ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು.
ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ ಸಂಸತ್ ಭವನದ (ಜಾತಿಯ ಸಂಸದ್) ದಕ್ಷಿಣ ಪ್ಲಾಝಾದಲ್ಲಿ ನಡೆಯಿತು.
ಬಾಂಗ್ಲಾದೇಶದ ಅಧ್ಯಕ್ಷರಾದ ಮೊಹಮ್ಮದ್ ಶಹಾಬುದ್ದೀನ್ ಅವರು ರೆಹಮಾನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ತಾರಿಖ್ ರೆಹಮಾನ್ ಅವರೊಂದಿಗೆ 49 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸರ್ಕಾರವು 25 ಸಂಪುಟ ಸಚಿವರು ಮತ್ತು 24 ರಾಜ್ಯ ಸಚಿವರನ್ನು ಒಳಗೊಂಡಿದೆ.
ಬಿಎನ್ಪಿಯ ಹಿರಿಯ ನಾಯಕ ಮಿರ್ಜಾ ಫಕ್ರುಲ್ ಇಸ್ಲಾಂ ಆಲಂಗೀರ್, ಪಕ್ಷದ ಇತರ ಪ್ರಮುಖ ನಾಯಕರಾದ ಅಮೀರ್ ಖಸ್ರು ಮಹಮೂದ್ ಚೌಧರಿ, ಸಲಾವುದ್ದೀನ್ ಅಹ್ಮದ್, ಡಾ. ಖಲೀಲುರ್ ರೆಹಮಾನ್, ಇಕ್ಬಾಲ್ ಹಸನ್ ಮಹಮೂದ್ ಟುಕು ಮತ್ತು ಹಫೀಝ್ ಉದ್ದೀನ್ ಅಹ್ಮದ್ ಬೀರ್ ವಿಕ್ರಮ್ ಸಚಿವ ಸಂಪುಟ ಸೇರಿದ್ದಾರೆ.
ಸಲಾವುದ್ದೀನ್ ಅಹ್ಮದ್ ಅವರು ನೂತನ ಗೃಹ ಸಚಿವರಾಗಿ ನೇಮಕಗೊಂಡಿದ್ದಾರೆ. ಅಮೀರ್ ಖಸ್ರು ಮಹಮೂದ್ ಚೌಧರಿ ಅವರು ನೂತನ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ. ಖಲೀಲುರ್ ರೆಹಮಾನ್ ನೂತನ ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊಹಮ್ಮದ್ ಅಮೀನ್ ಉರ್ ರಶೀದ್ ಅವರು ತಾಂತ್ರಿಕ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳಿಂದ ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ನಿತೈ ರಾಯ್ ಚೌಧರಿ, ಚಕ್ಮಾ ಬೌದ್ಧ ಸಮುದಾಯವನ್ನು ಪ್ರತಿನಿಧಿಸುವ ದೀಪನ್ ದಿವಾನ್ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಯುವ ಪ್ರತಿಭಟನಾಕಾರರ ಪರವಾಗಿ ರಾಜ್ಯ ಸಚಿವರಾಗಿ ಜುನೈದ್ ಸಾಕಿ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ನೂತನವಾಗಿ ಚುನಾಯಿತರಾದ ಬಿಎನ್ಪಿಯ ಎಲ್ಲಾ 209 ಸಂಸದರು ಕೂಡ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್ಪಿ ಪಕ್ಷವು 297 ಸ್ಥಾನಗಳ ಪೈಕಿ 209 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಸಾಧಿಸಿತ್ತು. ಸುಮಾರು 17 ವರ್ಷಗಳ ವನವಾಸದ ನಂತರ ತಾರಿಖ್ ರೆಹಮಾನ್ ಅವರು ಅಧಿಕಾರಕ್ಕೆ ಮರಳಿದ್ದಾರೆ.
ಭಾರತದಿಂದ ಓಂ ಬಿರ್ಲಾ ಭಾಗಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನವಿತ್ತಾದರೂ, ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷರೊಂದಿಗೆ ನಿಗದಿತ ಸಭೆಗಳಿದ್ದ ಕಾರಣ ಅವರು ಭಾಗವಹಿಸಿಲ್ಲ. ಪ್ರಧಾನಿ ಪರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾರತವನ್ನು ಪ್ರತಿನಿಧಿಸಿ ಸಮಾರಂಭದಲ್ಲಿ ಪಾಲ್ಗೊಂಡರು.
ಇತರ ದೇಶಗಳಿಂದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ, ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಪರವಾಗಿ ಅಲ್ಲಿನ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್, ನೇಪಾಳದ ವಿದೇಶಾಂಗ ಸಚಿವ ಬಾಲ ನಂದ ಶರ್ಮಾ, ಶ್ರೀಲಂಕಾದ ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವ ಡಾ. ನಳಿಂದ ಜಯತಿಸ್ಸ, ಯುನೈಟೆಡ್ ಕಿಂಗ್ಡಮ್ನ ಇಂಡೋ-ಪೆಸಿಫಿಕ್ ಉಪ ಕಾರ್ಯದರ್ಶಿ ಸೀಮಾ ಮಲ್ಹೋತ್ರಾ, ಚೀನಾ, ಸೌದಿ ಅರೇಬಿಯಾ, ಟರ್ಕಿ, ಯುಎಇ, ಕತಾರ್, ಮಲೇಷ್ಯಾ ಮತ್ತು ಬ್ರೂನೈ ದೇಶಗಳ ಹಿರಿಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


