ಲೋಕಸಭೆ ಚುನಾವಣೆಯಲ್ಲಿ ಭಾರೀ ವಿಜಯವನ್ನು ಸಾಧಿಸಿದ ಬಿಜೆಪಿ 2018-19ರ ಈ ಎರಡು ವರ್ಷಗಳಲ್ಲಿ ನಡೆದ ಹಲವು ರಾಜ್ಯ ಚುನಾವಣೆಗಳಲ್ಲಿ ಮಾತ್ರ ಮುಗ್ಗರಿಸುತ್ತಾ ಬಂದಿದೆ. ಮೇಘಾಲಯ, ಮಿಝೋರಾಂ, ತ್ರಿಪುರ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಂಡ್ನಂತಹ ಸಣ್ಣ ಪುಟ್ಟ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕಷ್ಟಪಟ್ಟು ಆಪರೇಷನ್ ಕಮಲದ ಮೂಲಕ ಕರ್ನಾಟಕ ಗೆದ್ದರೆ ಮಹಾರಾಷ್ಟ್ರವನ್ನು ಕಳೆದುಕೊಂಡಿತು. ಇದೇ ಸಂದರ್ಭದಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡ ಮತ್ತು ಜಾರ್ಖಂಡ್ ರಾಜ್ಯಗಳು ಕೂಡ ಬಿಜೆಪಿಯಿಂದ ಕೈಜಾರಿವೆ. ಇನ್ನು 2020ಕ್ಕೆ ಮತ್ತೆ ಮೂರು ಕಡೆ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಲ್ಲಿಯೂ ಸಹ ಬಿಜೆಪಿಗೆ ಸಿಹಿಗಿಂತ ಕಹಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿಯೂ ಮುಗ್ಗರಿಸಲಿದೆ ಬಿಜೆಪಿ. ಹೀಗೆ ಹೇಳಲು ಕಾರಣಗಳಿವೆ…
2020ರ ಫೆಬ್ರವರಿಯಲ್ಲಿ ದೆಹಲಿ, ಜೂನ್ಗೆ ಪಾಂಡಿಚೇರಿ ಮತ್ತು ನವೆಂಬರ್ಗೆ ಬಿಹಾರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಳು ಜರುಗಲಿವೆ. ಹಾಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಕಾರದಲ್ಲಿದ್ದರೆ, ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವಿದೆ. ಇನ್ನು ಪುಟ್ಟ ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರವಿದೆ.
ದೆಹಲಿ:
ರಾಷ್ಟ್ರದ ರಾಜಧಾನಿಯಾಗಿರುವ ದೆಹಲಿ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಳೆದಬಾರಿ ಒಟ್ಟು 70 ಕ್ಷೇತ್ರಗಳಲ್ಲಿ 67ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ 70ಕ್ಕೆ 70ನ್ನು ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿದೆ. ನಾವು ದೆಹಲಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕ್ರಾಂತಿಕಾರಿ ಕೆಲಸಗಳೇ ನಮ್ಮನ್ನು ಜಯಶೀಲರನ್ನಾಗಿಸುತ್ತವೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. ಉತ್ತಮ ಸರ್ಕಾರಿ ಶಾಲೆಗಳು, ಮೊಹಲ್ಲಾ ಕ್ಲಿನಿಕ್ಗಳು, ಉಚಿತ ವಿದ್ಯುತ್, ನೀರು, ವೈಫೈ, ಮಹಿಳೆಯರಿಗೆ ಮೆಟ್ರೊ ಪ್ರಯಾಣ, ಮನೆಬಾಗಿಲಿಗೆ 50ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು.. ಹೀಗೆ ದೊಡ್ಡ ಪಟ್ಟಿಯೇ ಅವರ ಬಳಿ ಇದೆ. ಪಾಂಚ್ಸಾಲ್ ಕೇಜ್ರಿವಾಲ್ ಎಂಬ ಘೋಷಣೆಯಂತೆ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎನ್ನುವ ಆತ್ಮವಿಶ್ವಾಸ ಅವರದ್ದು..

ಆದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 7ಕ್ಕೆ 7 ಸ್ಥಾನಗಳಲ್ಲಿಯೂ ಆಮ್ ಆದ್ಮಿ ಪಕ್ಷ ಹೀನಾಯವಾಗಿ ಸೋತಿದೆ. ಅಧಿಕಾರ ದುರುಪಯೋಗ ನಡೆದಿದೆ. ಮಾಲಿನ್ಯ ನಿಯಂತ್ರಣದಲ್ಲಿ ಆಪ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಗಾಗಿ ಜನ ಈ ಬಾರಿ ಆಪ್ಗೆ ಬುದ್ದಿ ಕಲಿಸುತ್ತಾರೆ ಮತ್ತು ಬಿಜೆಪಿ ಬೆಂಬಲಿಸುತ್ತಾರೆ ಎನ್ನುವುದು ಬಿಜೆಪಿಯ ವಾದ. ಇನ್ನು ದೆಹಲಿಯಲ್ಲಿ ಒಂದು ಕಾಲದಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ಕಾಂಗ್ರೆಸ್ ಇಲ್ಲಿ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸುವಂತ ವಾತವಾರವಣವಿದೆ. ಹಾಗಾಗಿ ಈ ಬಾರಿ ಆಪ್ 70ಕ್ಕೆ 70 ಸ್ಥಾನಗಳನ್ನು ಗೆಲ್ಲದಿದ್ದರೂ ಸಹ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ.
ಜನರು ವಿಧಾನಸಭಾ ಚುನಾವಣೆಗಳಲ್ಲಿ ಸ್ಥಳೀಯ ಅಥವಾ ಪ್ರಾದೇಶಿಕ ಪಕ್ಷಗಳನ್ನು, ಕೇಂದ್ರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಹೊಸ ವಿಧಾನವೊಂದು ಹಲವಾರು ರಾಜ್ಯಗಳಲ್ಲಿ ಕಾಣುತ್ತಿದ್ದು ದೆಹಲಿಯಲ್ಲಿಯೂ ಅದೇ ಮರುಕಳಿಸಬಹುದು. ಇನ್ನು ಆಪ್ ಪರವಾಗಿ ಫಲಿತಾಂಶ ಬರಲಿದೆ ಎಂಬುದಕ್ಕೆ ಮೊತ್ತೊಂದು ಬಲವಾದ ಕಾರಣವೆಂದರೆ ಚುನಾವಣಾ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಈ ಬಾರಿ ಆಪ್ ಬೆನ್ನಿಗೆ ನಿಂತಿದ್ದಾರೆ. ಆಪ್ನ ಚುನಾವಣಾ ತಂತ್ರ ಎಣೆಯಲು ಒಪ್ಪಂದ ಮಾಡಿಕೊಂಡಿರುವ ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. 7 ತಿಂಗಳ ಹಿಂದೆಯಷ್ಟೇ ಆಂಧ್ರ ಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿಯ ಪರ ಕೆಲಸ ಮಾಡಿ ಅವರಿಗೆ ಭಾರೀ ಬಹುಮತ ಸಿಗಲು ಸಹಾಯ ಮಾಡಿದ್ದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ಬಿಜೆಪಿಗೆ ಮುಳವಾಗಬಹುದು ಎನ್ನಲಾಗುತ್ತಿದೆ.
ಬಿಹಾರ:
ದೊಡ್ಡ ರಾಜ್ಯ ಬಿಹಾರದಲ್ಲಿ 2015ರಲ್ಲಿ ನಡೆದಿದ್ದ ಚುನಾವಣೆ ನಡೆದಿದ್ದು, ಲಾಲುಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಪಕ್ಷವು, ನಿತೀಶ್ ಕುಮಾರ್ರವರ ಜೆಡಿಯು ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ಸಹ ಈ ಮಹಾಘಟಬಂಧನ್ಗೆ ಕೈಜೋಡಿಸಿತ್ತು. ಒಟ್ಟು 243 ಕ್ಷೇತ್ರಗಳಲ್ಲಿ ಆರ್ಜೆಡಿ ಸ್ಪರ್ಧಿಸಿದ್ದ 101ರಲ್ಲಿ 80 ಜಯ, ಜೆಡಿಯು ಸ್ಪರ್ಧಿಸಿದ್ದ 101ರಲ್ಲಿ 71 ಜಯ ಮತ್ತು ಕಾಂಗ್ರೆಸ್ ಸ್ಪರ್ಧಿಸಿದ್ದ 41ರಲ್ಲಿ 27ಜಯದೊಂದಿಗೆ ಮಹಾಘಟಬಂಧನ್ ಭಾರೀ ಬಹುಮತ ಗಳಿಸಿತ್ತು. ಜೆಡಿಯುನ ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರೆ ಆರ್ಜೆಡಿಯ ಲಾಲು ಪುತ್ರ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದರು. ಈ ಮಹಾಘಟಬಂಧನ್ಗೂ ಕೂಡ ಕೆಲಸ ಮಾಡಿದ್ದು ಅದೇ ಪ್ರಶಾಂತ್ ಕಿಶೋರ್ ಆಗಿದ್ದರು.

ಆದರೆ 2017ರಲ್ಲಿ ಮಹಾಘಟಬಂಧನ್ಗೆ ಕೈಕೊಟ್ಟ ನಿತೀಶ್ಕುಮಾರ್ ಬಿಜೆಪಿಯೊಡನೆ ಕೈಜೋಡಿಸಿ ಸರ್ಕಾರ ರಚಿಸಿದರು. 159 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 53 ಕ್ಷೇತ್ರಗಳಲ್ಲಿ ಮಾತ್ರ ಜಯಿಸಿತ್ತು. 71 ಸ್ಥಾನ ಗೆದ್ದಿದ್ದ ಜೆಡಿಯುನ ನಿತೀಶ್ ಕುಮಾರ್ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಮುಂದುವರಿದರೆ ಬಿಜೆಪಿಯ ಸುಶೀಲ್ ಕುಮಾರ್ ಮೋದಿ ಉಪಮುಖ್ಯಮಂತ್ರಿಯಾದರು. ಇದೇ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಜೆಡಿಯು ಪಕ್ಷ ಸೇರಿ ಅದರ ರಾಷ್ಟ್ರೀಯ ಉಪಾಧ್ಯಕ್ಷರಾದರು.
ಆದರೀಗ ಬಿಹಾರದ ಜೆಡಿಯು ಮತ್ತು ಬಿಜೆಪಿ ಮೈತ್ರಿ ನಡುವೆ ಬಿರುಕುಗಳು ಮೂಡಿವೆ. ಯಾವಾಗ ಕೇಂದ್ರ ಸರ್ಕಾರ ಸಿಎಎ ಅಂಗೀಕರಿಸಿ, ಎನ್ಆರ್ಸಿ ಪ್ರಸ್ತಾಪವಿಟ್ಟಿತೋ ಆಗಿನಿಂದಲೂ ಜೆಡಿಯು ಒಳಗಿನಿಂದ ಪ್ರಶಾಂತ್ ಕಿಶೋರ್ ಇದನ್ನು ಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಪಕ್ಷ ಎರಡೂ ಸದನಗಳಲ್ಲಿ ಸಿಎಎ ಪರವಾಗಿ ಮತ ಹಾಕಿದ್ದಕ್ಕೆ ಕೋಪಗೊಂಡಿರುವ ಅವರು ಪಕ್ಷಕ್ಕೆ ರಾಜೀನಾಮೆ ನೀಡಲು ಸಹ ಮುಂದಾಗಿದ್ದರು. ಕೊನೆಗೆ ನಿತೀಶ್ ಕುಮಾರ್ ಇವರನ್ನು ಸಮಾಧಾನ ಮಾಡಿದ್ದಲ್ಲದೇ ಸಿಎಎ ಮತ್ತು ಎನ್ಆರ್ಸಿಯನ್ನು ಬಿಹಾರದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಕಿಶೋರ್ ಈ ಭಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚಿನ ಸೀಟುಗಳು ಜೆಡಿಯು ದಕ್ಕಬೇಕು ಎಂದು ಹಠ ಹಿಡಿದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 50-50% ಆಧಾರದಲ್ಲಿ ಬಿಜೆಪಿ, ಜೆಡಿಯು ಮತ್ತು ಲೋಕಜನಶಕ್ತಿ ಪಕ್ಷಗಳು ಸ್ಪರ್ಧಿಸಿ ಪ್ರಚಂಡ ಜಯ ಗಳಿಸಿದ್ದವು. ಈಗ ಚುನಾವಣೆಗೆ ಇನ್ನು 8-9 ತಿಂಗಳು ಇರುವಾಗಲೇ ಸೀಟು ಹಂಚಿಕೆಯ ವಿಷಯಕ್ಕೆ ಕೈಹಾಕಿರುವ ಕಿಶೋರ್ ಶೇ.50ಕ್ಕಿಂತ ಹೆಚ್ಚಿನ ಸೀಟುಗಳು ಬೇಕೆಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯ ಸುಶೀಲ್ಕುಮಾರ್ ಮೋದಿ ಅಂಕಿ-ಸಂಖ್ಯೆಗಳನ್ನಿಟ್ಟುಕೊಂಡು ಬ್ಯುಸಿನೆಸ್ ಮಾಡುವವರಿಗೆ ರಾಜಕೀಯ ಏನು ಗೊತ್ತು ಎಂದು ಕಿಚಾಯಿಸಿದ್ದಾರೆ.

ಪ್ರಶಾಂತ್ ಕಿಶೋರ್ ಪ್ರತಿಕ್ರಿಯಿಸಿ ಸೋತವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೀವಿ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಮಹಾಘಟಬಂಧನ್ನ ಕಾಂಗ್ರೆಸ್ ಮತ್ತು ಆರ್ಜೆಡಿ ಮುಖಂಡರು ದೇಶ ಒಡೆಯುವ ಬಿಜೆಪಿ ಜೊತೆ ಮೈತ್ರಿ ಬೇಕೆ ಯೋಚಿಸಿ, ಮಹಾಘಟಬಂಧನ್ಗೆ ವಾಪಸ್ ಬರುವುದಾದರೆ ಮುಕ್ತ ಸ್ವಾಗತವಿದೆ ಎಂದು ಜೆಡಿಯು ನಿತೀಶ್ಕುಮಾರ್ಗೆ ಆಹ್ವಾನ ನೀಡಿದ್ದಾರೆ. ಇದೆಲ್ಲವೂ ಯೋಜಿತ ಆಟವಾಗಿದ್ದು ನಿತೀಶ್ ಬಿಜೆಪಿ ಕೈಬಿಟ್ಟು ಘಟಬಂಧನ್ ಜೊತೆಗೂಡಿ ಎಲೆಕ್ಷನ್ ಎದುರಿಸುತ್ತಾರೆ ಎನ್ನಲಾಗುತ್ತಿದೆ. ಹಾಗೆನಾದರೂ ಆದಲ್ಲಿ ಮತ್ತೆ ಮಹಾಘಟಬಂಧನ್ ಬಹುಮತ ಪಡೆಯುವುದು ನಿಶ್ಚಿತ… ಅವರಿಗೆ ಪೊಲಿಟಿಕಲ್ ಅಡ್ವೈಸರ್ ಆಗಿ ಪ್ರಶಾಂತ್ ಕಿಶೋರ್ ಇರಲಿದ್ದಾರೆ.
ಪಾಂಡಿಚೇರಿ:
ಕೇವಲ 30 ವಿಧಾನಸಭಾ ಕ್ಷೇತ್ರಗಳುಳ್ಳ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷ 17 ಸ್ಥಾನಗಳಿಸಿ ಆಡಳಿತದಲ್ಲಿದ್ದರೆ ಎಐಎನ್ಆರ್ಸಿ 8 ಸ್ಥಾನ ಗೆಲ್ಲುವ ಮೂಲಕ ಪ್ರತಿಪಕ್ಷದಲ್ಲಿದೆ. ಶೂನ್ಯ ಸಂಪಾದಿಸಿರುವ ಬಿಜೆಪಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿಯೂ ಕೇವಲ 2.4% ನಷ್ಟೆ ಮತಗಳನ್ನು ಗಳಿಸಲು ಸಾಧ್ಯವಾಗಿದೆ ಅಂದ ಮೇಲೆ ಚುನಾವಣೆ ಗೆಲ್ಲುವುದು ಕನಸಿನ ಮಾತಾಗಿದೆ.
ಒಟ್ಟಿನಲ್ಲಿ 2020 ಬಿಜೆಪಿ ಪಾಲಿಗೆ ಕಷ್ಟವಾಗಲಿದೆ ಎಂಬುದನ್ನು ಅಂಕಿ ಅಂಶಗಳು ಹೇಳುತ್ತಿವೆ. ಇನ್ನು ಮುಂದಿನ ವರ್ಷ 2021ಕ್ಕೆ ಬಿಜೆಪಿಗೆ ಇನ್ನೂ ಕಷ್ಟವಾಗಬಹದು. ಈಗ ಎನ್ಆರ್ಸಿ ವಿಷಯಕ್ಕೆ ಹೊತ್ತಿ ಉರಿಯುತ್ತಿರುವ ಅಸ್ಸಾಂನಲ್ಲಿ, 370ನೇ ವಿಧಿ ರದ್ದಾಗಿರುವ ಜಮ್ಮು ಕಾಶ್ಮೀರದಲ್ಲಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಗ ಚುನಾವಣೆಗಳು ನಡೆಯಲಿದ್ದು ಎಲ್ಲಿಯೂ ಬಿಜೆಪಿ ಅಧಿಕಾರದ ಹತ್ತಿರ ಸಹ ಸುಳಿಯುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಅದನ್ನು ಮೀರಿ ಬದಲಾವಣೆ ಸಂಭವಿಸಬಹುದೆ ಎಂಬುದನ್ನು ಕಾದು ನೋಡಬೇಕಿದೆ.
(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)


