Homeಮುಖಪುಟಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ "ರುದ್ರ ನರ್ತನ"

ಇನ್ನೂ ನಡೆಯುತ್ತಿದೆ ಜಾತ್ಯಹಂಕಾರಗಳ “ರುದ್ರ ನರ್ತನ”

- Advertisement -
- Advertisement -

ಆಕೆಯ ಹೆಸರು ಅಮೃತ ವರ್ಷಿಣಿ. ತೆಲಂಗಾಣದ ಮಿರಿಯಾಲಗೂಡ ನಗರದ ಆರ್ಯ-ವೈಶ್ಯ ಸಮಾಜದ ಉದ್ಯಮಿ ಟಿ. ಮಾರುತಿ ರಾವ್‍ನ ಏಕೈಕ ಮಗಳು. ತಂದೆಗೆ ಮಗಳ ಮೇಲಿನ ಪ್ರೀತಿ ಸಹಜ.

(ತನ್ನ ತಂದೆ ಮಾರುತಿ ರಾವ್ ಜೊತೆಗೆ ಅಮೃತ ವರ್ಷಿನಿ)

2018ರ ಜನವರಿಯಲ್ಲಿ ಅಮೃತ ಆಕೆಯ ಸಹಪಾಠಿ ಪ್ರಣಯ್‍ ಕುಮಾರ್ ಎಂಬ ದಲಿತ ಕ್ರಿಶ್ಚಿಯನ್ ಹುಡುಗನನ್ನು ಮನೆ ಬಿಟ್ಟು ಹೋಗಿ ಮದುವೆ ಆದಳು. ಹುಡುಗರಿಬ್ಬರೂ ಪ್ರೀತಿಸುತ್ತಿದ್ದರು, ಆಕೆಯ ಮನೆಯಲ್ಲಿ ವಿರೋಧ, ಬೆದರಿಕೆಗಳು. ದಿಟ್ಟವಾಗಿ ಎದುರಿಸಿ ಹೊರನಡೆದು ಮದುವೆ ಆದಳು. ಪ್ರಣಯ್ ಅವರ ಮನೆಯವರೇ ನಿಂತು ಮದುವೆ ಮಾಡಿದರು, ಅವರ ಜೊತೆಯೇ ಜೀವನ ನಡೆಸಲಾರಂಭಿಸಿದಳು. ಕೆಲ ತಿಂಗಳಿನಲ್ಲಿ ಆಕೆ ಬಸಿರಾದಳು. ಇದೇ ಸಂದರ್ಭದಲ್ಲಿ ಆಕೆಯ ಕುಟುಂಬ ಕೈಚಾಚಿತು. ಸಹಜವಾಗಿಯೇ ಹುಡುಗಿ ತಾಯಿಯ ಆಸರೆಗೆ ಹಾತೊರೆಯಿತು. ತಾಯಿಯ ಜೊತೆ ಬಾಂಧವ್ಯ ಮತ್ತೆ ಶುರುವಾಯಿತು. ಆದರೆ ಇದರ ಹಿಂದಿನ ವಿಷ ಅರಿಯದಾದಳು ಹುಡುಗಿ.

(ಪ್ರಣಯ್ ಮತ್ತು ಅಮೃತ ವರ್ಷಿನಿ)

ಸೆಪ್ಟೆಂಬರ್ 2018. ಪ್ರಣಯ್ ಮತ್ತು ಅಮೃತ ವೈದ್ಯರನ್ನು ಕಾಣಲು ಹೋಗಿದ್ದಾಗ ಆಕೆಯ ಮುಂದೆಯೇ ಪ್ರಿಯಕರ ಪ್ರಣಯ್‍ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈಯ್ಯಲಾಯಿತು. ಸುಪಾರಿ ಕೊಟ್ಟಿದ್ದು ಆಕೆಯ ತಂದೆ ಮಾರುತಿರಾವ್. ತಾಯಿಯ ಜೊತೆ ಅಮೃತ ನಡೆಸಿದ್ದ ಸಂಭಾಷಣೆಗಳೇ ಆಕೆಗೆ ಮುಳುವಾದವು. ಈ ಕರೆಗಳಿಂದ ಅಮೃತ-ಪ್ರಣಯ್ ಎಲ್ಲಿದ್ದಾರೆಂಬ ಮಾಹಿತಿ ಮಾರುತಿರಾವ್ ಮತ್ತು ಕೊಲೆಗಾರರಿಗೆ ಸಿಕ್ಕಿತ್ತು. ಮಾರುತಿರಾವ್ ಪ್ರಣಯ್‍ನನ್ನು ಕೊಲ್ಲಲು ಒಂದು ಕೋಟಿ ಸುಪಾರಿ ಕೊಟ್ಟದ್ದ. ತನ್ನ ತಂದೆತಾಯಿಯೂ ಸಹ ತನ್ನ ಮದುವೆಯನ್ನು ಒಪ್ಪಿಕೊಂಡರು, ಇನ್ನೆಲ್ಲವೂ ಸರಿಹೋಗುತ್ತದೆ ಎಂದು ಕನಸಿದ್ದಳು ಹುಡುಗಿ. ತಾನೆಣಿಸಲಾರದ ದುರಂತವಾಯಿತು ಬದುಕು. ತನ್ನ ತಂದೆಯನ್ನು ಗಲ್ಲಿಗೇರಿಸಬೇಕೆಂದು ಚೀರಿದಳು ಬಸುರಿ ಹುಡುಗಿ. ಜನವರಿ 2019ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದಳು ಅಮೃತ. ಪ್ರಣಯ್ ಅವರ ಕುಟುಂಬದ ಜೊತೆ ಅವರ ಮಗಳಾಗಿ ಜೀವನ ನಡೆಸುತ್ತಿದ್ದಾಳೆ. ಅವರ ಮನಸ್ಸು ನಿಜಕ್ಕೂ ದೊಡ್ಡದು.

ಈಗ ಜಾಮೀನಿನ ಮೇಲೆ ಹೊರಬಂದಿದ್ದ ಮಾರುತಿರಾವ್ ಹೈದರಾಬಾದಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಅಮೃತ ಬಹುಶಃ ಅಪ್ಪನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಿ ಹೀಗೆ ಮಾಡಿಕೊಂಡಿರಬಹುದು ಎಂದವಳ ದನಿಯಲ್ಲಿ ದುಗುಡ, ಹತಾಶೆಯ ಜೊತೆ ಒಂದು ಸಣ್ಣ ಆಸೆಯೂ ಇದ್ದಂತಿತ್ತು. ಮಾರುತಿರಾವ್ ತನ್ನ ಜೀವನ ಅಂತ್ಯಗೊಳಿಸಿದ್ದು ಹೈದರಾಬಾದಿನ ಆರ್ಯವೈಶ್ಯ ಭವನದ ರೂಂ ನಂಬರ್ 306ರಲ್ಲಿ! ಆತ ಎರಡು ಸಾಲಿನ ಪತ್ರ ಬರೆದಿಟ್ಟು ಹೋಗಿದ್ದಾನೆ. “ಗಿರಿಜಾ ನನ್ನು ಕ್ಷಮಿಂಚು. ತಲ್ಲಿ ಅಮೃತ ಅಮ್ಮ ದೆಗ್ಗರಿಕಿ ವೆಳ್ಳಿಪೋ” – “ಗಿರಿಜಾ (ಆತನ ಪತ್ನಿ) ನನ್ನನ್ನು ಕ್ಷಮಿಸು. ತಾಯಿ ಅಮೃತ ಅಮ್ಮನ ಬಳಿ ಹೋಗಿಬಿಡು”. ಅಮೃತಳ ಆಸೆ ಹುಸಿಯಾಗಿತ್ತು. ಮಾರುತಿರಾವ್‍ಗೆ ಸಾಯುವಾಗಲೂ ಜಾತಿಯೇ ಮುಖ್ಯವಾಗಿತ್ತು, ಆತ ಸತ್ತದ್ದು ಆರ್ಯವೈಶ್ಯ ಭವನದಲ್ಲಿ ಮತ್ತು ಆ ಕಡೆಯ ಕ್ಷಣದಲ್ಲೂ ಆತನ ಮಗಳು ದಲಿತನೊಬ್ಬನ ಮನೆಯಲ್ಲಿರುವುದು ಆತನಿಗೆ ಸಹಿಸಿಕೊಳ್ಳಲಾಗಲಿಲ್ಲ!

(ತನ್ನ ಮಗುವಿನೊಂದಿಗೆ ಅಮೃತ ವರ್ಷಿನಿ)

ಮಾರುತಿರಾವ್‍ನ ಜಾತಿ ವ್ಯಾಮೋಹ ಮತ್ತು ಹಿಂಸೆಯ ಪ್ರತಿಫಲನ ಈ ದುರಂತ ಕಥೆಗೆ ಸಮಾಜ, ಮಾಧ್ಯಮ ಸ್ಪಂದಿಸಿದ ರೀತಿಯಲ್ಲೂ ಕಾಣಬಹುದು. ಬಹುತೇಕ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಮೃತಳನ್ನು ವಿಲನ್ ಆಗಿ ಚಿತ್ರಿಸಲಾಗಿದೆ! ಟಿವಿ-9 ತೆಲುಗು ವಾಹಿನಿಯ ಪ್ರಮುಖ ಆಂಕರ್ ರಜನೀಕಾಂತ್ ವಲ್ಲೆಲಚೆರುವು ಟ್ವೀಟ್ ಮಾಡಿದ್ದಾರೆ: “ಆತನ ನೆಗೆಟಿವ್ ಗುಣಗಳನ್ನು ಪಕ್ಕಕ್ಕಿಟ್ಟರೆ, ಮಾರುತಿ ರಾವ್‍ಗೆ ಸಾಯಿಸೋ ಅಷ್ಟು ಮತ್ತು ಸತ್ತು ಹೋಗೋಷ್ಟು ಮಗಳ ಬಗ್ಗೆ ಪ್ರೀತಿ ಇತ್ತು”. ಸಾಮಾಜಿಕ ಮಾಧ್ಯಮಗಳಲ್ಲಿ ಇವತ್ತಲ್ಲ ಮಾರುತಿ ರಾವ್ ಪ್ರಣಯ್‍ನನ್ನು ಕೊಲ್ಲಿಸಿ ಜೈಲು ಸೇರಿದಾಗಲೇ ಆತನಿಗೆ ಅಭಿಮಾನಿ ಪೇಜುಗಳು ಹುಟ್ಟುಕೊಂಡಿದ್ದವು ಮತ್ತು ಇವರೆಲ್ಲರೂ ಆತನ ಮಗಳ ಮೇಲಿನ ಪ್ರೇಮವನ್ನೇ ಐಡಿಯಲೈಸ್ ಮಾಡುತ್ತಿದ್ದರು. ಆಗ ಇದು ಎಷ್ಟು ತಾರಕಕ್ಕೆ ಹೋಗಿತ್ತೆಂದರೆ ಅಮೃತ ತಂದೆ-ತಾಯಿಗಳು ಅವರ ಸುಖಕ್ಕೆ ಸೆಕ್ಸ್‍ನಲ್ಲಿ ಭಾಗವಹಿಸುವುದರಿಂದ ಮಕ್ಕಳಾಗುತ್ತಾರೆಯೇ ಹೊರತು ನಮ್ಮನ್ನು ಹುಟ್ಟಿಸಬೇಕೆಂದೇನೂ ಅಲ್ಲ ಅಂದಿದ್ದಳು ಮತ್ತು ಅದನ್ನು ಎಲ್ಲರೂ ಖಂಡಿಸಿ ದೊಡ್ಡ ರಾದ್ಧಾಂತ ಮಾಡಿದ್ದರು. ಮೊನ್ನೆ ಎಷ್ಟೇ ಆಗಲಿ ತಂದೆ ಅಲ್ಲವೇ ಅಮೃತ ಶವ ನೋಡಲು ಹೋದಾಗ ಜನ ಘೋಷಣೆ ಕೂಗಿ ಆಕೆಯನ್ನು ಹೊರದೂಡಿಬಿಟ್ಟರು. ಇವರೆಲ್ಲರ ಪ್ರಕಾರ ಇಡೀ ದುರಂತ ಕತೆಗೆ ಆಕೆಯೇ ಕಾರಣ! ತಂದೆತಾಯಿಯ ಪ್ರೀತಿಯನ್ನು ಮನಗಾಣದೆ, ತನ್ನ (ತೆಳು ಎಂದು ಅವರ ಭಾವನೆಯೆ?) ಪ್ರೀತಿಗೇ ಕಟ್ಟುಬಿದ್ದು ಇಡೀ ದುರಂತಕ್ಕೆ ಕಾರಣವಾಗಿಬಿಟ್ಟಳು ಎಂದು ಮಾಧ್ಯಮಗಳೂ ಹಲುಬುತ್ತಿರುವುದು ಅವರ ಜಾತಿ ಮನಸ್ಥಿತಿ ಮತ್ತು ಮುಸುಕಿಗೆ ಸ್ಪಷ್ಟ ನಿದರ್ಶನ.

ಮಾರುತಿರಾವ್‍ಗೆ ಪ್ರೀತಿ ಇದ್ದದ್ದು ತನ್ನ ಮಗಳ ಮೇಲೆಯೋ ಇಲ್ಲ ತನ್ನ ಜಾತಿ ಮತ್ತು ಅದರ ಸುತ್ತ ಆತ ಕಟ್ಟುಕೊಂಡಿದ್ದ ತಾನು ಮೇಲೆಂಬ ಹುಸಿ ಭಾವನೆಗಳಿಗೋ? ಆತ ನಿಜಕ್ಕೂ ಆತನ ಮಗಳನ್ನು ಮಾಧ್ಯಮಗಳು ಕಟ್ಟಿಕೊಡಲು ಪ್ರಯತ್ನಿಸುತ್ತಿರುವಂತೆ ಅನ್‍ಕಂಡೀಷನಲ್ ಆಗಿ ಪ್ರೀತಿಸುತ್ತಿದ್ದದ್ದೇ ನಿಜವಾದರೆ ಆಕೆಯ ಆಯ್ಕೆ ಮತ್ತು ಇಷ್ಟವನ್ನು ಗೌರವಿಸಿ ಆಕೆ ಖುಷಿಯಾಗಿರುವುದೇ ತನಗೆ ಮುಖ್ಯ ಎಂದಿರುತ್ತಿದ್ದ. ಬಸುರಿ ಮಗಳ ಮುಂದೆ ಆಕೆಯ ಗಂಡನನ್ನು ಕೊಚ್ಚಿ ಕೊಲೆಗೈಯ್ಯಿಸುತ್ತಿರಲಿಲ್ಲ. ಅದು ಮಗಳ ಮೇಲಿನ ಪ್ರೀತಿ ಅಲ್ಲ. ಅತ್ಯಂತ ಪಿತೃಪ್ರಧಾನ ರೀತಿಯಲ್ಲಿ ಆತ ಮಗಳನ್ನು ತನ್ನ ಸ್ವತ್ತು ಎಂದೇ ನೋಡಿದ್ದ. ಆತನ “ಕುಲಗೌರವ”ವನ್ನು ಆಕೆ ಹಾಳು ಮಾಡಿದಳೆಂದೆಣಿಸಿದ್ದ. ಆದರೆ ಮಗಳ ಮೇಲೆ ಕೋಪ ಬರಲಿಲ್ಲ. ಆಕೆಯನ್ನು ಈ ದಲಿತ ಹುಡುಗ ತಲೆಕೆಡಿಸಿದ್ದಾನೆ ಎಂದೆಣಿಸಿರಬೇಕು, ಆತನನ್ನು ಸಾಯಿಸಿಬಿಟ್ಟ. ಆತ ಮಗಳಿಗೆ ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳಬಹುದೆಂದು ಅನ್ನಿಸಿರಲೇ ಇಲ್ಲ ಎನಿಸುತ್ತೆ. ಆಕೆಗೆ ತನ್ನ ಬಾಳಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಮತ್ತು ಆಕೆ ಮಾಡಿದ ಆಯ್ಕೆ ಸರಿಯಾದುದಲ್ಲ, ಆಕೆಯನ್ನು ದಿಕ್ಕುತಪ್ಪಿಸಲಾಗಿದೆ ಎಂಬ ನಿರ್ಣಯಗಳು ಮಾರುತಿ ರಾವ್‍ನ ನಡವಳಿಕೆಗಳ ಹಿಂದೆ ಸ್ಪಷ್ಟವಾಗಿ ಕಾಣಿಸುತ್ತಿವೆ. ಅದು ಮಗಳ ಬಗೆಗಿನ ಆರೋಗ್ಯಕರ ಪ್ರೀತಿ ಖಂಡಿತ ಅಲ್ಲ, ಮೀರಲಾರದ ತನ್ನ ವ್ಯರ್ಥ, ಅರ್ಥವಿಲ್ಲದ ಜಾತಿ ಮತ್ತು ಪಿತೃಪ್ರಧಾನ ಗರ್ವ ಅಷ್ಟೆ.

ಮಾರಿ ಸೆಲ್ವರಾಜ್ ಅವರ ನಿರ್ದೇಶನದ ಪರಿಯೆರುಂ ಪೆರುಮಾಳ್ ಚಿತ್ರದಲ್ಲಿ ಒಂದು ವಿಲಕ್ಷಣ ಪಾತ್ರವಿದೆ. ಮೇಲ್ಜಾತಿಯ ಮಕ್ಕಳನ್ನು ಪ್ರೀತಿಸುವ ಕೆಳಜಾತಿಯವರನ್ನು ಸಾಕ್ಷಿ ಉಳಿಯದೆ ಕೊಲ್ಲುವ ಮುದುಕನ ಪಾತ್ರ. ಚಿತ್ರದುದ್ದಕ್ಕೂ ಆತ ಅನೇಕರನ್ನು ಹೀಗೆ ಕೊಲ್ಲುತ್ತಾನೆ, “ಕುಲಗೌರವರ”ದ ಹೆಸರಿನಲ್ಲಿ. ಚಿತ್ರದ ನಾಯಕ ಪೆರುಮಾಳ್ ದಲಿತ, ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ. ಆ ಹುಡುಗಿಯ ಸೋದರ ಸಂಬಂಧಿ ಮತ್ತು ಇಬ್ಬರೂ ಪ್ರೇಮಿಗಳ ಸಹಪಾಠಿ ಮತ್ತು ಹುಡುಗಿಯ ತಂದೆ ಇದೇ ಮುದುಕನಿಗೆ ಪೆರುಮಾಳ್‍ನನ್ನು ಕೊಲ್ಲಲು ಸುಪಾರಿ ನೀಡುತ್ತಾರೆ. ಈ ಮುದುಕ ಪೆರುಮಾಳ್‍ಗೆ ಪರಿಚಿತನೇ. ಆತನ ಸೈಕಲ್‍ನಲ್ಲೇ ಡ್ರಾಪ್ ಕೇಳಿ ಹತ್ತಿಕೊಳ್ಳುತ್ತಾನೆ. ಕಡೆಗೆ ಆತನನ್ನು ರೈಲ್ವೆಹಳಿಗಳ ಮೇಲೆ ನೂಕಿ ರೈಲಿಗೆ ತಲೆಕೊಡಿಸಿ ಕೊಲ್ಲಲೆತ್ನಿಸುತ್ತಾನೆ. ಪೆರುಮಾಳ್ ಮೊದಲ ಬಾರಿಗೆ ತಿರುಗಿ ಬಿದ್ದು ಮುದುಕ ಮತ್ತು ತನ್ನ ಸಹಪಾಠಿಗೆ ಹೊಡೆಯುತಾನೆ. ಅಷ್ಟರಲ್ಲಿ ಹುಡುಗಿಯ ತಂದೆ ಅಲ್ಲಿಗೆ ಕಾರಿನಲ್ಲಿ ಬರುತ್ತಾನೆ. ಒಂದು ಶಾಟ್‍ನಲ್ಲಿ ಕಾರೊಳಗೆ ಕೂತ ತಂದೆ, ಡಾಶ್‍ಬೋರ್ಡ್‍ನಲ್ಲಿರುವ ಮಚ್ಚು ಮತ್ತು ಹೊರಗೆ ನಿಂತಿರುವ ಪೆರುಮಾಳ್ ಇದ್ದಾರೆ. ತಂದೆ ಮಚ್ಚಿಗೆ ಕೈಹಾಕುವುದಿಲ್ಲ. ಮುದುಕ ಸೋತಿದ್ದಾನೆ, ರೈಲಿಗೆ ಎದುರು ಕೂತು ತಾನೇ ಸಾಯುತ್ತಾನೆ. ಆ ಮುದುಕ ಜಾತಿಯ ವೃಥಾ ಗರ್ವ ಮತ್ತು ಅದ ಸ್ಥಾಪಿಸಲು ಹಿಂಸೆಗೆ ಹಪಹಪಿಸುವ ಮನಸ್ಸು.

ಆದರೆ ಇವತ್ತು ಅದೇ ತಮಿಳುನಾಡಿನಲ್ಲಿ ದ್ರೌಪದಿ ಎಂಬ ಚಲನಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಲಿತ ಹುಡುಗರು “ಲವ್ ಜಿಹಾದ್”ನ ಮಾದರಿಯಲ್ಲಿ ಮೇಲ್ಜಾತಿಗಳ ಹೆಣ್ಣುಮಕ್ಕಳನ್ನು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮದುವೆ ಆಗುತ್ತಿದ್ದಾರೆ ಎಂಬಂತಹ ಕಥಾಹಂದರವಿದೆ. ಅದು ಹೇಗೆ ಈ ಚಿತ್ರ ಸೆನ್ಸಾರ್ ಆಗಿ ಬಿಡುಗಡೆಯಾಯಿತೋ ದೇವರೇ ಬಲ್ಲ. ಜಾತ್ಯಹಂಕಾರಗಳ ರುದ್ರನರ್ತನ ಇನ್ನೂ ನಡೆದೇ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...