ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿಯ ಒಪ್ಪಂದವು ಕೇರಳವನ್ನು ನಾಶಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಮಲಪ್ಪುರಂನಲ್ಲಿ ಆರೋಪಿಸಿದ್ದಾರೆ. ಕೇರಳ ಸ್ಥಿರವಾಗಿ ಉಳಿಯಬೇಕೆಂದು ಬಯಸುವ ಜನರ ಮುಂದೆ, ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರವು ಎಲ್ಲಾ ಕ್ಷೇತ್ರಗಳಿಗೂ ಅಭಿವೃದ್ಧಿಯನ್ನು ವಿಸ್ತರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪಿಣರಾಯಿ ವಿಜಯನ್, ಕಾಂಗ್ರೆಸ್-ಯುಡಿಎಫ್-ಬಿಜೆಪಿ ಮೈತ್ರಿ ಹರಡಿದ ಸುಳ್ಳನ್ನು ಅಭಿವೃದ್ದಿ ಬಗ್ಗೆ ತಿಳಿದಿರುವ ಜನರು ನಂಬುವುದಿಲ್ಲ ಎಂದು ಪ್ರತಿಪಾದಿಸಿದರು.
ಭಾರಿ ಪ್ರವಾಹ, ಓಖಿ ಚಂಡಮಾರುತ, ಧಾರಾಕಾರ ಮಳೆ ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ಹೊರತಾಗಿಯೂ ರಾಜ್ಯವನ್ನು ಎಲ್ಡಿಎಫ್ ಸರ್ಕಾರ ತನ್ನ ಅಭಿವೃದ್ಧಿ ಯೋಜನೆಗಳ ಹಾದಿಯಲ್ಲಿ ನಡೆಸಿತು. ಇದರ ಫಲವಾಗಿ ಜನರು ಸರ್ಕಾರದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಆದ್ದರಿಂದ, ಚುನಾವಣೆಯನ್ನು ಎದುರಿಸಲು ನಮಗೆ ಯಾವುದೇ ಕೋಮು ಶಕ್ತಿಯ ಸಹಾಯ ಅಗತ್ಯವಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.
ಇದನ್ನೂ ಓದಿ: ‘ಖಂಡಿತವಾಗಿಯೂ LDF’- ಕೇರಳ ಚುನಾವಣೆಗೆ ಎಡಪಕ್ಷಗಳ ಘೋಷವಾಕ್ಯ
ಜನರಿಗೆ ಎಲ್ಡಿಎಫ್ ಸರ್ಕಾರದ ಮೇಲೆ ಹೆಚ್ಚಿನ ಭರವಸೆ ಮತ್ತು ವಿಶ್ವಾಸವಿದೆ. ಸ್ಥಳೀಯ ಆಸ್ಪತ್ರೆಗಳು, ಶಾಲೆಗಳು, ಉತ್ತಮ ರಸ್ತೆಗಳು, ಸೇತುವೆಗಳು ಮತ್ತು ವಿವಿಧ ಯೋಜನೆಗಳ ಭಾಗವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಜನರಿಂದ ಮರೆಮಾಡಬಹುದಾದ ವಿಷಯವಲ್ಲ ಎಂದು ಪಿಣರಾಯಿ ಹೇಳಿದ್ದಾರೆ.
ಸ್ಥಳೀಯ ಚುನಾವಣೆಗಳಲ್ಲಿ ಜನರು ಪ್ರತಿಪಕ್ಷಗಳು ಹೇಳಿದ ಸುಳ್ಳನ್ನು ತಿರಸ್ಕರಿಸಿದ್ದಾರೆ, ಆದ್ದರಿಂದ ಹೊಸ ತಂತ್ರವನ್ನು ರೂಪಿಸಲಾಗುತ್ತಿದೆ. ಯುಡಿಎಫ್ ಇಲ್ಲಿ ಬಿಜೆಪಿಯ ಬಿ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಪಕ್ಷವನ್ನೇ ನೋಡಿ 35 ಸ್ಥಾನಗಳು ಸಿಕ್ಕರೆ ಆಡಳಿತ ನಡೆಸುತ್ತೇವೆ ಎಂದು ಬಿಜೆಪಿ ಹೇಳಿದೆ. ಬೇರೆ ರಾಜ್ಯಗಳಲ್ಲಿ, ಕಾಂಗ್ರೆಸ್ಸಿಗರು ಗೆದ್ದ ನಂತರ ಬಿಜೆಪಿಗೆ ಸೇರಿರುವ ಸುದ್ದಿಗಳನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ: ಬಿಜೆಪಿ ಮೈತ್ರಿಕೂಟ ತೊರೆದ ‘ಕೇರಳ ಕಾಂಗ್ರೆಸ್’!


