ಭರತಮಾತೆಯ ಹೃದಯ ಭಾಗವಾದ ದೆಹಲಿಯಲ್ಲಿ ಮತ್ತೆ ಕೇಜ್ರಿವಾಲ್ ಕೆನೆದಿರುವುದರಿಂದ ಮೋದಿ ಮತ್ತು ಶಾ ಮುಖಗಳು ಇಂಗು ತಿಂದ ಮಂಗನ ಮುಖಗಳಾಗಿವೆಯಂತಲ್ಲಾ. ಕೇಜ್ರಿವಾಲ್ ಪಠಿಸಿದ್ದು ದೆಹಲಿ ಅಭಿವೃದ್ದಿ ಮಂತ್ರ ಮೋದಿ ಶಾ ಪಠಿಸಿದ್ದು ಮತಾಂಧಮಂತ್ರ. ಅನಾದಿಕಾಲದಿಂದಲೂ ಸುಲ್ತಾನರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ನರಳಿದ ದೆಹಲಿ ತುಂಬ ಬಸವಳಿದ ಪ್ರದೇಶ. ಇಂತಹ ಪ್ರದೇಶವನ್ನು ನೆಮ್ಮದಿಯಾಗಿಡುವ ಒಬ್ಬ ನಾಯಕ ಬೇಕಿತ್ತು. ಅವನನ್ನು ದೆಹಲಿ ಪಡೆದಿದೆ ಆದರೆ ಮೋದಿ ಶಾ ದಾಳಿಯಿಂದ ತತ್ತರಿಸಿರುವ ಭಾರತಕ್ಕೂ ಒಬ್ಬ ಕೇಜ್ರಿವಾಲ್ ಬೇಕಾಗಿದೆ. ಆದರೆ ಕೇಜ್ರಿವಾಲ್ ತರಹ ಇರುವ ವ್ಯಕ್ತಿ ಒಬ್ಬನೆ ಅದೇ ಕೇಜ್ರಿವಾಲ್! ಆತ ದೆಹಲಿಯಿಂದ ಹೊರನಡೆದು ನಾಯಕತ್ವ ವಹಿಸಿದ್ದಾದರೆ, ಮೋದಿ ಶಾ ಮುಲಾಜಿಲ್ಲದೆ ಗಟಾರ ಸೇರುವುದು ಗ್ಯಾರಂಟಿಯಂತಲ್ಲಾ ಥೂತ್ತೇರಿ….
ಭಾರತದಿಂದ ಪಾಲು ಪಡೆದ ಕ್ಷಣದಿಂದಲೂ ತಲೆ ಕೆಟ್ಟಂತೆ, ಮತಾಂಧರಾಗಿ ಗಡಿಭಾಗದ ತಂಟೆಕೋರರಾಗಿ, ಈ ಏಳುದಶಕಗಳೂ ಹುಚ್ಚಾಸ್ಪತ್ರೆ ಸೇರುವಂತಾಗಿರುವ ಪಾಕಿಸ್ತಾನ ಈಗ ಭಾರತದ ಪ್ರಜೆಗಳೂ ಜೈಲು ಸೇರುವಂತೆ ಮಾಡುತ್ತಿದೆಯಲ್ಲಾ. ವಿಷಯ ಇಷ್ಟೇ, ಇತ್ತೀಚೆಗೆ ಭಾರತದಲ್ಲಿ ಉದ್ಭವಿಸಿರುವ ದೇಶಭಕ್ತರಿಗೆ ಪಾಕಿಸ್ತಾನ ಎಂದಕೂಡಲೇ ಮೈಮೇಲೆ ಗಣಬಂದಂತಾಡುತ್ತವೆ. ಅಂತಹ ದೇಶಭಕ್ತಿ ಕೆರಳಿಸಲೆಂದೇ ಪಾಕೀಸ್ತಾನ್ ಜಿಂದಾಬಾದ್ ಎಂದು ಕೂಗಿದ ಹುಡುಗರು ಜೈಲು ಸೇರುತ್ತಿವೆ. ವಾಘಾ ಗಡಿಯಲ್ಲಿ ಈ ಕಡೆಯಿಂದ ಭಾರತಮಾತಾಕಿ ಜೈ ಎಂದರೆ, ಆ ಕಡೆಯಿಂದ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಮೊಳಗಿಸುತ್ತ ಸಂಜೆಯಾಗುತ್ತದೆ. ಅಂತಹ ದೇಶದ ಪರ ಘೋಷಣೆ ಕೂಗುವುದು ಅಪರಾಧವಾದರೆ ನಮ್ಮ ಜಡ್ಜ್ಗಳು ತಿಳುವಳಿಕೆ ಹೇಳಿ ಕಳುಹಿಸಬಹುದು. ಅದು ಬಿಟ್ಟು ಹೆಣ್ಣುಮಕ್ಕಳನ್ನ 14 ದಿನ ಜೈಲಿಗಾಕುವುದು ಎಷ್ಟು ಸರಿ ಎಂಬುದು ಸಾಮಾನ್ಯನ ಪ್ರಶ್ನೆಯಾಗಿದೆಯಲ್ಲಾ, ಥೂತ್ತೇರಿ…
ಫಲಭರಿತವಾಗಿ ಕಂಗೊಳಿಸಿದ್ದ ತೋಟ ಹಾಳಾಗುವ ಸಮಯಕ್ಕೆ ಮಂಗನ ಮುಸುಡಿ ಕಾಯಿ ಕಾಣಿಸಿಕೊಳ್ಳುತ್ತದಂತೆ. ಹಾಗೆಯೇ ಭಾರತದ ಉದ್ದಗಲಕ್ಕೆ ಕಾಣಿಸಿಕೊಳ್ಳುತ್ತಿರುವ ಈ ಅನಿಷ್ಟ ಕಾಯಿಗಳಾವುವೆಂದು ವಿವರಿಸಿ ಹೇಳಬೇಕಿಲ್ಲ. ಇಂತಹ ತೋಟಕ್ಕೆ ಇನ್ನೊಂದು ಮುಸುಡಿ ಲಗ್ಗೆ ಹಾಕಿ ಅಹಮದಾಬಾದಿನಲ್ಲಿ ಭಾಷಣ ಬಿಗಿಯುತ್ತಿರ ಬೇಕಾದರೆ, ಜನಗಳು ಲಾಠಿ ಚಾರ್ಜಿಗೆ ತುತ್ತಾದವರಂತೆ ಚದುರಿ ಹೋದರಂತಲ್ಲಾ. ನಿಜಕ್ಕೂ ಭೀಕರ ಭಾಷಣಕ್ಕೆ ಇದಕ್ಕಿಂತ ಪ್ರತಿಕ್ರಿಯೆ ಇನ್ನೊಂದಿರಲಾರದು. ಆದರೆ ಬಿ.ಜೆ.ಪಿ.ಗಳ ಪ್ರಕಾರ ಇದು ಕಾಂಗೈನ ಸಂಚು. ಸಭೆಯ ಮಧ್ಯದಲ್ಲೇ ಎದ್ದುಹೋಗಿ ಮೋದಿ ಟ್ರಂಪ್ಗೆ ಅವಮಾನ ಮಾಡಲೆಂದೇ ಕಾಂಗೈಗಳು ನುಸುಳಿಬಂದಿದ್ದವಂತೆ. ಸುದೈವಕ್ಕೆ ಇಂತಹ ಸಭಾಕಿಡಿಗೇಡಿಗಳು ಪಾಕೀಸ್ತಾನದಿಂದ ಬಂದಿದ್ದರು ಎಂದಿಲ್ಲವಲ್ಲಾ. ಥೂತ್ತೇರಿ…
ಭಾರತಕ್ಕೆ ಬಂದ ಟ್ರಂಪ್ ಸಾಬರಮತಿ ಆಶ್ರಮಕ್ಕೂ ಭೇಟಿ ನೀಡಿದರು. ಗಾಂಧಿ ಕೊಂದವರ ಪಾರ್ಟಿಯ ಪ್ರಧಾನಿಯಾದ ಮೋದಿ ಮಹಾತ್ಮರು ಟ್ರಂಪ್ಗೆ ಗಾಂಧಿ ಪರಿಚಯ ಮಾಡಿಕೊಡುವ ಜವಾಬ್ದಾರಿ ಬಂದಾಗ, “ನೋಡಿ ಟ್ರಂಪ್ ಇದು ಗಾಂಧಿ ಕಟ್ಟಿದ ಆಶ್ರಮ. ಅವರ ಬಗ್ಗೆ ನಿಮ್ಮ ಮಾರ್ಟಿನ್ ಲೂಥರ್ ಕಿಂಗ್ ಏನೇಳಿದಾರೆ ಅಂದ್ರೆ, `ಗಾಂಧಿ ಈ ಜಗತ್ತಿನ ಜೀವಸತ್ವ ಅವರಿಲ್ಲದೆ ಜಗತ್ತು ಉಳಿಯದು’ ಎಂದಿದ್ದಾರೆ. ಆದರೆ ನಮ್ಮ ಬಿ.ಜೆ.ಪಿ ಜನ ಅದು ಹೇಗೆ ಉಳಿಯಲ್ಲವೋ ನೋಡೋಣ ಎಂದು ಈಗಾಗಲೇ ಗಾಂಧಿ ಕೊಂದವನಿಗೆ ಗುಡಿ ಕಟ್ಟಿದ್ದಾರೆ. ಹಲವು ಜಾಗದಲ್ಲಿದ್ದ ಗಾಂಧಿ ಪ್ರತಿಮೆ ದ್ವಂಸ ಮಾಡಿದ್ದಾರೆ. ನಾನೇ ಉದ್ಘಾಟಿಸಿದ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ. ಏನು ಮಾಡಿದರೂ ಈ ಗಾಂಧಿ ಹೆಸರನ್ನ ಅಳಿಸಿ, ಅಲ್ಲಿಗೆ ನಮ್ಮ ವೀರಸಾರ್ಕರ್ನನ್ನ ಸ್ಥಾಪಿಸಲಾಗುತ್ತಿಲ್ಲ” ಎನ್ನಲಾಗದೆ ಪರಿತಪಿಸಿದರಂತಲ್ಲಾ, ಥೂತ್ತೇರಿ…
ಟ್ರಂಪು ಮತ್ತು ಮೋದಿ ಸೇರಿಕೊಂಡು ಪ್ರಪಂಚದಲ್ಲೇ ಬಲಿಷ್ಟ ರಾಷ್ಟ್ರಗಳನ್ನು ನಿರ್ಮಾಣ ಮಾಡಿಕೊಂಡು, ಸುಂದರವಾಗಿ ಬದುಕುವ ಸುಳ್ಳುಗಳನ್ನು ಹೇಳುತ್ತಿರುವ ಸಮಯಕ್ಕೆ ಸರಿಯಾಗಿ, ಮಲೆನಾಡಿನ ಕಡೆಯಿಂದ ಬಂದ ಸುದ್ದಿಯೊಂದು ಅಘಾತ ನೀಡಿದೆಯಲ್ಲಾ. ಏನೆಂದರೆ ನಮ್ಮ ಜನ ದಿನನಿತ್ಯವು ಸೇವಿಸುವ ಅನ್ನದಂತಹ ಆಹಾರವಾದ ಅಡಿಕೆ ಬೆಳೆಯನ್ನ ಕಾಪಾಡಲು ಹೊಡೆದ ವಿಷಯುಕ್ತ ಔಷಧಿಯ ಪರಿಣಾಮವಾಗಿ ಜೇನುಹುಳು ಸತ್ತು ಉದುರುತ್ತಿವೆ. ಈ ಜಗತ್ತು ಹೃದಯ ವಿದ್ರಾವಕವಾಗಿ ನಿರ್ಗಮಿಸುವುದು ಜೇನುಹುಳದ ನಿರ್ಗಮನದ ನಂತರ. ಅಂದರೆ ಈಗಾಗಲೇ ಜೇನಿನ ನಿರ್ಗಮನ ಆರಂಭವಾಗಿದೆ. ಇದೇ ಔಷಧಿ ದೆಸೆಯಿಂದ ಚಿಟ್ಟೆಗಳ ವಂಶ ನಿರ್ವಂಶವಾಗುವತ್ತ ಸಾಗುತ್ತಿದೆ. ಟ್ರಂಪು ಮತ್ತು ಮೋದಿ ಜೋಡಿ ನೋಡಿದರೆ ಜಗತ್ತಿನ ಅವನತಿಯ ಉದ್ಘಾಟಕರಂತೆ ಕಾಣುತ್ತಿದ್ದಾರಲ್ಲಾ, ಥೂತ್ತೇರಿ….