Homeಮುಖಪುಟಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ "ರುದ್ರ ನರ್ತನ"

ಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ “ರುದ್ರ ನರ್ತನ”

- Advertisement -
- Advertisement -

ಆಕೆಯ ಹೆಸರು ಅಮೃತ ವರ್ಷಿಣಿ. ತೆಲಂಗಾಣದ ಮಿರಿಯಾಲಗೂಡ ನಗರದ ಆರ್ಯ-ವೈಶ್ಯ ಸಮಾಜದ ಉದ್ಯಮಿ ಟಿ. ಮಾರುತಿ ರಾವ್‍ನ ಏಕೈಕ ಮಗಳು. ತಂದೆಗೆ ಮಗಳ ಮೇಲಿನ ಪ್ರೀತಿ ಸಹಜ.

(ತನ್ನ ತಂದೆ ಮಾರುತಿ ರಾವ್ ಜೊತೆಗೆ ಅಮೃತ ವರ್ಷಿನಿ)

2018ರ ಜನವರಿಯಲ್ಲಿ ಅಮೃತ ಆಕೆಯ ಸಹಪಾಠಿ ಪ್ರಣಯ್‍ ಕುಮಾರ್ ಎಂಬ ದಲಿತ ಕ್ರಿಶ್ಚಿಯನ್ ಹುಡುಗನನ್ನು ಮನೆ ಬಿಟ್ಟು ಹೋಗಿ ಮದುವೆ ಆದಳು. ಹುಡುಗರಿಬ್ಬರೂ ಪ್ರೀತಿಸುತ್ತಿದ್ದರು, ಆಕೆಯ ಮನೆಯಲ್ಲಿ ವಿರೋಧ, ಬೆದರಿಕೆಗಳು. ದಿಟ್ಟವಾಗಿ ಎದುರಿಸಿ ಹೊರನಡೆದು ಮದುವೆ ಆದಳು. ಪ್ರಣಯ್ ಅವರ ಮನೆಯವರೇ ನಿಂತು ಮದುವೆ ಮಾಡಿದರು, ಅವರ ಜೊತೆಯೇ ಜೀವನ ನಡೆಸಲಾರಂಭಿಸಿದಳು. ಕೆಲ ತಿಂಗಳಿನಲ್ಲಿ ಆಕೆ ಬಸಿರಾದಳು. ಇದೇ ಸಂದರ್ಭದಲ್ಲಿ ಆಕೆಯ ಕುಟುಂಬ ಕೈಚಾಚಿತು. ಸಹಜವಾಗಿಯೇ ಹುಡುಗಿ ತಾಯಿಯ ಆಸರೆಗೆ ಹಾತೊರೆಯಿತು. ತಾಯಿಯ ಜೊತೆ ಬಾಂಧವ್ಯ ಮತ್ತೆ ಶುರುವಾಯಿತು. ಆದರೆ ಇದರ ಹಿಂದಿನ ವಿಷ ಅರಿಯದಾದಳು ಹುಡುಗಿ.

(ಪ್ರಣಯ್ ಮತ್ತು ಅಮೃತ ವರ್ಷಿನಿ)

ಸೆಪ್ಟೆಂಬರ್ 2018. ಪ್ರಣಯ್ ಮತ್ತು ಅಮೃತ ವೈದ್ಯರನ್ನು ಕಾಣಲು ಹೋಗಿದ್ದಾಗ ಆಕೆಯ ಮುಂದೆಯೇ ಪ್ರಿಯಕರ ಪ್ರಣಯ್‍ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈಯ್ಯಲಾಯಿತು. ಸುಪಾರಿ ಕೊಟ್ಟಿದ್ದು ಆಕೆಯ ತಂದೆ ಮಾರುತಿರಾವ್. ತಾಯಿಯ ಜೊತೆ ಅಮೃತ ನಡೆಸಿದ್ದ ಸಂಭಾಷಣೆಗಳೇ ಆಕೆಗೆ ಮುಳುವಾದವು. ಈ ಕರೆಗಳಿಂದ ಅಮೃತ-ಪ್ರಣಯ್ ಎಲ್ಲಿದ್ದಾರೆಂಬ ಮಾಹಿತಿ ಮಾರುತಿರಾವ್ ಮತ್ತು ಕೊಲೆಗಾರರಿಗೆ ಸಿಕ್ಕಿತ್ತು. ಮಾರುತಿರಾವ್ ಪ್ರಣಯ್‍ನನ್ನು ಕೊಲ್ಲಲು ಒಂದು ಕೋಟಿ ಸುಪಾರಿ ಕೊಟ್ಟದ್ದ. ತನ್ನ ತಂದೆತಾಯಿಯೂ ಸಹ ತನ್ನ ಮದುವೆಯನ್ನು ಒಪ್ಪಿಕೊಂಡರು, ಇನ್ನೆಲ್ಲವೂ ಸರಿಹೋಗುತ್ತದೆ ಎಂದು ಕನಸಿದ್ದಳು ಹುಡುಗಿ. ತಾನೆಣಿಸಲಾರದ ದುರಂತವಾಯಿತು ಬದುಕು. ತನ್ನ ತಂದೆಯನ್ನು ಗಲ್ಲಿಗೇರಿಸಬೇಕೆಂದು ಚೀರಿದಳು ಬಸುರಿ ಹುಡುಗಿ. ಜನವರಿ 2019ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದಳು ಅಮೃತ. ಪ್ರಣಯ್ ಅವರ ಕುಟುಂಬದ ಜೊತೆ ಅವರ ಮಗಳಾಗಿ ಜೀವನ ನಡೆಸುತ್ತಿದ್ದಾಳೆ. ಅವರ ಮನಸ್ಸು ನಿಜಕ್ಕೂ ದೊಡ್ಡದು.

ಈಗ ಜಾಮೀನಿನ ಮೇಲೆ ಹೊರಬಂದಿದ್ದ ಮಾರುತಿರಾವ್ ಹೈದರಾಬಾದಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಅಮೃತ ಬಹುಶಃ ಅಪ್ಪನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಿ ಹೀಗೆ ಮಾಡಿಕೊಂಡಿರಬಹುದು ಎಂದವಳ ದನಿಯಲ್ಲಿ ದುಗುಡ, ಹತಾಶೆಯ ಜೊತೆ ಒಂದು ಸಣ್ಣ ಆಸೆಯೂ ಇದ್ದಂತಿತ್ತು. ಮಾರುತಿರಾವ್ ತನ್ನ ಜೀವನ ಅಂತ್ಯಗೊಳಿಸಿದ್ದು ಹೈದರಾಬಾದಿನ ಆರ್ಯವೈಶ್ಯ ಭವನದ ರೂಂ ನಂಬರ್ 306ರಲ್ಲಿ! ಆತ ಎರಡು ಸಾಲಿನ ಪತ್ರ ಬರೆದಿಟ್ಟು ಹೋಗಿದ್ದಾನೆ. “ಗಿರಿಜಾ ನನ್ನು ಕ್ಷಮಿಂಚು. ತಲ್ಲಿ ಅಮೃತ ಅಮ್ಮ ದೆಗ್ಗರಿಕಿ ವೆಳ್ಳಿಪೋ” – “ಗಿರಿಜಾ (ಆತನ ಪತ್ನಿ) ನನ್ನನ್ನು ಕ್ಷಮಿಸು. ತಾಯಿ ಅಮೃತ ಅಮ್ಮನ ಬಳಿ ಹೋಗಿಬಿಡು”. ಅಮೃತಳ ಆಸೆ ಹುಸಿಯಾಗಿತ್ತು. ಮಾರುತಿರಾವ್‍ಗೆ ಸಾಯುವಾಗಲೂ ಜಾತಿಯೇ ಮುಖ್ಯವಾಗಿತ್ತು, ಆತ ಸತ್ತದ್ದು ಆರ್ಯವೈಶ್ಯ ಭವನದಲ್ಲಿ ಮತ್ತು ಆ ಕಡೆಯ ಕ್ಷಣದಲ್ಲೂ ಆತನ ಮಗಳು ದಲಿತನೊಬ್ಬನ ಮನೆಯಲ್ಲಿರುವುದು ಆತನಿಗೆ ಸಹಿಸಿಕೊಳ್ಳಲಾಗಲಿಲ್ಲ!

(ತನ್ನ ಮಗುವಿನೊಂದಿಗೆ ಅಮೃತ ವರ್ಷಿನಿ)

ಮಾರುತಿರಾವ್‍ನ ಜಾತಿ ವ್ಯಾಮೋಹ ಮತ್ತು ಹಿಂಸೆಯ ಪ್ರತಿಫಲನ ಈ ದುರಂತ ಕಥೆಗೆ ಸಮಾಜ, ಮಾಧ್ಯಮ ಸ್ಪಂದಿಸಿದ ರೀತಿಯಲ್ಲೂ ಕಾಣಬಹುದು. ಬಹುತೇಕ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಮೃತಳನ್ನು ವಿಲನ್ ಆಗಿ ಚಿತ್ರಿಸಲಾಗಿದೆ! ಟಿವಿ-9 ತೆಲುಗು ವಾಹಿನಿಯ ಪ್ರಮುಖ ಆಂಕರ್ ರಜನೀಕಾಂತ್ ವಲ್ಲೆಲಚೆರುವು ಟ್ವೀಟ್ ಮಾಡಿದ್ದಾರೆ: “ಆತನ ನೆಗೆಟಿವ್ ಗುಣಗಳನ್ನು ಪಕ್ಕಕ್ಕಿಟ್ಟರೆ, ಮಾರುತಿ ರಾವ್‍ಗೆ ಸಾಯಿಸೋ ಅಷ್ಟು ಮತ್ತು ಸತ್ತು ಹೋಗೋಷ್ಟು ಮಗಳ ಬಗ್ಗೆ ಪ್ರೀತಿ ಇತ್ತು”. ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತಲ್ಲ ಮಾರುತಿ ರಾವ್ ಪ್ರಣಯ್‍ನನ್ನು ಕೊಲ್ಲಿಸಿ ಜೈಲು ಸೇರಿದಾಗಲೇ ಆತನಿಗೆ ಅಭಿಮಾನಿ ಪೇಜುಗಳು ಹುಟ್ಟುಕೊಂಡಿದ್ದವು ಮತ್ತು ಇವರೆಲ್ಲರೂ ಆತನ ಮಗಳ ಮೇಲಿನ ಪ್ರೇಮವನ್ನೇ ಐಡಿಯಲೈಸ್ ಮಾಡುತ್ತಿದ್ದರು. ಆಗ ಇದು ಎಷ್ಟು ತಾರಕಕ್ಕೆ ಹೋಗಿತ್ತೆಂದರೆ ಅಮೃತ ತಂದೆ-ತಾಯಿಗಳು ಅವರ ಸುಖಕ್ಕೆ ಸೆಕ್ಸ್‍ನಲ್ಲಿ ಭಾಗವಹಿಸುವುದರಿಂದ ಮಕ್ಕಳಾಗುತ್ತಾರೆಯೇ ಹೊರತು ನಮ್ಮನ್ನು ಹುಟ್ಟಿಸಬೇಕೆಂದೇನೂ ಅಲ್ಲ ಅಂದಿದ್ದಳು ಮತ್ತು ಅದನ್ನು ಎಲ್ಲರೂ ಖಂಡಿಸಿ ದೊಡ್ಡ ರಾದ್ಧಾಂತ ಮಾಡಿದ್ದರು. ಮೊನ್ನೆ ಎಷ್ಟೇ ಆಗಲಿ ತಂದೆ ಅಲ್ಲವೇ ಅಮೃತ ಶವ ನೋಡಲು ಹೋದಾಗ ಜನ ಘೋಷಣೆ ಕೂಗಿ ಆಕೆಯನ್ನು ಹೊರದೂಡಿಬಿಟ್ಟರು. ಇವರೆಲ್ಲರ ಪ್ರಕಾರ ಇಡೀ ದುರಂತ ಕತೆಗೆ ಆಕೆಯೇ ಕಾರಣ! ತಂದೆತಾಯಿಯ ಪ್ರೀತಿಯನ್ನು ಮನಗಾಣದೆ, ತನ್ನ (ತೆಳು ಎಂದು ಅವರ ಭಾವನೆಯೆ?) ಪ್ರೀತಿಗೇ ಕಟ್ಟುಬಿದ್ದು ಇಡೀ ದುರಂತಕ್ಕೆ ಕಾರಣವಾಗಿಬಿಟ್ಟಳು ಎಂದು ಮಾಧ್ಯಮಗಳೂ ಹಲುಬುತ್ತಿರುವುದು ಅವರ ಜಾತಿ ಮನಸ್ಥಿತಿ ಮತ್ತು ಮುಸುಕಿಗೆ ಸ್ಪಷ್ಟ ನಿದರ್ಶನ.

ಮಾರುತಿರಾವ್‍ಗೆ ಪ್ರೀತಿ ಇದ್ದದ್ದು ತನ್ನ ಮಗಳ ಮೇಲೆಯೋ ಇಲ್ಲ ತನ್ನ ಜಾತಿ ಮತ್ತು ಅದರ ಸುತ್ತ ಆತ ಕಟ್ಟುಕೊಂಡಿದ್ದ ತಾನು ಮೇಲೆಂಬ ಹುಸಿ ಭಾವನೆಗಳಿಗೋ? ಆತ ನಿಜಕ್ಕೂ ಆತನ ಮಗಳನ್ನು ಮಾಧ್ಯಮಗಳು ಕಟ್ಟಿಕೊಡಲು ಪ್ರಯತ್ನಿಸುತ್ತಿರುವಂತೆ ಅನ್‍ಕಂಡೀಷನಲ್ ಆಗಿ ಪ್ರೀತಿಸುತ್ತಿದ್ದದ್ದೇ ನಿಜವಾದರೆ ಆಕೆಯ ಆಯ್ಕೆ ಮತ್ತು ಇಷ್ಟವನ್ನು ಗೌರವಿಸಿ ಆಕೆ ಖುಷಿಯಾಗಿರುವುದೇ ತನಗೆ ಮುಖ್ಯ ಎಂದಿರುತ್ತಿದ್ದ. ಬಸುರಿ ಮಗಳ ಮುಂದೆ ಆಕೆಯ ಗಂಡನನ್ನು ಕೊಚ್ಚಿ ಕೊಲೆಗೈಯ್ಯಿಸುತ್ತಿರಲಿಲ್ಲ. ಅದು ಮಗಳ ಮೇಲಿನ ಪ್ರೀತಿ ಅಲ್ಲ. ಅತ್ಯಂತ ಪಿತೃಪ್ರಧಾನ ರೀತಿಯಲ್ಲಿ ಆತ ಮಗಳನ್ನು ತನ್ನ ಸ್ವತ್ತು ಎಂದೇ ನೋಡಿದ್ದ. ಆತನ “ಕುಲಗೌರವ”ವನ್ನು ಆಕೆ ಹಾಳು ಮಾಡಿದಳೆಂದೆಣಿಸಿದ್ದ. ಆದರೆ ಮಗಳ ಮೇಲೆ ಕೋಪ ಬರಲಿಲ್ಲ. ಆಕೆಯನ್ನು ಈ ದಲಿತ ಹುಡುಗ ತಲೆಕೆಡಿಸಿದ್ದಾನೆ ಎಂದೆಣಿಸಿರಬೇಕು, ಆತನನ್ನು ಸಾಯಿಸಿಬಿಟ್ಟ. ಆತ ಮಗಳಿಗೆ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳಬಹುದೆಂದು ಅನ್ನಿಸಿರಲೇ ಇಲ್ಲ ಎನಿಸುತ್ತೆ. ಆಕೆಗೆ ತನ್ನ ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಮತ್ತು ಆಕೆ ಮಾಡಿದ ಆಯ್ಕೆ ಸರಿಯಾದುದಲ್ಲ, ಆಕೆಯನ್ನು ದಿಕ್ಕುತಪ್ಪಿಸಲಾಗಿದೆ ಎಂಬ ನಿರ್ಣಯಗಳು ಮಾರುತಿ ರಾವ್‍ನ ನಡವಳಿಕೆಗಳ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿವೆ. ಅದು ಮಗಳ ಬಗೆಗಿನ ಆರೋಗ್ಯಕರ ಪ್ರೀತಿ ಖಂಡಿತ ಅಲ್ಲ, ಮೀರಲಾರದ ತನ್ನ ವ್ಯರ್ಥ, ಅರ್ಥವಿಲ್ಲದ ಜಾತಿ ಮತ್ತು ಪಿತೃಪ್ರಧಾನ ಗರ್ವ ಅಷ್ಟೆ.

ಮಾರಿ ಸೆಲ್ವರಾಜ್ ಅವರ ನಿರ್ದೇಶನದ ಪರಿಯೆರುಂ ಪೆರುಮಾಳ್ ಚಿತ್ರದಲ್ಲಿ ಒಂದು ವಿಲಕ್ಷಣ ಪಾತ್ರವಿದೆ. ಮೇಲ್ಜಾತಿಯ ಮಕ್ಕಳನ್ನು ಪ್ರೀತಿಸುವ ಕೆಳಜಾತಿಯವರನ್ನು ಸಾಕ್ಷಿ ಉಳಿಯದೆ ಕೊಲ್ಲುವ ಮುದುಕನ ಪಾತ್ರ. ಚಿತ್ರದುದ್ದಕ್ಕೂ ಆತ ಅನೇಕರನ್ನು ಹೀಗೆ ಕೊಲ್ಲುತ್ತಾನೆ, “ಕುಲಗೌರವರ”ದ ಹೆಸರಿನಲ್ಲಿ. ಚಿತ್ರದ ನಾಯಕ ಪೆರುಮಾಳ್ ದಲಿತ, ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಆ ಹುಡುಗಿಯ ಸೋದರ ಸಂಬಂಧಿ ಮತ್ತು ಇಬ್ಬರೂ ಪ್ರೇಮಿಗಳ ಸಹಪಾಠಿ ಮತ್ತು ಹುಡುಗಿಯ ತಂದೆ ಇದೇ ಮುದುಕನಿಗೆ ಪೆರುಮಾಳ್‍ನನ್ನು ಕೊಲ್ಲಲು ಸುಪಾರಿ ನೀಡುತ್ತಾರೆ. ಈ ಮುದುಕ ಪೆರುಮಾಳ್‍ಗೆ ಪರಿಚಿತನೇ. ಆತನ ಸೈಕಲ್‍ನಲ್ಲೇ ಡ್ರಾಪ್ ಕೇಳಿ ಹತ್ತಿಕೊಳ್ಳುತ್ತಾನೆ. ಕಡೆಗೆ ಆತನನ್ನು ರೈಲ್ವೆಹಳಿಗಳ ಮೇಲೆ ನೂಕಿ ರೈಲಿಗೆ ತಲೆಕೊಡಿಸಿ ಕೊಲ್ಲಲೆತ್ನಿಸುತ್ತಾನೆ. ಪೆರುಮಾಳ್ ಮೊದಲ ಬಾರಿಗೆ ತಿರುಗಿ ಬಿದ್ದು ಮುದುಕ ಮತ್ತು ತನ್ನ ಸಹಪಾಠಿಗೆ ಹೊಡೆಯುತಾನೆ. ಅಷ್ಟರಲ್ಲಿ ಹುಡುಗಿಯ ತಂದೆ ಅಲ್ಲಿಗೆ ಕಾರಿನಲ್ಲಿ ಬರುತ್ತಾನೆ. ಒಂದು ಶಾಟ್‍ನಲ್ಲಿ ಕಾರೊಳಗೆ ಕೂತ ತಂದೆ, ಡಾಶ್‍ಬೋರ್ಡ್‍ನಲ್ಲಿರುವ ಮಚ್ಚು ಮತ್ತು ಹೊರಗೆ ನಿಂತಿರುವ ಪೆರುಮಾಳ್ ಇದ್ದಾರೆ. ತಂದೆ ಮಚ್ಚಿಗೆ ಕೈಹಾಕುವುದಿಲ್ಲ. ಮುದುಕ ಸೋತಿದ್ದಾನೆ, ರೈಲಿಗೆ ಎದುರು ಕೂತು ತಾನೇ ಸಾಯುತ್ತಾನೆ. ಆ ಮುದುಕ ಜಾತಿಯ ವೃಥಾ ಗರ್ವ ಮತ್ತು ಅದ ಸ್ಥಾಪಿಸಲು ಹಿಂಸೆಗೆ ಹಪಹಪಿಸುವ ಮನಸ್ಸು.

ಆದರೆ ಇವತ್ತು ಅದೇ ತಮಿಳುನಾಡಿನಲ್ಲಿ ದ್ರೌಪದಿ ಎಂಬ ಚಲನಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಲಿತ ಹುಡುಗರು “ಲವ್ ಜಿಹಾದ್”ನ ಮಾದರಿಯಲ್ಲಿ ಮೇಲ್ಜಾತಿಗಳ ಹೆಣ್ಣುಮಕ್ಕಳನ್ನು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮದುವೆ ಆಗುತ್ತಿದ್ದಾರೆ ಎಂಬಂತಹ ಕಥಾಹಂದರವಿದೆ. ಅದು ಹೇಗೆ ಈ ಚಿತ್ರ ಸೆನ್ಸಾರ್ ಆಗಿ ಬಿಡುಗಡೆಯಾಯಿತೋ ದೇವರೇ ಬಲ್ಲ. ಜಾತ್ಯಹಂಕಾರಗಳ ರುದ್ರನರ್ತನ ಇನ್ನೂ ನಡೆದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...