ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತವನ್ನು ಮುಚ್ಚಿಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಭಾನುವಾರ ಆರೋಪಿಸಿದ್ದು, ‘ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ -ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಘಟನೆಯನ್ನು “ಹೃದಯವಿದ್ರಾವಕ” ಎಂದು ಕರೆದಿದ್ದಾರೆ.
ವಿಶೇಷವಾಗಿ ಮಹಾ ಕುಂಭದಂತಹ ದೊಡ್ಡ ಧಾರ್ಮಿಕ ಸಭೆಗಳ ಸಮಯದಲ್ಲಿ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಉತ್ತಮ ಯೋಜನೆ ಮತ್ತು ನಿರ್ವಹಣೆಯ ಅಗತ್ಯವಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
“ದೆಹಲಿ ಕಾಲ್ತುಳಿತದಲ್ಲಿ 18 ಜೀವಗಳ ದುರಂತ ನಷ್ಟವು ತೀವ್ರ ಹೃದಯವಿದ್ರಾವಕವಾಗಿದೆ. ಈ ನೋವಿನ ಘಟನೆಯು ಎಚ್ಚರಿಕೆಯಿಂದ ಯೋಜನೆ ಹಾಗೂ ನಿರ್ವಹಣೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ವಿಶೇಷವಾಗಿ, ನಾಗರಿಕರ ಸುರಕ್ಷತೆಯ ವಿಷಯದಲ್ಲಿ” ಎಂದು ಅವರು ಹೇಳಿದರು.
“ಮಹಾ ಕುಂಭಕ್ಕೆ ಹೋಗುವ ಯಾತ್ರಿಕರಿಗೆ ಸರಿಯಾದ ಬೆಂಬಲ-ಸೌಲಭ್ಯಗಳನ್ನು ನೀಡಬೇಕಾಗಿತ್ತು. ಇಂತಹ ಪ್ರಯಾಣಗಳು ಸುರಕ್ಷಿತ ಮತ್ತು ಸುಸಂಘಟಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ” ಎಂದು ಅವರು ಹೇಳಿದರು.
ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಈ ಘಟನೆಯನ್ನು “ದುರದೃಷ್ಟಕರ, ಖಂಡನೀಯ ಮತ್ತು ರೈಲ್ವೆಯ ಸಂಪೂರ್ಣ ದುರುಪಯೋಗದ ಪರಿಣಾಮ” ಎಂದು ಕರೆದರು.
“ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲತೆಗೆ ಇದು ಮತ್ತೊಂದು ಉದಾಹರಣೆಯಾಗಿದೆ. ಮೀಸಲು ಬೋಗಿಗಳನ್ನು ಹೊರಗಿನವರು ಆಕ್ರಮಿಸಿಕೊಂಡಿದ್ದಾರೆ, ಅವ್ಯವಸ್ಥೆ ವ್ಯಾಪಕವಾಗಿದೆ, ಈಗ ನಮಗೆ ಈ ಭಯಾನಕ ಕಾಲ್ತುಳಿತ ಸಂಭವಿಸಿದೆ. ರೈಲ್ವೆ ಸಚಿವರು ಪ್ರಚಾರದಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ! ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಅರಿತುಕೊಳ್ಳುವ ಮೊದಲು ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಳ್ಳಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.
ಟಿಎಂಸಿ ರಾಜ್ಯಸಭಾ ಉಪ ನಾಯಕಿ ಸಾಗರಿಕಾ ಘೋಷ್, “ಸರ್ಕಾರವು ಭಾರತೀಯ ನಾಗರಿಕರ ಜೀವನದ ಜೊತೆ ನಿರ್ದಯವಾಗಿ ಆಟವಾಡುತ್ತಿದೆ, ಅದನ್ನು ಶಬ್ದಗಳಿಗೆ ಮೀರಿದ ದುರಂತ” ಎಂದು ಕರೆದರು.
“ಮೊದಲು ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಯಾವುದೇ ಕಾಲ್ತುಳಿತವನ್ನು ನಿರಾಕರಿಸುತ್ತದೆ. ನಂತರ ಅವರು ಅದನ್ನು ವದಂತಿ ಎಂದು ಕರೆಯುತ್ತಾರೆ. ನಂತರ ಅವರು ‘ಕೆಲವು ಜನರು’ ‘ಗಾಯಗೊಂಡಿದ್ದಾರೆ’ ಎಂದು ಒಪ್ಪಿಕೊಳ್ಳುತ್ತಾರೆ. ನಂತರ ಬಿಜೆಪಿ ‘ಕೆಲವರು’ ಮೃತಪಟ್ಟಿರಬಹುದು ಎಂದು ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ” ಎಂದು ಘೋಷ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಜುಮ್ಲಾ ಪಕ್ಷ ಮತ್ತು ಅದರ ಜುಮ್ಲಾ ಸರ್ಕಾರವು ಸಾವುಗಳು ಮತ್ತು ದುರಂತಗಳನ್ನು ಮತ್ತೆ ಮತ್ತೆ ಮುಚ್ಚಿಡುತ್ತಲೇ ಇದೆ. ಭಾರತೀಯ ನಾಗರಿಕರ ಜೀವನದ ಜೊತೆ ನಿರ್ದಯವಾಗಿ ಆಟವಾಡುತ್ತಿದೆ. ನವದೆಹಲಿಯ ನಿಲ್ದಾಣದ ಆಘಾತಕಾರಿ ಕಾಲ್ತುಳಿತದಿಂದ ಮೋದಿ ಸರ್ಕಾರದ ‘ಕನಿಷ್ಠ ಆಡಳಿತ, ಗರಿಷ್ಠ ಪ್ರಚಾರ’ ಮಂತ್ರ ಮತ್ತೆ ಬಹಿರಂಗವಾಗಿದೆ. ಇದು ಪದಗಳಿಗೆ ಮೀರಿದ ದುರಂತ” ಎಂದಿ ಅವರು ಹೇಳಿದರು.
ಇದನ್ನೂ ಓದಿ; ಗುಜರಾತ್| ದೇವಾಲಯ ಉತ್ಸವದಿಂದ ದಲಿತರನ್ನು ಹೊರಗಿಟ್ಟ ಪ್ರಕರಣ; ವಿವರಣೆ ಕೇಳಿದ ಎಸ್ಸಿ-ಎಸ್ಟಿ ರಾಷ್ಟ್ರೀಯ ಆಯೋಗ


