Homeಮುಖಪುಟಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

- Advertisement -
- Advertisement -

ಜನವರಿ 30, ಮಹಾತ್ಮರ ದೇಹಾಂತ್ಯದ ಪುಣ್ಯಸ್ಮರಣೆಯ ದಿನ. ಅಂದು ಭಾರತ ಸಂವಿಧಾನ ಮೊತ್ತ ಮೊದಲ ವಾಕ್ಯ ‘ಭಾರತದ ಜನತೆಯಾದ ನಾವು’, ‘WE THE PEOPLE OF INDIA’ ಎಂಬುದನ್ನೇ ಧ್ಯೇಯವಾಕ್ಯವಾಗಿಟ್ಟುಕೊಂಡು, ಉಡುಪಿ ಜನಸಾಮಾನ್ಯರು ಒಂದು ಸಾರ್ವಜನಿಕ ಮೆರವಣಿಗೆ ಹಾಗೂ ಸಭೆಗಳನ್ನು ಸಂಘಟಿಸುವ ಮೂಲಕ ಹಂತಕನ ಗುಂಡೇಟಿಗೆ ಬಲಿಯಾದ ಮಹಾತ್ಮರು ಮತ್ತು ಭಾರತ ಸಂವಿಧಾನವನ್ನು ರಚಿಸಿದ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರಿಗೆ ತಮ್ಮ ಗೌರವ ಸಲ್ಲಿಸಬೇಕು ಎಂದು ತೀರ್ಮಾನಿಸಲಾಗಿದೆ.

ಗಾಂಧೀಜಿಯವರಿಗೆ ಗೌರವ ಸಲ್ಲಿಸುವುದು ಹೇಗೆ? ಬಾಬಾಸಾಹೇಬರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುವುದು ಎಂದರೆ ಏನು? ಬಾಬಾ ಸಾಹೇಬರ ಅವಿರತ ಶ್ರಮದ ಫಲವಾಗಿ ರಚನೆಯಾದ ಭಾರತ ಸಂವಿಧಾನದ ಮೊದಲ ಪುಟದ ಮೇಲೆಯೇ ಚಲನಶೀಲತೆ ಮತ್ತು ಅಹಿಂಸೆಗಳ ಸಂಕೇತವಾದ ಅಶೋಕಚಕ್ರ ನಮ್ಮ ಗಮನ ಸೆಳೆಯುತ್ತದೆ. ಅಶೋಕಚಕ್ರದಡಿ “ಸತ್ಯಮೇವಜಯತೆ” ಎಂಬ ವಾಕ್ಯವಿದೆ. ಗಾಂಧೀಜಿ ಈ ಶಬ್ದವನ್ನು ಬೀಜಮಂತ್ರವಾಗಿ ಇರಿಸಿಕೊಂಡು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ತನ್ನ ಸತ್ಯಾಗ್ರಹ ಹೋರಾಟವನ್ನು ರೂಪಿಸಿದ್ದರು. ಗೆದ್ದವರು ಬರೆದದ್ದು ಮಾತ್ರ ಚರಿತ್ರೆ ಎಂದು ಗೆದ್ದವರು ಹಾಗೂ ಸೋತವರು. ಎಲ್ಲರೂ ನಂಬಿದ ಕಾಲಘಟ್ಟದಲ್ಲಿ ಗಾಂಧೀಜಿ ಇತಿಹಾಸ ಚಕ್ರವನ್ನೇ ಮುನ್ನಡೆಸಿದರು. ಸಾವಿರಾರು ವರ್ಷ ಭವ್ಯ ಸಾಂಸ್ಕೃತಿಕ ಚರಿತ್ರೆ ಹೊಂದಿರುವ ನಮ್ಮೀ ಭಾರತದ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ದೇಶದ ಎಲ್ಲ ಪ್ರಜೆಗಳೂ ಜಾತಿ, ಮತ, ಧರ್ಮಗಳ ಭೇದವನ್ನು ಲೆಕ್ಕಿಸದೆ ಹೆಣ್ಣು, ಗಂಡು ಎಂಬ ಲಿಂಗ ಅಸಮಾನತೆಯನ್ನು ಸಹ ತೊಡೆದು ಹಾಕಿ, ಭಾರತ ಒಂದು ಸ್ವತಂತ್ರ‍ ಸಮಾನ ಪ್ರಜಾಸತ್ತಾತ್ಮಕ ದೇಶ ಎಂದು ಬಾಬಾ ಸಾಹೇಬರು ಕಾರಣಪುರುಷರಾಗಿದ್ದ ಭಾರತದ ಸಂವಿಧಾನ ಪ್ರತಿಪಾದಿಸಿತು, ಇತಿಹಾಸ ಚಕ್ರ ಮತ್ತೆ ಮುನ್ನಡೆಯಿತು.

ಹಾಲೀ ಕೇಂದ್ರ ಸರಕಾರ ಇದೀಗ ಜಾರಿಗೊಳಿಸಲು ಹೊರಟಿರುವ ‘ಪೌರತ್ವ (ತಿದ್ದುಪಡಿ) ಕಾಯ್ದೆ’ ಭಾರತ ಸಂವಿಧಾನದ ಮೂಲಭೂತ ಆಶಯಗಳಿಗೆ ದ್ರೋಹ ಬಗೆದಿದೆ. ಈ ಕಾಯ್ದೆ ಪ್ರಕಾರ ನಮ್ಮ ನೆರೆಯ ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ಪ್ರಜೆಗಳಿಗೆ ಮಾತ್ರ ಭಾರತದ ಪೌರರಾಗುವ ಅವಕಾಶವಿದೆ. ಹಾಗಿದ್ದರೆ, ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಾರತದಲ್ಲಿ ನೆಲೆಸಿರುವ ಮ್ಯಾನ್ಮಾರ್‍ನ ರೋಹಿಂಗ್ಯಮುಸ್ಲಿಮರ ಪಾಡೇನು? ಶ್ರೀಲಂಕಾದ ಅಂತರ್ಯುದ್ಧದಿಂದಾಗಿ ನಿರಾಶ್ರಿತರಾದ ತಮಿಳು ಮೂಲದ ಮುಸ್ಲಿಮ್ ಸಮುದಾಯಕ್ಕೆ ಯಾರು ಉತ್ತರದಾಯಿಗಳು?

ಸಾರಾಸಗಟಾಗಿ ಮುಸ್ಲಿಮ್ ಸಮುದಾಯಕ್ಕೆ ಒಂದು ಮನೋಧರ್ಮ ಒಂದು ಸಂಸ್ಕೃತಿ, ಒಂದು ಭಾಷೆಗಳನ್ನು ಆರೋಪಿಸುವ ಈ ಮನಃಸ್ಥಿತಿ, ಜಾಗತಿಕ ಮುಸ್ಲಿಮ್ ಸಮುದಾಯದಲ್ಲಿ ಪ್ರವಾದಿ ಅಲ್ಲಾಹುವಿನಲ್ಲಿ ನಂಬಿಕೆ ಹೊರತಾಗಿ ಬೇರೆ ಯಾವ ಬಗೆಯ ಸಮಾನತೆ ಇದೆ ಎಂಬ ಕುರಿತು ಯೋಚಿಸಬೇಕು. ದೇಶ, ಪ್ರಾಂತ್ಯ, ಭಾಷೆ, ಸಂಸ್ಕತಿ, ಆಚಾರ, ವಿಚಾರ, ಆಹಾರ, ಉಡುಪು ತೊಡಪು ಬದುಕಿನ ಈ ಎಲ್ಲ ಮೂಲಭೂತ ವಿವರಗಳಲ್ಲೂ ದೇಶದಿಂದ ದೇಶಕ್ಕೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಮುಸ್ಲಿಮ್ ಸಮುದಾಯದ ಒಳಗೇನೆ ಇರುವ ಅಪಾರ ವ್ಯತ್ಯಾಸ ಕಣ್ಣಿದ್ದವನಿಗೆ ಕಾಣಿಸುತ್ತದೆ. ನಮ್ಮ ರಾಜ್ಯದ ಮುಸ್ಲಿಮ್ ಧರ್ಮೀಯರಲ್ಲೇ ಎಷ್ಟು ವೈವಿಧ್ಯತೆಯಿದೆ! ಗುಲ್ಬರ್ಗ, ರಾಯಚೂರು, ಬಿಜಾಪುರಗಳಲ್ಲಿನ ಮುಸ್ಲಿಮರು ಮತ್ತು ಉಡುಪಿ ಮಂಗಳೂರುಗಳ ಮುಸ್ಲಿಮರ ನಡುವೆ ಎಷ್ಟು ವ್ಯತ್ಯಾಸಗಳಿವೆ!

ಕೇಂದ್ರ ಸರಕಾರ ತನ್ನ ಪೌರತ್ವ (ತಿದ್ದುಪಡಿ) ಕಾಯ್ದೆಯ ಮುಖಾಂತರ, ಮುಸ್ಲಿಮ್ ಸಮುದಾಯದ ಈ ವೈವಿಧ್ಯಮಯ ಸಂಸ್ಕೃತಿಯನ್ನೂ ಅಲ್ಲಗಳೆಯುತ್ತಿದೆ. ಒಂದು ಸಮುದಾಯದ ಸಂಸ್ಕೃತಿಯನ್ನು ಅಲ್ಲಗಳೆಯುವುದು ಎಂದರೆ ಆ ಸಮುದಾಯಕ್ಕೆ ಸೇರಿದ ಜನರ ಇರಸ್ತಿಕೆಯನ್ನೇ ಕೊನೆಗೊಳಿಸಿದಂತೆ. ಈ ಮಾತಿಗೆ ಒಂದು ಉದಾಹರಣೆ ಕೊಡುವುದಾದರೆ ದೇಶದ ಹಾಲೀ ಪ್ರಧಾನಿ ಗುಜರಾತ್‍ನ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 2002 ರಲ್ಲಿ ಸಂಭವಿಸಿದ ಮುಸ್ಲಿಂ ನರಹತ್ಯೆ ಆ ಕುರಿತು ಅವರು ಈವರೆಗೂ ದೇಶದ ಪ್ರಜೆಗಳಲ್ಲಿ ಕ್ಷಮೆ ಕೋರಿಲ್ಲ. ಅವರಿಗೆ ಆ ಕರಾಳಕೃತ್ಯದ ಬಗ್ಗೆ ವ್ಯಥೆಯೂ ಇಲ್ಲ 2002 ಕ್ಕಿಂತ ಮೊದಲು 1992 ರಲ್ಲಿ ಹಾಲೀ ಪ್ರಧಾನಿಯವರು ಮಹಾನ್ ನೇತಾರರಾಗಿರುವ ಬಿ.ಜೆ.ಪಿ ಪಕ್ಕದ ಕಾಲಾಳುಗಳೇ ಉತ್ತರ ಪ್ರದೇಶದ ಫೈಜಾಬಾದ್ ನಗರದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಧ್ವಂಸ ಮಾಡಿದರು. ಅದೇದಿನ ಸಂಜೆ ಮುಂಬೈಯಲ್ಲಿ ಪ್ರಾರಂಭವಾದ ಭೀಕರ ಕೋಮುಹಿಂಸಾಚಾರ ತಿಂಗಳುಗಟ್ಟಲೆ ಮುಂದುವರಿದು ಹತ್ತಿರತ್ತಿರ 1000 ಜನ ಮುಸ್ಲಿಮರು ಅದರಲ್ಲಿ ಪ್ರಾಣ ಕಳೆದುಕೊಂಡರು. ಹಾಗಿರುತ್ತ ಬಿ.ಜೆ.ಪಿ ಮತ್ತು ದೇಶದ ಹಾಲೀ ಪ್ರಧಾನಿಯವರಂತಹ ಜನನಾಯಕರಿಂದ ಪೌರತ್ವ ತಿದ್ದುಪಡಿ ಕಾಯ್ದೆಗಿಂತ ಉತ್ತಮವಾದ ಏನನ್ನೂ ತಾನೇ ನಿರೀಕ್ಷಿಸಲು ಸಾಧ್ಯ? ಈ ಜನ ನಾಯಕರಿಗೆ ದೇಶದ ಮುಸ್ಲಿಮರು, ಪ್ರಜೆಗಳು ಹಾಗಿರಲಿ, ಕನಿಷ್ಠ ಮನುಷ್ಯರೂ ಅಲ್ಲ!

ಭಾರತ ಸಂವಿಧಾನದ ಪ್ರಾಥಮಿಕ ಪರಿಚಯವೂ ಇಲ್ಲದ ಈ ಬೇಜವಾಬ್ದಾರಿ ಜನಗಳ ಪಕ್ಷ ಬಿ.ಜೆ.ಪಿ, ಇಂದು ಮುಸ್ಲಿಮ್ ಸಮುದಾಯದ ತರುಣರ ಮೇಲೆ ಲವ್‍ಜೆಹಾದ್‍ನ ಹಸಿಹಸಿ ಸುಳ್ಳು ಆರೋಪ ಹೊರಿಸುತ್ತಿರುವುದು ಆ ಪಕ್ಷದ ಮುಸ್ಲಿಮ್ ದ್ವೇಷ ಮಾತ್ರವಲ್ಲ ಹಿಂದೂ ತರುಣಿಯರ ಬಗ್ಗೆ ಅವರಿಗೆ ಎಂತಹ ಕೀಳು ಅಭಿಪ್ರಾಯವಿದೆ ಎಂಬುದಕ್ಕೆ ಕೂಡ ಉದಾಹರಣೆಯಾಗಿದೆ. ಇದೇ ಬಿ.ಜೆ.ಪಿಯ ದ.ಕ ಜಿಲ್ಲೆಯ ಒಬ್ಬ ಪುಢಾರಿ ಕಲ್ಲಡ್ಕ ಪ್ರಭಾಕರ ಭಟ್ಟ, ಈಗ ಕನಕಪುರದ ಪ್ರಸ್ತಾಪಿತ ಯೇಸುಕ್ರಿಸ್ತನ ಪ್ರತಿಮೆ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲ ವದರುತ್ತಿದ್ದಾನೆ. ಆ ಪಕ್ಷ ಬರೇ ಬೇಜವಾಬ್ದಾರಿ ಜನಗಳ ಪಕ್ಷ ಮಾತ್ರವಲ್ಲ, ಮಹಾನೀಚರ ಪರ ಕೂಡ ಎಂಬ ಮಾತಿಗೆ ಈತ ನಡೆದಾಡುವ ಒಂದು ನಿದರ್ಶನವಾಗಿದ್ದಾನೆ. ಈತನಿಗೆ ಗಾಂಧೀಜಿ ಸದಾ ಹೇಳುತ್ತಿದ್ದ. ‘ಈಶ್ವರ ಅಲ್ಲಾ ತೇರೇನಾಮ್ ಸಬ್ ಕೋ ಸನ್ಮತಿ ದೇ ಭಗವಾನ್’ ಎಂಬ ಭಜನೆಯ ಸೊಲ್ಲನ್ನು ಯಾರಾದರೂ ನೆನಪಿಸಬೇಕು, ಆ ಮುಖಾಂತರವಾದ ಈತನಿಗೆ ‘ಸನ್ಮತಿ’ ದೊರೆಯಲಿ ಎಂದು ಪ್ರಾರ್ಥಿಸಬೇಕು. ಹಾಗೆಯೇ ಶಿಕ್ಷಣ ಸಂಸ್ಥೆಯೊಂದರ ಮಾಲಿಕನಾಗಿರುವ ಈ ಮೂರ್ಖನಿಗೆ ಗಾಂಧೀಜಿಯವರಿಗೆ ಬೈಬಲ್‍ನ ‘ಬೆಟ್ಟದ ಮೇಲಣ ಬೋಧನೆ’- SERMON ON THE MOUNT ಕೂಡ ತುಂಬ ಪ್ರಿಯವಾಗಿತ್ತು ಎಂಬುದನ್ನು ತಿಳಿಹೇಳಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...