Homeಕರ್ನಾಟಕಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

- Advertisement -
- Advertisement -

ಕರ್ನಾಟಕ ವಿಧಾನಸಭೆಯ ಮೊದಲ ಮುಸ್ಲಿಂ ಸ್ಪೀಕರ್ ಆಗಿ ಆಯ್ಕೆಯಾಗಿ ಇತಿಹಾಸ ಬರೆಯುತ್ತಿರುವ, ಹಿಂದಿನ ಉಳ್ಳಾಲ ಮತ್ತು ಈಗಿನ ಮಂಗಳೂರು ಕ್ಷೇತ್ರದ ಶಾಸಕ ಮಾಜಿ ಮಂತ್ರಿ ಯು.ಟಿ. ಖಾದರ್ ಅವರನ್ನು ಕೇವಲ ಮುಸ್ಲಿಂ ಎಂಬ ಲೇಬಲ್‌ನಿಂದಾಗಲೀ ಅಥವಾ ಅವರು ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಸ್ಪೀಕರ್ ಎಂಬ ಲೇಬಲ್‌ನಲ್ಲಾಗಲೀ ಗುರುತಿಸುವುದು ಸರಿಯಾದ ಕ್ರಮವಲ್ಲ.

ಇದಕ್ಕೆ ಕೆಲವು ಕಾರಣಗಳನ್ನು ಕೊಡಬಹುದು. ಅತ್ಯಂತ ಪ್ರತಿಷ್ಟಿತ ಮತ್ತು ಗೌರವಾರ್ಹ ಹುದ್ದೆಯಾಗಿರುವ ಸ್ಪೀಕರ್ ಸ್ಥಾನಕ್ಕೆ ಬಹಳಷ್ಟು ಮಹತ್ವವಿದೆ. ಅದೊಂದು ಕ್ವಾಸಿ (quasi) ನ್ಯಾಯಾಲಯವೂ ಹೌದು. ಅದು ಕಿತ್ತಾಡುವ ಎಲ್ಲಾ ಪಕ್ಷ, ಬಣಗಳನ್ನು ನಿಷ್ಪಕ್ಷಪಾತವಾಗಿ ಜೊತೆಗೆ ಕರೆದೊಯ್ಯುವ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯ, ಪರಂಪರೆಗಳನ್ನು, ಸಂವಿಧಾನವನ್ನು ಎತ್ತಿ ಹಿಡಿದು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನೂ ಹೊಂದಿದೆ. ಜೊತೆಗೆ ಈಗಿರುವ ಪಕ್ಷಗಳ ನಡುವಿನ ವೈಮನಸ್ಸು, ದಿನದಿಂದದಿನಕ್ಕೆ ಒರಟಾಗುತ್ತಿರುವ ಜನಪ್ರತಿನಿಧಿಗಳ ಭಾಷೆ, ಸ್ವಭಾವ ಮತ್ತು ಸಂಘರ್ಷದ ಮನೋಭಾವ ಇತ್ಯಾದಿ ಸಂಗತಿಗಳ ವಾತಾವರಣದಲ್ಲಿ ಸದನವನ್ನು ಶಾಂತಿಯುತವಾಗಿ ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವೇನಲ್ಲ. ಅಷ್ಟು ಮಾತ್ರವಲ್ಲದೇ, ಭ್ರಷ್ಟಾಚಾರದ ಈ ಯುಗದಲ್ಲಿ ಪ್ರತಿಯೊಂದನ್ನೂ ಹಣಕಾಸಿನ ಮತ್ತು ಅದು ತರುವ ಪ್ರಭಾವದ ಪ್ರಮಾಣದಲ್ಲಿ ಅಳತೆ ಮಾಡಲಾಗುತ್ತಿರುವಾಗ, ಪ್ರತಿಯೊಬ್ಬರೂ “ಆಯಕಟ್ಟಿನ” ಜಾಗವನ್ನು ಬಯಸುತ್ತಿರುವಾಗ- ಸ್ಪೀಕರ್ ಹುದ್ದೆಯನ್ನು ಸ್ವೀಕರಿಸಲು ಬಹಳಷ್ಟು ಮಂದಿ ಹಿರಿಯರು, ತಮಗೂ ಅಂತಹ ಅರ್ಹತೆ ಇದ್ದರೂ ಸುತಾರಾಂ ಒಪ್ಪಿಕೊಳ್ಳುವುದಿಲ್ಲ.

ದೇಶಪಾಂಡೆ

ಇಲ್ಲಿ ಆಗಿರುವುದೂ ಹಾಗೆಯೇ. ಕಾಂಗ್ರೆಸ್ ಪಕ್ಷವು ಹಿರಿಯರಾದ ಆರ್.ವಿ.ದೇಶಪಾಂಡೆ ಮತ್ತು ಎಚ್.ಕೆ. ಪಾಟೀಲ್ ಅವರನ್ನು ಈ ಹುದ್ದೆಗೆ ಪರಿಗಣಿಸಿದರೂ ಅವರಿಬ್ಬರು ಅದನ್ನು ಬಹಳ ನಾಜೂಕಾಗಿ ನಿರಾಕರಿಸಿದ್ದಾರೆ. ದೇಶಪಾಂಡೆಯವರಂತೂ ತನಗೆ ಅಷ್ಟು ದೊಡ್ಡ ಜವಾಬ್ದಾರಿಯ ಹುದ್ದೆಯನ್ನು ನಿಭಾಯಿಸುವ ಜ್ಞಾನವಿಲ್ಲ ಎಂದು ಹೇಳಿದ್ದಾರೆ. ಹಿಂದೆ ಹಲವಾರು ಸಂಪುಟಗಳಲ್ಲಿ ಬೃಹತ್ ಕೈಗಾರಿಕೆ ಸೇರಿದಂತೆ ಮಂತ್ರಿಯಾಗಿದ್ದ ಅವರೇ ಹೀಗೆ ಹೇಳಿದ ಮೇಲೆ ಯು.ಟಿ. ಖಾದರ್ ಅವರಿಗೆ ಅಂತಾ ದೊಡ್ಡ ಅರ್ಹತೆ ಇರಲೇಬೇಕು. ಇದೆಯೇ, ಇಲ್ಲವೇ ಎಂಬುದನ್ನು ಮುಂದೆ ನೋಡೋಣ.

ಐದನೇ ಬಾರಿಗೆ- ನಿರಂತರವಾಗಿ ಕೋಮುವಾದದ ಪ್ರಯೋಗಶಾಲೆಯಾಗಿರುವ ಕರಾವಳಿಯಲ್ಲಿ, ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಗೆಲ್ಲುತ್ತಾ ಬಂದಿರುವ, ಎರಡು ಬಾರಿ ಸಂಪುಟದ ಸಚಿವರೂ ಆಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿರುವ, ಕಳೆದ ಬಾರಿ ಪ್ರತಿಪಕ್ಷಗಳ ಉಪನಾಯಕನೂ ಆಗಿದ್ದ, ಈ ಬಾರಿಯೂ ಹಲವು ಅಡಚಣೆ ಮತ್ತು ಮುಸ್ಲಿಮರ ಒಂದು ಗುಂಪಿನ ಬಹಿರಂಗ ವಿರೋಧದ ನಡುವೆಯೂ ಗೆಲುವಿನ ಓಟವನ್ನು ಮುಂದುವರಿಸಿರುವ ಯು.ಟಿ. ಖಾದರ್ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಗುವುದು ಕೇವಲ ನಿರೀಕ್ಷಿತ ಮಾತ್ರವಲ್ಲ; ಅವರ ಅಭಿಮಾನಿಗಳ ಆಕಾಂಕ್ಷೆಯೂ ಆಗಿತ್ತು.

ಹೀಗಿರುವಾಗ, ಅವರಿಗೆ ಅದು ಸಿಗದೇ, ಸ್ಪೀಕರ್ ಹುದ್ದೆ ಸಿಕ್ಕಿರುವುದು ಹಲವು ರೀತಿಯ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಇಂತಹ ಪ್ರತಿಕ್ರಿಯೆಗಳು, ಮುಖ್ಯವಾಗಿ ಟೀಕೆಗಳು ಕಾಂಗ್ರೆಸ್ ಅಥವಾ ಅವರ ವೈಯಕ್ತಿಕ ಬೆಂಬಲಿಗರಿಂದ ಬರದೇ, ಅವರ ವಿರೋಧಿಗಳು ಮತ್ತು ಪ್ರತಿಪಕ್ಷಗಳ ಕೆಲವು ವಾಚಾಳಿ ನಾಯಕರಿಂದ ಬರುತ್ತಿರುವುದು ವಿಪರ್ಯಾಸ. ಯಾಕೆಂದರೆ, ಅಧಿಕಾರ ರಾಜಕಾರಣದಲ್ಲಿ ಒಂದು ಸದನದ ಯಜಮಾನನ ಸ್ಥಾನವಾದ ಸ್ಪೀಕರ್ ಹುದ್ದೆಯನ್ನು ಯಕಶ್ಚಿತ್ ಎಂಬಂತೆ ಕಾಣುವುದು ಅಂತವರ ಜಾಯಮಾನ. ಖಾದರ್ ಅವರಿಗೆ ಮಂತ್ರಿಗಿರಿ ನೀಡದೇ ಸ್ಪೀಕರ್ ಹುದ್ದೆ ನೀಡಿರುವುದೂ ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಮಾಡಿದ ಅನ್ಯಾಯ ಎಂಬಂತೆ ಬಿಂಬಿಸಲು ಕೆಲವರು ಈಗಾಗಲೇ ಆರಂಭಿಸಿದ್ದಾರೆ.

ಇದನ್ನೂ ಓದಿ: ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ

ಅದೇನೇ ಇದ್ದರೂ, ಪಕ್ಷದ ಹಿರಿಯರೇ ನಿರಾಕರಿಸಿರುವ ಈ ಹುದ್ದೆಯನ್ನು ತುಲನಾತ್ಮಕವಾಗಿ ಕಿರಿಯರಾದ ಅವರು, ಪಕ್ಷದ ಆಣತಿಯಂತೆ ಸ್ವೀಕರಿಸಿರುವುದು ಅವರ ಪಕ್ಷನಿಷ್ಠೆ ಮತ್ತು ಪ್ರಾಮಾಣಿಕತೆಗಳನ್ನು ಪ್ರತಿಫಲಿಸುತ್ತದೆ. ಜನನಿಷ್ಠೆ ಮತ್ತು ಪಕ್ಷನಿಷ್ಠೆ ಅವರ ಸ್ವಭಾವದ ಭಾಗವೂ ಹೌದು. ಒಬ್ಬ ವ್ಯಕ್ತಿಯ ಬೆಂಬಲದಲ್ಲಿ ಸ್ವಂತ ವರ್ಚಸ್ಸು ಮತ್ತು ಕೆಲಸಗಳ ಜೊತೆ ಪಕ್ಷದ, ಸಿದ್ಧಾಂತದ ಪ್ರಭಾವ ಮತ್ತು ಜನರು ಇಟ್ಟಿರುವ ನಂಬಿಕೆಗಳಿಗೆ ಬಹುದೊಡ್ಡ ಪಾತ್ರವಿರುತ್ತದೆ. ಇದನ್ನು ಮರೆತವರು, ಬಾಯಿ ಹರಿಯಬಿಟ್ಟ ಘಟಾನುಘಟಿಗಳು ಟೊಳ್ಳು ಮಡಕೆಗಳಂತೆ ಉರುಳಿ ಪುಡಿಪುಡಿ ಆಗಿರುವುದನ್ನು ಈ ಚುನಾವಣೆಯಲ್ಲಿಯೇ ನಾವು ನೋಡಿದ್ದೇವೆ. ಅದು ಖಾದರ್ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ದೃಷ್ಟಿಯಿಂದ ಶಿಸ್ತಿನ ಸಿಪಾಯಿ ಅವರು.

ಯು.ಟಿ.ಖಾದರ್ ಅವರು ಸ್ಪೀಕರ್ ಹುದ್ದೆಗೆ ಅರ್ಹರೆ? ಅದಕ್ಕೆ ಬೇಕಾದ ಸ್ವಭಾವ, ಪ್ರಾಮಾಣಿಕತೆ ಮತ್ತು ಗುಣಮಾನಗಳು ಅವರಿಗೆ ಇವೆಯೇ? ಇದನ್ನು ನೋಡಬೇಕೆಂದರೆ ಅವರ ಹಿನ್ನೆಲೆಯನ್ನು ನೋಡಬೇಕು. ಅವರ ರಾಜಕೀಯ ಜೀವನವನ್ನು ಹೆಚ್ಚು ವಿಸ್ತರಿಸಬೇಕಾದ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವಂಥದ್ದೇ! ಚುಟುಕಾಗಿ ಹೇಳಬೇಕೆಂದರೆ, 2007ರಲ್ಲಿ ತನ್ನ ತಂದೆ- ಅಂದಿನ ಹಾಲಿ ಶಾಸಕ ಯು.ಟಿ. ಫರೀದ್ ಅವರು ನಿಧನರಾದಾಗ ಅವರ ಸ್ಥಾನದಲ್ಲಿ ಮೊದಲ ಬಾರಿಗೆ ಗೆದ್ದವರು ಯು.ಟಿ.ಖಾದರ್. ಆ ಬಳಿಕದಿಂದ ಸೋಲು ಕಾಣದ ಸರದಾರ.

ಯು.ಟಿ. ಫರೀದ್

ಮೇ 2013ರಿಂದ 2016ರ ಜೂನ್ ತನಕ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿಯಾಗಿ- ಪಾಳು ಬಿದ್ದಂತಿದ್ದ ಮಂಗಳೂರಿನ ಪ್ರಖ್ಯಾತ, ಐತಿಹಾಸಿಕ- ಬಡವರಿಗೆ ಬೇಕಾದ ಸರಕಾರಿ ಆಸ್ಪತ್ರೆಗಳಾದ ವೆನ್ಲಾಕ್ ಮತ್ತು ಮಹಿಳೆಯರ ಲೇಡಿ ಗೋಷನ್ ಆಸ್ಪತ್ರೆಗಳೂ ಸೇರಿದಂತೆ ಸರಕಾರಿ ಆರೋಗ್ಯ ಸೇವಾ ವ್ಯವಸ್ಥೆಗೆ ಕಾಯಕಲ್ಪ ನೀಡಿದವರು. ನಂತರ 2016ರಿಂದ 2018ರ ತನಕ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವಿಷಯಗಳ ಮಂತ್ರಿಯೂ ಆಗಿದ್ದರು. ಕಳೆದ ಸಲ ಪ್ರತಿಪಕ್ಷಗಳ ಉಪನಾಯಕನೂ ಆಗಿದ್ದರು.

ಉಳ್ಳಾಲ ಕ್ಷೇತ್ರದ ಜನಪ್ರಿಯ ಶಾಸಕನಾಗಿದ್ದ ಯು.ಟಿ.ಫರೀದ್ ಮತ್ತು ನಸೀಮಾ ದಂಪತಿಗಳ ಮಗನಾಗಿ ಅಕ್ಟೋಬರ್ 12, 1969ರಲ್ಲಿ ಜನಿಸಿದ ಯು.ಟಿ. ಅಬ್ದುಲ್ ಖಾದರ್ ಕಾನೂನು ಪದವೀಧರ. ವಿದ್ಯಾರ್ಥಿ ದೆಸೆಯಲ್ಲಿ ಎನ್‌ಎಸ್‌ಯುಐ ನಾಯಕ. ಸಾರ್ವಜನಿಕ ಜೀವನವನ್ನು ಕೌಟುಂಬಿಕ ಜೀವನದಿಂದ ಹೊರಗಿಡುತ್ತಲೇ ಬಂದಿರುವ, ಯಾವುದೇ ಹಗರಣಗಳಿಂದ ದೂರ ಇರುವ ಅವರ ವೈಯಕ್ತಿಕ ಜೀವನದ ವಿವರಗಳು ನಮಗೆ ಅಗತ್ಯವಿಲ್ಲ. ಆದರೆ, ಅವರ ಸ್ವಭಾವದ ಬಗ್ಗೆ ಸ್ವಲ್ಪ ಹೇಳಬೇಕು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ತೋರಿಸುತ್ತಿದ್ದ, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಬೆಳಕಿಗೆ ಬಂದ ಯುವ ಉತ್ಸಾಹ, ಭೇದಭಾವ ಇಲ್ಲದೇ ಜನರೊಂದಿಗೆ ಬೆರೆಯುವ ಗುಣ ಖಾದರ್ ಅವರಲ್ಲಿ ನೆಲೆಗೊಂಡಿದೆ. ಮಂಗಳೂರಿನ ಬಹಳಷ್ಟು ಜನರಿಗೆ ಜಾತಿ ಮತ ಭೇದವಿಲ್ಲದೆ- ಆಸ್ಪತ್ರೆಯಲ್ಲಿ ಸಮಸ್ಯೆಯೇ? ಖಾದರ್ ಬೇಕು. ಅಪರೂಪದ ರಕ್ತದ ಸಮಸ್ಯೆಯೇ? ಖಾದರ್ ಬೇಕು. ಏನಿದ್ದರೂ ಖಾದರ್ ಬೇಕು.

ಒಂದು ಸಲ ಪಾಶ್ಚಾತ್ಯ ದೇಶಗಳಲ್ಲಿ ಇರುವಂತೆ ತುರ್ತು ಪ್ಯಾರಾಮೆಡಿಕ್ ಬೈಕ್ ಸೇವೆಗಾಗಿ ಒಂದು ವ್ಯವಸ್ಥೆಯನ್ನು ಆಗಿನ ಆರೋಗ್ಯ ಸಚಿವರಾಗಿ ಇವರು ರೂಪಿಸಿದ್ದರು. ಅದರ ಉದ್ಘಾಟನೆ ನಡೆದಾಗ ಇವರು ಎಲ್ಲರೂ ನೋಡುತ್ತಿರುವಂತೆಯೇ ಆ ಹೆವಿ ಬೈಕೊಂದನ್ನು ಓಡಿಸಿದ ಘಟನೆಯನ್ನು ಯಾರೂ ಮರೆತಿಲ್ಲ. ಸಾಮಾನ್ಯ ಜನರಂತೆ ತಾನೂ ಇದನ್ನು ಮಾಡಬಲ್ಲೆ ಎಂದು ತೋರಿಸುವುದು ಇದರ ಉದ್ದೇಶವಾಗಿರಬಹುದು. ಹಲವಾರು ಸಲ ಇವರು ರಸ್ತೆ ಬದಿಯ ಗೂಡಂಗಡಿಗಳಲ್ಲಿ ಕಾರು ನಿಲ್ಲಿಸಿ ಚಹಾ ಕುಡಿಯುವ, ತಿಂಡಿ ತಿನ್ನುವ ಚಿತ್ರಗಳು, ವಿರೋಧಿ ನಾಯಕರ ಜೊತೆಗೂ ಸಮಾರಂಭಗಳಲ್ಲಿ ಜೊತೆಯಲ್ಲಿ ಊಟ ಮಾಡುವ ಚಿತ್ರಗಳು ವೈರಲ್ ಆಗಿರುವಂತೆ ಟ್ರೋಲ್ ಕೂಡಾ ಆಗಿವೆ. ಇದು ಪ್ರಚಾರ ತಂತ್ರ ಎಂದು ಬಾಡಿಗೆ ಅಪಪ್ರಚಾರಕರು ಟೀಕಿಸಿದ್ದೂ ಇದೆ. ಆದರೆ ಈ ಸರಳತೆ, ಸೌಹಾರ್ದತೆ, ಶಾಂತಿಪ್ರಿಯತೆ, ಸಾಮರಸ್ಯ ಉಳ್ಳಾಲದ ನೆಲದ ಗುಣ. ಖಾದರ್ ಅವರಿಗೆ ಮುಸ್ಲಿಂ ಸಮುದಾಯದಂತೆಯೇ ಎಲ್ಲಾ ಸಮುದಾಯಗಳಲ್ಲಿ ಪ್ರೀತಿಸುವವರು ಇದ್ದಾರೆ. ಹಾಗೆಂದೇ ಮುಸ್ಲಿಂ ಸಮುದಾಯದ ಒಂದು ಗುಂಪಿನ ವಿರೋಧ ಮತ್ತು ಎಸ್‌ಡಿಪಿಐ ಸ್ಪರ್ಧೆಯ ನಡುವೆಯೂ ಈ ಬಾರಿಯೂ ಅವರೇ ಗೆಲ್ಲುವಂತಾಯಿತು. ಜಿಲ್ಲೆಯಲ್ಲಿ ರಮಾನಾಥ ರೈ ಅವರಂತೆ ಕ್ಷೇತ್ರ ಮೀರಿ ಎಲ್ಲಾ ಜಾತಿ, ಧರ್ಮಗಳ ನಡುವೆಯೂ ಪ್ರಭಾವ ಹೊಂದಿರುವ ಒಂದು ಕೈ ಬೆರಳೆಣಿಕೆಯ ಕೈ ನಾಯಕರಲ್ಲಿ ಇವರಿದ್ದಾರೆ.

ರಮಾನಾಥ್ ರೈ

ಕೋಮುವಾದಿಗಳು ಗಲಭೆ ಎಬ್ಬಿಸಲು ಸದಾ ಯತ್ನಿಸುವ, ಎರಡೂ ಕಡೆಗಳಲ್ಲಿ ಕ್ರಿಮಿನಲ್‌ಗಳೂ, ಕಿಡಿಗೇಡಿಗಳೂ ತುಂಬಿರುವ ಉಳ್ಳಾಲದಲ್ಲಿ ಶಾಂತಿ ಕಾಪಾಡುವ ಕೆಲಸ ಸುಲಭವಲ್ಲ. ಆದರೂ, ಉಳ್ಳಾಲ ಉಳಿದುಕೊಂಡಿರುವುದು ಅದರ ರಾಜಕೀಯ ಮತ್ತು ಧಾರ್ಮಿಕ-ಸಾಮಾಜಿಕ ಇತಿಹಾಸದಿಂದ. ಸಿಪಿಎಂನ ರಾಮಚಂದ್ರ ರಾವ್ (ಮಾಸ್ಟ್ರು), ವಿಧಾನಸಭೆಯಲ್ಲಿ ಕವಿ ಮತ್ತು ಕೋಮುಸೌಹಾರ್ದದ ವಕ್ತಾರರೇ ಆಗಿದ್ದ ಬಿ.ಎಂ. ಇದ್ದಿನಬ್ಬ, ಯು.ಟಿ. ಫರೀದ್ ಅವರಂತಹ ಸಾಮರಸ್ಯದ ವ್ಯಕ್ತಿಗಳು ಶಾಸಕರಾಗಿದ್ದ, ಬೂತ ನೇಮಗಳ ವೇಳೆ ಸ್ವತಃ ಬೂತಗಳೇ ಪ್ರಸಿದ್ಧ ಸೈಯದ್ ಮದನಿ ದರ್ಗಾಕ್ಕೆ ಭೇಟಿ ನೀಡುವ, ಅದರ ಪ್ರತಿನಿಧಿಗಳು ಈ ನೇಮಗಳಲ್ಲಿ ಭಾಗವಹಿಸುವ ಇತಿಹಾಸ ಮಾತ್ರವಲ್ಲ; ವರ್ತಮಾನವೂ ಇರುವ ಉಳ್ಳಾಲ ನೆಲದ ಈ ಮಂಗಳೂರು ಕ್ಷೇತ್ರದ ಶಾಸಕ ಖಾದರ್ ಅವರಿಗೆ ಸ್ಪೀಕರ್ ಗೌರವ ಸಿಕ್ಕಿರುವುದು ಉಳ್ಳಾಲದ ಸರ್ವಧರ್ಮ ಸಮನ್ವಯಕ್ಕೆ ಸಿಕ್ಕಿದ ಗೌರವವೂ ಹೌದು. ಮೇಲೆ ವಿವರಿಸಿದ ಖಾದರ್ ಅವರ ಮತ್ತು ಈ ನೆಲದ ಗುಣವನ್ನು ಗಮನಿಸಿದರೆ, ಅವರಿಗೆ ಆ ಹುದ್ದೆಯನ್ನು ನಿಭಾಯಿಸುವ ಎಲ್ಲಾ ಗುಣಗಳು, ಅರ್ಹತೆಗಳೂ ಇವೆ. ಅವುಗಳೆಂದರೆ ಜಾತ್ಯತೀತತೆ, ಶಾಂತಿಪ್ರಿಯತೆ, ತಾಳ್ಮೆ, ಸಮಾಧಾನ, ಸಮಧಾರಿಕೆ (ಇದು ಬೂತದ ನುಡಿಗಟ್ಟು) ಹಾಗೂ ಜನಪ್ರೀತಿ ಮತ್ತು ಮುಖ್ಯವಾಗಿ ದೇಶ ಮತ್ತು ಸಂವಿಧಾನ ನಿಷ್ಠೆ.

ಇಂದು ದೇಶದ ಸಂಸತ್ತು ಮಾತ್ರವಲ್ಲ; ಬಹುತೇಕ ವಿಧಾನಸಭೆಗಳಲ್ಲಿ ಸಂವಿಧಾನವನ್ನು ಅಧಿಕೃತವಾಗಿಯೇ ಬದಿಗೊತ್ತುವ, ಪಕ್ಷ, ಧರ್ಮ, ಸಿದ್ಧಾಂತ, ಪಕ್ಷಗಳ ನೆಲೆಯಲ್ಲಿ ವಿಕೃತ ತರ್ಕದಿಂದ ವಿಭಜಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿರುವಾಗ, ಇನ್ನೂ ಹಲವು ವರ್ಷಗಳ ರಾಜಕೀಯ ಭವಿಷ್ಯ ಮತ್ತು ಜನಸೇವೆಯ ಅವಕಾಶ ಇರುವ ಯು.ಟಿ. ಅಬ್ದುಲ್ ಖಾದರ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಕೇವಲ ರಾಜಕಾರಣಿಯಲ್ಲ; ಧೀಮಂತ ಮುತ್ಸದ್ಧಿ ಎನಿಸಿಕೊಳ್ಳಲಿ ಎಂದು ಹಾರೈಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...