Homeಮುಖಪುಟಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ.

- Advertisement -
- Advertisement -

2017ರವರೆಗೆ ಸೆಪ್ಟೆಂಬರ್ 5 ಎಂದರೆ ನನಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ನೆನಪಾಗುತ್ತಿತ್ತು. ಅಲ್ಲಿಂದೀಚೆಗೆ ಸೆಪ್ಟಂಬರ್ 5 ಎಂದರೆ ಗೌರಿಯನ್ನು ನಾವು ಕಳಕೊಂಡ ದಿನವಾಗಿ, ನಮ್ಮಿಂದ ಗೌರಿಯನ್ನು ಕಿತ್ತುಕೊಂಡ ದಿನವಾಗಿ, ಪ್ರಜಾಪ್ರಭುತ್ವ ದೇಶದಲ್ಲಿ ಮೂಲಭೂತ ಹಕ್ಕುಗಳಲ್ಲಿ ಬರುವ ವಾಕ್ ಸ್ವಾತಂತ್ಯದ ದಮನದ ದಿನವಾಗಿ ಮತ್ತು ಬಲಪಂಥೀಯ ಮೂಲಭೂತವಾದಿ ಮನಸ್ಸುಗಳು ಜಾತ್ಯತೀತ ಮತ್ತು ವೈಚಾರಿಕ ಪ್ರಜ್ಞೆಗಳ ಮೇಲೆ ಸಾಧಿಸಲೆಳಸಿದ ಪ್ರಭುತ್ವದ ಸಂಕೇತವಾಗಿ ಕಂಡುಬರುತ್ತದೆ. ನಮ್ಮಂತವರ ಮೇಲೆ ಪ್ರಭುತ್ವವನ್ನು ಹೇರಿ ಸಾಧಿಸುವ ಅವರ ಪ್ರಯತ್ನವು ಪ್ರಯತ್ನ ಮಾತ್ರವೇ ಹೊರತು ಅದು ವಿಜಯವಲ್ಲ ಎಂಬುದನ್ನು 2017ರಿಂದ ಗೌರಿಯ ಅಸಂಖ್ಯಾತ ಸ್ನೇಹಿತರು, ಬಂಧುಗಳು ಮತ್ತು ಅಭಿಮಾನಿಗಳು ಪ್ರಭುತ್ವಕ್ಕೆ ಸಾಬೀತು ಪಡಿಸಿದ್ದೇವೆ; ಮುಂದೆಯೂ ಅದೇ ಸಂದೇಶ ನೀಡುವವರಿದ್ದೇವೆ.

ನನ್ನ ಪ್ರಕಾರ ಗೌರಿಯ ನೆನಪು ಹಂಚಿಕೊಳ್ಳುವುದೆಂದರೆ ಅಮೂರ್ತಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಂತೆ; ಕುರುಡರು ಆನೆ ಕಂಡು ವಿವರಿಸಿದಂತೆ; ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ, ಅವರವರ ತೆಕ್ಕೆಗೆ ದಕ್ಕಿದಂತೆ. ಆದರೆ ಅವಷ್ಟೇ ಅಲ್ಲ, ಅದರಾಚೆಗೆ ಗೌರಿಯ ವ್ಯಕ್ತಿತ್ವ ಗೋಚರಿಸುತ್ತದೆ. ನನ್ನ ಗ್ರಹಿಕೆಗೆ ಗೌರಿ ಲಂಕೇಶ್ ಎಟುಕಿದ್ದಾಳೆ ಎಂಬುದೇ ಅಹಂಕಾರ ಎನಿಸಿಬಿಡುವ ಸ್ಥಿತಿ ಇದು.

Photo Credit: New Indian Express

ಗೌರಿಯ ಜೊತೆಗಿನ ಸಂವಾದ ಎಂದರೆ ಅದೊಂದು ಪ್ರವಾಸದಂತೆ. ಅಲ್ಲಿ ನಾನು ಕಂಡ, ಕೇಳಿದ, ಗ್ರಹಿಸಬಹುದಾದ ಸಂಗತಿಗಳಿದ್ದಂತೆ, ನನ್ನ ಎಲ್ಲೆ ದಾಟಿದ ಹತ್ತು ಹಲವು ವಿಷಯಗಳಿರುತ್ತಿದ್ದವು. ಸಪ್ತಸಾಗರದಾಚೆಗಿನ ನವನವೀನ ಸಂಗತಿಗಳು, ವ್ಯಕ್ತಿಗಳು, ಅವರ ಸಾಧನೆಗಳು ಹೀಗೇ…… ವಿಚಾರ ಸ್ಫುರಿಸಿದಂತೆ ಅತ್ಯಂತ ವೇಗವಾಗಿ ಗೌರಿ ಮಾತಾಡುತ್ತಿದ್ದರೆ, ಅವಳ ಮಾತುಗಳನ್ನು ಗ್ರಹಿಸಲು ಓಡೋಡಿ ದಣಿಯುವ ಸಂದರ್ಭಗಳು ಇದ್ದವು. ಆ ದಣಿವಿನಲ್ಲಿ ಒಂದು ಖುಷಿ ಇತ್ತು. ಕರ್ನಾಟಕದ ಮಾತ್ರವಲ್ಲ, ದೇಶದ ಅನೇಕ ಚಿಂತಕರು, ಹೋರಾಟಗಾರರು ನನಗೆ ಪರಿಚಿತರಾದುದು, ಕೆಲವರ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುವಂತಾದುದು ಗೌರಿಯಿಂದ. ದೇಶ-ವಿದೇಶಗಳ ಸುದ್ದಿ-ವ್ಯಕ್ತಿಗಳ ಕುರಿತು ಹಾಗೂ ಸ್ಥಳೀಯ, ಪ್ರಾಂತೀಯ ಸುದ್ದಿ-ವ್ಯಕ್ತಿಗಳ ಕುರಿತು ಗೌರಿಯ ಸ್ಪಂದನೆಯಲ್ಲಿ ವ್ಯತ್ಯಾಸವಿರಲಿಲ್ಲ. ಹೀಗಾಗಿ ಅವಳ ಜೊತೆಗಿನ ಸಂವಾದ ಎಂದರೆ ಅದೊಂದು ಸುಖಕರ, ಕುತೂಹಲಕರ, ರೋಮಾಂಚಕ ಅನುಭವ ನೀಡುವ ಪ್ರಯಾಣವಾಗಿರುತ್ತಿತ್ತು.

ಗೌರಿ ಒಂದು ಸೂಜಿಗಲ್ಲಾಗಿ ನಮ್ಮ ನಡುವೆ ಇದ್ದಳು. ತನ್ನ ಅಯಸ್ಕಾಂತೀಯ ಗುಣದಿಂದ ಎಲ್ಲರನ್ನೂ ತನ್ನೆಡೆ ತನ್ನ ಧ್ಯೇಯ, ಕಾಳಜಿ ಮತ್ತು ಕರ್ತೃತ್ವ ಶಕ್ತಿಯಿಂದ ಸೆಳೆಯುತ್ತಿದ್ದಳು. ಅದೇ ವೇಳೆಗೆ ತನ್ನ ಗುಣವನ್ನು ಹತ್ತಿರಕ್ಕೆ ಬಂದವರ ಮೇಲೂ ಬೀರಿ ಸಣ್ಣ ಸಣ್ಣ ಗುಂಪುಗಳಾಗಿ, ಬಿಡಿಬಿಡಿ ವ್ಯಕ್ತಿತ್ವಗಳಾಗಿ, ಘಟಕಗಳಾಗಿ ಚಲನಶೀಲರಾಗಿದ್ದವರ ನಡುವೆ ಬಂಧುತ್ವದ ಬೆಸುಗೆಯನ್ನು ಹಾಕಿದ್ದಳು. ಆಕೆ ಬಿತ್ತಿದ ಪ್ರೀತಿಯ ಬೀಜ ಅಪಾರ. ಹೋದಲ್ಲೆಲ್ಲಾ ಅವಳದು ಇದೇ ಕಾಯಕ. ಗೌರಿಯ ಪ್ರೀತಿಯ ತೋಟದಲ್ಲಿ ಹಲವು ಸಸಿಗಳು. ತನ್ನ ಪರಿಚಯಕ್ಕೆ ಬಂದ ಒಬ್ಬೊಬ್ಬರ ಕುರಿತೂ ಕಾಳಜಿ, ಪ್ರೀತಿಯ ಮಳೆ ಸುರಿಸಿದಾಕೆ. ರೋಹಿತ್ ವೇಮುಲಾ ನನ್ನ ಒಬ್ಬ ಮಗ; ಇನ್ನೊಬ್ಬ ಮಗ ಕನ್ಹಯ್ಯ ಎಂದು ಎಲ್ಲರೊಡನೆ ಗೌರಿ ಸಂಭ್ರಮದಿಂದ ಹೇಳುತ್ತಿದ್ದಳು. ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್ ಅವರೂ ಅವಳ ಪ್ರೀತಿಯ ತೋಟದ ಸಸಿಗಳೇ. ಯುವ ಪೀಳಿಗೆಯೊಂದು ದೇಶಾದ್ಯಂತ ಹುಟ್ಟಿಸಿದ ಕ್ರಾಂತಿಯ ಕಿಡಿ ಮತ್ತು ಅಲೆಗಳನ್ನು ನೋಡಿ ಸಂಭ್ರಮಿಸಿದಾಕೆ. ಅದಕ್ಕಾಗಿ ದೆಹಲಿವರೆಗೆ ಹೋಗಿ ಅವರೊಡನೆ ಮಾತಾಡಿ, ತನ್ನ ಬೆಂಬಲ ಸೂಚಿಸಿ ಬಂದುದು ಅವಳ ಕಾಳಜಿಯ ಗಾಂಭೀರ್ಯಕ್ಕೆ ಸಾಕ್ಷಿಯಾಗಿದೆ.

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ. ಅವಳಿಗೆ ಇದರ ವಾಸನೆ ಬಡಿದಿರಲಿಲ್ಲ ಎಂದಲ್ಲ; ಆದರೆ ಈ ಬೆದರಿಕೆ ಕೊಲೆವರೆಗೆ ತಲುಪೀತು ಎಂದು ಅವಳಾದರೂ ಯಾಕೆ, ನಾವೂ ಊಹಿಸಿರಲಿಲ್ಲ. ಬಲಪಂಥೀಯರ ಕುತ್ಸಿತ ಮತ್ತು ಅಸಹನಶೀಲತೆಗೆ, ಕ್ರೌರ್ಯದ ಅಟ್ಟಹಾಸಕ್ಕೆ ಗೌರಿ ಮೊದಲಿನವಳೂ ಅಲ್ಲ, ಕೊನೆಯವಳೂ ಅಲ್ಲ ಎಂಬುದು ಚರಿತ್ರೆಯನ್ನು ಅರಿತವರಿಗೆಲ್ಲ ತಿಳಿದ ಸಂಗತಿ.

ಗೌರಿ ಇನ್ನಿಲ್ಲವಾದ ಸುದ್ದಿ ಬಿತ್ತರವಾದಾಗ ನಾನು ವಿಜಯಪುರದಲ್ಲಿದ್ದೆ. ಮರುದಿನ ಸಿಂಡಿಕೇಟ್ ಸಭೆ ನಿರ್ಣಯವಾಗಿತ್ತು. ಅದನ್ನು ಇತರರಿಗೆ ವಹಿಸಿಕೊಟ್ಟು ಬೆಂಗಳೂರಿಗೆ ದೌಡಾಯಿಸಿದೆವು. ಗೌರಿಯನ್ನು ಗಾಜಿನ ಪೆಟ್ಟಿಗೆಯಲ್ಲಿ ಕಂಡು ಕೊನೆ ನಮಸ್ಕಾರ ತಿಳಿಸಿ ಬಂದದ್ದಾಯಿತು. ಇದನ್ನು ನೆನಪಿಸಿಕೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದು ಮುಂದೊಂದು ವಾರದಲ್ಲಿ ನಡೆದ ‘ನಾನು ಗೌರಿ’ ಉದ್ಘೋಷದ ಪ್ರತಿಭಟನಾ ರ್ಯಾಲಿಯು ದೇಶದ ಮೂಲೆ ಮೂಲೆಯಿಂದ ಸ್ವಯಂಪ್ರೇರಿತರಾಗಿ ಬಂದ ‘ಗೌರಿಯರ ಮಹಾಸಾಗರ’ವು ವ್ಯವಸ್ಥೆಗೆ ಅದಕ್ಕೂ ಹಿರಿದಾಗಿ ಬಲಪಂಥೀಯರಿಗೆ ದೊಡ್ಡ ಸಂದೇಶವನ್ನು ನೀಡಿತು. ಒಬ್ಬ ಗೌರಿಯನ್ನು ಕೊಂದರೆ ಸಾವಿರಾರು ಗೌರಿಯರು ನಾವು ಇದ್ದೀವಿ ಎಂಬ ಸವಾಲನ್ನು ಹಾಕಿತು; ಗೌರಿಯ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸಲು, ಅವಳ ಆದರ್ಶದ ಹಾದಿಯಲ್ಲಿ ಮುನ್ನೆಡೆಯಲು, ವ್ಯವಸ್ಥೆಯ ಲೋಪಗಳಿಗೆ ಮೌನಿಯಾಗಿರುವವರಲ್ಲ, ನಮ್ಮ ಸ್ಪಷ್ಟ ದನಿಯನ್ನು, ಗಟ್ಟಿದನಿಯನ್ನು ನಾವು ಇನ್ನು ಮುಂದೆಯೂ ನೀಡುವವರೆ; ಆ ಮೂಲಕ ನಮ್ಮಿಂದ ಕಿತ್ತುಕೊಂಡ ಗೌರಿಯನ್ನು ಅಜರಾಮರಗೊಳಿಸುತ್ತೇವೆ; ನಮ್ಮ ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತೇವೆ ಎಂದು ಸಾರಿದ ಸಮಾವೇಶವದು. ಗೌರಿಯ ಅವ್ವ ಮತ್ತು ತಂಗಿಯು ಈ ಗೌರಿ ಬಳಗ ಕಂಡು ಭಾವುಕವಾದ ಕ್ಷಣಕ್ಕೆ ಸಮಾವೇಶ ಸಾಕ್ಷಿಯಾಯಿತು.

ಎರಡನೆಯದು ತುಂಬ ತಡವಾಗಿ ನನ್ನ ಅರಿವಿಗೆ ಬಂದ ಸಂಗತಿ. ನಾನು ವಿಜಯಪುರದಿಂದ ಬೆಂಗಳೂರಿಗೆ ಸೆಪ್ಟಂಬರ್ 5ರ ಅಪರಾತ್ರಿ ಓಡೋಡಿ ಬಂದರೆ, ಅತ್ತ ಅವಳ ಕೊಲೆಗಾರನೆಂಬ ಅಪಾದಿತ ವಾಗ್ಮೋರೆ ತಾನು ಗುರಿಯಿಟ್ಟ ಗುಂಡು ಗೌರಿಯನ್ನು ಘಾಸಿಗೊಳಿಸಿತೋ ಇಲ್ಲವೋ, ಅವಳು ಕೊಲೆಯಾದಳೋ ಇಲ್ಲವೋ ಎಂಬುದು ತಿಳಿಯದೆ, ಅಪರಾಧ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದ ದಿಗ್ಬಾಂತಿಯಲ್ಲಿ ತಲೆ ಮರೆಸಿಕೊಂಡು ವಿಜಯಪುರದತ್ತ ಹೊರಟ್ಟಿದ್ದ!. ವಿಜಯಪುರದ ಹತ್ತಿರದ ಸಿಂಧಗಿ ಎಂಬುದು ಆತನ ಊರು ಎಂದು ತಿಳಿದಾಗ ಮೈಯೆಲ್ಲಾ ಮತ್ತೆ ಜುಮ್ಮೆಂದಿತ್ತು. ಕಾಂಗ್ರೆಸ್ ಸರಕಾರ ಮತ್ತು ಅದರಲ್ಲೂ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಆಸ್ಥೆ ತೆಗೆದುಕೊಂಡ ಕಾರಣದಿಂದ ಜಗತ್ತಿಗೇ ಗೊತ್ತಿದ್ದ ಸತ್ಯಕ್ಕೆ ನ್ಯಾಯಾಲಯ ಅಪೇಕ್ಷಿಸುವ ಸಾಕ್ಷ್ಯಾಧಾರಗಳು ದೊರೆಯುವಂತಾಯಿತು. ಇನ್ನು ಅಪರಾಧಿಗಳಿಗೆ ಶಿಕ್ಷೆ ನೀಡುವಂತಹ ದಿನ ಬಂದೀತೇ ಎಂಬುದು ಯಕ್ಷಪ್ರಶ್ನೆ. ಇಷ್ಟೆಲ್ಲಾ ಪ್ರಯತ್ನಗಳು ‘ಸಾಧನ’ಗಳನ್ನು ಬಯಲಿಗಿಡಬಹುದೇ ಹೊರತು ಅದರ ಹಿಂದಿನ ಸೈದ್ಧಾಂತಿಕತೆಯ ರೂವಾರಿಗಳನ್ನು ಮುಟ್ಟಲಾಗದ ಅಪಾಯಕಾರಿ ವರ್ತಮಾನ ನಮ್ಮದು ಎಂಬುದೇ ನಮ್ಮ ದುಗುಡ.

Photo Credit: Janta Ka Reporter

ಗೌರಿಯನ್ನು ಕಳೆದುಕೊಂಡ ಈ ಮೂರು ವರ್ಷಗಳಲ್ಲಿ ಅವಳ ಆಶಯವವನ್ನು ಸಾಕಾರಗೊಳಿಸಲು ನಾವು ಮಾಡಿದ ಕೆಲಸಗಳ ಹೆಜ್ಜೆ ಗುರುತು ಕೂಡ ಮುಖ್ಯ. ಸೂತ್ರಹರಿದ ಗಾಳಿಪಟದಂತೆ ನಾವೆಲ್ಲ ಚೆಲ್ಲಾಪಿಲ್ಲಿ ಆಗಿಬಿಡ್ತೀವೇನೋ ಎಂಬ ಭಯವಿತ್ತು. ಆರಂಭಕಾಲದ ನಮ್ಮ ರೋಷ ದಿನಕಳೆದಂತೆ ಮೊನಚು ಕಳೆದುಕೊಂಡಿತೇನೋ ಎಂಬ ಅಳುಕು ಚುಚ್ಚುತ್ತಿತ್ತು. ಆದರೆ ಗೌರಿಯನ್ನು ಅಜರಾಮರಗೊಳಿಸಲು ಇದುವರೆಗೆ ನಡೆಸಿದ ಕೆಲಸಗಳು ಗುರುತರವೆಂಬಂತೆ ಕಾಣತೊಡಗಿದೆ. ‘ನಾನುಗೌರಿ’ ಪತ್ರಿಕೆಯನ್ನು ನಿರಂತರ ಹೊರತರುವ ಯತ್ನದಲ್ಲಿ ಎದುರಿಸಿರುವ ಹಲವಾರು ಸಂಕಷ್ಟಗಳು ವಾಸ್ತವವಾದರೂ ಆ ಕಷ್ಟಗಳೇ ನಮ್ಮೊಳಗೆ ಐಕ್ಯತೆಯ ಅಂಟಿಗೆ ಕಾರಣವೂ ಆಗಿವೆ. ಆ ಕಷ್ಟಗಳೇ ಪತ್ರಿಕೆಗೆ ಗೌರಿಯ ಬಂಧುಗಳಿಂದ ನಿರಂತರವಾಗಿ ಲೇಖನಗಳನ್ನು ತರಿಸಿಕೊಳ್ಳುವ ಯಶಸ್ಸಿಗೆ ಕಾರಣವಾಗಿವೆ. ಓದುಗ ವಲಯವನ್ನು ಮರಳಿ ಕಟ್ಟುವ ಸವಾಲನ್ನು, ಹೊಸ ಆರ್ಥಿಕ ಬಿಕ್ಕಟ್ಟುಗಳು, ಕೊರೋನಾ ವಿಪತ್ತು ಪತ್ರಿಕೆಗೆ ಹೊಸ ಹೊಸ ಸಂಕಷ್ಟಗಳನ್ನು ಒಡ್ಡಿವೆ. ಇಂತಹ ಇಕ್ಕಟ್ಟು-ಬಿಕ್ಕಟ್ಟುಗಳೇ, ಸವಾಲುಗಳೇ ಹೊಸ ಶೋಧಕ್ಕೆ ಮನುಷ್ಯರನ್ನು ಪ್ರೇರಿಸುತ್ತವೆ/ ಪ್ರೇರಿಸಿವೆ; ಬದುಕಿನ ಸಾಧನೆಯ ನಿರಂತರತೆಗೆ ದಾರಿ ತೋರುತ್ತವೆ/ ತೋರಿವೆ.

ಗೌರಿ ಇದ್ದಾಗಲೇ ‘ನಾವು ಗೆಳತಿಯರ ಸುಭದ್ರ ಗುಂಪನ್ನು ಕಟ್ಟಬೇಕು, ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು’ ಎಂದು ಆಗಾಗ ಹೇಳುತ್ತಿದ್ದಳು. ಇನ್ನೊಂದು ‘ನಾನು ಇರುವಾಗಲೇ ಈ ಪತ್ರಿಕೆಯನ್ನು ಟ್ರಸ್ಟ್‌ನ ಅಡಿಯಲ್ಲಿ ತರಬೇಕು, ಸಾಮುದಾಯಿಕ ಒಡೆತನದಲ್ಲಿ ಇದು ನಡೆಯುವಂತಾಗಬೇಕು’ ಎನ್ನುತ್ತಿದ್ದಳು. ಮೊದಲನೆಯದು ಇದುವರೆಗೂ ನಡೆಯಲಿಲ್ಲ. ಎರಡನೆಯದು ಬೇರೆ ನೆಲೆಯಲ್ಲಿ ಊರ್ಜಿತಕ್ಕೆ ಬಂದಿದೆ.

ಮೊನ್ನೆ ಭೇಟಿಯಾದ ಡಾ.ವಾಸು, ನರಸಿಂಹಮೂರ್ತಿ ಮತ್ತು ಸುನಿಲ್ ಶಿರಸಂಗಿ ಇವರುಗಳು ಹೊಸ ಕಾಲದ ಮಾಧ್ಯಮದ ವಿಸ್ತರಣೆಯ ಕನಸುಗಳನ್ನು ನಮ್ಮೊಡನೆ ಹಂಚಿಕೊಂಡರು. ಅದಕ್ಕಾಗಿ ವಿಸ್ತಾರವಾದ ಓದುಗರ ವೇದಿಕೆಯನ್ನು ನಿರ್ಮಿಸಿಕೊಳ್ಳುವ ಸಾಧ್ಯತೆಗಳನ್ನು ಮುಂದಿಟ್ಟರು. ಅದಕ್ಕಾಗಿ ಕಳೆದ ಆರು ತಿಂಗಳಿನಿಂದ ನಡೆಸಿದ ಸಭೆಗಳು, ಚರ್ಚೆಗಳು, ಸಿದ್ದತೆಗಳ ಕುರಿತು ವಿವರಿಸಿದರು. ಇದೊಂದು ಮಾದರಿಯಾದ ವೇದಿಕೆ ಮಾತ್ರವಲ್ಲ; ವರ್ತಮಾನದ ಜರೂರಿನ ವೇದಿಕೆ.

ಈಗ ವಿಶೇಷ ಸಂಚಿಕೆಗಳಿಗೆ ಸ್ಥಳೀಯ ಮತ್ತು ದೇಶೀಯ ಮಟ್ಟದ, ಅದರಾಚೆಗೆ ಅಂತರಾಷ್ಟ್ರೀಯ ನೆಲೆಯ ಬರಹಗಾರರು ಬರೆಯುತ್ತಿರುವುದನ್ನು ನೋಡುತ್ತಿದ್ದೇನೆ. ಅದೇ ರೀತಿ ವಿಸ್ತಾರ ಓದುಗ ವಲಯದಲ್ಲೂ ಬರುವ ದಿನಗಳು ಕಾಣುತ್ತಿವೆ. ಗೌರಿಯ ನೆನಪಲ್ಲಿ, ನೆಪದಲ್ಲಿ, ಇದು ಹುಟ್ಟುತ್ತಿರುವುದು ತುಂಬಾ ಮೌಲಿಕವೂ ಸ್ತುತ್ಯರ್ಹವೂ ಆದ ಕೆಲಸವಾಗಿದೆ.


ಇದನ್ನು ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...