ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆಯಲ್ಲಿ ಕೇರಳ ಪೊಲೀಸರ ಕೆಡಾವರ್ ನಾಯಿಗಳು ಸೇರಿಕೊಳ್ಳಲಿವೆ ಎಂದು ತೆಲಂಗಾಣ ರಾಜ್ಯ ಸರ್ಕಾರ ಗುರುವಾರ (ಮಾ.6) ತಿಳಿಸಿದೆ.
ನಾಪತ್ತೆಯಾದವರು ಮತ್ತು ಮನುಷ್ಯರ ಶವಗಳನ್ನು ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದ ಕೆಡಾವರ್ ನಾಯಿಗಳು ಮತ್ತು ಅವುಗಳನ್ನು ನಿಯಂತ್ರಿಸುವ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಹೈದರಾಬಾದ್ಗೆ ತೆರಳಿದ್ದಾರೆ ಎಂದು ಕೇರಳ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ತೆಲಂಗಾಣ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮನವಿಯ ಮೇರೆಗೆ ರಕ್ಷಣಾ ಕಾರ್ಯಾಚರಣೆಗೆ ನಾಯಿಗಳನ್ನು ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ವಿಷಯದಲ್ಲಿ ಸಹಾಯವನ್ನು ಕೋರಿದೆ ಎಂದು ಹೇಳಿಕೆ ವಿವರಿಸಿದೆ.
ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದಲ್ಲಿ ಕುಸಿತ ಸಂಭವಿಸಿದ ಪರಿಣಾಮ ಫೆಬ್ರವರಿ 22ರಿಂದ ಕಾರ್ಮಿಕರು ಮತ್ತು ಇಂಜಿನಿಯರ್ಗಳು ಸೇರಿ 8 ಮಂದಿ ಅದರೊಳಗೆ ಸಿಲುಕಿಕೊಂಡಿದ್ದಾರೆ ಎನ್ಡಿಆರ್ಎಫ್, ಭಾರತೀಯ ಸೇನೆ, ನೌಕಾಪಡೆ ಮತ್ತು ಇತರ ಸಂಸ್ಥೆಗಳ ತಜ್ಞರು ಅವರನ್ನು ಸುರಕ್ಷಿತವಾಗಿ ಹೊರತೆಗೆಯಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.


