Homeಡೇಟಾ ಖೋಲಿಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

- Advertisement -
- Advertisement -

“ಕುಂಟ ಕುಂಟ ಕುರವತ್ತಿ, ರಂಟಿ ಹೊಡಿಯೋ ಬಾಳಪ್ಪ’’ ಅನ್ನೋದು ನಮ್ಮ ಬಾಲ್ಯದ ಫೇವರಿಟ್ ಹಾಡು. ಅದನ್ನ ಯಾರನ್ನರ ರೇಗಿಸಲಿಕ್ಕೆ ಹಾಡುತ್ತಾ ಇದ್ವಿ. ಯಾಕ ಅಂದ್ರ ನಮ್ಮ ಸಾಲಿಯೊಳಗ ಪ್ರತಿ ಕ್ಲಾಸ್‍ದಾಗು ಒಬ್ಬ ಕುಂಟ ಇರತಿದ್ದ.

ಅವರೆಲ್ಲರೂ ಪೋಲಿಯೋದಿಂದ ಕುಂಟತಿದ್ದರು.

ಈಗ ನೀವು ಯಾವುದರ ಶಹರ ಅಥವಾ ಹಳ್ಳಿಯ ಸರ್ಕಾರಿ ಸಾಲಿಗೆ ಹೋಗಿ ಹುಡುಕಿದರ ಒಬ್ಬನ ಒಬ್ಬ ಪೋಲಿಯೋ ರೋಗಿ ಸಿಗಂಗಿಲ್ಲ.

ಅದಕ್ಕ ಕಾರಣ ಎನಪಾ ಅಂದ್ರ, ಸುಮಾರು 25 ವರ್ಷದಿಂದ ನಮ್ಮ ದೇಶದಾಗ ನಡದುಕೊಂಡು ಬಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ.

ಭಾರತ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ, ರೋಟರಿ ಕ್ಲಬ್, ಗೇಟ್ಸ್ ಫೌಂಡೇಶನ್ ಇತ್ಯಾದಿ ಸಂಸ್ಥೆಗಳ ಪ್ರಯತ್ನದಿಂದ ನಮ್ಮ ದೇಶದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಇಷ್ಟು ವರ್ಷಗಟ್ಟಲೆ ಲಸಿಕೆ ಸಿಕ್ಕದ.

ಅದಕ್ಕ ಎರಡು ಕಾರಣ ಅದಾವು. ಆ ರೋಗ ಬರದಂಗ ಒಬ್ಬ ಪುಣ್ಯಾತ್ಮ ಲಸಿಕೆ ಕಂಡು ಹಿಡದ. ಮತ್ತು ಅದನ್ನು ಪೇಟೆಂಟು ಮಾಡಿ ರೊಕ್ಕ ಹೊಡಿಯೋ ವಿಚಾರ ಮಾಡಲಿಲ್ಲ.

ಭಾರತದಂತಹ ಬಡ, ಹಿಂದುಳಿದ ಅಸಂಖ್ಯ ದೇಶಗಳ ಕೋಟ್ಯಾಂತರ ಜನ ತಂಪ ಹೊತ್ತಿನಾಗ ನೆನೆಸಬೇಕಾದ ಆ ಮನುಷ್ಯನ ಹೆಸರು ಜೋನಾಸ ಸಾಲ್ಕ.

ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಅಂಗವೈಕಲ್ಯ ತಪ್ಪಿಸಿದ ಈ ವಿಜ್ಞಾನಿಗೆ ಸಾವಿರಾರು ಪ್ರಶಸ್ತಿ ಬಂದವು. ಆದರ ಪ್ರಚಾರದಿಂದ ದೂರ ಇರಲು ಇಷ್ಟ ಪಡುತ್ತಾ ಇದ್ದ ಜೋನಾಸ, ‘ಈ ಕೀರ್ತಿ ಶನಿ ನನ್ನ ಕೆಲಸಕ್ಕೆ ಅಡ್ಡವಾಗುತ್ತಾನೆ’ ಅಂತ ಹೇಳುತ್ತಿದ್ದರು. ಈ ಲಸಿಕೆಗೆ ಪೇಟೆಂಟು ಮಾಡಿಸೋದಿಲ್ಲವೇ ಅಂತ ಕೇಳಿದರೆ ‘ಸೂರ್ಯನಿಗೆ ಪೇಟೆಂಟು ಮಾಡಬಹುದೇ’ ಅಂತ ಉತ್ತರ ಕೊಟ್ಟರು.

ಅರೆ ಶಿಕ್ಷಣ ಪಡೆದ ವಲಸೆ ಕಾರ್ಮಿಕರ ಮಗನಾಗಿದ್ದ ಜೋನಾಸ ಅವರು ಕಷ್ಟಪಟ್ಟು ಕಾಲೇಜಿಗೆ ಸೇರಿದರು.

ವೈದ್ಯ ಪದವಿಯ ನಂತರ ಸಂಶೋಧನೆ ನಡೆಸಬೇಕು ಅಂತ ಆಸ್ಪತ್ರೆ ಸೇರದೆ ಪ್ರಯೋಗಶಾಲೆ ಸೇರಿಕೊಂಡರು. ಅಮೇರಿಕದ ಮಕ್ಕಳಲ್ಲಿ ಹೆಚ್ಚು ಆಗ್ತಾ ಇರೋ ಪೋಲಿಯೋ ಪಿಡುಗು ನೋಡಿ ಬೇಸತ್ತು ಇದಕ್ಕ ಏನರ ಮಾಡ್ಬೇಕಲೇ ಅಂತ ಹೇಳಿ ಪೋಲಿಯೋ ವೈರಸ್ಸಿನ ಹಿಂದ ಬಿದ್ದರು.

ಸುಮಾರು ಒಂಬತ್ತು ವರ್ಷ ಸಂಶೋಧನೆ ಮಾಡಿದ ಮ್ಯಾಲೆ ಆ ವೈರಸ್ಸಿನ ನಿರ್ಜೀವ ಜೀವಾಣು ಹೊರಗ ತಗದು ಅದನ್ನ ಆರೋಗ್ಯವಂತ ಪ್ರಾಣಿ ಹಾಗೂ ಮನುಷ್ಯರ ದೇಹದೊಳಗ ಹಾಕಿ, ಅದನ್ನ ಸೋಲಿಸಿದ ಯಾಂಟೀಬಾಡಿ ಜೀವಕೋಶಗಳನ್ನ ತಗದು ಸಣ್ಣ ಮಕ್ಕಳಿಗೆ ಕೊಟ್ಟಾಗ ಲಸಿಕೆ ತಯಾರು ಆತು.

ಅದನ್ನ ಪರೀಕ್ಷೆ ಮಾಡಲಾರದೇ ಜನ ಸಾಮಾನ್ಯರಿಗೆ ಕೊಡಬಾರದು ಅಂತ ಹೇಳಿ ಪ್ರಾಯೋಗಿಕ ಪರೀಕ್ಷೆ ಮಾಡಿದರು. ಅದರಾಗ ಸುಮಾರು 18 ಲಕ್ಷ ಶಾಲಾ ವಿದ್ಯಾರ್ಥಿಗಳು, ಎರಡೂ ಕಾಲು ಲಕ್ಷ ಇತರೆ ವಿದ್ಯಾರ್ಥಿಗಳು, 65 ಸಾವಿರ ಶಿಕ್ಷಕರು, 20 ಸಾವಿರ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಇಂಥದೇ ಕೆಲಸ ಮಾಡಿದ ಇನ್ನೊಬ್ಬ ದೊಡ್ಡ ಮನುಷ್ಯ ಅಂದ್ರ ಆಲ್ಬರ್ಟ್ ಸಾಬಿನ. ಪೋಲಂಡ್ ದೇಶದಾಗ ಹುಟ್ಟಿದ ಈ ಮನುಷ್ಯ ಅಮೇರಿಕದಾಗ ಸಂಶೋಧನೆ ಮಾಡಿ ಔಷದಿ ತರ ನುಂಗೋ ಲಸಿಕೆ ಕಂಡು ಹಿಡದರು. ಈಗ ಎಲ್ಲಾ ದೇಶದಾಗ ಕೊಡೋ ಲಸಿಕೆ ಇದ ಸಾಬಿನ ಲಸಿಕೆ. ಇವರ ಓಪಿವಿ ಅಥವಾ ಬಾಯಿಯಿಂದ ತೊಗೊಳಲೋ ಲಸಿಕೆಯನ್ನು ಕಮ್ಮಿ ಅಂದರೂ ಹತ್ತು ಕೋಟಿ ಜನರ ಮ್ಯಾಲೆ ಪರೀಕ್ಷೆ ಮಾಡಲಾಯಿತು.

ಇಂತಹ ದುರಿತ ಕಾಲದಾಗ ಈ ಪುಣ್ಯವಂತರ ನೆನಪು ಯಾಕ ಆತಪ ಅಂದ್ರ ನಮ್ಮ ಸರಕಾರದವರು ಕೊರೊನಾ ವೈರಾಣು ವಿರುದ್ಧ ಒಂದು ಲಸಿಕೆ ರೆಡಿ ಮಾಡಾಕ ಹೊಂಟಾರು. ಅದು ಇನ್ನೂ ಕಾದು ಬೆಂದು ತಯಾರು ಆಗೋಕಿಂತಾ ಮೊದಲಿಗೆ ನಮ್ಮ ಮೂಗು ಬಾಯಿ ಹಿಡದು ಅದನ್ನ ಕೂಡಸಾಕ ತಯಾರಿ ಮಾಡಾಕ ಹತ್ಯಾರ್.

ಅದು ಹೆಂಗಪಾ ಅಂದ್ರ ಮದುವಿ ಮನಿಯೊಳಗ ದೊಡ್ಡ ಅಡಿಗಿ ತಯಾರು ಆಗೋ ಮುಂದ ಅಡಿಗಿ ಭಟ್ಟರಿಗೆ ಎನರ ಸಂಶಯ ಬಂದರ್ ಕಲ್ಯಾಣಮಂಟಪದ ಹೊರಗ ಕೂತಿರೋ ಭಿಕ್ಷ ಬೇಡುವರಿಗೆ ಕೊಟ್ಟು ನೋಡತಾರಲ್ಲಾ, ಹಂಗ.

ನಿಮಗ ಒಂದು ಲೆಕ್ಕ ಕೊಡತೇನಿ. ಜೋನಾಸ ಅವರ ಪರೀಕ್ಷೆಗೆ ಒಳಗಾದವರು ಸುಮಾರು 20 ಲಕ್ಷ ಮಂದಿ. ಅದು 1946 ರ ಸುಮಾರಿಗೆ ಅಮೇರಿಕಾದ ಜನ ಸಂಖ್ಯೆಯ ಶೇಕಡಾ ಒಂದರಷ್ಟು. ಇನ್ನ ಸಾಬಿನ ಅವರ ಪರೀಕ್ಷೆ ಯೊಳಗ 1960 ರಾಗ ಪಾಲುಗೊಂಡವರು ಸುಮಾರು 10 ಕೋಟಿ, ಅದು ಆವಾಗಿನ ವಿಶ್ವದ ಜನಸಂಖ್ಯೆಯ ಶೇಕಡಾ 3 ರಷ್ಟು.

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

ಮಾರ್ಚ್ 23 ರ ಸರಕಾರದವರು ವಿಧಿಸಿ, ಜನತಾ ಕರಫ್ಯೂ ಅಂತ ಹೆಸರು ಇಟ್ಟ ದಿನದ ನಂತರ ನಮ್ಮ ದೇಶದ 11 ಖಾಸಗಿ ಕಂಪನಿಗಳು ಲಸಿಕೆ ತಯಾರಿಕೆ ಆರಂಭ ಮಾಡಿದವು. ಆದರಾಗ ಇಬ್ಬರು ಭಾರಿ ಜೋರಾಗಿ ಓಡಿ ಮುಂದ ಹೋಗಿ ನಾವು ಕೋರೋನಾ ಲಸಿಕೆ ತಯಾರು ಮಾಡಿದೇವು. ನಮಗ ಜನರ ಮ್ಯಾಲೆ ಅದನ ಪ್ರಯೋಗ ಮಾಡಾಕ ಅನುಮತಿ ಕೊಡರಿ ಅಂತ ಸರ್ಕಾರದ ಮುಂದ ಕೂತರು. ಈ ವಿಷಮ ಸ್ಥಿತಿಯೊಳಗ ಸರಕಾರ ಎನ್ನೂ ಮಾಡಿಲ್ಲ ಅಂತ ಬೈಸಿಕೊಂಡು ಸಾಕಾಗಿದ್ದ ಸರ್ಕಾರದ ಮಂತ್ರಿ ಹಾಗೂ ಅವರ ಬಾಬುಗಳು ಅವರಿಗೆ ಹೂಂ ಅಂತ ಸೀಟಿ ಹೊಡದುಬಿಟ್ಟರು. ದೇಶದ 12 ಪ್ರಯೋಗಶಾಲೆಗಳಲ್ಲಿ ಸುಮಾರು ಎರಡೂವರೆ ಸಾವಿರ ಆರೋಗ್ಯವಂತ ಯುವಕರ ಮೇಲೆ ಪ್ರಯೋಗ ನಡೆಸಿದ ನಂತರ ಈ ಲಸಿಕೆ ಬಿಡುಗಡೆ ಆಗತದ ಅಂತ ಹೇಳಿದರು.

ಅಷ್ಟ ಅಲ್ಲ, ಅದರ ಪರೀಕ್ಷೆ ಮುಗದು ಆಗಸ್ಟ್ 15 ರ ಸ್ವತಂತ್ರ ದಿನದ ದಿವಸ ಈ ದೇಶಕ್ಕ ಕೋರೋನಾದಿಂದ ಮುಕ್ತಿ ಸಿಗತದ ಅಂತ ಘೋಷಿಸಿ ಬಿಟ್ಟರು.

ಅಂದ್ರ ಅದು ಕೇವಲ 40 ದಿನದಾಗ ಬೆಳೆದು ಪರಿಪಕ್ವವಾಗಬೇಕಾದ ಲಸಿಕೆ. ಜೋನಾಸ ಸಾಹೇಬರ ಒಂಬತ್ತು ವರ್ಷ, ಇಪ್ಪತ್ತು ಲಕ್ಷ ಜನರ ಪರೀಕ್ಷೆ ಹಾಗೂ ಸಾಬಿನ ಸಾಹೇಬರ 10 ಕೋಟಿ ಜನರ ಪರೀಕ್ಷೆ ಇಲ್ಲೇ ನೆನಸಿಕೋರಿ.

ಅದೂ ಅಲ್ಲದ, ಹೈದರಾಬಾದು ಮತ್ತು ಅಹ್ಮದಾಬಾದು ನಗರದ ಎರಡು ಖಾಸಗಿ ಕಂಪನಿಗಳು ತಾವು ಲಸಿಕೆ ತಯಾರು ಮಾಡಿದರೂ ಕೂಡ ಭಾರತ ಸರ್ಕಾರದ ವೈದ್ಯ ಸಂಶೋಧನಾ ಪರಿಷತ್ತು, ನಮ್ಮ ಸಹಭಾಗಿತ್ವದಾಗ ಇದನ್ನ ತಯಾರು ಮಾಡಿದೆ ಅಂತ ಹೇಳಿಕೊಂಡವು.

ಪರಿಷತ್ತಿನ ಯಾವ ಅಧಿಕಾರಿಯೂ ಕೂಡ ಒಂದು ಪತ್ರಿಕಾ ಪ್ರಕಟಣೆ ಕೊಡಲಿಲ್ಲ, ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯೊಳಗ ಒಬ್ಬ ವಿಜ್ಞಾನಿಯ ಹೆಸರು ಇಲ್ಲ. ವಿವರ ತಿಳಿಸಲಿಕ್ಕೆ ಯಾರೂ ಒಂದು ಪತ್ರಿಕಾಗೋಷ್ಟಿ ಕರಿಯಲಿಲ್ಲ. ಗರ್ಭ ಗುಡಿಯ ದೇವರೇ ಕರೆಯದೇ ಇದ್ದಾಗ ದ್ವಾರಪಾಲಕರು ಯಾಕ ಕರೀತಾರ?, ಅದೂ ಖರೇನ.

ಸಮ ಪರೀಕ್ಷೆ ಆಗದೇ ಲಸಿಕೆ ಹೊರಗ ಬಂದು ಅದನ್ನು ನಮ್ಮ ಜನ ತೊಗೊಂಡು, ಕೆಲವರು ಉಳದು, ಕೆಲವರು ಸತ್ತು ಹೋದರ ಯಾವಾಗ ಏನು ಆಗತದ?

ಅಷ್ಟು ದೊಡ್ಡ ದೇಶದಾಗ ಅಷ್ಟು ದೊಡ್ಡ ಕೆಲಸ ಆಗೋವಾಗ ಅಷ್ಟು ಜನ ಸಾಯೋರ, ಅಂತ ಸರ್ಕಾರದ ಪ್ರತಿ ಕ್ರಮವನ್ನು ಕಣ್ಣು ಮುಚ್ಚಿ ಬೆಂಬಲಿಸೋರು ಅನ್ನಬಹುದು. ವಿರೋಧ ಪಕ್ಷದವರು ಇಲ್ಲ ನಾವು ಮೊದಲ ಹೇಳಿದ್ದೀವಿ, ಇವರು ಕೈ ಹಾಕೋ ಎಲ್ಲಾ ಕೆಲಸನೂ ಹಿಂಗ, ಪಿಷಕಿ, ಅಂತ ಮೂಗು ಮುರೀಬಹುದು. ವಸ್ತುನಿಷ್ಟವಾಗಿ ಮಾತಾಡೋ ವಿಜ್ಞಾನಿಗಳಿಗಂತೂ ಇಲ್ಲಿ ಜಾಗಾ ಇಲ್ಲಾ, ಹಿಂಗಾಗಿ ಸರ್ಕಾರಕ್ಕ ಅಂತೂ ಯಾವುದೇ ವ್ಯತ್ಯಾಸ ಆಗಂಗಿಲ್ಲ.

ಅದಕ್ಕ ಹೇಳೋದು, ಈ ಲಸಿಕಾ ಪರೀಕ್ಷೆ ಅನ್ನೋದು ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ ಅಂತ.

  • ಡೇಟಾಮ್ಯಾಟಿಕ್ಸ್‌

ಇದನ್ನು ಓದಿ: ಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡೇಟಾಮ್ಯಾಟಿಕ್ಸ್ ಚೆನ್ನಾಗಿದೆ.
    ಐಸಿಎಂಆರ್ನಿಂದ 2-ಮಿನಿಟ್ ಮ್ಯಾಗಿ: ಚಟಾಪಟ್ ಲಸಿಕೆ
    ಅಗಸ್ಟ್ 15ಕ್ಕ ಪಿಎಂ ಮ್ಯಾಲ ಪ್ರಯೋಗ ಮಾಡ್ಲಿ. ಅದಕ್ಕೂ ಮೊದ್ಲ ಅವ್ರಿಗೆ ಸೋಂಕು ತಗುಲಿಸಬೇಕು ಅಲ್ಲವಾ? ಅವಾಗ ಫಸ್ಟ್ ಕ್ಲಿನಿಕಲ್ ಮ಻ತ್ತು ಕ್ಲೀನ್ ಟೆಸ್ಟು ಆಕ್ಕೈತಿ ನೋಡ್ರಿ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...