Homeಮುಖಪುಟಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ.

- Advertisement -
- Advertisement -

2017ರವರೆಗೆ ಸೆಪ್ಟೆಂಬರ್ 5 ಎಂದರೆ ನನಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ನೆನಪಾಗುತ್ತಿತ್ತು. ಅಲ್ಲಿಂದೀಚೆಗೆ ಸೆಪ್ಟಂಬರ್ 5 ಎಂದರೆ ಗೌರಿಯನ್ನು ನಾವು ಕಳಕೊಂಡ ದಿನವಾಗಿ, ನಮ್ಮಿಂದ ಗೌರಿಯನ್ನು ಕಿತ್ತುಕೊಂಡ ದಿನವಾಗಿ, ಪ್ರಜಾಪ್ರಭುತ್ವ ದೇಶದಲ್ಲಿ ಮೂಲಭೂತ ಹಕ್ಕುಗಳಲ್ಲಿ ಬರುವ ವಾಕ್ ಸ್ವಾತಂತ್ಯದ ದಮನದ ದಿನವಾಗಿ ಮತ್ತು ಬಲಪಂಥೀಯ ಮೂಲಭೂತವಾದಿ ಮನಸ್ಸುಗಳು ಜಾತ್ಯತೀತ ಮತ್ತು ವೈಚಾರಿಕ ಪ್ರಜ್ಞೆಗಳ ಮೇಲೆ ಸಾಧಿಸಲೆಳಸಿದ ಪ್ರಭುತ್ವದ ಸಂಕೇತವಾಗಿ ಕಂಡುಬರುತ್ತದೆ. ನಮ್ಮಂತವರ ಮೇಲೆ ಪ್ರಭುತ್ವವನ್ನು ಹೇರಿ ಸಾಧಿಸುವ ಅವರ ಪ್ರಯತ್ನವು ಪ್ರಯತ್ನ ಮಾತ್ರವೇ ಹೊರತು ಅದು ವಿಜಯವಲ್ಲ ಎಂಬುದನ್ನು 2017ರಿಂದ ಗೌರಿಯ ಅಸಂಖ್ಯಾತ ಸ್ನೇಹಿತರು, ಬಂಧುಗಳು ಮತ್ತು ಅಭಿಮಾನಿಗಳು ಪ್ರಭುತ್ವಕ್ಕೆ ಸಾಬೀತು ಪಡಿಸಿದ್ದೇವೆ; ಮುಂದೆಯೂ ಅದೇ ಸಂದೇಶ ನೀಡುವವರಿದ್ದೇವೆ.

ನನ್ನ ಪ್ರಕಾರ ಗೌರಿಯ ನೆನಪು ಹಂಚಿಕೊಳ್ಳುವುದೆಂದರೆ ಅಮೂರ್ತಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಂತೆ; ಕುರುಡರು ಆನೆ ಕಂಡು ವಿವರಿಸಿದಂತೆ; ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ, ಅವರವರ ತೆಕ್ಕೆಗೆ ದಕ್ಕಿದಂತೆ. ಆದರೆ ಅವಷ್ಟೇ ಅಲ್ಲ, ಅದರಾಚೆಗೆ ಗೌರಿಯ ವ್ಯಕ್ತಿತ್ವ ಗೋಚರಿಸುತ್ತದೆ. ನನ್ನ ಗ್ರಹಿಕೆಗೆ ಗೌರಿ ಲಂಕೇಶ್ ಎಟುಕಿದ್ದಾಳೆ ಎಂಬುದೇ ಅಹಂಕಾರ ಎನಿಸಿಬಿಡುವ ಸ್ಥಿತಿ ಇದು.

Photo Credit: New Indian Express

ಗೌರಿಯ ಜೊತೆಗಿನ ಸಂವಾದ ಎಂದರೆ ಅದೊಂದು ಪ್ರವಾಸದಂತೆ. ಅಲ್ಲಿ ನಾನು ಕಂಡ, ಕೇಳಿದ, ಗ್ರಹಿಸಬಹುದಾದ ಸಂಗತಿಗಳಿದ್ದಂತೆ, ನನ್ನ ಎಲ್ಲೆ ದಾಟಿದ ಹತ್ತು ಹಲವು ವಿಷಯಗಳಿರುತ್ತಿದ್ದವು. ಸಪ್ತಸಾಗರದಾಚೆಗಿನ ನವನವೀನ ಸಂಗತಿಗಳು, ವ್ಯಕ್ತಿಗಳು, ಅವರ ಸಾಧನೆಗಳು ಹೀಗೇ…… ವಿಚಾರ ಸ್ಫುರಿಸಿದಂತೆ ಅತ್ಯಂತ ವೇಗವಾಗಿ ಗೌರಿ ಮಾತಾಡುತ್ತಿದ್ದರೆ, ಅವಳ ಮಾತುಗಳನ್ನು ಗ್ರಹಿಸಲು ಓಡೋಡಿ ದಣಿಯುವ ಸಂದರ್ಭಗಳು ಇದ್ದವು. ಆ ದಣಿವಿನಲ್ಲಿ ಒಂದು ಖುಷಿ ಇತ್ತು. ಕರ್ನಾಟಕದ ಮಾತ್ರವಲ್ಲ, ದೇಶದ ಅನೇಕ ಚಿಂತಕರು, ಹೋರಾಟಗಾರರು ನನಗೆ ಪರಿಚಿತರಾದುದು, ಕೆಲವರ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುವಂತಾದುದು ಗೌರಿಯಿಂದ. ದೇಶ-ವಿದೇಶಗಳ ಸುದ್ದಿ-ವ್ಯಕ್ತಿಗಳ ಕುರಿತು ಹಾಗೂ ಸ್ಥಳೀಯ, ಪ್ರಾಂತೀಯ ಸುದ್ದಿ-ವ್ಯಕ್ತಿಗಳ ಕುರಿತು ಗೌರಿಯ ಸ್ಪಂದನೆಯಲ್ಲಿ ವ್ಯತ್ಯಾಸವಿರಲಿಲ್ಲ. ಹೀಗಾಗಿ ಅವಳ ಜೊತೆಗಿನ ಸಂವಾದ ಎಂದರೆ ಅದೊಂದು ಸುಖಕರ, ಕುತೂಹಲಕರ, ರೋಮಾಂಚಕ ಅನುಭವ ನೀಡುವ ಪ್ರಯಾಣವಾಗಿರುತ್ತಿತ್ತು.

ಗೌರಿ ಒಂದು ಸೂಜಿಗಲ್ಲಾಗಿ ನಮ್ಮ ನಡುವೆ ಇದ್ದಳು. ತನ್ನ ಅಯಸ್ಕಾಂತೀಯ ಗುಣದಿಂದ ಎಲ್ಲರನ್ನೂ ತನ್ನೆಡೆ ತನ್ನ ಧ್ಯೇಯ, ಕಾಳಜಿ ಮತ್ತು ಕರ್ತೃತ್ವ ಶಕ್ತಿಯಿಂದ ಸೆಳೆಯುತ್ತಿದ್ದಳು. ಅದೇ ವೇಳೆಗೆ ತನ್ನ ಗುಣವನ್ನು ಹತ್ತಿರಕ್ಕೆ ಬಂದವರ ಮೇಲೂ ಬೀರಿ ಸಣ್ಣ ಸಣ್ಣ ಗುಂಪುಗಳಾಗಿ, ಬಿಡಿಬಿಡಿ ವ್ಯಕ್ತಿತ್ವಗಳಾಗಿ, ಘಟಕಗಳಾಗಿ ಚಲನಶೀಲರಾಗಿದ್ದವರ ನಡುವೆ ಬಂಧುತ್ವದ ಬೆಸುಗೆಯನ್ನು ಹಾಕಿದ್ದಳು. ಆಕೆ ಬಿತ್ತಿದ ಪ್ರೀತಿಯ ಬೀಜ ಅಪಾರ. ಹೋದಲ್ಲೆಲ್ಲಾ ಅವಳದು ಇದೇ ಕಾಯಕ. ಗೌರಿಯ ಪ್ರೀತಿಯ ತೋಟದಲ್ಲಿ ಹಲವು ಸಸಿಗಳು. ತನ್ನ ಪರಿಚಯಕ್ಕೆ ಬಂದ ಒಬ್ಬೊಬ್ಬರ ಕುರಿತೂ ಕಾಳಜಿ, ಪ್ರೀತಿಯ ಮಳೆ ಸುರಿಸಿದಾಕೆ. ರೋಹಿತ್ ವೇಮುಲಾ ನನ್ನ ಒಬ್ಬ ಮಗ; ಇನ್ನೊಬ್ಬ ಮಗ ಕನ್ಹಯ್ಯ ಎಂದು ಎಲ್ಲರೊಡನೆ ಗೌರಿ ಸಂಭ್ರಮದಿಂದ ಹೇಳುತ್ತಿದ್ದಳು. ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್ ಅವರೂ ಅವಳ ಪ್ರೀತಿಯ ತೋಟದ ಸಸಿಗಳೇ. ಯುವ ಪೀಳಿಗೆಯೊಂದು ದೇಶಾದ್ಯಂತ ಹುಟ್ಟಿಸಿದ ಕ್ರಾಂತಿಯ ಕಿಡಿ ಮತ್ತು ಅಲೆಗಳನ್ನು ನೋಡಿ ಸಂಭ್ರಮಿಸಿದಾಕೆ. ಅದಕ್ಕಾಗಿ ದೆಹಲಿವರೆಗೆ ಹೋಗಿ ಅವರೊಡನೆ ಮಾತಾಡಿ, ತನ್ನ ಬೆಂಬಲ ಸೂಚಿಸಿ ಬಂದುದು ಅವಳ ಕಾಳಜಿಯ ಗಾಂಭೀರ್ಯಕ್ಕೆ ಸಾಕ್ಷಿಯಾಗಿದೆ.

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ. ಅವಳಿಗೆ ಇದರ ವಾಸನೆ ಬಡಿದಿರಲಿಲ್ಲ ಎಂದಲ್ಲ; ಆದರೆ ಈ ಬೆದರಿಕೆ ಕೊಲೆವರೆಗೆ ತಲುಪೀತು ಎಂದು ಅವಳಾದರೂ ಯಾಕೆ, ನಾವೂ ಊಹಿಸಿರಲಿಲ್ಲ. ಬಲಪಂಥೀಯರ ಕುತ್ಸಿತ ಮತ್ತು ಅಸಹನಶೀಲತೆಗೆ, ಕ್ರೌರ್ಯದ ಅಟ್ಟಹಾಸಕ್ಕೆ ಗೌರಿ ಮೊದಲಿನವಳೂ ಅಲ್ಲ, ಕೊನೆಯವಳೂ ಅಲ್ಲ ಎಂಬುದು ಚರಿತ್ರೆಯನ್ನು ಅರಿತವರಿಗೆಲ್ಲ ತಿಳಿದ ಸಂಗತಿ.

ಗೌರಿ ಇನ್ನಿಲ್ಲವಾದ ಸುದ್ದಿ ಬಿತ್ತರವಾದಾಗ ನಾನು ವಿಜಯಪುರದಲ್ಲಿದ್ದೆ. ಮರುದಿನ ಸಿಂಡಿಕೇಟ್ ಸಭೆ ನಿರ್ಣಯವಾಗಿತ್ತು. ಅದನ್ನು ಇತರರಿಗೆ ವಹಿಸಿಕೊಟ್ಟು ಬೆಂಗಳೂರಿಗೆ ದೌಡಾಯಿಸಿದೆವು. ಗೌರಿಯನ್ನು ಗಾಜಿನ ಪೆಟ್ಟಿಗೆಯಲ್ಲಿ ಕಂಡು ಕೊನೆ ನಮಸ್ಕಾರ ತಿಳಿಸಿ ಬಂದದ್ದಾಯಿತು. ಇದನ್ನು ನೆನಪಿಸಿಕೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದು ಮುಂದೊಂದು ವಾರದಲ್ಲಿ ನಡೆದ ‘ನಾನು ಗೌರಿ’ ಉದ್ಘೋಷದ ಪ್ರತಿಭಟನಾ ರ್ಯಾಲಿಯು ದೇಶದ ಮೂಲೆ ಮೂಲೆಯಿಂದ ಸ್ವಯಂಪ್ರೇರಿತರಾಗಿ ಬಂದ ‘ಗೌರಿಯರ ಮಹಾಸಾಗರ’ವು ವ್ಯವಸ್ಥೆಗೆ ಅದಕ್ಕೂ ಹಿರಿದಾಗಿ ಬಲಪಂಥೀಯರಿಗೆ ದೊಡ್ಡ ಸಂದೇಶವನ್ನು ನೀಡಿತು. ಒಬ್ಬ ಗೌರಿಯನ್ನು ಕೊಂದರೆ ಸಾವಿರಾರು ಗೌರಿಯರು ನಾವು ಇದ್ದೀವಿ ಎಂಬ ಸವಾಲನ್ನು ಹಾಕಿತು; ಗೌರಿಯ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸಲು, ಅವಳ ಆದರ್ಶದ ಹಾದಿಯಲ್ಲಿ ಮುನ್ನೆಡೆಯಲು, ವ್ಯವಸ್ಥೆಯ ಲೋಪಗಳಿಗೆ ಮೌನಿಯಾಗಿರುವವರಲ್ಲ, ನಮ್ಮ ಸ್ಪಷ್ಟ ದನಿಯನ್ನು, ಗಟ್ಟಿದನಿಯನ್ನು ನಾವು ಇನ್ನು ಮುಂದೆಯೂ ನೀಡುವವರೆ; ಆ ಮೂಲಕ ನಮ್ಮಿಂದ ಕಿತ್ತುಕೊಂಡ ಗೌರಿಯನ್ನು ಅಜರಾಮರಗೊಳಿಸುತ್ತೇವೆ; ನಮ್ಮ ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತೇವೆ ಎಂದು ಸಾರಿದ ಸಮಾವೇಶವದು. ಗೌರಿಯ ಅವ್ವ ಮತ್ತು ತಂಗಿಯು ಈ ಗೌರಿ ಬಳಗ ಕಂಡು ಭಾವುಕವಾದ ಕ್ಷಣಕ್ಕೆ ಸಮಾವೇಶ ಸಾಕ್ಷಿಯಾಯಿತು.

ಎರಡನೆಯದು ತುಂಬ ತಡವಾಗಿ ನನ್ನ ಅರಿವಿಗೆ ಬಂದ ಸಂಗತಿ. ನಾನು ವಿಜಯಪುರದಿಂದ ಬೆಂಗಳೂರಿಗೆ ಸೆಪ್ಟಂಬರ್ 5ರ ಅಪರಾತ್ರಿ ಓಡೋಡಿ ಬಂದರೆ, ಅತ್ತ ಅವಳ ಕೊಲೆಗಾರನೆಂಬ ಅಪಾದಿತ ವಾಗ್ಮೋರೆ ತಾನು ಗುರಿಯಿಟ್ಟ ಗುಂಡು ಗೌರಿಯನ್ನು ಘಾಸಿಗೊಳಿಸಿತೋ ಇಲ್ಲವೋ, ಅವಳು ಕೊಲೆಯಾದಳೋ ಇಲ್ಲವೋ ಎಂಬುದು ತಿಳಿಯದೆ, ಅಪರಾಧ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದ ದಿಗ್ಬಾಂತಿಯಲ್ಲಿ ತಲೆ ಮರೆಸಿಕೊಂಡು ವಿಜಯಪುರದತ್ತ ಹೊರಟ್ಟಿದ್ದ!. ವಿಜಯಪುರದ ಹತ್ತಿರದ ಸಿಂಧಗಿ ಎಂಬುದು ಆತನ ಊರು ಎಂದು ತಿಳಿದಾಗ ಮೈಯೆಲ್ಲಾ ಮತ್ತೆ ಜುಮ್ಮೆಂದಿತ್ತು. ಕಾಂಗ್ರೆಸ್ ಸರಕಾರ ಮತ್ತು ಅದರಲ್ಲೂ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಆಸ್ಥೆ ತೆಗೆದುಕೊಂಡ ಕಾರಣದಿಂದ ಜಗತ್ತಿಗೇ ಗೊತ್ತಿದ್ದ ಸತ್ಯಕ್ಕೆ ನ್ಯಾಯಾಲಯ ಅಪೇಕ್ಷಿಸುವ ಸಾಕ್ಷ್ಯಾಧಾರಗಳು ದೊರೆಯುವಂತಾಯಿತು. ಇನ್ನು ಅಪರಾಧಿಗಳಿಗೆ ಶಿಕ್ಷೆ ನೀಡುವಂತಹ ದಿನ ಬಂದೀತೇ ಎಂಬುದು ಯಕ್ಷಪ್ರಶ್ನೆ. ಇಷ್ಟೆಲ್ಲಾ ಪ್ರಯತ್ನಗಳು ‘ಸಾಧನ’ಗಳನ್ನು ಬಯಲಿಗಿಡಬಹುದೇ ಹೊರತು ಅದರ ಹಿಂದಿನ ಸೈದ್ಧಾಂತಿಕತೆಯ ರೂವಾರಿಗಳನ್ನು ಮುಟ್ಟಲಾಗದ ಅಪಾಯಕಾರಿ ವರ್ತಮಾನ ನಮ್ಮದು ಎಂಬುದೇ ನಮ್ಮ ದುಗುಡ.

Photo Credit: Janta Ka Reporter

ಗೌರಿಯನ್ನು ಕಳೆದುಕೊಂಡ ಈ ಮೂರು ವರ್ಷಗಳಲ್ಲಿ ಅವಳ ಆಶಯವವನ್ನು ಸಾಕಾರಗೊಳಿಸಲು ನಾವು ಮಾಡಿದ ಕೆಲಸಗಳ ಹೆಜ್ಜೆ ಗುರುತು ಕೂಡ ಮುಖ್ಯ. ಸೂತ್ರಹರಿದ ಗಾಳಿಪಟದಂತೆ ನಾವೆಲ್ಲ ಚೆಲ್ಲಾಪಿಲ್ಲಿ ಆಗಿಬಿಡ್ತೀವೇನೋ ಎಂಬ ಭಯವಿತ್ತು. ಆರಂಭಕಾಲದ ನಮ್ಮ ರೋಷ ದಿನಕಳೆದಂತೆ ಮೊನಚು ಕಳೆದುಕೊಂಡಿತೇನೋ ಎಂಬ ಅಳುಕು ಚುಚ್ಚುತ್ತಿತ್ತು. ಆದರೆ ಗೌರಿಯನ್ನು ಅಜರಾಮರಗೊಳಿಸಲು ಇದುವರೆಗೆ ನಡೆಸಿದ ಕೆಲಸಗಳು ಗುರುತರವೆಂಬಂತೆ ಕಾಣತೊಡಗಿದೆ. ‘ನಾನುಗೌರಿ’ ಪತ್ರಿಕೆಯನ್ನು ನಿರಂತರ ಹೊರತರುವ ಯತ್ನದಲ್ಲಿ ಎದುರಿಸಿರುವ ಹಲವಾರು ಸಂಕಷ್ಟಗಳು ವಾಸ್ತವವಾದರೂ ಆ ಕಷ್ಟಗಳೇ ನಮ್ಮೊಳಗೆ ಐಕ್ಯತೆಯ ಅಂಟಿಗೆ ಕಾರಣವೂ ಆಗಿವೆ. ಆ ಕಷ್ಟಗಳೇ ಪತ್ರಿಕೆಗೆ ಗೌರಿಯ ಬಂಧುಗಳಿಂದ ನಿರಂತರವಾಗಿ ಲೇಖನಗಳನ್ನು ತರಿಸಿಕೊಳ್ಳುವ ಯಶಸ್ಸಿಗೆ ಕಾರಣವಾಗಿವೆ. ಓದುಗ ವಲಯವನ್ನು ಮರಳಿ ಕಟ್ಟುವ ಸವಾಲನ್ನು, ಹೊಸ ಆರ್ಥಿಕ ಬಿಕ್ಕಟ್ಟುಗಳು, ಕೊರೋನಾ ವಿಪತ್ತು ಪತ್ರಿಕೆಗೆ ಹೊಸ ಹೊಸ ಸಂಕಷ್ಟಗಳನ್ನು ಒಡ್ಡಿವೆ. ಇಂತಹ ಇಕ್ಕಟ್ಟು-ಬಿಕ್ಕಟ್ಟುಗಳೇ, ಸವಾಲುಗಳೇ ಹೊಸ ಶೋಧಕ್ಕೆ ಮನುಷ್ಯರನ್ನು ಪ್ರೇರಿಸುತ್ತವೆ/ ಪ್ರೇರಿಸಿವೆ; ಬದುಕಿನ ಸಾಧನೆಯ ನಿರಂತರತೆಗೆ ದಾರಿ ತೋರುತ್ತವೆ/ ತೋರಿವೆ.

ಗೌರಿ ಇದ್ದಾಗಲೇ ‘ನಾವು ಗೆಳತಿಯರ ಸುಭದ್ರ ಗುಂಪನ್ನು ಕಟ್ಟಬೇಕು, ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು’ ಎಂದು ಆಗಾಗ ಹೇಳುತ್ತಿದ್ದಳು. ಇನ್ನೊಂದು ‘ನಾನು ಇರುವಾಗಲೇ ಈ ಪತ್ರಿಕೆಯನ್ನು ಟ್ರಸ್ಟ್‌ನ ಅಡಿಯಲ್ಲಿ ತರಬೇಕು, ಸಾಮುದಾಯಿಕ ಒಡೆತನದಲ್ಲಿ ಇದು ನಡೆಯುವಂತಾಗಬೇಕು’ ಎನ್ನುತ್ತಿದ್ದಳು. ಮೊದಲನೆಯದು ಇದುವರೆಗೂ ನಡೆಯಲಿಲ್ಲ. ಎರಡನೆಯದು ಬೇರೆ ನೆಲೆಯಲ್ಲಿ ಊರ್ಜಿತಕ್ಕೆ ಬಂದಿದೆ.

ಮೊನ್ನೆ ಭೇಟಿಯಾದ ಡಾ.ವಾಸು, ನರಸಿಂಹಮೂರ್ತಿ ಮತ್ತು ಸುನಿಲ್ ಶಿರಸಂಗಿ ಇವರುಗಳು ಹೊಸ ಕಾಲದ ಮಾಧ್ಯಮದ ವಿಸ್ತರಣೆಯ ಕನಸುಗಳನ್ನು ನಮ್ಮೊಡನೆ ಹಂಚಿಕೊಂಡರು. ಅದಕ್ಕಾಗಿ ವಿಸ್ತಾರವಾದ ಓದುಗರ ವೇದಿಕೆಯನ್ನು ನಿರ್ಮಿಸಿಕೊಳ್ಳುವ ಸಾಧ್ಯತೆಗಳನ್ನು ಮುಂದಿಟ್ಟರು. ಅದಕ್ಕಾಗಿ ಕಳೆದ ಆರು ತಿಂಗಳಿನಿಂದ ನಡೆಸಿದ ಸಭೆಗಳು, ಚರ್ಚೆಗಳು, ಸಿದ್ದತೆಗಳ ಕುರಿತು ವಿವರಿಸಿದರು. ಇದೊಂದು ಮಾದರಿಯಾದ ವೇದಿಕೆ ಮಾತ್ರವಲ್ಲ; ವರ್ತಮಾನದ ಜರೂರಿನ ವೇದಿಕೆ.

ಈಗ ವಿಶೇಷ ಸಂಚಿಕೆಗಳಿಗೆ ಸ್ಥಳೀಯ ಮತ್ತು ದೇಶೀಯ ಮಟ್ಟದ, ಅದರಾಚೆಗೆ ಅಂತರಾಷ್ಟ್ರೀಯ ನೆಲೆಯ ಬರಹಗಾರರು ಬರೆಯುತ್ತಿರುವುದನ್ನು ನೋಡುತ್ತಿದ್ದೇನೆ. ಅದೇ ರೀತಿ ವಿಸ್ತಾರ ಓದುಗ ವಲಯದಲ್ಲೂ ಬರುವ ದಿನಗಳು ಕಾಣುತ್ತಿವೆ. ಗೌರಿಯ ನೆನಪಲ್ಲಿ, ನೆಪದಲ್ಲಿ, ಇದು ಹುಟ್ಟುತ್ತಿರುವುದು ತುಂಬಾ ಮೌಲಿಕವೂ ಸ್ತುತ್ಯರ್ಹವೂ ಆದ ಕೆಲಸವಾಗಿದೆ.


ಇದನ್ನು ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...