ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ ಆರ್ಎಸ್ಎಸ್ ಸಿದ್ಧಾಂತವಾದಿ ಹಾಗೂ ಕೇರಳ ಮೂಲದ ಬಲಪಂಥೀಯ ವಿಶ್ಲೇಷಕ ಟಿ.ಜಿ. ಮೋಹನ್ದಾಸ್ ತೀವ್ರ ದ್ವೇಷಪೂರಿತ ಹಾಗೂ ಅಮಾನವೀಯ ಹೇಳಿಕೆ ನೀಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ವಿದ್ಯಾರ್ಥಿ ಸಮುದಾಯವನ್ನು ಬಲಪ್ರಯೋಗದ ಮೂಲಕ ಹತ್ಯೆ ಮಾಡಬೇಕಿತ್ತು ಎಂಬ ಅವರ ಹೇಳಿಕೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಯೂಟ್ಯೂಬ್ ಚಾನೆಲ್ವೊಂದರಲ್ಲಿ (Malayalam YouTube Channel) ಆಯೋಜಿಸಲಾಗಿದ್ದ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ದಾಸ್, ಪ್ರತಿಭಟನಾನಿರತ ಯುವಜನರನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ಅತ್ಯಂತ ಕ್ರೂರ ಮಾರ್ಗವನ್ನು ಅನುಸರಿಸಬೇಕಿತ್ತು ಎಂದು ಪ್ರತಿಪಾದಿಸಿದರು.
“ಗುಂಡಿಕ್ಕಿ ಕೊಲ್ಲಬೇಕಿತ್ತು, ಶವ ಸಾಗಿಸಬೇಕಿತ್ತು”
ಚರ್ಚೆಯ ವೇಳೆ ತಮ್ಮ ಹಿಂಸಾತ್ಮಕ ಮನಸ್ಥಿತಿಯನ್ನು ಬಹಿರಂಗಪಡಿಸಿದ ಮೋಹನ್ದಾಸ್, “ದೆಹಲಿಯ ಜಂತರ್ ಮಂತರ್ನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಯು ತಕ್ಷಣವೇ ಕರ್ಫ್ಯೂ ವಿಧಿಸಬೇಕಿತ್ತು. ಅಲ್ಲಿ ಸೇರಿರುವ ವಿದ್ಯಾರ್ಥಿಗಳ ಗುಂಪಿಗೆ ಸ್ಥಳದಿಂದ ಚದುರಿ ಹೋಗುವಂತೆ ಕೇವಲ ಮೂರು ಬಾರಿ ಎಚ್ಚರಿಕೆ ನೀಡಿ, ಆನಂತರವೂ ಅವರು ಕದಲದಿದ್ದರೆ ನೇರವಾಗಿ ಅವರ ಮೇಲೆ ಗುಂಡಿನ ದಾಳಿ ನಡೆಸಬೇಕಿತ್ತು” ಎಂದು ಭೀಕರವಾಗಿ ಹೇಳಿದ್ದಾರೆ.
ಅಷ್ಟಕ್ಕೇ ನಿಲ್ಲಿಸದ ಅವರು, “ಈ ರೀತಿ ನೇರ ಗುಂಡಿನ ದಾಳಿ ಮಾಡಿದ್ದರೆ ಹಲವರು ಸ್ಥಳದಲ್ಲೇ ಸಾಯುತ್ತಿದ್ದರು. ಇನ್ನು ಕೆಲವರು ಶಾಶ್ವತವಾಗಿ ಅಂಗವಿಕಲರಾಗುತ್ತಿದ್ದರು; ಕೇವಲ ನಾಲ್ಕು ಗಂಟೆಗಳಲ್ಲಿ ಇಡೀ ಪ್ರತಿಭಟನೆಯ ಪರಿಸ್ಥಿತಿ ತಾನಾಗಿಯೇ ಶಾಂತವಾಗುತ್ತಿತ್ತು. ಆ ಬಳಿಕ ರಸ್ತೆಯಲ್ಲಿ ಬಿದ್ದ ಶವಗಳನ್ನು ಆರಿಸಿಕೊಂಡು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನಷ್ಟೇ ಪೊಲೀಸರು ಮಾಡಬೇಕಿತ್ತು” ಎಂದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕಿಸುವ ರೀತಿಯಲ್ಲಿ ವಿವರಿಸಿದ್ದಾರೆ.
ಗುಜರಾತ್ ಗಲಭೆ ಉಲ್ಲೇಖಿಸಿ ಪ್ರಧಾನಿ ಮೋದಿ ಶ್ಲಾಘನೆ
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಉದಾಹರಿಸಿದ ಮೋಹನ್ದಾಸ್, ಇಂತಹ ಪ್ರಕ್ಷುಬ್ಧ ಪ್ರತಿಭಟನೆಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವಲ್ಲಿ ಮೋದಿ ಸಮರ್ಥರಾಗಿದ್ದಾರೆ ಮತ್ತು ಇದಕ್ಕೆ 2002ರ ಗುಜರಾತ್ ಗಲಭೆಯೇ ಸ್ಪಷ್ಟ ನಿದರ್ಶನ ಎಂದಿದ್ದಾರೆ.
“ದೆಹಲಿಯಲ್ಲಿ ಈಗ ನಡೆದಿದ್ದು ಕೇವಲ ಒಂದೂವರೆ ಚದರ ಕಿಲೋಮೀಟರ್ ವ್ಯಾಪ್ತಿಯ ಸಣ್ಣ ಗದ್ದಲ. ಆದರೆ, ಅಂದು ಗುಜರಾತ್ನ ಬರೋಬ್ಬರಿ 14 ಜಿಲ್ಲೆಗಳಲ್ಲಿ ಗಲಭೆ ಭುಗಿಲೆದ್ದಿತ್ತು. ಆ ಸಮಯದಲ್ಲಿ ಯಾವುದೇ ಆಡಳಿತಾತ್ಮಕ ಅನುಭವವಿಲ್ಲದಿದ್ದರೂ, ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರು. ಗುಜರಾತ್ನಂತಹ ಭೀಕರ ಗಲಭೆಗಳು ಮತ್ತು ಸರಣಿ ಬಾಂಬ್ ದಾಳಿಗಳನ್ನು ಅತ್ಯಂತ ಹತ್ತಿರದಿಂದ ಕಂಡಿರುವ ಮೋದಿಯವರಿಗೆ, ಇಂತಹ ಸಣ್ಣಮಟ್ಟದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಮಟ್ಟಹಾಕುವುದು ಕಷ್ಟದ ಕೆಲಸವೇನಲ್ಲ” ಎಂದು ಪ್ರಧಾನಿಯವರ ಗಲಭೆ ನಿಯಂತ್ರಣ ಶೈಲಿಯನ್ನು ಬಲಪಂಥೀಯ ನೆಲೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ಹಕ್ಕುಗಳಿಗಾಗಿ ಮತ್ತು ಶಿಕ್ಷಣ ರಕ್ಷಣೆಗಾಗಿ ಬೀದಿಗಿಳಿದ ದೇಶದ ಯುವಜನರನ್ನು ಬಲಿಪಶು ಮಾಡಲು ಪ್ರಚೋದನೆ ನೀಡಿದ ಈ ಹೇಳಿಕೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜನಪ್ರಿಯ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೋಹನ್ದಾಸ್ ವಿರುದ್ಧ ದ್ವೇಷ ಭಾಷಣದಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿಬರುತ್ತಿದೆ.


