ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ನ ಶಾಸಕರಾದ ಕೊನೇರು ಕೋನಪ್ಪನವರ ಸಹೋದರ ಕೊನೇರು ಕೃಷ್ಣರಾವ್ ಎಂಬುವವರು ಮಹಿಳಾ ಅರಣ್ಯಾಧಿಕಾರಿ ಮೇಲೆ ಬಡಿಗೆಯಿಂದ ಅಮಾನುಷವಾಗಿ ಹಲ್ಲೆ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ.
ಫಾರೆಸ್ಟ್ ರೇಂಜ್ ಆಫಿಸರ್ ಆದ ಸಿ.ಅನಿತಾರವರು, ತೆಲಂಗಾಣದ ಸಿರ್ಪುಲ್ ಮಂಡಲ ವ್ಯಾಪ್ತಿಗೆ ಬರುವ ಸರ್ಸಾಲ ಹಳ್ಳಿಯಲ್ಲಿ ಸರ್ಕಾರಕ್ಕೆ ಸೇರಿದ ಮೀಸಲು ಅರಣ್ಯ ಪ್ರದೇಶದಲ್ಲಿ ‘ಹರಿಥಾ ಹರಾಮ್’ ಎಂಬ ಯೋಜನೆಯಡಿಯಲ್ಲಿ ಸಸಿಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ದಿ ಇಂಡಿಯನ್ ಎಕ್ಸ್ ಪ್ರೆಸ್ ಇದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ.
TRS MLA Koneru Konappa's brother assaults woman forest officer at a village in Telangana. Forest Range Officer C Anita went to Sarasala village in Sirpur Mandal to take part in a plantation drive. pic.twitter.com/jE5GitgZRj
— The Indian Express (@IndianExpress) June 30, 2019
ಮೀಸಲು ಅರಣ್ಯ ಭೂಮಿಯನ್ನು ಈ ಹಿಂದೆಯೇ ಗುರುತಿಸಲಾಗಿತ್ತು ಮತ್ತು ಅಲ್ಲಿ ಇಂದು ಸಸಿನೆಡುವ ಕಾರ್ಯಕ್ರಮ ಇತ್ತು. ಇದಕ್ಕಾಗಿ ಸಿ.ಅನಿತಾರವರು ತಮ್ಮ ಅರಣ್ಯ ಇಲಾಖೆಯ ಸುಮಾರು 20 ಸಿಬ್ಬಂದಿಗಳೊಂದಿಗೆ ಆಗಮಿಸಿ ಕೆಲಸ ಆರಂಭಿಸಿದ್ದರು. ವಿಷಯ ತಿಳಿದ ಕೋನೆರು ಕೃಷ್ಣರಾವ್ರವರು ತಮ್ಮ ಬೆಂಬಲಿಗರೊಂದಿಗೆ ಧಾವಿಸಿ ಮನಬಂದಂತೆ ಥಳಿಸಲು ಆರಂಭಿಸಿದ್ದಾರೆ. ಸಿ. ಅನಿತಾರವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಟ್ರಾಕ್ಟರ್ ಹತ್ತಿದರೂ ಸಹ ಬಿಡದ ಶಾಸಕನ ತಮ್ಮ ಕೈಲಿದ್ದ ಬಡಿಗೆಗಳಿಂದ ಥಳಿಸಿದ್ದಾರೆ.
ಈ ಘಟನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಿತ್ತು. ಏಕೆ, ಏನು ಮಾಡುತ್ತಿದ್ದಾರೆ ಎಂಬುದನ್ನು ವಿಚಾರಿಸುವ ಸೌಜನ್ಯವೂ ಇಲ್ಲದೇ ಮಹಿಳಾ ಅಧಿಕಾರಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಸರಿಯಲ್ಲ, ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಜಾಮೀನು ನೀಡಬಾರದೆಂದು ಕೆಲವರು ಆಗ್ರಹಿಸಿದ್ದಾರೆ.