ಯುಪಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಭರ್ಜರಿಯಾಗಿ ತಯಾರಿ ನಡೆಸುತ್ತಿದೆ. ದಲಿತ ಮತ್ತು ಮಹಿಳಾ ವಿರೋಧಿ ನೀತಿ, ಕೊರೊನಾ ಸೋಂಕಿನ ಅಸಮರ್ಪಕ ನಿರ್ವಹಣೆ ಹಾಗೂ ಪಶ್ಚಿಮ ಯುಪಿಯಲ್ಲಿ ರೈತರ ಹೋರಾಟ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ರಾಜ್ಯದ ಪೂರ್ವಭಾಗವಾದ ಪೂರ್ವಾಂಚಲ ಪ್ರದೇಶದ ಕಡೆಗೆ ಬಿಜೆಪಿ ಗಮನವಹಿಸಿದೆ. ಪ್ರಧಾನಿ ಮೋದಿ ಮಂಗಳವಾರ ಕೂಡಾ ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ಉದ್ಘಾಟನೆ ಮಾಡಿದ್ದರು.
ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ಉಧ್ಘಾಟನೆಯಾದ ಹಿನ್ನಲೆಯಲ್ಲಿ ಪ್ರಧಾನಿ ಮತ್ತು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ಗೆ ಧನ್ಯವಾದ ಕೋರಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೈ. ಸತ್ಯ ಕುಮಾರ್ ಸೇರಿದಂತೆ ಹಲವಾರು ಟ್ವಿಟರ್ ಬಳಕೆದಾರರು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ-2022: ‘ಪೂರ್ವಾಂಚಲ’ ಕಡೆಗೆ ಗಮನ ಹರಿಸಿದ BJP!; ಮೋದಿ ಯಾಕೆ ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ?
ಈ ಚಿತ್ರದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಇದ್ದಾರೆ. ಜೊತೆಗೆ ಉತ್ತರ ಪ್ರದೇಶವನ್ನು ‘ಎಕ್ಸ್ಪ್ರೆಸ್ ಪ್ರದೇಶ್’ ಎಂದು ಬಣ್ಣಿಸಿ ಆ ಚಿತ್ರದಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ. ಪ್ರಧಾನಿ ಮತ್ತು ಸಿಎಂ ಅವರ ಚಿತ್ರದ ಹಿನ್ನೆಲೆಯಲ್ಲಿ ಕೆಂಪು(ಗಮನಿಸಿ ಅದು ಕೇಸರಿ ಅಲ್ಲ, ‘ಕೆಂಪು’) ಬಿಳಿ ಮತ್ತು ಹಸಿರು ಹೊಗೆಯನ್ನು ಹೊರಸೂಸುತ್ತಾ ಹಾರಾಡುತ್ತಿರುವ ಯುದ್ದವಿಮಾನಗಳನ್ನು ಕೂಡಾ ಚಿತ್ರಿಸಲಾಗಿದೆ.
उत्तर प्रदेश – #एक्सप्रेस_प्रदेश pic.twitter.com/aUMH76cBwK
— Y. Satya Kumar (@satyakumar_y) November 16, 2021
ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ-2022: 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ AIMIM
ಈ ಚಿತ್ರವನ್ನು ಬಲಪಂಥೀಯ ಪತ್ರಕರ್ತರು, ಲೇಖಕರು, ಬಿಜೆಪಿ ಬೆಂಬಲಿಗರು ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ತಮ್ಮನ್ನು ತಾವು ರಾಜಕೀಯ ನಿರೂಪಕಿ, ಅಂಕಣಕಾರ್ತಿ ಎಂದು ಘೋಷಿಸಿಕೊಂಡಿರುವ ಸುನಂದಾ ವಶಿಷ್ಟ್ ಅವರು ಈ ಚಿತ್ರವನ್ನು ಹಂಚಿಕೊಂಡು, “ಈ ಒಂದು ಚಿತ್ರವು ಸಾವಿರ ಪದಗಳನ್ನು ಹೇಳುತ್ತದೆ. ಈ ಚಿತ್ರದಿಂದ ನೀವು ಊಹಿಸಬಹುದಾದ ಸಾವಿರ ಸಂಗತಿಗಳಿವೆ. ನೀವು ಭಾರತದ ರಾಜಕೀಯವನ್ನು ನಿಯಮಿತವಾಗಿ ಅನುಸರಿಸಿದರೆ, ಇದು ಭಾರತವು ಎಲ್ಲಿಗೆ ಹೋಗುತ್ತಿದೆ ಎಂಬುದರ ಉತ್ತಮ ಅರ್ಥವನ್ನು ನೀಡುತ್ತದೆ” ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
A picture is worth thousand words. There are a thousand things you can infer from this picture. If you follow India’s politics regularly, this will give you a good sense of where India is headed. pic.twitter.com/se6BQYUgtG
— Sunanda Vashisht (@sunandavashisht) November 16, 2021
ಫ್ಯಾಕ್ಟ್ಚೆಕ್
ಬಿಜೆಪಿ ತನ್ನ ಪೋಸ್ಟರ್ನಲ್ಲಿ ಬಳಸಿರುವ ಫೈಟರ್ ಜೆಟ್ಗಳ ಚಿತ್ರವು ವಾಸ್ತವವಾಗಿ 2008 ರ ಆಗಸ್ಟ್ 17 ರಂದು ಹಂಗೇರಿಯ ‘ಕೆಕ್ಸ್ಕೆಮೆಟ್ನಲ್ಲಿ ನಡೆದ ಏರ್ಶೋದಲ್ಲಿ ಕ್ಲಿಕ್ಕಿಸಿದ ಚಿತ್ರವಾಗಿದೆ. ಇದನ್ನು ಇಟಾಲಿಯನ್ ವಾಯುಪಡೆಯ ಪ್ರಖ್ಯಾತ ಏರೋಬ್ಯಾಟಿಕ್ಸ್ ಪ್ರದರ್ಶನ ತಂಡವಾದ ‘ಫ್ರೆಸ್ಸೆ ಟ್ರೈಕೊಲೊರಿ’ ಪ್ರದರ್ಶಿಸಿತ್ತು.
ಈ ಚಿತ್ರವು ಶಟ್ಟರ್ಸ್ಟೋಕ್ನಲ್ಲಿ ಉಚಿತವಾಗಿ ಲಭ್ಯವಿದೆ. ಜೊತೆಗೆ ಫೈಟರ್ ಯುದ್ದ ವಿಮಾನಗಳು ಹೊರಸೂಸುತ್ತಿರುವ ಹೊಗೆಯು ಇಟಲಿ ದೇಶದ ಧ್ವಜದ ಬಣ್ಣವಾದ ಕೆಂಪು, ಬಿಳಿ ಮತ್ತು ಹಸಿರಾಗಿದೆಯೆ ಹೊರತು ಭಾರತದ ಧ್ವಜದ ಬಣ್ಣವಾಗಿರುವ ಕೇಸರಿ ಬಿಳಿ ಹಸಿರಲ್ಲ.
ಯುಪಿಯಲ್ಲಿ ಆಡಳಿತ ವಿರೋಧಿ ಅಲೆ ಭುಗಿಲೇಳುತ್ತಿದ್ದು, ಬಿಜೆಪಿಯು ರಾಜ್ಯದ 33% ವಿಧಾನಸಭಾ ಕ್ಷೇತ್ರಗಳಿರುವ ಪೂರ್ವಾಂಚಲ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಿದೆ. ಈ ಹಿನ್ನಲೆಯಲ್ಲೇ ಇತ್ತೀಚೆಗಿನ ದಿನಗಳಲ್ಲಿ ಪ್ರಧಾನಿ ಮೋದಿ ಅಲ್ಲಿಗೆ ಹಲವಾರು ಭಾರಿ ಪ್ರವಾಸ ಕೈಗೊಂಡಿದ್ದಾರೆ. ಪಶ್ಚಿಮ ಯುಪಿಯಲ್ಲಿ ರೈತರ ಪ್ರತಿಭಟನೆ ಧ್ವನಿ ಹೆಚ್ಚಾಗಿರುವುದರಿಂದ ಬಿಜೆಪಿ ಪೂರ್ವ ಭಾಗವನ್ನು ಗುರಿಯಾಗಿಸಿಕೊಂಡಿದೆ. ಮುಂದಿನ ವರ್ಷ ಯುಪಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುವಾವಣೆಯು 2023 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ.