Homeಮುಖಪುಟ"ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ." ಸಂವಿಧಾನದ ಪೀಠಿಕೆಯ ರಾಷ್ಟ್ರಪಠ್ಯವಾದ ಬಗೆ- ಎ.ನಾರಾಯಣ

“ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ.” ಸಂವಿಧಾನದ ಪೀಠಿಕೆಯ ರಾಷ್ಟ್ರಪಠ್ಯವಾದ ಬಗೆ- ಎ.ನಾರಾಯಣ

ಎಪ್ಪತ್ತು ವರ್ಷಗಳಲ್ಲಿ ಎಂದೂ ಜನ ಸಂವಿಧಾನವನ್ನು ಎದೆಗವಚಿಕೊಂಡು, ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಎತ್ತಿಹಿಡಿದುಕೊಂಡು ಆಳುವ ಸರ್ಕಾರವೊಂದರ ಅಹಂಗೆ ಇರಿದ ಉದಾಹರಣೆ ಇಲ್ಲ. ಈಗ ಅದು ಆಗುತ್ತಿದೆ.

- Advertisement -
- Advertisement -

ಗಣರಾಜ್ಯೋತ್ಸವವನ್ನು ಆಚರಿಸುವುದು ಸಂವಿಧಾನ ಜಾರಿಗೆ ಬಂದ ದಿನದ ಸ್ಮರಣೆಗಾಗಿ. ಆದರೆ ಸಂವಿಧಾನ ಪ್ರಜ್ಞೆಯೊಂದು ಈ ತನಕ ಗಣರಾಜ್ಯ ಸಂಭ್ರಮದ ಭಾಗವಾಗಿರಲಿಲ್ಲ. ವಾಸ್ತವದಲ್ಲಿ ಅಲ್ಲಿ ಸಂಭ್ರಮವೇ ಇರುತ್ತಿರಲಿಲ್ಲ. ಈ ಬಾರಿ ಜನ ಸಂವಿಧಾನವನ್ನು ಮೊತ್ತ ಮೊದಲಿಗೆ ಸಂಭ್ರಮಿಸಿದ ಕ್ಷಣಕ್ಕೆ ಗಣರಾಜ್ಯ ದಿನ ಸಾಕ್ಷಿಯಾಯ್ತು.

ಎಪ್ಪತ್ತು ವರ್ಷಗಳಲ್ಲಿ ಆಗದೆ ಇದ್ದದ್ದು ಈಗ ಆಗುತ್ತಿದೆ. ನಿಜಕ್ಕೂ. ಇದಕ್ಕೆ ತಾಜಾ ಮತ್ತು ತೀರಾ ಇತ್ತೀಚೆಗಿನ ಉದಾಹರಣೆ ಎಂದರೆ ಈ ವರ್ಷದ ಗಣರಾಜ್ಯ ದಿನಾಚರಣೆ. ಸಂದ ಏಳು ದಶಕಗಳಲ್ಲಿ ಗಣರಾಜ್ಯೋತ್ಸವ ನಡೆದಿದೆ. ದೆಹಲಿಯಲ್ಲಿ ಮಿಲಿಟರಿ ಪಥಸಂಚಲನ ನಡೆದಿದೆ. ಶಾಲೆಗಳಲ್ಲಿ ಧ್ವಜಾರೋಹಣ ನಡೆದಿದೆ. ಸರಕಾರೀ ಕಚೇರಿಗಳಿಗೆ ರಜೆ ನೀಡಲಾಗಿದೆ. ಇನ್ನೂ ಒಂದಷ್ಟು ಯಾಂತ್ರಿಕ, ತಾಂತ್ರಿಕ ಕಟ್ಟುಕಟ್ಟಳೆಗಳೊಂದಿಗೆ ಗಣರಾಜ್ಯೋತ್ಸವ ಮುಗಿದುಹೋಗಿದೆ. ಈ ವರ್ಷ ಹಾಗಲ್ಲ. ಈ ಸಲ ಜನವರಿ ಇಪ್ಪತ್ತಾರರಂದು ದೇಶ ಕಂಡದ್ದು ಅಕ್ಷರಶಃ “ಸಂವಿಧಾನ ಕ್ಷಣ”ವನ್ನು. (India’s Constitutional Moment).

ಗಣರಾಜ್ಯೋತ್ಸವವನ್ನು ಆಚರಿಸುವುದು ಸಂವಿಧಾನ ಜಾರಿಗೆ ಬಂದ ದಿನದ ಸ್ಮರಣೆಗಾಗಿ. ಆದರೆ ಸಂವಿಧಾನ ಪ್ರಜ್ಞೆಯೊಂದು ಈ ತನಕ ಗಣರಾಜ್ಯ ಸಂಭ್ರಮದ ಭಾಗವಾಗಿರಲಿಲ್ಲ. ವಾಸ್ತವದಲ್ಲಿ ಅಲ್ಲಿ ಸಂಭ್ರಮವೇ ಇರುತ್ತಿರಲಿಲ್ಲ. ಈ ಬಾರಿ ಜನ ಸಂವಿಧಾನವನ್ನು ಮೊತ್ತ ಮೊದಲಿಗೆ ಸಂಭ್ರಮಿಸಿದ ಕ್ಷಣಕ್ಕೆ ಗಣರಾಜ್ಯ ದಿನ ಸಾಕ್ಷಿಯಾಯ್ತು. ಜನ ಸಂವಿಧಾನವನ್ನು ಪ್ರದರ್ಶಿಸಿದರು, ಸಂವಿಧಾನದ ಮೇಲೆ ಹಾಡು ಕಟ್ಟಿ ಹಾಡಿದರು, ಚಿತ್ರ ಬರೆದು ತೋರಿಸಿದರು – ಜನಗಣಮನ ರಾಷ್ಟ್ರಗೀತೆಯಾದರೆ, ಸಂವಿಧಾನದ ಪೀಠಿಕೆ ಅಘೋಷಿತ ರಾಷ್ಟ್ರ ಪಠ್ಯವಾಗಿಬಿಟ್ಟಿತು. ರಾಷ್ಟ್ರದ ಉದ್ದಗಲಕ್ಕೂ ಜನ ಅತ್ಯುತ್ಸಾಹದಿಂದ ಸಾಮೂಹಿಕವಾಗಿ ಅದನ್ನು ಪಠಿಸಿದರು.

ಈ ಹೊಸ ವಿದ್ಯಮಾನಕ್ಕೆ ಪೀಠಿಕೆಯಾದದ್ದು ದೇಶಾದ್ಯಂತ ನಡೆದ ಮತ್ತು ನಡೆಯುತ್ತಿರುವ ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿ ಚಳವಳಿ. ಸಂವಿಧಾನ ಮತ್ತು ರಾಷ್ಟ್ರ ಧ್ವಜ ಈ ಚಳವಳಿಯ ಮೂಲಕ ಜನಮನವನ್ನು ಮರುಪ್ರವೇಶಿಸಿದ ರೀತಿ ಅನನ್ಯವಾದದ್ದು. ಈ ಚಳವಳಿಯ ಭಾಗವಾಗಿ ಚರಿತ್ರೆಯಲ್ಲೇ ಮೊದಲು ಎಂಬಂತೆ ಈ ದೇಶದ ಕ್ರಿಶ್ಚಿಯನ್ನರು ಚರ್ಚ್ ಒಂದರಲ್ಲಿ ಸಂವಿಧಾನದ ಪೀಠಿಕೆ ಓದಿದರು. ಅದಕ್ಕೆ ಮೊದಲು ಮುಸ್ಲಿಮರು ಮಸೀದಿಯೊಂದರ ಅಂಗಣದಲ್ಲಿ ಸಂವಿಧಾನದ ಪ್ರತಿಗಳನ್ನು ಪ್ರದರ್ಶಿಸಿದರು, ಪೀಠಿಕೆ ಓದಿದರು. ಸಾವಿರ ಸಾವಿರ ಸಂಖ್ಯೆಯ ಹಿಂದೂಗಳು ತಾವು ಕಂಡಕಂಡಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸಿ ಈ ಪವಿತ್ರ ಕೆಲಸ ನಡೆಸಿದ ಸ್ಥಳವೇ ದೇವಾಲಯ ಅಂತ ಮೌನವಾಗಿ ಸಾರಿದರು. ಎಲ್ಲೆಲ್ಲೂ ಸಂವಿಧಾನ. ಎಲ್ಲರ ಕೈಯ್ಯಲ್ಲೂ ಸಂವಿಧಾನದ ಪ್ರತಿಗಳು. ಎಲ್ಲರ ಬಾಯಲ್ಲೂ ಸಂವಿಧಾನದ ಪೀಠಿಕೆ. ಸಂವಿಧಾನವು ಹಿಂದೆಂದೂ ಈ ಪರಿಯಲ್ಲಿ ಜನಮಾನಸದ ಭಾಗವಾಗಿಹೋದದನ್ನು, ಸಂವಿಧಾನದ ಸುತ್ತ ಒಂದು ಹೊಸ ಜಾನಪದ ಸಂಸ್ಕೃತಿಯೇ ಹುಟ್ಟಿಕೊಂಡದ್ದನ್ನು ಈ ಹಿಂದೆ ದೇಶ ಕಂಡಿರಲಿಲ್ಲ. ಇದು ಸಂವಿಧಾನ ಕ್ಷಣ. ಈ ಜನ ಸಂವಿಧಾನಕ್ಕೆ ರಕ್ಷಣೆ ಕೇಳುತ್ತಿದ್ದಾರೆ. ಈ ಜನ ತಮ್ಮ ರಕ್ಷಣೆಗಾಗಿ ಸಂವಿಧಾನವನ್ನು ಅಪ್ಪಿಕೊಳ್ಳುತಿದ್ದಾರೆ; ‘ಸಂವಿಧಾನಕ್ಕಾಗಿ ನಾವು’, ‘ನಮಗಾಗಿ ಸಂವಿಧಾನ’ ಎನ್ನುತ್ತಿದ್ದಾರೆ. ಈತನಕ ರಾಜಕೀಯಾತ್ಮಕವಾಗಿದ್ದದ್ದು ಈಗ ಭಾವನಾತ್ಮಕವಾಗುತ್ತಿದೆ.

ಹಿಂದೊಮ್ಮೆ ಸಂವಿಧಾನದ ರಕ್ಷಣೆಗಾಗಿ ಈ ದೇಶದಲ್ಲಿ ಸುಮಾರು ಮೂವತ್ತು ವರ್ಷಗಳ ಸುದೀರ್ಘ ಸಂಘರ್ಷವೊಂದು ನಡೆದದ್ದು ಬಹುಮಂದಿಗೆ ಗೊತ್ತಿರದ ಆಧುನಿಕ ಭಾರತದ ಚರಿತ್ರೆಯ ಭಾಗ. ಸಂವಿಧಾನ ಜಾರಿಗೆ ಬಂದನಂತರ ಆಳುವ ಸರಕಾರಗಳು ಮನಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟ ವೇಳೆಯಲ್ಲಿ ಸಂವಿಧಾನ ಮತ್ತು ಸಂಸತ್ತಿನ ನಡುವೆ ಹುಟ್ಟಿಕೊಂಡ ಸಂಘರ್ಷ ಇದು. ಇಲ್ಲಿ ಸಂವಿಧಾನದ ವಕಾಲತ್ತು ವಹಿಸಿದ್ದು ಸ್ವತಃ ಸುಪ್ರೀಂಕೋರ್ಟ್. ಸಂಘರ್ಷದ ಮೂಲದಲ್ಲಿ ಇದ್ದದ್ದು ಸಂವಿಧಾನ ಮೇಲೋ, ಸಂಸತ್ತು ಮೇಲೋ ಎನ್ನುವ ಪ್ರಶ್ನೆ. ಆಳುವ ಸರಕಾರ ತನ್ನ ವಾದದಲ್ಲಿ ಸಂವಿಧಾನಕ್ಕಿಂತ ಸಂಸತ್ತು ಮೇಲೆ ಎಂದಿತು. ಹೇಳಿಕೇಳಿ ಇದು ಪ್ರಜಾತಂತ್ರ. ಪರಮಾಧಿಕಾರ ಜನರಿಗೆ ಸೇರಿದ್ದು. ಆದುದರಿಂದ ಜನರ ಪ್ರಾತಿನಿಧಿಕ ಸಂಸ್ಥೆಯಾದ ಸಂಸತ್ತು ಸಂವಿಧಾನವನ್ನು ಬೇಕಾದಂತೆ ಬದಲಾಯಿಸುವ ಸಂಪೂರ್ಣ ಹಕ್ಕನ್ನು ಮತ್ತು ಅಧಿಕಾರವನ್ನು ಹೊಂದಿದೆ ಎನ್ನುವುದಾಗಿತ್ತು ವಾದ. ಇದು ಸಾಧ್ಯವಿಲ್ಲ, ಸಾಧುವೂ ಅಲ್ಲ ಎಂದಿತು ಸುಪ್ರೀಂಕೋರ್ಟ್.

ಸಂಸತ್ತು ಅಸ್ತಿತ್ವಕ್ಕೆ ಬಂದಿರುವುದೇ ಸಂವಿಧಾನದ ಪ್ರಕಾರ. ಹಾಗಿರುವಾಗ ಸಂಸತ್ತು ಸಂವಿಧಾನದ ಸೃಷ್ಟಿ. ಒಂದು ಸೃಷ್ಟಿ ತನ್ನ ಸೃಷ್ಟಿಕರ್ತನನ್ನೇ ಬದಲಿಸಲಾದೀತೇ? ಎಂಬ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಮುಂದಿರಿಸಿತು. ಸಂಸತ್ತು ತಾನು ಸಂವಿಧಾನದ ಸೃಷ್ಟಿ ಎನ್ನುವ ವಾದ ಸರಿ ಇಲ್ಲ ಎಂದಿತು. ಅದರ ಪ್ರಕಾರ ಸಂವಿಧಾನವೂ ಪರೋಕ್ಷವಾಗಿ ಸಂಸತ್ತಿನೆ ಸೃಷ್ಟಿ. ಯಾಕೆಂದರೆ ಸಂವಿಧಾನವನ್ನು ರಚಿಸಿದ ಸಂವಿಧಾನ ಸಭೆಯೂ ಸಂಸತ್ತಿನ ಪೂರ್ವರೂಪ ಮತ್ತು ಪ್ರತಿರೂಪ. ಸುಪ್ರೀಂಕೋರ್ಟ್ ಒಪ್ಪಲಿಲ್ಲ. ಅದು ಬೇರೆ ಇದು ಬೇರೆ ಅಂತ ಸುಪ್ರೀಂಕೋರ್ಟ್ ಹೇಳಿತು. ಇದನ್ನು ಒಪ್ಪಿಕೊಳ್ಳಲು ಸರಕಾರ ಸಿದ್ಧವಿರಲಿಲ್ಲ. ಹಗ್ಗಜಗ್ಗಾಟ ಮೂವತ್ತು ವರ್ಷಗಳಿಗೂ ಹೆಚ್ಚುಕಾಲ ನಡೆದು ಹಲವಾರು ಪ್ರಕರಣಗಳ ತೀರ್ಪುಗಳು ಈ ಸಂಘರ್ಷವನ್ನು ಒಮ್ಮೆ ಅತ್ತ, ಒಮ್ಮೆ ಇತ್ತ ವಾಲಿಸಿದವು.

ಕೊನೆಗೂ 1974ರ ಕೇಶವಾನಂದ ಭಾರತೀ ಪ್ರಕರಣದಲ್ಲಿ ಯಾರೂ ಸೋಲದ, ಆದರೆ ಯಾರೂ ಗೆಲ್ಲದ ರೀತಿಯ ತೀರ್ಪೋಂದನ್ನು ನೀಡಿ ಪ್ರಕರಣವನ್ನು ಸುಪ್ರೀಂಕೋರ್ಟ್ ಒಂದು ಹಂತಕ್ಕೆ ಇತ್ಯರ್ಥ ಪಡಿಸಿತು. ಕೇಶವಾನಂದ ಭಾರತೀ ಪ್ರಕರಣದ ತೀರ್ಪಿನ ಪ್ರಕಾರ ಸಂಸತ್ತು ಪರಮೋಚ್ಚವಾದದ್ದು ಮತ್ತು ಆ ಕಾರಣಕ್ಕೆ ಅದಕ್ಕೆ ಸಂವಿಧಾನದ ಯಾವುದೇ ಭಾಗವನ್ನು (ಮೂಲಭೂತ ಹಕ್ಕುಗಳೂ ಸೇರಿದಂತೆ) ತಿದ್ದುಪಡಿ ಮಾಡುವ ಅಧಿಕಾರ ಇದೆ. ಆದರೆ ಅಂತಹ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಯನ್ನು(Basic Structure) ಯಾವುದೇ ಕಾರಣಕ್ಕೂ ಶಿಥಿಲಗೊಳಿಸಬಾರದು. ಸಂಸತ್ತು ಮಾಡಿದ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಗೆ ಭಂಗ ತರುವಂತವುಗಳೇ ಎನ್ನುವುದನ್ನು ನಿರ್ಣಯಿಸುವ ಅಧಿಕಾರ ನ್ಯಾಯಾಂಗಕ್ಕೆ ಸೇರಿದ್ದು. ಅಲ್ಲಿಗೆ ಸಂಸತ್ತಿನ ಪರಮೋಚ್ಚ ಅಧಿಕಾರವೂ ಸ್ಥಾಪನೆಯಾಯಿತು. ಸಂವಿಧಾನ ಸಂಸತ್ತಿಗಿಂತ ಮೇಲೆ ಎನ್ನುವುದು ಒಂದು ಹಂತಕ್ಕೆ ಸ್ಥಾಪಿತವಾಯಿತು.

ಇದು ಅಂದಿನ ಕತೆ. ಅಂದು ಸಂಸತ್ತು ಮತ್ತು ಸಂವಿಧಾನದ ನಡುವಣ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಿ ಸಂವಿಧಾನವನ್ನು ರಕ್ಷಿಸಿದ್ದು ನ್ಯಾಯಾಂಗ. ಇಂದು ಸಂವಿಧಾನದ ರಕ್ಷಣೆಗೆ ಕಂಕಣಬದ್ಧರಾಗಿರುವುದು ಸಾಮಾನ್ಯ ಜನ. ಈ ಹೊಣೆಗಾರಿಕೆಯ ಹೆಗಲು ಬದಲಾವಣೆಯ ಹಿಂದೆ ಎರಡು ಕಾರಣಗಳಿವೆ. ಮೊದಲನೆಯ ಕಾರಣ ಹೀಗಿದೆ. ನ್ಯಾಯಾಂಗ ಮಧ್ಯೆ ಪ್ರವೇಶಿಸಿ ಸಂವಿಧಾನವನ್ನು ರಕ್ಷಿಸಬೇಕಾದರೆ ಅಲ್ಲಿ ಎಲ್ಲವೂ ಸ್ಪಷ್ಟವಾಗಿರಬೇಕು. ಅಂದರೆ ಸಂವಿಧಾನದ ಮೇಲೆ ನಡೆಯುತ್ತಿರುವ ಪ್ರಹಾರ ಸ್ಪಷ್ಟವಾಗಿ ಕಾನೂನಿನ ದರ್ಶಕದ ಮೂಲಕ ಗುರುತಿಸಬಲ್ಲದಾಗಿರಬೇಕು. ಈಗ ಸಂವಿಧಾನದ ಮೇಲೆ ನಡೆಯುವ ದಾಳಿ ಭಿನ್ನವಾಗಿರುವಂತದ್ದು. ಅದನ್ನು ಕಾನೂನಿನ ಅಡಿ ಇದಮಿತ್ತಂ ಅಂತ ಗುರುತಿಸುವ ಹಾಗಿಲ್ಲ. ಕಾನೂನಿನಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎನ್ನುವಂತೆ ಅಟ್ಟಣಿಕೆ ಸಿದ್ಧಪಡಿಸಿ ಆ ನಂತರ ಒಳಗೊಳಗಿಂದಲೇ ಸಂವಿಧಾನವನ್ನು ಶಿಥಿಲಗೊಳಿಸುವ ರೀತಿಯ ರಾಜಕೀಯ ಈಗ ನಡೆಯುತ್ತಿರುವುದು.

ಆದಕಾರಣ ಈಗ ಸಂವಿಧಾನಕ್ಕೆ ಎದುರಾಗಿರುವ ಆತಂಕವನ್ನು ನಿವಾರಿಸಲು ಸುಪ್ರೀಂಕೋರ್ಟ್‍ನ ಮುಂದಿರುವ ತಾರ್ಕಿಕ, ತಾಂತ್ರಿಕ ಸಾಧ್ಯತೆಗಳೇ ಸಾಲುವುದಿಲ್ಲ. ಎರಡನೆಯ ಕಾರಣ ಇದಕ್ಕಿಂತ ಹೆಚ್ಚು ಗಂಭೀರವಾಗಿದೆ. ದೇಶದಲ್ಲಿ ಎಲ್ಲವೂ ಬದಲಾಗಿರುವಂತೆ ನ್ಯಾಯಾಂಗವೂ ಬದಲಾಗಿದೆ. ಕೇಶವಾನಂದ ಭಾರತೀ ಪ್ರಕರಣದ ಕಾಲದ ನ್ಯಾಯಾಂಗವಲ್ಲ ಇಂದಿನ ನ್ಯಾಯಾಂಗ. ಆಗಲೂ ಅಲ್ಲೋರ್ವ ಇಲ್ಲೋರ್ವ ನ್ಯಾಯಾಧೀಶರುಗಳ ಸಾಂವಿಧಾನ ಬದ್ಧತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಆದರೆ ಸಾಂಸ್ಥಿಕವಾಗಿ ನ್ಯಾಯಾಂಗ ಗಟ್ಟಿಯಾಗಿಯೇ ಇತ್ತು. ಈಗ ನ್ಯಾಯಾಂಗದ ಸಾಂಸ್ಥಿಕ ಗಟ್ಟಿತನದ ಬಗ್ಗೆಗೆನೇ ಸಂಶಯ ಹುಟ್ಟಿಕೊಂಡಿದೆ. ಒಂದರ್ಥದಲ್ಲಿ ನ್ಯಾಯಾಧೀಶರುಗಳ ಕಟಕಟೆಯಲ್ಲಿ ನಿಂತಿದೆ. ಜನಾಭಿಪ್ರಾಯದ ಮೇಲೆ ನ್ಯಾಯನಿರ್ಣಯ ಮಾಡುವ ನ್ಯಾಯಾಂಗದ ಪರಿಪಾಠ, ತನ್ನೊಳಗಿನ ಹುಳುಕನ್ನು ಪತ್ರಿಕಾಗೋಷ್ಟಿ ನಡೆಸಿ ವಿವರಿಸುವ ಮಟ್ಟಿಗಿನ ನ್ಯಾಯಾಧೀಶರುಗಳ ನೈತಿಕ ಪತನ, ಕಾನೂನಾತ್ಮಕ ಸಮರ್ಥನೆಯೇ ಇಲ್ಲದೆ ನ್ಯಾಯಾಲಯಗಳು ನೀಡುವ ತೀರ್ಪುಗಳು ಇತ್ಯಾದಿಗಳನ್ನೆಲ್ಲಾ ನೋಡುತ್ತಿದ್ದರೆ ಸಂವಿಧಾನದ ರಕ್ಷಣೆಗೆ ನ್ಯಾಯಾಂಗವನ್ನೇ ನಂಬಿ ಕುಳಿತುಕೊಳ್ಳುವ ಹಾಗಿಲ್ಲ. ಇದು ದೇಶದ ಜನರಿಗೆ ಹೇಗೋ ಮನವರಿಕೆಯಾಗಿ ಬಿಟ್ಟಿದೆ. ಈ ದೇಶದ ಪ್ರಜಾತಂತ್ರ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅದ್ಯಾವುದೋ ಅಗೋಚರ ಶಕ್ತಿ ಸಂವಿಧಾನಕ್ಕೆ ಒದಗಿರುವ ಅಪಾಯವನ್ನು ಜನರಿಗೆ ತಿಳಿಸಿವೆ. ಅವರು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಅವರಿಗೆ ನಾಯಕತ್ವ, ಮಾರ್ಗದರ್ಶನ, ಆಧಾರ, ಆಶ್ವಾಸನೆ ಎಲ್ಲವೂ ಸಂವಿಧಾನವೇ ಆಗಿಬಿಟ್ಟಿದೆ.

ಒಂದೆಡೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅಬ್ಬರಿಸುತ್ತಿರುವ ರಾಜಕೀಯ ಶಕ್ತಿ, ಇನ್ನೊಂದೆಡೆ ಹಲವು ವಿರೋಧಾಭಾಸಗಳನ್ನೂ ಮೈಗೂಡಿಸಿಕೊಂಡಿದ್ದರೂ ಸಮಷ್ಟಿ ನೆಲೆಯಲ್ಲಿ ಸಂವಿಧಾನವನ್ನು ರಕ್ಷಿಸಿಯೇ ತೀರುತ್ತೇವೆ ಎಂದು ಮುನ್ನುಗ್ಗುತ್ತಿರುವ ಜನಶಕ್ತಿ. ಇವೆರಡನ್ನೂ ನೋಡುತ್ತಿದ್ದರೆ ಭಾರತದ ಪ್ರಜಾತಂತ್ರವನ್ನು ಶಿಥಿಲಗೊಳಿಸುವ ಮತ್ತು ಸಶಕ್ತಗೊಳಿಸುವ ವೈರುಧ್ಯಮಯ ಶಕ್ತಿಗಳೆರಡು ಮುಖಾಮುಖಿಯಾದಂತೆ ಕಾಣಿಸುತ್ತದೆ. ಈ ಮುಖಾಮುಖಿಯ ವ್ಯಕ್ತರೂಪವನ್ನೇ ಈ ಬಾರಿ ಗಣರಾಜ್ಯೋತ್ಸವದಲ್ಲಿ ನಾವು ಕಂಡದ್ದು.

ಕೊನೆಯದಾಗಿ ಇನ್ನೊಮ್ಮೆ ಹೇಳಬೇಕು. ಕೆಂಪುಕೋಟೆಯ ಕೊತ್ತಲದ ಮೇಲೇರಿ ಕೂಗಿಕೂಗಿ ಹೇಳಬೇಕು. ಎಪ್ಪತ್ತು ವರ್ಷಗಳಲ್ಲಿ ಆಗದ್ದು ಈಗ ಆಗುತ್ತಿದೆ. ನಿಜಕ್ಕೂ ಆಗುತ್ತಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಗುತ್ತಿದೆ. ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಆಗುತ್ತಿದೆ. ಎಪ್ಪತ್ತು ವರ್ಷಗಳಲ್ಲಿ ಎಂದೂ ಜನ ಸಂವಿಧಾನವನ್ನು ಎದೆಗವಚಿಕೊಂಡು, ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಎತ್ತಿಹಿಡಿದುಕೊಂಡು ಆಳುವ ಸರ್ಕಾರವೊಂದರ ಅಹಂಗೆ ಇರಿದ ಉದಾಹರಣೆ ಇಲ್ಲ. ಈಗ ಅದು ಆಗುತ್ತಿದೆ. ಅಂದರೆ ಆಳುವ ಸರಕಾರವೊಂದರ ಮೇಲೆ ಎಂದೂ ಕುಸಿಯದ ಮಟ್ಟಕ್ಕೆ ಒಂದು ದೊಡ್ಡ ಸಂಖ್ಯೆಯ ಜನರ ಭರವಸೆ ಕುಸಿದಿದೆ. ಆಳುವ ಸರಕಾರವನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿದ್ದ ಎಲ್ಲಾ ಸಂಸ್ಥೆಗಳ ಮೇಲಿನ ಭರವಸೆಯೂ ಕುಸಿದಿದೆ. ಅದೇವೇಳೆ ಅವರಿಗೆ ಎಲ್ಲಾ ನಿರಾಶೆಗಳಾಚೆಗಿನ ಭರವಸೆಯಾಗಿ, ಎಲ್ಲಾ ಕತ್ತಲೆಯ ಆಚೆಗಿನ ಬೆಳಕಾಗಿ, ಎಲ್ಲಾ ದ್ವಂದ್ವಗಳಾಚೆಗಿನ ಸ್ಪಷ್ಟತೆಯಾಗಿ, ಎಲ್ಲಾ ತತ್ವಹೀನತೆಯಾಚೆಗಿನ ಪರತತ್ವವಾಗಿ ಸಂವಿಧಾನ ಕಾಣಿಸುತ್ತಿದೆ. “ಧರ್ಮವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ” ಅಂತ ಹೇಳುತ್ತಾ, ಹೇಳುತ್ತಾ ಯಾವ ಧರ್ಮವೂ ಮೆಚ್ಚದ ರೀತಿಯ ರಾಜಕೀಯ ನಡೆಸುತ್ತಿರುವ ಮಂದಿಗೆ ಈ ಜನ ಹೇಳುತ್ತಿದ್ದಾರೆ: “ಸಂವಿಧಾನವನ್ನು ರಕ್ಷಿಸಿ, ಅದು ನಮ್ಮೆಲ್ಲರನ್ನೂ ರಕ್ಷಿಸುತ್ತದೆ.” ಭಾರತೀಯ ಧರ್ಮಕ್ಕೆ ಸಂವಿಧಾನವೇ ಧರ್ಮಗ್ರಂಥ ಎನ್ನುವ ಸಂದೇಶ ಎತ್ತೆತ್ತಲೂ ಹರಿದಾಡುತ್ತಿದೆ. ಇದನ್ನು ಸಂವಿಧಾನ ಕ್ಷಣ ಅಂತಲೇ ಕರೆಯಬೇಕಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...