“ಕುಂಟ ಕುಂಟ ಕುರವತ್ತಿ, ರಂಟಿ ಹೊಡಿಯೋ ಬಾಳಪ್ಪ’’ ಅನ್ನೋದು ನಮ್ಮ ಬಾಲ್ಯದ ಫೇವರಿಟ್ ಹಾಡು. ಅದನ್ನ ಯಾರನ್ನರ ರೇಗಿಸಲಿಕ್ಕೆ ಹಾಡುತ್ತಾ ಇದ್ವಿ. ಯಾಕ ಅಂದ್ರ ನಮ್ಮ ಸಾಲಿಯೊಳಗ ಪ್ರತಿ ಕ್ಲಾಸ್ದಾಗು ಒಬ್ಬ ಕುಂಟ ಇರತಿದ್ದ.
ಅವರೆಲ್ಲರೂ ಪೋಲಿಯೋದಿಂದ ಕುಂಟತಿದ್ದರು.
ಈಗ ನೀವು ಯಾವುದರ ಶಹರ ಅಥವಾ ಹಳ್ಳಿಯ ಸರ್ಕಾರಿ ಸಾಲಿಗೆ ಹೋಗಿ ಹುಡುಕಿದರ ಒಬ್ಬನ ಒಬ್ಬ ಪೋಲಿಯೋ ರೋಗಿ ಸಿಗಂಗಿಲ್ಲ.
ಅದಕ್ಕ ಕಾರಣ ಎನಪಾ ಅಂದ್ರ, ಸುಮಾರು 25 ವರ್ಷದಿಂದ ನಮ್ಮ ದೇಶದಾಗ ನಡದುಕೊಂಡು ಬಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ.
ಭಾರತ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ, ರೋಟರಿ ಕ್ಲಬ್, ಗೇಟ್ಸ್ ಫೌಂಡೇಶನ್ ಇತ್ಯಾದಿ ಸಂಸ್ಥೆಗಳ ಪ್ರಯತ್ನದಿಂದ ನಮ್ಮ ದೇಶದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಇಷ್ಟು ವರ್ಷಗಟ್ಟಲೆ ಲಸಿಕೆ ಸಿಕ್ಕದ.
ಅದಕ್ಕ ಎರಡು ಕಾರಣ ಅದಾವು. ಆ ರೋಗ ಬರದಂಗ ಒಬ್ಬ ಪುಣ್ಯಾತ್ಮ ಲಸಿಕೆ ಕಂಡು ಹಿಡದ. ಮತ್ತು ಅದನ್ನು ಪೇಟೆಂಟು ಮಾಡಿ ರೊಕ್ಕ ಹೊಡಿಯೋ ವಿಚಾರ ಮಾಡಲಿಲ್ಲ.
ಭಾರತದಂತಹ ಬಡ, ಹಿಂದುಳಿದ ಅಸಂಖ್ಯ ದೇಶಗಳ ಕೋಟ್ಯಾಂತರ ಜನ ತಂಪ ಹೊತ್ತಿನಾಗ ನೆನೆಸಬೇಕಾದ ಆ ಮನುಷ್ಯನ ಹೆಸರು ಜೋನಾಸ ಸಾಲ್ಕ.
ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಅಂಗವೈಕಲ್ಯ ತಪ್ಪಿಸಿದ ಈ ವಿಜ್ಞಾನಿಗೆ ಸಾವಿರಾರು ಪ್ರಶಸ್ತಿ ಬಂದವು. ಆದರ ಪ್ರಚಾರದಿಂದ ದೂರ ಇರಲು ಇಷ್ಟ ಪಡುತ್ತಾ ಇದ್ದ ಜೋನಾಸ, ‘ಈ ಕೀರ್ತಿ ಶನಿ ನನ್ನ ಕೆಲಸಕ್ಕೆ ಅಡ್ಡವಾಗುತ್ತಾನೆ’ ಅಂತ ಹೇಳುತ್ತಿದ್ದರು. ಈ ಲಸಿಕೆಗೆ ಪೇಟೆಂಟು ಮಾಡಿಸೋದಿಲ್ಲವೇ ಅಂತ ಕೇಳಿದರೆ ‘ಸೂರ್ಯನಿಗೆ ಪೇಟೆಂಟು ಮಾಡಬಹುದೇ’ ಅಂತ ಉತ್ತರ ಕೊಟ್ಟರು.
ಅರೆ ಶಿಕ್ಷಣ ಪಡೆದ ವಲಸೆ ಕಾರ್ಮಿಕರ ಮಗನಾಗಿದ್ದ ಜೋನಾಸ ಅವರು ಕಷ್ಟಪಟ್ಟು ಕಾಲೇಜಿಗೆ ಸೇರಿದರು.
ವೈದ್ಯ ಪದವಿಯ ನಂತರ ಸಂಶೋಧನೆ ನಡೆಸಬೇಕು ಅಂತ ಆಸ್ಪತ್ರೆ ಸೇರದೆ ಪ್ರಯೋಗಶಾಲೆ ಸೇರಿಕೊಂಡರು. ಅಮೇರಿಕದ ಮಕ್ಕಳಲ್ಲಿ ಹೆಚ್ಚು ಆಗ್ತಾ ಇರೋ ಪೋಲಿಯೋ ಪಿಡುಗು ನೋಡಿ ಬೇಸತ್ತು ಇದಕ್ಕ ಏನರ ಮಾಡ್ಬೇಕಲೇ ಅಂತ ಹೇಳಿ ಪೋಲಿಯೋ ವೈರಸ್ಸಿನ ಹಿಂದ ಬಿದ್ದರು.
ಸುಮಾರು ಒಂಬತ್ತು ವರ್ಷ ಸಂಶೋಧನೆ ಮಾಡಿದ ಮ್ಯಾಲೆ ಆ ವೈರಸ್ಸಿನ ನಿರ್ಜೀವ ಜೀವಾಣು ಹೊರಗ ತಗದು ಅದನ್ನ ಆರೋಗ್ಯವಂತ ಪ್ರಾಣಿ ಹಾಗೂ ಮನುಷ್ಯರ ದೇಹದೊಳಗ ಹಾಕಿ, ಅದನ್ನ ಸೋಲಿಸಿದ ಯಾಂಟೀಬಾಡಿ ಜೀವಕೋಶಗಳನ್ನ ತಗದು ಸಣ್ಣ ಮಕ್ಕಳಿಗೆ ಕೊಟ್ಟಾಗ ಲಸಿಕೆ ತಯಾರು ಆತು.
ಅದನ್ನ ಪರೀಕ್ಷೆ ಮಾಡಲಾರದೇ ಜನ ಸಾಮಾನ್ಯರಿಗೆ ಕೊಡಬಾರದು ಅಂತ ಹೇಳಿ ಪ್ರಾಯೋಗಿಕ ಪರೀಕ್ಷೆ ಮಾಡಿದರು. ಅದರಾಗ ಸುಮಾರು 18 ಲಕ್ಷ ಶಾಲಾ ವಿದ್ಯಾರ್ಥಿಗಳು, ಎರಡೂ ಕಾಲು ಲಕ್ಷ ಇತರೆ ವಿದ್ಯಾರ್ಥಿಗಳು, 65 ಸಾವಿರ ಶಿಕ್ಷಕರು, 20 ಸಾವಿರ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.
ಇಂಥದೇ ಕೆಲಸ ಮಾಡಿದ ಇನ್ನೊಬ್ಬ ದೊಡ್ಡ ಮನುಷ್ಯ ಅಂದ್ರ ಆಲ್ಬರ್ಟ್ ಸಾಬಿನ. ಪೋಲಂಡ್ ದೇಶದಾಗ ಹುಟ್ಟಿದ ಈ ಮನುಷ್ಯ ಅಮೇರಿಕದಾಗ ಸಂಶೋಧನೆ ಮಾಡಿ ಔಷದಿ ತರ ನುಂಗೋ ಲಸಿಕೆ ಕಂಡು ಹಿಡದರು. ಈಗ ಎಲ್ಲಾ ದೇಶದಾಗ ಕೊಡೋ ಲಸಿಕೆ ಇದ ಸಾಬಿನ ಲಸಿಕೆ. ಇವರ ಓಪಿವಿ ಅಥವಾ ಬಾಯಿಯಿಂದ ತೊಗೊಳಲೋ ಲಸಿಕೆಯನ್ನು ಕಮ್ಮಿ ಅಂದರೂ ಹತ್ತು ಕೋಟಿ ಜನರ ಮ್ಯಾಲೆ ಪರೀಕ್ಷೆ ಮಾಡಲಾಯಿತು.
ಇಂತಹ ದುರಿತ ಕಾಲದಾಗ ಈ ಪುಣ್ಯವಂತರ ನೆನಪು ಯಾಕ ಆತಪ ಅಂದ್ರ ನಮ್ಮ ಸರಕಾರದವರು ಕೊರೊನಾ ವೈರಾಣು ವಿರುದ್ಧ ಒಂದು ಲಸಿಕೆ ರೆಡಿ ಮಾಡಾಕ ಹೊಂಟಾರು. ಅದು ಇನ್ನೂ ಕಾದು ಬೆಂದು ತಯಾರು ಆಗೋಕಿಂತಾ ಮೊದಲಿಗೆ ನಮ್ಮ ಮೂಗು ಬಾಯಿ ಹಿಡದು ಅದನ್ನ ಕೂಡಸಾಕ ತಯಾರಿ ಮಾಡಾಕ ಹತ್ಯಾರ್.
ಅದು ಹೆಂಗಪಾ ಅಂದ್ರ ಮದುವಿ ಮನಿಯೊಳಗ ದೊಡ್ಡ ಅಡಿಗಿ ತಯಾರು ಆಗೋ ಮುಂದ ಅಡಿಗಿ ಭಟ್ಟರಿಗೆ ಎನರ ಸಂಶಯ ಬಂದರ್ ಕಲ್ಯಾಣಮಂಟಪದ ಹೊರಗ ಕೂತಿರೋ ಭಿಕ್ಷ ಬೇಡುವರಿಗೆ ಕೊಟ್ಟು ನೋಡತಾರಲ್ಲಾ, ಹಂಗ.
ನಿಮಗ ಒಂದು ಲೆಕ್ಕ ಕೊಡತೇನಿ. ಜೋನಾಸ ಅವರ ಪರೀಕ್ಷೆಗೆ ಒಳಗಾದವರು ಸುಮಾರು 20 ಲಕ್ಷ ಮಂದಿ. ಅದು 1946 ರ ಸುಮಾರಿಗೆ ಅಮೇರಿಕಾದ ಜನ ಸಂಖ್ಯೆಯ ಶೇಕಡಾ ಒಂದರಷ್ಟು. ಇನ್ನ ಸಾಬಿನ ಅವರ ಪರೀಕ್ಷೆ ಯೊಳಗ 1960 ರಾಗ ಪಾಲುಗೊಂಡವರು ಸುಮಾರು 10 ಕೋಟಿ, ಅದು ಆವಾಗಿನ ವಿಶ್ವದ ಜನಸಂಖ್ಯೆಯ ಶೇಕಡಾ 3 ರಷ್ಟು.
ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.
ಮಾರ್ಚ್ 23 ರ ಸರಕಾರದವರು ವಿಧಿಸಿ, ಜನತಾ ಕರಫ್ಯೂ ಅಂತ ಹೆಸರು ಇಟ್ಟ ದಿನದ ನಂತರ ನಮ್ಮ ದೇಶದ 11 ಖಾಸಗಿ ಕಂಪನಿಗಳು ಲಸಿಕೆ ತಯಾರಿಕೆ ಆರಂಭ ಮಾಡಿದವು. ಆದರಾಗ ಇಬ್ಬರು ಭಾರಿ ಜೋರಾಗಿ ಓಡಿ ಮುಂದ ಹೋಗಿ ನಾವು ಕೋರೋನಾ ಲಸಿಕೆ ತಯಾರು ಮಾಡಿದೇವು. ನಮಗ ಜನರ ಮ್ಯಾಲೆ ಅದನ ಪ್ರಯೋಗ ಮಾಡಾಕ ಅನುಮತಿ ಕೊಡರಿ ಅಂತ ಸರ್ಕಾರದ ಮುಂದ ಕೂತರು. ಈ ವಿಷಮ ಸ್ಥಿತಿಯೊಳಗ ಸರಕಾರ ಎನ್ನೂ ಮಾಡಿಲ್ಲ ಅಂತ ಬೈಸಿಕೊಂಡು ಸಾಕಾಗಿದ್ದ ಸರ್ಕಾರದ ಮಂತ್ರಿ ಹಾಗೂ ಅವರ ಬಾಬುಗಳು ಅವರಿಗೆ ಹೂಂ ಅಂತ ಸೀಟಿ ಹೊಡದುಬಿಟ್ಟರು. ದೇಶದ 12 ಪ್ರಯೋಗಶಾಲೆಗಳಲ್ಲಿ ಸುಮಾರು ಎರಡೂವರೆ ಸಾವಿರ ಆರೋಗ್ಯವಂತ ಯುವಕರ ಮೇಲೆ ಪ್ರಯೋಗ ನಡೆಸಿದ ನಂತರ ಈ ಲಸಿಕೆ ಬಿಡುಗಡೆ ಆಗತದ ಅಂತ ಹೇಳಿದರು.
ಅಷ್ಟ ಅಲ್ಲ, ಅದರ ಪರೀಕ್ಷೆ ಮುಗದು ಆಗಸ್ಟ್ 15 ರ ಸ್ವತಂತ್ರ ದಿನದ ದಿವಸ ಈ ದೇಶಕ್ಕ ಕೋರೋನಾದಿಂದ ಮುಕ್ತಿ ಸಿಗತದ ಅಂತ ಘೋಷಿಸಿ ಬಿಟ್ಟರು.
ಅಂದ್ರ ಅದು ಕೇವಲ 40 ದಿನದಾಗ ಬೆಳೆದು ಪರಿಪಕ್ವವಾಗಬೇಕಾದ ಲಸಿಕೆ. ಜೋನಾಸ ಸಾಹೇಬರ ಒಂಬತ್ತು ವರ್ಷ, ಇಪ್ಪತ್ತು ಲಕ್ಷ ಜನರ ಪರೀಕ್ಷೆ ಹಾಗೂ ಸಾಬಿನ ಸಾಹೇಬರ 10 ಕೋಟಿ ಜನರ ಪರೀಕ್ಷೆ ಇಲ್ಲೇ ನೆನಸಿಕೋರಿ.
ಅದೂ ಅಲ್ಲದ, ಹೈದರಾಬಾದು ಮತ್ತು ಅಹ್ಮದಾಬಾದು ನಗರದ ಎರಡು ಖಾಸಗಿ ಕಂಪನಿಗಳು ತಾವು ಲಸಿಕೆ ತಯಾರು ಮಾಡಿದರೂ ಕೂಡ ಭಾರತ ಸರ್ಕಾರದ ವೈದ್ಯ ಸಂಶೋಧನಾ ಪರಿಷತ್ತು, ನಮ್ಮ ಸಹಭಾಗಿತ್ವದಾಗ ಇದನ್ನ ತಯಾರು ಮಾಡಿದೆ ಅಂತ ಹೇಳಿಕೊಂಡವು.
ಪರಿಷತ್ತಿನ ಯಾವ ಅಧಿಕಾರಿಯೂ ಕೂಡ ಒಂದು ಪತ್ರಿಕಾ ಪ್ರಕಟಣೆ ಕೊಡಲಿಲ್ಲ, ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯೊಳಗ ಒಬ್ಬ ವಿಜ್ಞಾನಿಯ ಹೆಸರು ಇಲ್ಲ. ವಿವರ ತಿಳಿಸಲಿಕ್ಕೆ ಯಾರೂ ಒಂದು ಪತ್ರಿಕಾಗೋಷ್ಟಿ ಕರಿಯಲಿಲ್ಲ. ಗರ್ಭ ಗುಡಿಯ ದೇವರೇ ಕರೆಯದೇ ಇದ್ದಾಗ ದ್ವಾರಪಾಲಕರು ಯಾಕ ಕರೀತಾರ?, ಅದೂ ಖರೇನ.
ಸಮ ಪರೀಕ್ಷೆ ಆಗದೇ ಲಸಿಕೆ ಹೊರಗ ಬಂದು ಅದನ್ನು ನಮ್ಮ ಜನ ತೊಗೊಂಡು, ಕೆಲವರು ಉಳದು, ಕೆಲವರು ಸತ್ತು ಹೋದರ ಯಾವಾಗ ಏನು ಆಗತದ?
ಅಷ್ಟು ದೊಡ್ಡ ದೇಶದಾಗ ಅಷ್ಟು ದೊಡ್ಡ ಕೆಲಸ ಆಗೋವಾಗ ಅಷ್ಟು ಜನ ಸಾಯೋರ, ಅಂತ ಸರ್ಕಾರದ ಪ್ರತಿ ಕ್ರಮವನ್ನು ಕಣ್ಣು ಮುಚ್ಚಿ ಬೆಂಬಲಿಸೋರು ಅನ್ನಬಹುದು. ವಿರೋಧ ಪಕ್ಷದವರು ಇಲ್ಲ ನಾವು ಮೊದಲ ಹೇಳಿದ್ದೀವಿ, ಇವರು ಕೈ ಹಾಕೋ ಎಲ್ಲಾ ಕೆಲಸನೂ ಹಿಂಗ, ಪಿಷಕಿ, ಅಂತ ಮೂಗು ಮುರೀಬಹುದು. ವಸ್ತುನಿಷ್ಟವಾಗಿ ಮಾತಾಡೋ ವಿಜ್ಞಾನಿಗಳಿಗಂತೂ ಇಲ್ಲಿ ಜಾಗಾ ಇಲ್ಲಾ, ಹಿಂಗಾಗಿ ಸರ್ಕಾರಕ್ಕ ಅಂತೂ ಯಾವುದೇ ವ್ಯತ್ಯಾಸ ಆಗಂಗಿಲ್ಲ.
ಅದಕ್ಕ ಹೇಳೋದು, ಈ ಲಸಿಕಾ ಪರೀಕ್ಷೆ ಅನ್ನೋದು ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ ಅಂತ.
- ಡೇಟಾಮ್ಯಾಟಿಕ್ಸ್



ಡೇಟಾಮ್ಯಾಟಿಕ್ಸ್ ಚೆನ್ನಾಗಿದೆ.
ಐಸಿಎಂಆರ್ನಿಂದ 2-ಮಿನಿಟ್ ಮ್ಯಾಗಿ: ಚಟಾಪಟ್ ಲಸಿಕೆ
ಅಗಸ್ಟ್ 15ಕ್ಕ ಪಿಎಂ ಮ್ಯಾಲ ಪ್ರಯೋಗ ಮಾಡ್ಲಿ. ಅದಕ್ಕೂ ಮೊದ್ಲ ಅವ್ರಿಗೆ ಸೋಂಕು ತಗುಲಿಸಬೇಕು ಅಲ್ಲವಾ? ಅವಾಗ ಫಸ್ಟ್ ಕ್ಲಿನಿಕಲ್ ಮತ್ತು ಕ್ಲೀನ್ ಟೆಸ್ಟು ಆಕ್ಕೈತಿ ನೋಡ್ರಿ.