Homeಮುಖಪುಟಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ "ರುದ್ರ ನರ್ತನ"

ಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ “ರುದ್ರ ನರ್ತನ”

- Advertisement -
- Advertisement -

ಆಕೆಯ ಹೆಸರು ಅಮೃತ ವರ್ಷಿಣಿ. ತೆಲಂಗಾಣದ ಮಿರಿಯಾಲಗೂಡ ನಗರದ ಆರ್ಯ-ವೈಶ್ಯ ಸಮಾಜದ ಉದ್ಯಮಿ ಟಿ. ಮಾರುತಿ ರಾವ್‍ನ ಏಕೈಕ ಮಗಳು. ತಂದೆಗೆ ಮಗಳ ಮೇಲಿನ ಪ್ರೀತಿ ಸಹಜ.

(ತನ್ನ ತಂದೆ ಮಾರುತಿ ರಾವ್ ಜೊತೆಗೆ ಅಮೃತ ವರ್ಷಿನಿ)

2018ರ ಜನವರಿಯಲ್ಲಿ ಅಮೃತ ಆಕೆಯ ಸಹಪಾಠಿ ಪ್ರಣಯ್‍ ಕುಮಾರ್ ಎಂಬ ದಲಿತ ಕ್ರಿಶ್ಚಿಯನ್ ಹುಡುಗನನ್ನು ಮನೆ ಬಿಟ್ಟು ಹೋಗಿ ಮದುವೆ ಆದಳು. ಹುಡುಗರಿಬ್ಬರೂ ಪ್ರೀತಿಸುತ್ತಿದ್ದರು, ಆಕೆಯ ಮನೆಯಲ್ಲಿ ವಿರೋಧ, ಬೆದರಿಕೆಗಳು. ದಿಟ್ಟವಾಗಿ ಎದುರಿಸಿ ಹೊರನಡೆದು ಮದುವೆ ಆದಳು. ಪ್ರಣಯ್ ಅವರ ಮನೆಯವರೇ ನಿಂತು ಮದುವೆ ಮಾಡಿದರು, ಅವರ ಜೊತೆಯೇ ಜೀವನ ನಡೆಸಲಾರಂಭಿಸಿದಳು. ಕೆಲ ತಿಂಗಳಿನಲ್ಲಿ ಆಕೆ ಬಸಿರಾದಳು. ಇದೇ ಸಂದರ್ಭದಲ್ಲಿ ಆಕೆಯ ಕುಟುಂಬ ಕೈಚಾಚಿತು. ಸಹಜವಾಗಿಯೇ ಹುಡುಗಿ ತಾಯಿಯ ಆಸರೆಗೆ ಹಾತೊರೆಯಿತು. ತಾಯಿಯ ಜೊತೆ ಬಾಂಧವ್ಯ ಮತ್ತೆ ಶುರುವಾಯಿತು. ಆದರೆ ಇದರ ಹಿಂದಿನ ವಿಷ ಅರಿಯದಾದಳು ಹುಡುಗಿ.

(ಪ್ರಣಯ್ ಮತ್ತು ಅಮೃತ ವರ್ಷಿನಿ)

ಸೆಪ್ಟೆಂಬರ್ 2018. ಪ್ರಣಯ್ ಮತ್ತು ಅಮೃತ ವೈದ್ಯರನ್ನು ಕಾಣಲು ಹೋಗಿದ್ದಾಗ ಆಕೆಯ ಮುಂದೆಯೇ ಪ್ರಿಯಕರ ಪ್ರಣಯ್‍ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈಯ್ಯಲಾಯಿತು. ಸುಪಾರಿ ಕೊಟ್ಟಿದ್ದು ಆಕೆಯ ತಂದೆ ಮಾರುತಿರಾವ್. ತಾಯಿಯ ಜೊತೆ ಅಮೃತ ನಡೆಸಿದ್ದ ಸಂಭಾಷಣೆಗಳೇ ಆಕೆಗೆ ಮುಳುವಾದವು. ಈ ಕರೆಗಳಿಂದ ಅಮೃತ-ಪ್ರಣಯ್ ಎಲ್ಲಿದ್ದಾರೆಂಬ ಮಾಹಿತಿ ಮಾರುತಿರಾವ್ ಮತ್ತು ಕೊಲೆಗಾರರಿಗೆ ಸಿಕ್ಕಿತ್ತು. ಮಾರುತಿರಾವ್ ಪ್ರಣಯ್‍ನನ್ನು ಕೊಲ್ಲಲು ಒಂದು ಕೋಟಿ ಸುಪಾರಿ ಕೊಟ್ಟದ್ದ. ತನ್ನ ತಂದೆತಾಯಿಯೂ ಸಹ ತನ್ನ ಮದುವೆಯನ್ನು ಒಪ್ಪಿಕೊಂಡರು, ಇನ್ನೆಲ್ಲವೂ ಸರಿಹೋಗುತ್ತದೆ ಎಂದು ಕನಸಿದ್ದಳು ಹುಡುಗಿ. ತಾನೆಣಿಸಲಾರದ ದುರಂತವಾಯಿತು ಬದುಕು. ತನ್ನ ತಂದೆಯನ್ನು ಗಲ್ಲಿಗೇರಿಸಬೇಕೆಂದು ಚೀರಿದಳು ಬಸುರಿ ಹುಡುಗಿ. ಜನವರಿ 2019ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದಳು ಅಮೃತ. ಪ್ರಣಯ್ ಅವರ ಕುಟುಂಬದ ಜೊತೆ ಅವರ ಮಗಳಾಗಿ ಜೀವನ ನಡೆಸುತ್ತಿದ್ದಾಳೆ. ಅವರ ಮನಸ್ಸು ನಿಜಕ್ಕೂ ದೊಡ್ಡದು.

ಈಗ ಜಾಮೀನಿನ ಮೇಲೆ ಹೊರಬಂದಿದ್ದ ಮಾರುತಿರಾವ್ ಹೈದರಾಬಾದಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಅಮೃತ ಬಹುಶಃ ಅಪ್ಪನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಿ ಹೀಗೆ ಮಾಡಿಕೊಂಡಿರಬಹುದು ಎಂದವಳ ದನಿಯಲ್ಲಿ ದುಗುಡ, ಹತಾಶೆಯ ಜೊತೆ ಒಂದು ಸಣ್ಣ ಆಸೆಯೂ ಇದ್ದಂತಿತ್ತು. ಮಾರುತಿರಾವ್ ತನ್ನ ಜೀವನ ಅಂತ್ಯಗೊಳಿಸಿದ್ದು ಹೈದರಾಬಾದಿನ ಆರ್ಯವೈಶ್ಯ ಭವನದ ರೂಂ ನಂಬರ್ 306ರಲ್ಲಿ! ಆತ ಎರಡು ಸಾಲಿನ ಪತ್ರ ಬರೆದಿಟ್ಟು ಹೋಗಿದ್ದಾನೆ. “ಗಿರಿಜಾ ನನ್ನು ಕ್ಷಮಿಂಚು. ತಲ್ಲಿ ಅಮೃತ ಅಮ್ಮ ದೆಗ್ಗರಿಕಿ ವೆಳ್ಳಿಪೋ” – “ಗಿರಿಜಾ (ಆತನ ಪತ್ನಿ) ನನ್ನನ್ನು ಕ್ಷಮಿಸು. ತಾಯಿ ಅಮೃತ ಅಮ್ಮನ ಬಳಿ ಹೋಗಿಬಿಡು”. ಅಮೃತಳ ಆಸೆ ಹುಸಿಯಾಗಿತ್ತು. ಮಾರುತಿರಾವ್‍ಗೆ ಸಾಯುವಾಗಲೂ ಜಾತಿಯೇ ಮುಖ್ಯವಾಗಿತ್ತು, ಆತ ಸತ್ತದ್ದು ಆರ್ಯವೈಶ್ಯ ಭವನದಲ್ಲಿ ಮತ್ತು ಆ ಕಡೆಯ ಕ್ಷಣದಲ್ಲೂ ಆತನ ಮಗಳು ದಲಿತನೊಬ್ಬನ ಮನೆಯಲ್ಲಿರುವುದು ಆತನಿಗೆ ಸಹಿಸಿಕೊಳ್ಳಲಾಗಲಿಲ್ಲ!

(ತನ್ನ ಮಗುವಿನೊಂದಿಗೆ ಅಮೃತ ವರ್ಷಿನಿ)

ಮಾರುತಿರಾವ್‍ನ ಜಾತಿ ವ್ಯಾಮೋಹ ಮತ್ತು ಹಿಂಸೆಯ ಪ್ರತಿಫಲನ ಈ ದುರಂತ ಕಥೆಗೆ ಸಮಾಜ, ಮಾಧ್ಯಮ ಸ್ಪಂದಿಸಿದ ರೀತಿಯಲ್ಲೂ ಕಾಣಬಹುದು. ಬಹುತೇಕ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಮೃತಳನ್ನು ವಿಲನ್ ಆಗಿ ಚಿತ್ರಿಸಲಾಗಿದೆ! ಟಿವಿ-9 ತೆಲುಗು ವಾಹಿನಿಯ ಪ್ರಮುಖ ಆಂಕರ್ ರಜನೀಕಾಂತ್ ವಲ್ಲೆಲಚೆರುವು ಟ್ವೀಟ್ ಮಾಡಿದ್ದಾರೆ: “ಆತನ ನೆಗೆಟಿವ್ ಗುಣಗಳನ್ನು ಪಕ್ಕಕ್ಕಿಟ್ಟರೆ, ಮಾರುತಿ ರಾವ್‍ಗೆ ಸಾಯಿಸೋ ಅಷ್ಟು ಮತ್ತು ಸತ್ತು ಹೋಗೋಷ್ಟು ಮಗಳ ಬಗ್ಗೆ ಪ್ರೀತಿ ಇತ್ತು”. ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತಲ್ಲ ಮಾರುತಿ ರಾವ್ ಪ್ರಣಯ್‍ನನ್ನು ಕೊಲ್ಲಿಸಿ ಜೈಲು ಸೇರಿದಾಗಲೇ ಆತನಿಗೆ ಅಭಿಮಾನಿ ಪೇಜುಗಳು ಹುಟ್ಟುಕೊಂಡಿದ್ದವು ಮತ್ತು ಇವರೆಲ್ಲರೂ ಆತನ ಮಗಳ ಮೇಲಿನ ಪ್ರೇಮವನ್ನೇ ಐಡಿಯಲೈಸ್ ಮಾಡುತ್ತಿದ್ದರು. ಆಗ ಇದು ಎಷ್ಟು ತಾರಕಕ್ಕೆ ಹೋಗಿತ್ತೆಂದರೆ ಅಮೃತ ತಂದೆ-ತಾಯಿಗಳು ಅವರ ಸುಖಕ್ಕೆ ಸೆಕ್ಸ್‍ನಲ್ಲಿ ಭಾಗವಹಿಸುವುದರಿಂದ ಮಕ್ಕಳಾಗುತ್ತಾರೆಯೇ ಹೊರತು ನಮ್ಮನ್ನು ಹುಟ್ಟಿಸಬೇಕೆಂದೇನೂ ಅಲ್ಲ ಅಂದಿದ್ದಳು ಮತ್ತು ಅದನ್ನು ಎಲ್ಲರೂ ಖಂಡಿಸಿ ದೊಡ್ಡ ರಾದ್ಧಾಂತ ಮಾಡಿದ್ದರು. ಮೊನ್ನೆ ಎಷ್ಟೇ ಆಗಲಿ ತಂದೆ ಅಲ್ಲವೇ ಅಮೃತ ಶವ ನೋಡಲು ಹೋದಾಗ ಜನ ಘೋಷಣೆ ಕೂಗಿ ಆಕೆಯನ್ನು ಹೊರದೂಡಿಬಿಟ್ಟರು. ಇವರೆಲ್ಲರ ಪ್ರಕಾರ ಇಡೀ ದುರಂತ ಕತೆಗೆ ಆಕೆಯೇ ಕಾರಣ! ತಂದೆತಾಯಿಯ ಪ್ರೀತಿಯನ್ನು ಮನಗಾಣದೆ, ತನ್ನ (ತೆಳು ಎಂದು ಅವರ ಭಾವನೆಯೆ?) ಪ್ರೀತಿಗೇ ಕಟ್ಟುಬಿದ್ದು ಇಡೀ ದುರಂತಕ್ಕೆ ಕಾರಣವಾಗಿಬಿಟ್ಟಳು ಎಂದು ಮಾಧ್ಯಮಗಳೂ ಹಲುಬುತ್ತಿರುವುದು ಅವರ ಜಾತಿ ಮನಸ್ಥಿತಿ ಮತ್ತು ಮುಸುಕಿಗೆ ಸ್ಪಷ್ಟ ನಿದರ್ಶನ.

ಮಾರುತಿರಾವ್‍ಗೆ ಪ್ರೀತಿ ಇದ್ದದ್ದು ತನ್ನ ಮಗಳ ಮೇಲೆಯೋ ಇಲ್ಲ ತನ್ನ ಜಾತಿ ಮತ್ತು ಅದರ ಸುತ್ತ ಆತ ಕಟ್ಟುಕೊಂಡಿದ್ದ ತಾನು ಮೇಲೆಂಬ ಹುಸಿ ಭಾವನೆಗಳಿಗೋ? ಆತ ನಿಜಕ್ಕೂ ಆತನ ಮಗಳನ್ನು ಮಾಧ್ಯಮಗಳು ಕಟ್ಟಿಕೊಡಲು ಪ್ರಯತ್ನಿಸುತ್ತಿರುವಂತೆ ಅನ್‍ಕಂಡೀಷನಲ್ ಆಗಿ ಪ್ರೀತಿಸುತ್ತಿದ್ದದ್ದೇ ನಿಜವಾದರೆ ಆಕೆಯ ಆಯ್ಕೆ ಮತ್ತು ಇಷ್ಟವನ್ನು ಗೌರವಿಸಿ ಆಕೆ ಖುಷಿಯಾಗಿರುವುದೇ ತನಗೆ ಮುಖ್ಯ ಎಂದಿರುತ್ತಿದ್ದ. ಬಸುರಿ ಮಗಳ ಮುಂದೆ ಆಕೆಯ ಗಂಡನನ್ನು ಕೊಚ್ಚಿ ಕೊಲೆಗೈಯ್ಯಿಸುತ್ತಿರಲಿಲ್ಲ. ಅದು ಮಗಳ ಮೇಲಿನ ಪ್ರೀತಿ ಅಲ್ಲ. ಅತ್ಯಂತ ಪಿತೃಪ್ರಧಾನ ರೀತಿಯಲ್ಲಿ ಆತ ಮಗಳನ್ನು ತನ್ನ ಸ್ವತ್ತು ಎಂದೇ ನೋಡಿದ್ದ. ಆತನ “ಕುಲಗೌರವ”ವನ್ನು ಆಕೆ ಹಾಳು ಮಾಡಿದಳೆಂದೆಣಿಸಿದ್ದ. ಆದರೆ ಮಗಳ ಮೇಲೆ ಕೋಪ ಬರಲಿಲ್ಲ. ಆಕೆಯನ್ನು ಈ ದಲಿತ ಹುಡುಗ ತಲೆಕೆಡಿಸಿದ್ದಾನೆ ಎಂದೆಣಿಸಿರಬೇಕು, ಆತನನ್ನು ಸಾಯಿಸಿಬಿಟ್ಟ. ಆತ ಮಗಳಿಗೆ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳಬಹುದೆಂದು ಅನ್ನಿಸಿರಲೇ ಇಲ್ಲ ಎನಿಸುತ್ತೆ. ಆಕೆಗೆ ತನ್ನ ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಮತ್ತು ಆಕೆ ಮಾಡಿದ ಆಯ್ಕೆ ಸರಿಯಾದುದಲ್ಲ, ಆಕೆಯನ್ನು ದಿಕ್ಕುತಪ್ಪಿಸಲಾಗಿದೆ ಎಂಬ ನಿರ್ಣಯಗಳು ಮಾರುತಿ ರಾವ್‍ನ ನಡವಳಿಕೆಗಳ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿವೆ. ಅದು ಮಗಳ ಬಗೆಗಿನ ಆರೋಗ್ಯಕರ ಪ್ರೀತಿ ಖಂಡಿತ ಅಲ್ಲ, ಮೀರಲಾರದ ತನ್ನ ವ್ಯರ್ಥ, ಅರ್ಥವಿಲ್ಲದ ಜಾತಿ ಮತ್ತು ಪಿತೃಪ್ರಧಾನ ಗರ್ವ ಅಷ್ಟೆ.

ಮಾರಿ ಸೆಲ್ವರಾಜ್ ಅವರ ನಿರ್ದೇಶನದ ಪರಿಯೆರುಂ ಪೆರುಮಾಳ್ ಚಿತ್ರದಲ್ಲಿ ಒಂದು ವಿಲಕ್ಷಣ ಪಾತ್ರವಿದೆ. ಮೇಲ್ಜಾತಿಯ ಮಕ್ಕಳನ್ನು ಪ್ರೀತಿಸುವ ಕೆಳಜಾತಿಯವರನ್ನು ಸಾಕ್ಷಿ ಉಳಿಯದೆ ಕೊಲ್ಲುವ ಮುದುಕನ ಪಾತ್ರ. ಚಿತ್ರದುದ್ದಕ್ಕೂ ಆತ ಅನೇಕರನ್ನು ಹೀಗೆ ಕೊಲ್ಲುತ್ತಾನೆ, “ಕುಲಗೌರವರ”ದ ಹೆಸರಿನಲ್ಲಿ. ಚಿತ್ರದ ನಾಯಕ ಪೆರುಮಾಳ್ ದಲಿತ, ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಆ ಹುಡುಗಿಯ ಸೋದರ ಸಂಬಂಧಿ ಮತ್ತು ಇಬ್ಬರೂ ಪ್ರೇಮಿಗಳ ಸಹಪಾಠಿ ಮತ್ತು ಹುಡುಗಿಯ ತಂದೆ ಇದೇ ಮುದುಕನಿಗೆ ಪೆರುಮಾಳ್‍ನನ್ನು ಕೊಲ್ಲಲು ಸುಪಾರಿ ನೀಡುತ್ತಾರೆ. ಈ ಮುದುಕ ಪೆರುಮಾಳ್‍ಗೆ ಪರಿಚಿತನೇ. ಆತನ ಸೈಕಲ್‍ನಲ್ಲೇ ಡ್ರಾಪ್ ಕೇಳಿ ಹತ್ತಿಕೊಳ್ಳುತ್ತಾನೆ. ಕಡೆಗೆ ಆತನನ್ನು ರೈಲ್ವೆಹಳಿಗಳ ಮೇಲೆ ನೂಕಿ ರೈಲಿಗೆ ತಲೆಕೊಡಿಸಿ ಕೊಲ್ಲಲೆತ್ನಿಸುತ್ತಾನೆ. ಪೆರುಮಾಳ್ ಮೊದಲ ಬಾರಿಗೆ ತಿರುಗಿ ಬಿದ್ದು ಮುದುಕ ಮತ್ತು ತನ್ನ ಸಹಪಾಠಿಗೆ ಹೊಡೆಯುತಾನೆ. ಅಷ್ಟರಲ್ಲಿ ಹುಡುಗಿಯ ತಂದೆ ಅಲ್ಲಿಗೆ ಕಾರಿನಲ್ಲಿ ಬರುತ್ತಾನೆ. ಒಂದು ಶಾಟ್‍ನಲ್ಲಿ ಕಾರೊಳಗೆ ಕೂತ ತಂದೆ, ಡಾಶ್‍ಬೋರ್ಡ್‍ನಲ್ಲಿರುವ ಮಚ್ಚು ಮತ್ತು ಹೊರಗೆ ನಿಂತಿರುವ ಪೆರುಮಾಳ್ ಇದ್ದಾರೆ. ತಂದೆ ಮಚ್ಚಿಗೆ ಕೈಹಾಕುವುದಿಲ್ಲ. ಮುದುಕ ಸೋತಿದ್ದಾನೆ, ರೈಲಿಗೆ ಎದುರು ಕೂತು ತಾನೇ ಸಾಯುತ್ತಾನೆ. ಆ ಮುದುಕ ಜಾತಿಯ ವೃಥಾ ಗರ್ವ ಮತ್ತು ಅದ ಸ್ಥಾಪಿಸಲು ಹಿಂಸೆಗೆ ಹಪಹಪಿಸುವ ಮನಸ್ಸು.

ಆದರೆ ಇವತ್ತು ಅದೇ ತಮಿಳುನಾಡಿನಲ್ಲಿ ದ್ರೌಪದಿ ಎಂಬ ಚಲನಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಲಿತ ಹುಡುಗರು “ಲವ್ ಜಿಹಾದ್”ನ ಮಾದರಿಯಲ್ಲಿ ಮೇಲ್ಜಾತಿಗಳ ಹೆಣ್ಣುಮಕ್ಕಳನ್ನು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮದುವೆ ಆಗುತ್ತಿದ್ದಾರೆ ಎಂಬಂತಹ ಕಥಾಹಂದರವಿದೆ. ಅದು ಹೇಗೆ ಈ ಚಿತ್ರ ಸೆನ್ಸಾರ್ ಆಗಿ ಬಿಡುಗಡೆಯಾಯಿತೋ ದೇವರೇ ಬಲ್ಲ. ಜಾತ್ಯಹಂಕಾರಗಳ ರುದ್ರನರ್ತನ ಇನ್ನೂ ನಡೆದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...