ಭಾರತದ ಅಥ್ಲೀಟ್ಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಭಾರತೀಯ ಕುಸ್ತಿ ಫೆಡರೇಷನ್ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಡಬ್ಲ್ಯೂಎಫ್ಐ ಮಾಜಿ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಆಯ್ಕೆ ನಂತರ ಕುಸ್ತಿಪಟುಗಳು ಹಾಗೂ ಇತರೆ ಅಥ್ಲೀಟ್ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಚುನಾವಣಾ ಪ್ರೋಟೋಕಾಲ್ ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಕ್ರೀಡಾ ಸಚಿವಾಲಯವು ಡಬ್ಲ್ಯೂಎಫ್ಐ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದೆ.
ಸಂಜಯ್ ಸಿಂಗ್ ನೇತೃತ್ವದ ಹೊಸ ಆಡಳಿತ ಮಂಡಳಿಯು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಉಲ್ಲೇಖಿಸಿರುವ ಸಚಿವಾಲಯವು, ಭಾನುವಾರದಂದು ತನ್ನ ನಿರ್ಧಾರ ಪ್ರಕಟಿಸಿದೆ.
ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ‘ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಡಿ.21 ರಂದು ಘೋಷಿಸಿದರು’ ಎಂದು ಸಚಿವಾಲಯ ಉಲ್ಲೇಖಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ಕುಸ್ತಿಪಟುಗಳು ತಯಾರಿ ಮಾಡಿಕೊಳ್ಳಲು ಕನಿಷ್ಠ 15 ದಿನಗಳ ಮೊದಲು ಸೂಚನೆ ನೀಡುವ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.
‘ಪ್ರಮುಖ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳಬೇಕು, ಅದಕ್ಕೂ ಮೊದಲು ತಮ್ಮ ಕಾರ್ಯಸೂಚಿಗಳನ್ನು ಪರಿಗಣನೆಗೆ ಇರಿಸಬೇಕಾಗುತ್ತದೆ. ಡಬ್ಲ್ಯೂಎಫ್ಐ ನಿಯಯಮಗಳು- XIರ ಪ್ರಕಾರ ‘ನೋಟಿಸ್ಗಳು ಮತ್ತು ಸಭೆಗಳಿಗೆ ಕೋರಂ’ ಶೀರ್ಷಿಕೆಯಡಿಯಲ್ಲಿ ಕನಿಷ್ಠ 15 ದಿನಗಳ ಮೊದಲು ಅಧಿಸೂಚನೆ ಹೊರಡಿಸಬೇಕು. ನಿರ್ರಾರ ತೆಗೆದುಕೊಳ್ಳುವಾಗ ಸಭೆಯಲ್ಲಿ 1/3 ರಷ್ಟು ಕೋರಂ ಪ್ರತಿನಿಧಿಗಳು ಇರಬೇಕು. ತುರ್ತು ಇಸಿ ಸಭೆಗೆ ಸಹ ಕನಿಷ್ಠ ಸೂಚನೆ ಅವಧಿಯು 7 ದಿನಗಳು ಹಾಗೂ 1/3 ರಷ್ಟು ಪ್ರತಿನಿಧಿಗಳ ಕೋರಂ ಅಗತ್ಯತೆ ಇದೆ’ ಎಂದು ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಆಡಳಿತ ಮಂಡಳಿಯು ಹಿಂದೆ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿರುವ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವಂತೆ ಕಾಣಿಸುತ್ತಿದೆ. ಸಂಸ್ಥೆಯು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣದಲ್ಲಿರುವಂತೆ ತೋರುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.
‘ಫೆಡರೇಶನ್ನ ವ್ಯವಹಾರವನ್ನು ಆಟಗಾರರ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮಾಜಿ ಪದಾಧಿಕಾರಿಗಳ ಆವರಣದಿಂದ ನಿಯಂತ್ರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ’ ಎಂದು ಸಚಿವಾಲಯ ಹೇಳಿದೆ.
‘ಡಬ್ಲ್ಯುಎಫ್ಐನ ನೂತನ ಚುನಾಯಿತ ಕಾರ್ಯನಿರ್ವಾಹಕ ಮಂಡಳಿಯು ತೆಗೆದುಕೊಂಡಿರುವ ನಿರ್ಧಾರಗಳು ಸ್ಥಾಪಿತ ಕಾನೂನು ಮತ್ತು ಕಾರ್ಯವಿಧಾನದ ಮಾನದಂಡಗಳನ್ನು ನಿರ್ಲಕ್ಷಿಸಿದೆ. ಡಬ್ಲ್ಯುಎಫ್ಐನ ಸಾಂವಿಧಾನಿಕ ನಿಬಂಧನೆಗಳು ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ ಎರಡನ್ನೂ ಉಲ್ಲಂಘಿಸುತ್ತವೆ’ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ; ಕಾಂಗ್ರೆಸ್ನಲ್ಲಿ ಮೇಜರ್ ಸರ್ಜರಿ: ಯುಪಿ ಉಸ್ತುವಾರಿಯಿಂದ ಪ್ರಿಯಾಂಕ ಬಿಡುಗಡೆ, ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ



Really its a great victory for the sports community. Now its ur challenge to see that these people should be punished properly. Then only this ugly chapter can be closed. Dont allow him to go scot free. May god bless u all.👌👌👍👍👍👍🙏🏻🙏🏻🙏🏻