ನರಿಕ್ಕುರವ ಸಮುದಾಯದ ಕುಟುಂಬವನ್ನು ಬಸ್ನಿಂದ ಕೆಳಗಿಳಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ರಾಜ್ಯ ಸಾರಿಗೆ ನಿಗಮ (ಟಿಎನ್ಎಸ್ಟಿಸಿ) ಸಿಬ್ಬಂದಿ ಈ ದುಷ್ಕೃತ್ಯ ನಡೆಸಿದ್ದು, ಸಿಬ್ಬಂದಿಯನ್ನು ಅಮಾನತು ಮಾಡಿದೆ.
ನರಿಕ್ಕುರವ ಸಮುದಾಯದವರೆಂಬ ಕಾರಣಕ್ಕೆ ಮಗು ಸೇರಿದಂತೆ ಕುಟುಂಬವನ್ನು ನಾಗರಕೋಯಿಲ್ನಲ್ಲಿ ಕೆಳಗಿಳಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕನ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಲ್ಲಿಯೂರು ಮಾರ್ಗವಾಗಿ ತಿರುನಲ್ವೇಲಿಗೆ ತೆರಳುತ್ತಿದ್ದ ಬಸ್ ಹತ್ತಲು ಯತ್ನಿಸಿದ ಕುಟುಂಬವನ್ನು ಅವಮಾನಿಸಲಾಗಿದೆ. ವಡಸ್ಸೆರಿ ಬಸ್ ನಿಲ್ದಾಣದಲ್ಲಿ ಅವರು ಬಸ್ನಿಂದ ಇಳಿಯುತ್ತಿರುವ ದೃಶ್ಯಾವಳಿಗಳು ವೈರಲ್ ಆಗಿವೆ. ವಯಸ್ಸಾಯದ ಮುದುಕರೊಬ್ಬರು ಕೋಲು ಹಿಡಿದು ಕೆಳಗಿಳಿಯುತ್ತಾರೆ. ಬಸ್ನಿಂದ ಕೆಳಗಿಳಿಸಿದಾಗ ಮಗು ಅಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಜೊತೆಗೆ ಒಬ್ಬ ಮಹಿಳೆಯೂ ಇದ್ದಾರೆ.
ಬಸ್ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಬಸ್ ನಿಲ್ಲಿಸಿ ಮಗು ಸೇರಿದಂತೆ ಕುಟುಂಬದವರನ್ನು ಕೆಳಗಿಳಿಸಲಾಗಿದೆ. ಅಲ್ಲದೇ ಅವರ ಸಾಮಾನುಗಳನ್ನು ಬಸ್ಸಿನಿಂದ ಹೊರಗೆ ಎಸೆಯಲಾಗಿದೆ. ಇದು ವಿಡಿಯೊದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ವಿಡಿಯೋ ಆಧರಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ನನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ ಎಂದು ಟಿಎನ್ಎಸ್ಟಿಸಿ ನಾಗರಕೋಯಿಲ್ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ್ ತಿಳಿಸಿದ್ದಾರೆ.
ಎರಡನೇ ಘಟನೆ: ತಮಿಳುನಾಡಿನಲ್ಲಿ ಈ ವಾರ ನಡೆದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು, ಕೊಲಾಚೆಲ್ನಲ್ಲಿ ಒಣಮೀನು ಮಾರಾಟ ಮಾಡುತ್ತಿದ್ದ ವೃದ್ಧ ಮಹಿಳೆಯನ್ನು ಬಲವಂತವಾಗಿ ಬಸ್ನಿಂದ ಹೊರಹಾಕಿದ್ದಕ್ಕಾಗಿ ಟಿಎನ್ಎಸ್ಟಿಸಿ ಬಸ್ನ ಚಾಲಕ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಬಳಿಕ ಹಿರಿಯ ಟಿಎನ್ಎಸ್ಟಿಸಿ ಅಧಿಕಾರಿಯೊಬ್ಬರು ಮಹಿಳೆಗೆ ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿರಿ: ಜೈಭೀಮ್ ಹವಾ | ಸೂರಿಯಾ ‘ಸ್ವಾರ್ಥಿ’ ಎಂದ ತಮಿಳುನಾಡು BJP ನಾಯಕ; ನಟ ಪ್ರತಿಕ್ರಿಯಿಸಿದ್ದು ಹೇಗೆ?
ನರಿಕ್ಕುರವ ಸಮುದಾಯದ ಮಹಿಳೆಗೆ ಊಟ ನಿರಾಕರಣೆ
ನರಿಕ್ಕುರವ ಸಮುದಾಯದ ಮಹಿಳೆಗೆ ದೇವಸ್ಥಾನದಲ್ಲಿ ಊಟ ನಿರಾಕರಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ತಮಿಳುನಾಡಿನ ಮಾಮಲ್ಲಪುರಂ ದೇವಸ್ಥಾನದಲ್ಲಿ ನರಿಕ್ಕುರವ ಅಲೆಮಾರಿ ಮಹಿಳೆಗೆ ಊಟ ನಿರಾಕರಿಸಲಾಗಿತ್ತು. ಸರ್ಕಾರದ ವತಿಯಿಂದ ನಡೆಯುವ ದೇವಸ್ಥಾನದ ಅನ್ನ ಸಂತರ್ಪಣೆಯಲ್ಲಿ ನಮ್ಮ ಸಮುದಾಯಕ್ಕೆ ಪ್ರವೇಶವಿಲ್ಲ ಏಕೆ ಎಂದು ಆ ಮಹಿಳೆ ಪ್ರಶ್ನಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದ ನಂತರ ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರು ಯಾವ ದೇವಸ್ಥಾನದಲ್ಲಿ ಆ ಮಹಿಳೆಗೆ ಆಹಾರ ನಿರಾಕರಿಸಲಾಯಿತೋ ಅದೇ ದೇವಸ್ಥಾನದಲ್ಲಿ ಆ ಮಹಿಳೆಯೊಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಸಮಾನತೆ ಸಾರಿದ್ದರು.
ಅಕ್ಟೋಬರ್ 29ರಂದು ಸಚಿವ ಪಿ.ಕೆ.ಸೇಕರ್ ಬಾಬುರವರೊಂದಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮತ್ತು ತಿರುಪೊರುರು ಶಾಸಕರಾದ ಎಸ್.ಎಸ್.ಬಾಲಾಜಿಯವರು ಸಹ ಸ್ಥಳಸಯನ ಪೆರುಮಾಳ್ ದೇವಾಲಯದಲ್ಲಿ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ತಾರತಮ್ಯಕ್ಕೊಳಗಾಗಿದ್ದ ಅಶ್ವಿನಿಯವರೊಂದಿಗೆ ಊಟ ಮಾಡಿದ್ದರು. ಅಶ್ವಿನಿಯವರ ನರಿಕ್ಕುರವ ಅಲೆಮಾರಿ ಸಮುದಾತದ ಹಲವು ಮಂದಿ ಭಾಗವಾಗಿಸಿದ್ದರು. ಆ ಮೂಲಕ ಜಾತಿ ತಾರತಮ್ಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ತಮಿಳುನಾಡು ಸರ್ಕಾರ ಸಾರಿತ್ತು.
ಮಹಿಳೆಯನ್ನು ಭೇಟಿಯಾಗಿದ್ದ ಸಿಎಂ ಸ್ಟಾಲಿನ್
ಊಟ ನಿರಾಕರಿಸಲಾಗಿದ್ದ ನರಿಕುರವರ್ ಅಲೆಮಾರಿ ಸಮುದಾಯದ ಮಹಿಳೆ ಅಶ್ವಿನಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಭೇಟಿ ಮಾಡಿದ್ದರು. ಮಹಿಳೆಯ ಮನೆಗೆ ತೆರಳಿದ ಮುಖ್ಯಮಂತ್ರಿ ಅವರೊಂದಿಗೆ ಕೆಲಕಾಲ ಮಾತನಾಡಿದ್ದರು.
ಜನಪ್ರತಿನಿಧಿಗಳು ಇಷ್ಟೆಲ್ಲ ಕ್ರಮಗಳನ್ನು ಜರುಗಿಸುತ್ತಿದ್ದರೂ ನರಿಕ್ಕುರವ ಸಮುದಾಯ ಮತ್ತೆ ಮತ್ತೆ ಅವಮಾನಕ್ಕೆ ಒಳಗಾಗುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ.
ಇದನ್ನೂ ಓದಿರಿ: ತಮಿಳುನಾಡು ಸಂಸದನ ಮಾನಹಾನಿ: BJP ನಾಯಕನ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ