Homeಕರ್ನಾಟಕಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: 'ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ' ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ

ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಹೇಳಿಕೆಗೆ ಎಂಬಿ ಪಾಟೀಲ್ ಸ್ಪಷ್ಟನೆ

- Advertisement -
- Advertisement -

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಸಿಎಂ ಸ್ಥಾನಕ್ಕಾಗಿ ನಡೆದ ಫೈಟ್‌ನಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಿ ರಾಜ್ಯ ಕಾಂಗ್ರೆಸ್‌ನ ಬೇಗುದಿಯನ್ನು ಹೈಕಮಾಂಡ್ ಕಡಿಮೆ ಮಾಡಿದೆ. ಆದರೆ ಸಚಿವ ಎಂಬಿ ಪಾಟೀಲ್ ಅವರು, ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೇ ಕಾಂಗ್ರೆಸ್‌ನಲ್ಲಿ ಕಿಡಿ ಹೊತ್ತಿಸಿದೆ.

ಸೋಮವಾರ ರಾತ್ರಿ ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ್ದ ಎಂ.ಬಿ. ಪಾಟೀಲ್ ಅವರು, ”ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಇರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ” ಎಂದು ಹೇಳಿದ್ದರು.

ಎಂಬಿಪಿ ಅವರು ಈ ಹೇಳಿಕಯನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ”ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚರ್ಚಿಸಬಾರದು” ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣದ ಸಚಿವರು, ಶಾಸಕರಿಗೆ ಎಚ್ಚರಿಕೆ ನೀಡಿದೆ.

”ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನು ನೀಡಬಾರದು. ಒಳ್ಳೆಯ ಆಡಳಿತ ನೀಡುವುದಷ್ಟೇ ಈಗ ನಮ್ಮ ಆದ್ಯತೆ. ಇದರ ಕಡೆ ಗಮನ ಕೊಡಬೇಕಿದೆ. ಇದರ ಹೊರತಾಗಿ ಯಾವುದೇ ಗೊಂದಲದ ಹೇಳಿಕೆಗಳನ್ನು ನೀಡಬಾರದು. ಗೊಂದಲ ಮೂಡಿಸುವ ಹೇಳಿಕೆಗಳೂ ಸೇರಿದಂತೆ ಎಲ್ಲವನ್ನೂ ಎಐಸಿಸಿ ಗಮನಿಸುತ್ತದೆ. ಯಾವುದೇ ವಿಷಯಗಳಿದ್ದರೂ ಎಐಸಿಸಿ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ” ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ, ರಣದೀಪ್ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಆ ಬಳಿಕ ತಮ್ಮ ಹೇಳಿಕೆಯ ಬಗ್ಗೆ ಮಂಗಳವಾರ ಸ್ಪಷ್ಟಿಕರಣ ನೀಡಿದ ಎಂಬಿ ಪಾಟೀಲ್ ಅವರು, ”ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ನಮ್ಮ ನಾಯಕರು ಹೇಳಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಏನು ಹೇಳಿದ್ದರೋ ಅದನ್ನೇ ನಾನು ಹೇಳಿದ್ದೇನೆ. ಅಧಿಕಾರ ಹಂಚಿಕೆ ಇಲ್ಲ. ಇದ್ದರೆ ಅದು ಜನರ ಜೊತೆ ಮಾತ್ರ ಎಂದೂ ವೇಣುಗೋಪಾಲ್ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರೆಯುತ್ತಾರೆ ಎಂದೂ ಹೇಳಿದ್ದರು. ನಾನು ಅದನ್ನೂ ಹೇಳಿದ್ದೇನೆ. ಅಧಿಕಾರ ಹಂಚಿಕೆಯ ಸಂಧಾನ ಸೂತ್ರ ನನಗೆ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ” ಎಂದು ಸ್ಪಷ್ಟಿಕರಣ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದು ಸರ್ಕಾರ: ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಸೂತ್ರಕ್ಕೆ ಸ್ಪಷ್ಟ ಭರವಸೆ ನೀಡದ ವರಿಷ್ಠರು

ಎಂಬಿ ಪಾಟೀಲ್‌ರ ಹೇಳಿಕೆ ಡಿ.ಕೆ. ಶಿವಕುಮಾರ್ ಅವರನ್ನು ಕೆರಳಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ”ಎಂ.ಬಿ. ಪಾಟೀಲ್‌ರಿಗೆ ಆ ಹೇಳಿಕೆ ನೀಡಲು ಅಧಿಕಾರ ಕೊಟ್ಟವರು ಯಾರು? ಅವರೇನು ಪಕ್ಷದ ಹೈಕಮಾಂಡೇ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ”ಈ ರೀತಿ ವರ್ತನೆ ಮುಂದುವರಿದರೆ ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುವುದು ನನಗೆ ಕಷ್ಟವಾಗಲಿದೆ” ಎಂದಿದ್ದಾರೆಂದು ಹೇಳಿದ್ದಾರೆ. ಇದರಿಂದ ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ಕೂಡಾ ಕೆಂಡಾಮಂಡಲವಾಗಿದ್ದಾರೆ.

ರಾಜ್ಯ ಕೈ ನಾಯಕರ ಪ್ರತಿಕ್ರಿಯೆಗಳು:

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ”ಈ ವಿಚಾರ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ. ಇದು ಆಂತರಿಕವಾಗಿ ನಡೆದಿರುವ ಚರ್ಚೆ. ಅವರನ್ನು ಬಿಟ್ಟು ಬೇರೆಯವರಿಗೆ ಈ ವಿಚಾರ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಚರ್ಚೆ ಆಗಿಲ್ಲ” ಎಂದಿದ್ದಾರೆ.

”ಈಗ ನಮ್ಮ ಮುಂದಿರುವುದು ಉತ್ತಮ ಆಡಳಿತ ನೀಡುವ ವಿಚಾರ, ಅಧಿಕಾರ ಹಂಚಿಕೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ. ಈ ಬಗ್ಗೆ ಯಾರು ಗೊಂದಲ ಸೃಷ್ಟಿಸಬಾರದು. ಎಂ.ಬಿ. ಪಾಟೀಲ್‌ರಿಗೆ ಏನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವುದನ್ನು ಹೇಳಿದ್ದೇನೆ” ಎಂದು ಅವರು ಹೇಲಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಶಾಸಕ ದಿನೇಶ್ ಗುಂಡೂರಾವ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಎಐಸಿಸಿ ನಾಯಕರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಎಂದು ಹೇಳಿದರು. ಅದಷ್ಟು ನಮಗೆ ಗೊತ್ತು. ಈಗ ಅಧಿಕಾರ ಹಂಚಿಕೆ ವಿಚಾರ ಏಕೆ? ಆ ಬಗ್ಗೆ ಏನು ಚರ್ಚೆ ಆಗಿದೆಯೆಂದು ಗೊತ್ತಿಲ್ಲ. 2013ರಲ್ಲಿ ಈ ಬಗ್ಗೆ ಚರ್ಚೆ ಆಗಿದೆಯೇ? ಈಗ ಚರ್ಚೆ ಏಕೆ” ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ”ಅಧಿಕಾರ ಹಂಚಿಕೆ ಕುರಿತು ಏನೇ ಮಾತುಕತೆ ಆಗಿದ್ದರೂ, ಎಐಸಿಸಿ ಅಧ್ಯಕ್ಷರು, ಉಸ್ತುವಾರಿ ಮತ್ತು ಇಬ್ಬರು ನಾಯಕರ ನಡುವೆ ಮಾತ್ರ ಆಗಿದೆ. ಏನೇ ಇದ್ದರೂ ಈ ನಾಲ್ವರಿಗೆ ಮಾತ್ರ ಗೊತ್ತಿದೆ. ವರಿಷ್ಠರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ” ಎಂದರು.

ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ”ನಾನು ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡುವಷ್ಟು ಪ್ರಬಲ ಅಲ್ಲ. ಅಷ್ಟು ಎತ್ತರಕ್ಕೆ ನಾನು ಬೆಳೆದಿಲ್ಲ. ಅವೆಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ” ಎಂದರು.

ಕಾಂಗ್ರೆಸ್‌ನ ಈ ಆಂತರಿಕ ವಿಚಾರದ  ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ”ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರನ್ನು ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಪಾಟೀಲ್‌ರ ಹೇಳಿಕೆಯ ಮೂಲಕ ಸಂದೇಶ ರವಾನಿಸಿದ್ದಾರೆ. ಇದು ಡಿಕೆಶಿಗೆ ನೇರವಾದ ಎಚ್ಚರಿಕೆ. ಬಹುಮತ ಸಿಕ್ಕಿದ ನಂತರವೂ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಈ ಸರ್ಕಾರ ಸ್ಥಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ. ಗ್ಯಾರಂಟಿಯೂ ಇಲ್ಲ. ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಎಟಿಎಂ ಸರ್ಕಾರ ರಚನೆಯಾಗಿದೆ. ಅದಷ್ಟೇ ಈ ಸರ್ಕಾರದ ಆದ್ಯತೆಯಾಗಿರುವುದು ರಾಜ್ಯದ ದುರಂತ” ಎಂದು ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...