದ್ದು, ಇಂದಿನಿಂದ ಅಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು