ರೈತ ಸಂಘಟನೆಗಳ ಹೊಣೆಯ ಕುರಿತು
ದೆಹಲಿಯ ಅಂಚಿನಲ್ಲಿ ನಡೆಯುತ್ತಿರುವ ಕಿಸಾನ್ ಸತ್ಯಾಗ್ರಹದ ತಾಣದಲ್ಲಿ ದಲಿತ ಸಿಖ್ಖನೊಬ್ಬನನ್ನು ನಿಹಾಂಗ್ ಪಂಥದವರು ಚಿತ್ರಹಿಂಸೆ ಕೊಟ್ಟು ಸಾಯಿಸಿದ ಘಟನೆಯ ನೈತಿಕ ಹೊಣೆಯನ್ನು ಕಿಸಾನ್ ಸಂಯುಕ್ತ ಮೋರ್ಚಾ ಹೊರಬೇಕಿದೆ. ಅದರಲ್ಲೂ ಪಂಜಾಬಿನ ವಿವಿಧ ರೈತ ಸಂಘಟನೆಗಳು ಈ ಬಗ್ಗೆ ತೀವ್ರ ಆತ್ಮಾವಲೋಕನ ಮಾಡಬೇಕಿದೆ.
ನಿಹಾಂಗ್ ಪಂಥದ ವರ್ತನೆ ಹೊಸದೇನಲ್ಲ. ಪರಿಶುದ್ಧತೆಯ ಅಮಲು ನರನಾಡಿಗಳಲ್ಲಿ ತುಂಬಿಕೊಂಡಿರುವ ಈ ಪಂಥ ಒಟ್ಟಾರೆ ಭಾರತದ ಜಾತಿ ವ್ಯಸನದ ಬಹಿರಂಗ ಹುಣ್ಣು. ಆಗಾಗ್ಗೆ, ದೇಶದ ವಿವಿಧೆಡೆ ಇಂಥಾ ಅಸಮಾನತೆಯನ್ನು ಕಾಪಾಡುವ ಕ್ರೌರ್ಯ ನಡೆಯುತ್ತಲೇ ಇದೆ. ಹಿಂದೂ ಧರ್ಮದ ಈ ವೈರಸ್ ವಿರುದ್ಧವೇ ಹುಟ್ಟಿದ ಸಿಖ್ಖ್ ಧರ್ಮವೂ ಇದೇ ರೋಗಕ್ಕೆ ಬಲಿಯಾಗಿರುವುದು ಈ ದೇಶದ ವೈದಿಕ ಶಾಹಿಯ ಶಕ್ತಿಯ ದ್ಯೋತಕ. ನಮ್ಮಲ್ಲಿ ಶರಣ ಚಳವಳಿಯೂ ಈಗ ಇಂಥದೇ ಜಾತಿ ಗುರುತು/ ಹಕ್ಕೊತ್ತಾಯದ ಕೊಳಚೆ ಗುಂಡಿಯಾಗಿದೆ.
ಮೇಲ್ಜಾತಿಯಲ್ಲಿ ಒಂದು ದೊಡ್ಡ ಮಟ್ಟದ ಪಶ್ಚಾತ್ತಾಪವನ್ನು ಸೃಷ್ಟಿಸಿಯೇ ಈ ಹೊಸ ಪಂಥಗಳು ಹುಟ್ಟಿದ್ದು. ಆದರೆ ಕಾಲಾಂತರದಲ್ಲಿ ಹಿಂದೂ ಜಾತಿ ರೋಗಕ್ಕೆ ಇವೂ ತುತ್ತಾಗಿರುವುದು ಹೊಸ ಸಂಶೋಧನೆಯೇನೂ ಅಲ್ಲ.
ಎಲ್ಲೆಡೆ ಭೂಮಿ ಹೊಂದಿರುವ ಮೇಲ್ಜಾತಿ / ಮಧ್ಯಮ ಜಾತಿಗಳ ರೈತರೇ ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಚಾರಿತ್ರಿಕವಾಗಿ ಇದು ಸಹಜ. ಈ ಜಾತಿಗಳೇ ಬಹುತೇಕ ಗ್ರಾಮಭಾರತದಲ್ಲಿ ದಲಿತರ / ಭೂರಹಿತ ಕಾರ್ಮಿಕರ ದಮನ, ಶೋಷಣೆಯ ವಾರಸುದಾರರು. ಪುರೋಹಿತಶಾಹಿ ಇದಕ್ಕೆ ಪಾರಂಪರಿಕ ಕಂದಾಚಾರದ ಒಪ್ಪಿಗೆಯ ಅಧಿಕೃತತೆಯ ಮುದ್ರೆ ಒತ್ತುತ್ತಿರುತ್ತದೆ. ಇದೂ ಗೊತ್ತಿರುವ ಸಂಗತಿಯೇ.
ಲಾಡು ಮುಟ್ಟಿದ್ದಕ್ಕೆ, ಮಗು ಅಚಾನಕವಾಗಿ ದೇಗುಲ ಪ್ರವೇಶಿಸಿದ್ದಕ್ಕೇ ಕ್ರೌರ್ಯ ತೋರಿಸುವ ಮೇಲ್ಜಾತಿಗಳ ವರ್ತನೆ ಅವುಗಳೇ ಪ್ರಧಾನ ಪಾತ್ರ ವಹಿಸಿರುವ ರೈತ ಸಂಘಗಳಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹಾಗಿರುವಾಗ ಈ ವರ್ತನೆ ಸ್ಫೋಟವಾಗುವವರೆಗೂ ಏನೂ ಘಟಿಸುವುದಿಲ್ಲ ಎಂಬಂತೆ ಇದ್ದು, ಇಂಥಾ ಕ್ರೌರ್ಯ ಘಟಿಸಿದಾಗ, ಅಯ್ಯೋ, ಇವರು ನಮ್ಮವರಲ್ಲ ಎಂದು ಹೇಳುವುದು ಜಾಣತನವಾಗುತ್ತದೆ.
ಅಪರೂಪದ ವೈರಸ್ ಒಂದು ಸೂರತ್ತಿನಲ್ಲೋ ಕೇರಳದಲ್ಲೋ ಕಾಣಿಸಿಕೊಂಡಾಗ ಎಲ್ಲಾ ರಾಜ್ಯಗಳಲ್ಲೂ ಅದನ್ನು ತಡೆಯುವ ಸಮರೋಪಾದಿ ಉಪಕ್ರಮಗಳನ್ನು ಕೈಗೊಳ್ಳುವುದು ನಾವು ಕಂಡಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ಇದು ಸಾಧ್ಯ ಎಂದಾದರೆ ಸಾಮಾಜಿಕ ಸಂಬಂಧಗಳಲ್ಲಿ ಇಂಥಾ ಪ್ರೋಆಕ್ಟಿವ್ ಕ್ರಮಗಳಿಗೆ ಉದಾಸೀನ ಯಾಕೆ?
ಪಂಜಾಬಿನ ಸಿಖ್ ಪಂಥದ ಅತಿರೇಕಿಗಳ ಕ್ರೌರ್ಯ ಇಂದು ಕಾಣಿಸಿದರೆ, ಉತ್ತರಪ್ರದೇಶದ ಖಾಪ್ ಪಂಚಾಯತುಗಳ ಕ್ರೌರ್ಯ ಘಟಿಸಲು ಹೆಚ್ಚು ಸಮಯ ಬೇಕಿಲ್ಲ.
ಕರ್ನಾಟಕದಲ್ಲಿ ಮಹಾ ಸೆಕ್ಯುಲರ್ ಮತ್ತು ಪ್ರಗತಿಪರರಾಗಿದ್ದ ಪ್ರೊಫೆಸರ್ ನಾಯಕತ್ವದ ರೈತ ಸಂಘಕ್ಕೂ ದಲಿತ/ ಕೂಲಿಕಾರರನ್ನು ಒಳಗೊಳ್ಳುವ ಕೆಲಸ ಸಾಧ್ಯವಾಗಲಿಲ್ಲ. ತನ್ನ ಹಿತಾಸಕ್ತಿಯ ಸಮುದಾಯಗಳಲ್ಲಿ ಒಂದು ಸಾಮಾಜಿಕ ಸಂಬಂಧದ ಮಾನಸಿಕ ಬದಲಾವಣೆಯನ್ನು ಪ್ರೇರೇಪಿಸದಿದ್ದರೆ ಈ ಚಳವಳಿಯೂ ಅರ್ಥಹೀನವಾಗುತ್ತದೆ.
ಗಾಂಧೀಜಿಯವರ ಬಗ್ಗೆ ಎಷ್ಟೇ ತಕರಾರುಗಳಿದ್ದರೂ ಅವರು ಆ ಕಾಲದಲ್ಲಿ ತಾನು ಆರಂಭಿಸಿದ ಚಳವಳಿ ಮೂಲ ಶಿಸ್ತಿನಿಂದ ದೂರ ಸರಿದ ಒಂದೇ ಘಟನೆಯ ಕಾರಣಕ್ಕೆ ಸಮುದಾಯಗಳು ಸಜ್ಜಾಗಿಲ್ಲ ಎಂದು ನಿರ್ಧರಿಸಿ ಚಳವಳಿಯನ್ನು ಬರಕಾಸ್ತುಗೊಳಿಸಿದ್ದರು. ಅಷ್ಟೇ ಅಲ್ಲ, ಪ್ರಭುತ್ವದ ಜೊತೆ ಹೋರಾಟ ನಡೆಸುತ್ತಿದ್ದಾಗ ಆಂತರಿಕವಾಗಿ ಸಾಮಾಜಿಕ ಸಂಬಂಧಗಳ ಸುಧಾರಣೆಯ ಬಗ್ಗೆ ಅರಿವು ಮೂಡಿಸಿದರು. ಈ ಕಾರಣಕ್ಕೇ ಮೇಲ್ಜಾತಿಗಳ ಮುಕುಟ ಮಣಿಯಂತಿದ್ದ ಆ ಕಾಲದ ಓದಿದ ಧೀಮಂತರು, ತಮ್ಮ ತಮ್ಮ ಜಾತಿಗಳಿಗೆ ಮುಜುಗುರ ಉಂಟು ಮಾಡುವಷ್ಟುಸುಧಾರಣಾವಾದೀ ಮಾತುಗಳನ್ನಾಡಿದರು.
ಈಗ ನಮ್ಮ ರೈತ ಸಂಘಗಳು ದೆಹಲಿಯ ಈ ಕ್ರೌರ್ಯದ ಘಟನೆಯನ್ನು ಅಗುಳು ನೋಡಿ ಅನ್ನ ಬೆಂದಿತೇ ಎಂಬ ಸಾಮಿತಿಯಂತೆ ಇದೊಂದು ಭೀಕರ ದಲಿತ ದಮನದ ರೋಗ ಲಕ್ಷಣ ಎಂದು ಬಗೆದು ತಮ್ಮ ತಮ್ಮ ಊರುಗಳಲ್ಲಿ ದಲಿತರನ್ನು ಒಳಗೊಳ್ಳುವ ಕ್ರಮಗಳನ್ನು ಚಳವಳಿಯೋಪಾದಿಯಲ್ಲಿ ಕೈಗೊಳ್ಳಬೇಕು. ಕೇವಲ ಖಂಡನಾ ಹೇಳಿಕೆಗಳಿಂದ ದಲಿತರನೋವು, ಆತಂಕಗಳನ್ನು ದೂರ ಮಾಡುವುದು ಸಾಧ್ಯವಿಲ್ಲ.
ದೆಹಲಿಯ ಅಪರಾಧದ ದುಷ್ಕರ್ಮಿಗಳ ಬಂಧನವಾಗಿದೆ. ಆದರೆ ಈ ಪಂಥದವರಿಗೆ ಈ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ. ಇದೇ ವರ್ತನೆಯನ್ನು ಹಿಂದುತ್ವದ ಅತಿರೇಕಿಗಳಲ್ಲೂ ನಾವು ಕಂಡಿದ್ದೇವೆ. ಈ ಸಂವಿಧಾನ ವಿರೋಧಿ ಮಾನವತಾ ವಿರೋಧಿ ಶಕ್ತಿಗಳನ್ನು ಎದುರಿಸುವ ಹೆಜ್ಜೆಗಳು ತಳಮಟ್ಟದಿಂದ ಆರಂಭವಾಗಬೇಕು; ಈ ಶಕ್ತಿಗಳಿಗೆ ಸಂವಿಧಾನದ ಪಾಠ ಹೇಳಬೇಕು. ಈ ಹೊಣೆ ಮೇಲ್ಜಾತಿಗಳಿಗಿದೆ. ಅವುಗಳೇ ಹೆಚ್ಚಾಗಿರುವ ಸಂಘಟನೆಗಳಿಗಿದೆ.
– ಕೆ.ಪಿ.ಸುರೇಶ
ರಂಗನಾಥ ಕಂಟನಕುಂಟೆ
ಹುಲಿಕುಂಟೆ ಮೂರ್ತಿ
ನರಸಿಂಹ ಮೂರ್ತಿ. ವಿ.ಎಲ್
ನಿಹಾಂಗ್ ಸಿಂಗ್ ಪಂಥದ ಮತಾಂಧರು ದಲಿತ ಸಮುದಾಯದ ಲಕ್ಬೀರ್ ಸಿಂಗ್ ರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕ್ರೌರ್ಯಕ್ಕೆ ಈ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹ ಹೊಣೆಗಾರರು. ಸಾರ್ತೆ ‘ಎಶ್ಟು ಜನರನ್ನು ಸಾಯಿಸಲಾಗಿದೆ ಎಂಬುದು ಫ್ಯಾಸಿಸಂ ಅಲ್ಲ, ಅವರನ್ನು ಯಾವ ರೀತಿ ಕೊಲೆ ಮಾಡಲಾಗಿದೆ ಎಂಬುದು ಫ್ಯಾಸಿಸಂ’ ಎನ್ನುತ್ತಾನೆ. ದಲಿತ ಎನ್ನುವ ಕಾರಣಕ್ಕೆ ನಡೆದ ಲಕ್ಬೀರ್ ಸಿಂಗ್ ರ ಕೊಲೆಯ ಆ ಭೀಕರತೆಯೂ ಸಹ ಫ್ಯಾಸಿಸಂ ರೀತಿ. ಇದನ್ನು ನಮಗೆ ಸಂಬಂದವಿಲ್ಲ ಎಂದು ನಿರ್ಲಕ್ಷಿಸುವುದು ಸಹ ಭೀಕರತೆಯ ಪಾಲುದಾರಿಕೆಯಾಗುತ್ತದೆ.
ಕಳೆದ ಒಂದು ವರ್ಶದಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ ಮೂರು ಕರಾಳ ಕಾಯಿದೆಗಳು ಎಲ್ಲಾ ಜಾತಿ, ವರ್ಗದವರಿಗೂ ಮಾರಕ ಎಂದು ಮನಗಂಡು ಅನುಕೂಲಸ್ಥ ರೈತರಿಂದ ಮೊದಲುಗೊಂಡು, ದೊಡ್ಡ ಹಿಡುವಳಿದಾರರಾದ ಜಾಟ್ ರೈತರು, ಸಣ್ಣ, ಅತಿ ಸಣ್ಣ ರೈತರು, ಭೂ ರಹಿತ ದಲಿತರು, ಕೂಲಿ ಕಾರ್ಮಿಕರು ಸಹ ಸಕ್ರಿಯವಾಗಿ ಬಾಗವಹಿಸಿದ್ದಾರೆ. ಜಾತಿ ಹತ್ಯೆಯನ್ನು ಪೋಶಿಸುವ ಖಾಪ್ ಪಂಚಾಯಿತಿಯನ್ನು ಅದು ಈ ಮೂರು ಕರಾಳ ಕಾಯಿದೆ ವಿರುದ್ಧವಿದೆ ಎನ್ನುವ ಒಂದೇ ಕಾರಣಕ್ಕೆ ಬಿನ್ನಾಬಿಪ್ರಾಯ ಬದಿಗಿಟ್ಟು ಬೆಂಬಲಿಸಿದ್ದಾರೆ.
ಬಕಾಸುರ ಬಂಡವಾಳಶಾಹಿ – ಫ್ಯಾಸಿಸ್ಟ್ ಪ್ರಭುತ್ವದ ಮೈತ್ರಿಯ ದಬ್ಬಾಳಿಕೆ ವಿರುದ್ಧ ಒಂದು ದಿಟ್ಟ ಪ್ರತಿರೋಧ ವ್ಯಕ್ತವಾಗಿರುವುದು ಮತ್ತು ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಒಂದು ವರ್ಶದ ಕಾಲ ನಿರಂತರವಾಗಿ ಅದರ ಪ್ರಸ್ತುತತೆ ಉಳಿಸಿಕೊಂಡಿರುವುದು ಈ ಕಾಲಘಟ್ಟದ ಅಪರೂಪದ ವಿದ್ಯಾಮಾನ. ಇಂತಹ ಐಕ್ಯ ಹೋರಾಟವನ್ನು ಪ್ರಭುತ್ವ ಬಗ್ಗು ಬಡಿಯಲು ಕಾಯುತ್ತಿರುತ್ತದೆ ಎಂಬುದೂ ಸತ್ಯ. ಜನವರಿ 26, 2020ರ ಕೆಂಪುಕೋಟೆಯ ಘಟನೆ, ಲಕೀಂಪುರ ಕೊಲೆ ಮತ್ತು ಇದರ ಮುಂದುವರಿದ ಭಾಗವಾಗಿ ಲಕ್ಬೀರ್ ಸಿಂಗ್ ಹತ್ಯೆ.
ಅಥವಾ ಅದು ನಿಹಾಂಗ್ ಸಿಂಗ್ ಪಂಥೀಯರ ನಡುವಿನ ಜಗಳದ ಪರಿಣಾಮ ಎನ್ನುವ ವಾದಗಳು ಕೇಳಿ ಬರುತ್ತಿವೆ. ಇರಬಹುದು.
ಆದರೆ ಹೋರಾಟದ ಸ್ಥಳದಲ್ಲಿ ದಲಿತನ ಬರ್ಬರ ಹತ್ಯೆಯಾದಾಗ ಮೈ ಕೊಡುವಿಕೊಳ್ಳುವುದು ಅಮಾನವೀಯತೆ. ರೈತ ಹೋರಾಟದ ಇಂತಹ ವರ್ತನೆ ಅನೈತಿಕತೆಯಾಗುತ್ತದೆ. ಮುಖ್ಯವಾಗಿ ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ಎಚ್ಚರ ವಹಿಸುವುದು ಸಹ ಅವರ ಹೊಣೆಗಾರಿಕೆಯಾಗುತ್ತದೆ.
ಮಾನವೀಯತೆ ಕಳೆದುಕೊಂಡ ಯಾವುದೇ ಹೋರಾಟ ಅಪ್ರಸ್ತುತವಾಗುತ್ತದೆ
- ಬಿ.ಶ್ರೀಪಾದ್ ಭಟ್
ಇದನ್ನೂ ಓದಿ: ಸಿಂಘು ಗಡಿಯಲ್ಲಿ ದಲಿತನ ಹತ್ಯೆ ಪ್ರಕರಣ: ಹರಿಂದರ್ ಸಿಂಗ್ ಬರಹ


