Homeಡೇಟಾ ಖೋಲಿಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಕೊರೊನಾಗೆ ಔಷಧಿ: ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

- Advertisement -
- Advertisement -

“ಕುಂಟ ಕುಂಟ ಕುರವತ್ತಿ, ರಂಟಿ ಹೊಡಿಯೋ ಬಾಳಪ್ಪ’’ ಅನ್ನೋದು ನಮ್ಮ ಬಾಲ್ಯದ ಫೇವರಿಟ್ ಹಾಡು. ಅದನ್ನ ಯಾರನ್ನರ ರೇಗಿಸಲಿಕ್ಕೆ ಹಾಡುತ್ತಾ ಇದ್ವಿ. ಯಾಕ ಅಂದ್ರ ನಮ್ಮ ಸಾಲಿಯೊಳಗ ಪ್ರತಿ ಕ್ಲಾಸ್‍ದಾಗು ಒಬ್ಬ ಕುಂಟ ಇರತಿದ್ದ.

ಅವರೆಲ್ಲರೂ ಪೋಲಿಯೋದಿಂದ ಕುಂಟತಿದ್ದರು.

ಈಗ ನೀವು ಯಾವುದರ ಶಹರ ಅಥವಾ ಹಳ್ಳಿಯ ಸರ್ಕಾರಿ ಸಾಲಿಗೆ ಹೋಗಿ ಹುಡುಕಿದರ ಒಬ್ಬನ ಒಬ್ಬ ಪೋಲಿಯೋ ರೋಗಿ ಸಿಗಂಗಿಲ್ಲ.

ಅದಕ್ಕ ಕಾರಣ ಎನಪಾ ಅಂದ್ರ, ಸುಮಾರು 25 ವರ್ಷದಿಂದ ನಮ್ಮ ದೇಶದಾಗ ನಡದುಕೊಂಡು ಬಂದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ.

ಭಾರತ ಸರಕಾರ, ವಿಶ್ವ ಆರೋಗ್ಯ ಸಂಸ್ಥೆ, ರೋಟರಿ ಕ್ಲಬ್, ಗೇಟ್ಸ್ ಫೌಂಡೇಶನ್ ಇತ್ಯಾದಿ ಸಂಸ್ಥೆಗಳ ಪ್ರಯತ್ನದಿಂದ ನಮ್ಮ ದೇಶದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಇಷ್ಟು ವರ್ಷಗಟ್ಟಲೆ ಲಸಿಕೆ ಸಿಕ್ಕದ.

ಅದಕ್ಕ ಎರಡು ಕಾರಣ ಅದಾವು. ಆ ರೋಗ ಬರದಂಗ ಒಬ್ಬ ಪುಣ್ಯಾತ್ಮ ಲಸಿಕೆ ಕಂಡು ಹಿಡದ. ಮತ್ತು ಅದನ್ನು ಪೇಟೆಂಟು ಮಾಡಿ ರೊಕ್ಕ ಹೊಡಿಯೋ ವಿಚಾರ ಮಾಡಲಿಲ್ಲ.

ಭಾರತದಂತಹ ಬಡ, ಹಿಂದುಳಿದ ಅಸಂಖ್ಯ ದೇಶಗಳ ಕೋಟ್ಯಾಂತರ ಜನ ತಂಪ ಹೊತ್ತಿನಾಗ ನೆನೆಸಬೇಕಾದ ಆ ಮನುಷ್ಯನ ಹೆಸರು ಜೋನಾಸ ಸಾಲ್ಕ.

ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಅಂಗವೈಕಲ್ಯ ತಪ್ಪಿಸಿದ ಈ ವಿಜ್ಞಾನಿಗೆ ಸಾವಿರಾರು ಪ್ರಶಸ್ತಿ ಬಂದವು. ಆದರ ಪ್ರಚಾರದಿಂದ ದೂರ ಇರಲು ಇಷ್ಟ ಪಡುತ್ತಾ ಇದ್ದ ಜೋನಾಸ, ‘ಈ ಕೀರ್ತಿ ಶನಿ ನನ್ನ ಕೆಲಸಕ್ಕೆ ಅಡ್ಡವಾಗುತ್ತಾನೆ’ ಅಂತ ಹೇಳುತ್ತಿದ್ದರು. ಈ ಲಸಿಕೆಗೆ ಪೇಟೆಂಟು ಮಾಡಿಸೋದಿಲ್ಲವೇ ಅಂತ ಕೇಳಿದರೆ ‘ಸೂರ್ಯನಿಗೆ ಪೇಟೆಂಟು ಮಾಡಬಹುದೇ’ ಅಂತ ಉತ್ತರ ಕೊಟ್ಟರು.

ಅರೆ ಶಿಕ್ಷಣ ಪಡೆದ ವಲಸೆ ಕಾರ್ಮಿಕರ ಮಗನಾಗಿದ್ದ ಜೋನಾಸ ಅವರು ಕಷ್ಟಪಟ್ಟು ಕಾಲೇಜಿಗೆ ಸೇರಿದರು.

ವೈದ್ಯ ಪದವಿಯ ನಂತರ ಸಂಶೋಧನೆ ನಡೆಸಬೇಕು ಅಂತ ಆಸ್ಪತ್ರೆ ಸೇರದೆ ಪ್ರಯೋಗಶಾಲೆ ಸೇರಿಕೊಂಡರು. ಅಮೇರಿಕದ ಮಕ್ಕಳಲ್ಲಿ ಹೆಚ್ಚು ಆಗ್ತಾ ಇರೋ ಪೋಲಿಯೋ ಪಿಡುಗು ನೋಡಿ ಬೇಸತ್ತು ಇದಕ್ಕ ಏನರ ಮಾಡ್ಬೇಕಲೇ ಅಂತ ಹೇಳಿ ಪೋಲಿಯೋ ವೈರಸ್ಸಿನ ಹಿಂದ ಬಿದ್ದರು.

ಸುಮಾರು ಒಂಬತ್ತು ವರ್ಷ ಸಂಶೋಧನೆ ಮಾಡಿದ ಮ್ಯಾಲೆ ಆ ವೈರಸ್ಸಿನ ನಿರ್ಜೀವ ಜೀವಾಣು ಹೊರಗ ತಗದು ಅದನ್ನ ಆರೋಗ್ಯವಂತ ಪ್ರಾಣಿ ಹಾಗೂ ಮನುಷ್ಯರ ದೇಹದೊಳಗ ಹಾಕಿ, ಅದನ್ನ ಸೋಲಿಸಿದ ಯಾಂಟೀಬಾಡಿ ಜೀವಕೋಶಗಳನ್ನ ತಗದು ಸಣ್ಣ ಮಕ್ಕಳಿಗೆ ಕೊಟ್ಟಾಗ ಲಸಿಕೆ ತಯಾರು ಆತು.

ಅದನ್ನ ಪರೀಕ್ಷೆ ಮಾಡಲಾರದೇ ಜನ ಸಾಮಾನ್ಯರಿಗೆ ಕೊಡಬಾರದು ಅಂತ ಹೇಳಿ ಪ್ರಾಯೋಗಿಕ ಪರೀಕ್ಷೆ ಮಾಡಿದರು. ಅದರಾಗ ಸುಮಾರು 18 ಲಕ್ಷ ಶಾಲಾ ವಿದ್ಯಾರ್ಥಿಗಳು, ಎರಡೂ ಕಾಲು ಲಕ್ಷ ಇತರೆ ವಿದ್ಯಾರ್ಥಿಗಳು, 65 ಸಾವಿರ ಶಿಕ್ಷಕರು, 20 ಸಾವಿರ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಇಂಥದೇ ಕೆಲಸ ಮಾಡಿದ ಇನ್ನೊಬ್ಬ ದೊಡ್ಡ ಮನುಷ್ಯ ಅಂದ್ರ ಆಲ್ಬರ್ಟ್ ಸಾಬಿನ. ಪೋಲಂಡ್ ದೇಶದಾಗ ಹುಟ್ಟಿದ ಈ ಮನುಷ್ಯ ಅಮೇರಿಕದಾಗ ಸಂಶೋಧನೆ ಮಾಡಿ ಔಷದಿ ತರ ನುಂಗೋ ಲಸಿಕೆ ಕಂಡು ಹಿಡದರು. ಈಗ ಎಲ್ಲಾ ದೇಶದಾಗ ಕೊಡೋ ಲಸಿಕೆ ಇದ ಸಾಬಿನ ಲಸಿಕೆ. ಇವರ ಓಪಿವಿ ಅಥವಾ ಬಾಯಿಯಿಂದ ತೊಗೊಳಲೋ ಲಸಿಕೆಯನ್ನು ಕಮ್ಮಿ ಅಂದರೂ ಹತ್ತು ಕೋಟಿ ಜನರ ಮ್ಯಾಲೆ ಪರೀಕ್ಷೆ ಮಾಡಲಾಯಿತು.

ಇಂತಹ ದುರಿತ ಕಾಲದಾಗ ಈ ಪುಣ್ಯವಂತರ ನೆನಪು ಯಾಕ ಆತಪ ಅಂದ್ರ ನಮ್ಮ ಸರಕಾರದವರು ಕೊರೊನಾ ವೈರಾಣು ವಿರುದ್ಧ ಒಂದು ಲಸಿಕೆ ರೆಡಿ ಮಾಡಾಕ ಹೊಂಟಾರು. ಅದು ಇನ್ನೂ ಕಾದು ಬೆಂದು ತಯಾರು ಆಗೋಕಿಂತಾ ಮೊದಲಿಗೆ ನಮ್ಮ ಮೂಗು ಬಾಯಿ ಹಿಡದು ಅದನ್ನ ಕೂಡಸಾಕ ತಯಾರಿ ಮಾಡಾಕ ಹತ್ಯಾರ್.

ಅದು ಹೆಂಗಪಾ ಅಂದ್ರ ಮದುವಿ ಮನಿಯೊಳಗ ದೊಡ್ಡ ಅಡಿಗಿ ತಯಾರು ಆಗೋ ಮುಂದ ಅಡಿಗಿ ಭಟ್ಟರಿಗೆ ಎನರ ಸಂಶಯ ಬಂದರ್ ಕಲ್ಯಾಣಮಂಟಪದ ಹೊರಗ ಕೂತಿರೋ ಭಿಕ್ಷ ಬೇಡುವರಿಗೆ ಕೊಟ್ಟು ನೋಡತಾರಲ್ಲಾ, ಹಂಗ.

ನಿಮಗ ಒಂದು ಲೆಕ್ಕ ಕೊಡತೇನಿ. ಜೋನಾಸ ಅವರ ಪರೀಕ್ಷೆಗೆ ಒಳಗಾದವರು ಸುಮಾರು 20 ಲಕ್ಷ ಮಂದಿ. ಅದು 1946 ರ ಸುಮಾರಿಗೆ ಅಮೇರಿಕಾದ ಜನ ಸಂಖ್ಯೆಯ ಶೇಕಡಾ ಒಂದರಷ್ಟು. ಇನ್ನ ಸಾಬಿನ ಅವರ ಪರೀಕ್ಷೆ ಯೊಳಗ 1960 ರಾಗ ಪಾಲುಗೊಂಡವರು ಸುಮಾರು 10 ಕೋಟಿ, ಅದು ಆವಾಗಿನ ವಿಶ್ವದ ಜನಸಂಖ್ಯೆಯ ಶೇಕಡಾ 3 ರಷ್ಟು.

ಅದರ ನಮ್ಮವರು ಲಸಿಕೆ ಮಾಡತೇನಿ ಅಂತ ಹೇಳಿ ಟೂ ಮಿನಿಟ್ ಮ್ಯಾಗಿ ಮಾಡಾಕ ಹೊಂಟಾರ.

ಮಾರ್ಚ್ 23 ರ ಸರಕಾರದವರು ವಿಧಿಸಿ, ಜನತಾ ಕರಫ್ಯೂ ಅಂತ ಹೆಸರು ಇಟ್ಟ ದಿನದ ನಂತರ ನಮ್ಮ ದೇಶದ 11 ಖಾಸಗಿ ಕಂಪನಿಗಳು ಲಸಿಕೆ ತಯಾರಿಕೆ ಆರಂಭ ಮಾಡಿದವು. ಆದರಾಗ ಇಬ್ಬರು ಭಾರಿ ಜೋರಾಗಿ ಓಡಿ ಮುಂದ ಹೋಗಿ ನಾವು ಕೋರೋನಾ ಲಸಿಕೆ ತಯಾರು ಮಾಡಿದೇವು. ನಮಗ ಜನರ ಮ್ಯಾಲೆ ಅದನ ಪ್ರಯೋಗ ಮಾಡಾಕ ಅನುಮತಿ ಕೊಡರಿ ಅಂತ ಸರ್ಕಾರದ ಮುಂದ ಕೂತರು. ಈ ವಿಷಮ ಸ್ಥಿತಿಯೊಳಗ ಸರಕಾರ ಎನ್ನೂ ಮಾಡಿಲ್ಲ ಅಂತ ಬೈಸಿಕೊಂಡು ಸಾಕಾಗಿದ್ದ ಸರ್ಕಾರದ ಮಂತ್ರಿ ಹಾಗೂ ಅವರ ಬಾಬುಗಳು ಅವರಿಗೆ ಹೂಂ ಅಂತ ಸೀಟಿ ಹೊಡದುಬಿಟ್ಟರು. ದೇಶದ 12 ಪ್ರಯೋಗಶಾಲೆಗಳಲ್ಲಿ ಸುಮಾರು ಎರಡೂವರೆ ಸಾವಿರ ಆರೋಗ್ಯವಂತ ಯುವಕರ ಮೇಲೆ ಪ್ರಯೋಗ ನಡೆಸಿದ ನಂತರ ಈ ಲಸಿಕೆ ಬಿಡುಗಡೆ ಆಗತದ ಅಂತ ಹೇಳಿದರು.

ಅಷ್ಟ ಅಲ್ಲ, ಅದರ ಪರೀಕ್ಷೆ ಮುಗದು ಆಗಸ್ಟ್ 15 ರ ಸ್ವತಂತ್ರ ದಿನದ ದಿವಸ ಈ ದೇಶಕ್ಕ ಕೋರೋನಾದಿಂದ ಮುಕ್ತಿ ಸಿಗತದ ಅಂತ ಘೋಷಿಸಿ ಬಿಟ್ಟರು.

ಅಂದ್ರ ಅದು ಕೇವಲ 40 ದಿನದಾಗ ಬೆಳೆದು ಪರಿಪಕ್ವವಾಗಬೇಕಾದ ಲಸಿಕೆ. ಜೋನಾಸ ಸಾಹೇಬರ ಒಂಬತ್ತು ವರ್ಷ, ಇಪ್ಪತ್ತು ಲಕ್ಷ ಜನರ ಪರೀಕ್ಷೆ ಹಾಗೂ ಸಾಬಿನ ಸಾಹೇಬರ 10 ಕೋಟಿ ಜನರ ಪರೀಕ್ಷೆ ಇಲ್ಲೇ ನೆನಸಿಕೋರಿ.

ಅದೂ ಅಲ್ಲದ, ಹೈದರಾಬಾದು ಮತ್ತು ಅಹ್ಮದಾಬಾದು ನಗರದ ಎರಡು ಖಾಸಗಿ ಕಂಪನಿಗಳು ತಾವು ಲಸಿಕೆ ತಯಾರು ಮಾಡಿದರೂ ಕೂಡ ಭಾರತ ಸರ್ಕಾರದ ವೈದ್ಯ ಸಂಶೋಧನಾ ಪರಿಷತ್ತು, ನಮ್ಮ ಸಹಭಾಗಿತ್ವದಾಗ ಇದನ್ನ ತಯಾರು ಮಾಡಿದೆ ಅಂತ ಹೇಳಿಕೊಂಡವು.

ಪರಿಷತ್ತಿನ ಯಾವ ಅಧಿಕಾರಿಯೂ ಕೂಡ ಒಂದು ಪತ್ರಿಕಾ ಪ್ರಕಟಣೆ ಕೊಡಲಿಲ್ಲ, ಕೇಂದ್ರದ ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯೊಳಗ ಒಬ್ಬ ವಿಜ್ಞಾನಿಯ ಹೆಸರು ಇಲ್ಲ. ವಿವರ ತಿಳಿಸಲಿಕ್ಕೆ ಯಾರೂ ಒಂದು ಪತ್ರಿಕಾಗೋಷ್ಟಿ ಕರಿಯಲಿಲ್ಲ. ಗರ್ಭ ಗುಡಿಯ ದೇವರೇ ಕರೆಯದೇ ಇದ್ದಾಗ ದ್ವಾರಪಾಲಕರು ಯಾಕ ಕರೀತಾರ?, ಅದೂ ಖರೇನ.

ಸಮ ಪರೀಕ್ಷೆ ಆಗದೇ ಲಸಿಕೆ ಹೊರಗ ಬಂದು ಅದನ್ನು ನಮ್ಮ ಜನ ತೊಗೊಂಡು, ಕೆಲವರು ಉಳದು, ಕೆಲವರು ಸತ್ತು ಹೋದರ ಯಾವಾಗ ಏನು ಆಗತದ?

ಅಷ್ಟು ದೊಡ್ಡ ದೇಶದಾಗ ಅಷ್ಟು ದೊಡ್ಡ ಕೆಲಸ ಆಗೋವಾಗ ಅಷ್ಟು ಜನ ಸಾಯೋರ, ಅಂತ ಸರ್ಕಾರದ ಪ್ರತಿ ಕ್ರಮವನ್ನು ಕಣ್ಣು ಮುಚ್ಚಿ ಬೆಂಬಲಿಸೋರು ಅನ್ನಬಹುದು. ವಿರೋಧ ಪಕ್ಷದವರು ಇಲ್ಲ ನಾವು ಮೊದಲ ಹೇಳಿದ್ದೀವಿ, ಇವರು ಕೈ ಹಾಕೋ ಎಲ್ಲಾ ಕೆಲಸನೂ ಹಿಂಗ, ಪಿಷಕಿ, ಅಂತ ಮೂಗು ಮುರೀಬಹುದು. ವಸ್ತುನಿಷ್ಟವಾಗಿ ಮಾತಾಡೋ ವಿಜ್ಞಾನಿಗಳಿಗಂತೂ ಇಲ್ಲಿ ಜಾಗಾ ಇಲ್ಲಾ, ಹಿಂಗಾಗಿ ಸರ್ಕಾರಕ್ಕ ಅಂತೂ ಯಾವುದೇ ವ್ಯತ್ಯಾಸ ಆಗಂಗಿಲ್ಲ.

ಅದಕ್ಕ ಹೇಳೋದು, ಈ ಲಸಿಕಾ ಪರೀಕ್ಷೆ ಅನ್ನೋದು ಏಳು ಕೋಟೆಯ ರಾಜದುರ್ಗದಲ್ಲಿ ಲಸಿಕಾಯಣದ ರಹಸ್ಯ ಅಂತ.

  • ಡೇಟಾಮ್ಯಾಟಿಕ್ಸ್‌

ಇದನ್ನು ಓದಿ: ಕೊರೊನಾ: ವ್ಯಾಕ್ಸೀನ್ ಎಂದರೇನು? ಜಾಗತಿಕ ಸ್ಪರ್ಧೆಯು ಬೇಗ ವ್ಯಾಕ್ಸೀನ್ ಒದಗಿಸುತ್ತದೆಯೇ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಡೇಟಾಮ್ಯಾಟಿಕ್ಸ್ ಚೆನ್ನಾಗಿದೆ.
    ಐಸಿಎಂಆರ್ನಿಂದ 2-ಮಿನಿಟ್ ಮ್ಯಾಗಿ: ಚಟಾಪಟ್ ಲಸಿಕೆ
    ಅಗಸ್ಟ್ 15ಕ್ಕ ಪಿಎಂ ಮ್ಯಾಲ ಪ್ರಯೋಗ ಮಾಡ್ಲಿ. ಅದಕ್ಕೂ ಮೊದ್ಲ ಅವ್ರಿಗೆ ಸೋಂಕು ತಗುಲಿಸಬೇಕು ಅಲ್ಲವಾ? ಅವಾಗ ಫಸ್ಟ್ ಕ್ಲಿನಿಕಲ್ ಮ಻ತ್ತು ಕ್ಲೀನ್ ಟೆಸ್ಟು ಆಕ್ಕೈತಿ ನೋಡ್ರಿ.

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...