“ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಷ್ಟ್ರೀಯ ಪ್ರಶಸ್ತಿಯ ಹಣವನ್ನು ಸಂವಿಧಾನ ಓದು ಅಭಿಯಾನಕ್ಕೆ ಬಳಸುವೆ” ಎಂದು ಜಸ್ಟೀಸ್ ಎಚ್.ಎನ್.ನಾಗಮೋಹನ ದಾಸ್ ತಿಳಿಸಿದರು.
ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ’ನಾನು ಗೌರಿ.ಕಾಮ್’ನೊಂದಿಗೆ ಮಾತನಾಡಿದ ಅವರು, “ಕೆಲವು ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಲಿದೆ. ಕೆಲವರಿಗೆ ಕೆಲವು ಪ್ರಶಸ್ತಿಗಳನ್ನು ನೀಡುವುದರಿಂದ ವ್ಯಕ್ತಿಗಳ ಗೌರವ ಹೆಚ್ಚಾಗುತ್ತದೆ. ನನ್ನಂಥ ಸಾಧಾರಣ ನ್ಯಾಯಾಧೀಶನನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡುತ್ತಿರುವುದು ನನ್ನ ಪಾಲಿಗೆ ಮಹತ್ತರವಾದ ದಿನ. ಇದಕ್ಕಿಂತ ಹೆಚ್ಚು ನಾನು ಆಪೇಕ್ಷಿಸುವುದೂ ಇಲ್ಲ. ಈ ಪ್ರಶಸ್ತಿಯಿಂದಾಗಿ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಕಾಯಕ ಚಳವಳಿಯ ಸಂದೇಶವನ್ನು, ವಚನ ಚಳವಳಿಯ ಸಂದೇಶವನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸುವ ಕೆಲಸವನ್ನು ನಾನು ಮಾಡಬೇಕಾಗಿದೆ” ಎಂದು ಹೇಳಿದರು.
“ಇಂದು ಎಂತಹ ಪರಿಸ್ಥಿತಿ ಇದೆ ಎಂದರೆ ಬಸವಣ್ಣನವರ ಫೋಟೋ ಹಾಕಿಕೊಂಡು ವಚನ ಹೇಳುತ್ತಾರೆ. ಆದರೆ ವಚನ ಸಂದೇಶ ಪಾಲಿಸುವುದಿಲ್ಲ. ಜನಹಿತಕ್ಕೆ ಶರಣಾಗಬೇಕಾದವರು, ಜಾತಿಹಿತಕ್ಕೆ ಶರಣಾಗಿ ಹೋದರು. ನಮ್ಮ ಜಾತಿಯವರನ್ನು ಎಂಎಲ್ಎ, ಎಂ.ಪಿ., ಮುಖ್ಯಮಂತ್ರಿ ಮಾಡಿ, ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಬೇಡಿ, ನಮ್ಮ ಫರ್ಮಾನುಗಳಿಗೆ ನೀವು ಗೌರವ ಕೊಡದಿದ್ದರೆ ನಿಮಗೆ ಬುದ್ಧಿ ಕಲಿಸುತ್ತೇವೆ. ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಧಮ್ಕಿ ಹಾಕುವ ಪರಿಸ್ಥಿತಿ ಈಗ ಇದೆ. ಯಾವ ಸ್ವಾಮೀಜಿಗಳ ಬಗ್ಗೆ ಗೌರವ ಇಟ್ಟುಕೊಂಡು, ನಂಬಿಕೆ ಇಟ್ಟುಕೊಂಡು ಮಹಾತ್ಮರು ಎಂದು ತಿಳಿದುಕೊಂಡಿದ್ದೆವೆಯೋ ಅಂತಹ ಸ್ವಾಮೀಜಿಗಳು ನಮ್ಮನ್ನು ನಿರಾಶೆಗೊಳಿಸಿದರು. ಏಕೆ ಹೀಗೆ ಸ್ವಾಮೀಜಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ತುಂಬಾ ನೊಂದಿಕೊಂಡಿದ್ದೆ. ಅಂತಹ ಸನ್ನಿವೇಶದಲ್ಲಿ ವಚನಗಳನ್ನು ಓದಿಕೊಂಡು ಅರ್ಥಮಾಡಿಕೊಂಡು ಅದರಂತೆ ಬದುಕಿ ಮಾದರಿಯಾದಂತಹ ಒಬ್ಬ ದಾರ್ಶನಿಕ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಹೆಸರಿನ ಪ್ರಶಸ್ತಿ ಬಂದಿರುವುದು ನನ್ನ ಸೌಭಾಗ್ಯ” ಎಂದು ಸಂತಸ ವ್ಯಕ್ತಪಡಿಸಿದರು.
“ಅಡ್ಡಪಲ್ಲಕ್ಕಿಯನ್ನು ತೊರೆದು, ಪಾದಪೂಜೆಯನ್ನು ನಿರಾಕರಿಸಿದ ಸಿದ್ಧಲಿಂಗ ಸ್ವಾಮೀಜಿ, ಇಡೀ ಮಠ ಸಂಸ್ಕೃತಿಗೆ ಹೊಸ ತೋರಣ ಕಟ್ಟಿದವರು; ಅದಕ್ಕೆ ಹೊಸ ತಾತ್ಪರ್ಯವನ್ನು ಬರೆದವರು. ಮಠಾಧೀಶರ ಮಡಿವಂತಿಕೆಯನ್ನು ದೂರ ಸರಿಸಿ ಎಲ್ಲ ಜಾತಿಯ, ಧರ್ಮದ ಜನರ ಹತ್ತಿರವಾಗಿ ಸಾಮಾನ್ಯರಲ್ಲಿ, ಸಾಮಾನ್ಯರಾಗಿ ಬಾಳಿದರು. ಕನ್ನಡಪರ ಕೆಲಸ, ಗಡಿ ಕೆಲಸ, ನಾಡಿನ ಪರಿಸರ ಸಂರಕ್ಷಣೆಯ ಕೆಲಸ ಮಾಡಿದರು. ಭ್ರಷ್ಟಾಚಾರದ ವಿರುದ್ಧ, ಕೋಮುವಾದದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದರು. ಎಲ್ಲ ಧರ್ಮದ ಜನರ ನಡುವೆ ಭಾವೈಕ್ಯತೆಯನ್ನು ಬೆಳೆಸಿದರು. ಅಂತಹ ಮಹಾನ್ ಚಿಂತಕ, ಕ್ರಾಂತಿಕಾರಿ ಎಂದರೆ ತೋಂಟದ ಸಿದ್ಧಲಿಂಗ ಸ್ವಾಮೀಜಿ. ಅಂತಹ ಮಹಾತ್ಮರ ಹೆಸರಲ್ಲಿ ನನಗೆ ಪ್ರಶಸ್ತಿ ಬಂದಿರುವುದಕ್ಕಿಂತ ಸಂತೋಷದ ಸಂಗತಿ ಮತ್ತೊಂದಿಲ್ಲ. ಈ ಪ್ರಶಸ್ತಿಯ ಹಣವನ್ನು ಸತ್ಕಾರ್ಯಕ್ಕೆ ಬಳಸಲು ನಿರ್ಧರಿಸಿದ್ದೇನೆ. ಈ ಹಣವನ್ನು ಸಂವಿಧಾನ ಓದು ಅಭಿಯಾನಕ್ಕೆ ಬಳಸಲು ತೀರ್ಮಾನಿಸಿದ್ದೇನೆ” ಎಂದರು.
ಇದನ್ನೂ ಓದಿರಿ: ಕರ್ನಾಟಕದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಭಾಷಣ ಸ್ವೀಕಾರಾರ್ಹವೇ?
“ನನಗೆ ಬರುವ ಪಿಂಚಣಿ ಹಣವೇ ಜೀವನಕ್ಕೆ ಸಾಕು” ಎನ್ನುವ ಜಸ್ಟೀಸ್ ನಾಗಮೋಹನ ದಾಸ್ ಅವರು ಇದುವರೆಗೂ ಬಂದಿರುವ ಪ್ರಶಸ್ತಿಗಳ ಹಣವನ್ನು ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಬೀದರ್ನ ಬಸವ ಪ್ರಶಸ್ತಿ, ಮುರುಘಾ ಮಠದ ಜಯದೇವ ಪ್ರಶಸ್ತಿ, ಮಂಡ್ಯದ ಮಾದೇಗೌಡರ ಪ್ರಶಸ್ತಿ… ಹೀಗೆ ಬಂದ ಅನೇಕ ಪ್ರಶಸ್ತಿಗಳ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಅವರು ಈ ಹಿಂದೆಯೂ ಬಳಸಿದ್ದಾರೆ.
“ಸಂವಿಧಾನ ಓದು ಅಭಿಯಾನ ಹೇಗೆ ನಡೆಯುತ್ತಿದೆ?” ಎಂದು ಅವರಲ್ಲಿ ಕೇಳಿದಾಗ, “ಸಂವಿಧಾನ ಓದು ಅಭಿಯಾನವನ್ನು ನಿರಂತರವಾಗಿ ಮೂರು ವರ್ಷಗಳಿಂದ ನಡೆಸಲಾಗುತ್ತಿದೆ. ಕೊರೊನಾ ಇದ್ದರೂ ಚಿಂತಿಸದೆ ಆನ್ಲೈನ್ ಮೂಲಕ ಅಭಿಯಾನವನ್ನು ನಡೆಸಿದ್ದೇವೆ. ಪ್ರತಿ ತಿಂಗಳು ಸುಮಾರು 20 ಕಾರ್ಯಕ್ರಮ ನಡೆಸಲಾಗಿದೆ. ಈಗಲೂ ಆನ್ಲೈನ್ನಲ್ಲಿ ಕಾರ್ಯಕ್ರಮ ಮುಂದುವರಿದಿದೆ. ಕೊರೊನಾ ಕಡಿಮೆಯಾಗಿರುವುದರಿಂದ ಆಹ್ವಾನ ಬಂದಿವೆ. ಹೋಗಲು ಆರಂಭಿಸಿದ್ದೇನೆ. ‘ಸಂವಿಧಾನ ಓದು’ ಕೃತಿಯ ಸುಮಾರು 2 ಲಕ್ಷ ಪ್ರತಿಗಳು ಮಾರಾಟವಾಗಿವೆ. ಈ ಕೃತಿ ಇಂಗ್ಲಿಷ್, ಹಿಂದಿಗೆ ಭಾಷಾಂತರವಾಗಿದೆ. ಮಲಯಾಳಂಗೂ ತರ್ಜುಮೆಯಾಗಿದ್ದು, ಬಿಡುಗಡೆಯಾಗಬೇಕಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿ ಯುವಜನರು ಕಾರ್ಯಕ್ರಮ ಕೇಳಿದ್ದಾರೆ. ಎಲ್ಲ ಜನವರ್ಗವೂ ಈ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಕೇಳಿಕೊಳ್ಳುತ್ತಿದೆ. ಮಠಗಳಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಹೀಗೆ ಸಂವಿಧಾನ ಓದು ಅಭಿಯಾನ ಮುಂದುವರಿದಿದೆ” ಎಂದರು.
ಸಮಸಮಾಜದ ನಿರ್ಮಾಣಕ್ಕಾಗಿ ಜೀವನವಿಡೀ ಸೇವೆ ಸಲ್ಲಿಸಿದ ಗದುಗಿನ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ ಮೂರನೇ ವರ್ಷದ ಸ್ಮರಣೆ ಅಂಗವಾಗಿ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಪ್ರಶಸ್ತಿ ಪ್ರದಾನ, ಸಂಮಾನ ಗ್ರಂಥಗಳ ಬಿಡುಗಡೆ ಸಮಾರಂಭವನ್ನು ಅಕ್ಟೋಬರ್ 16ರಂದು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 16ರಂದು ಗದಗದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಪ್ರಶಸ್ತಿ ಫಲಕದೊಂದಿಗೆ 5 ಲಕ್ಷ ರೂ. ನಗದು ಪುರಸ್ಕಾರವನ್ನು ಜಸ್ಟೀಸ್ ನಾಗಮೋಹನ ದಾಸ್ ಅವರಿಗೆ ನೀಡಲಾಗುತ್ತಿದೆ.
ಇದನ್ನೂ ಓದಿರಿ: ತೋಂಟದ ಸಿದ್ಧಲಿಂಗಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಜಸ್ಟೀಸ್ ನಾಗಮೋಹನ ದಾಸ್ ಆಯ್ಕೆ



Shubhavagali,
Justice sahebarige prashasti needirudarinda bahala santoshavaagide,
Avara ” samvidhana vodu chaluvali” bagge bahala aasakti moodide , ei mahattara chaluvaliya bhaaga vaagi deshada seve maadalichesuttene eidara bagge maahiti kodabekendu kelikolluttene.
Shubhavagali,
Justice sahebarige prashasti needirudarinda bahala santoshavaagide,
Avara ” samvidhana vodu abhiyana” bagge bahala aasakti moodide , ei mahattara abhiyaanada bhaaga vaagi deshada seve maadalichesuttene eidara bagge maahiti kodabekendu kelikolluttene.