ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೆಲ ಶಿವರಾಮ ಕಾರಂತ, ಕೋ. ಲ. ಕಾರಂತ, ಬಿ. ವಿ. ಕಾರಂತ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣಭಟ್ಟ ಅವರ ತವರು ನೆಲ; ಪಂಜೆ ಮಂಗೇಶರಾಯರ ತವರು ಆ ನೆಲ; ಗೊಲ್ಗೊಥಾ ಮತ್ತು ವೈಶಾಖಿ ಖಂಡಕಾವ್ಯಗಳನ್ನು ಬರೆದ ಗೋವಿಂದ ಪೈ ಅವರ ನೆಲ; ಲಕ್ಷ್ಮೀಶ ತೋಳ್ಪಾಡಿಯವರ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಮತ್ತು ಬೆಳಕಿಗೆ ನೆರಳಿತ್ತ ಸಂಗಾತಿ ಪುಸ್ತಕಗಳಿಂದಾಗಿ ನನ್ನಂಥವರ ಮನಮೀಟಿದ ಪುತ್ತೂರಿನ ಅಜ್ಜಂದಿರು ರಾಮಚಂದ್ರ ಭಟ್ಟ ಮತ್ತು ಇಸ್ಮಾಯಿಲ್ ಕುಂಞಪ್ಪ ಅವರ ಕರುಳ ಬೇರಿನ ಬೀಡು.

Photo Courtesy: mysorepoetWordPress.com
ಶಿವಮೊಗ್ಗ ಜಿಲ್ಲೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಮತ್ತು ಕೆ. ವಿ. ಸುಬ್ಬಣ್ಣ ಅವರು ಹುಟ್ಟಿ, ಬೆಳಗಿದ ನೆಲ. ನಿತ್ಯೋತ್ಸವ ಎಂಬ ಹಾಡನ್ನು ಬರೆದು ಕರ್ನಾಟಕದ ನೆಲವನ್ನು ಕೀರ್ತಿಸಿದ ನಿಸಾರ್ ಅಹಮದ್ ಅವರು ನೆಲೆಸಿ, ಒಲಿದು, ಒಲಿಸಿಕೊಂಡ ನೆಲ ಅದು, ಬೆಣ್ಣೆ ಕದ್ದ ನಮ್ಮ ಕೃಷ್ಣದಂಥ ಮುಪ್ಪಿಲ್ಲದ ಹಾಡುಗಳನ್ನು ಅವರು ಬರೆದ ನೆಲೆವೀಡು. ಪ್ರಭುದೇವ ಅಲ್ಲಮ ಹುಟ್ಟಿ, ಸಿದ್ಧನಾದದ್ದು, ಮಹದೇವಿಯಕ್ಕ ಹುಟ್ಟಿ, ಸಿದ್ಧಳಾದದ್ದು, ಅಲ್ಲಿ.
ಧಾರವಾಡ ಎಂದರೆ ನನ್ನಂಥವರಿಗೆ ಬೇಂದ್ರೆ, ಬೇಂದ್ರೆ, ಬೇಂದ್ರೆಯೇ. ಜೊತೆಗೆ, ಸಾತ್ತ್ವಿಕ ಹರಿಹರಿತ ಸವಾಲಿಗೆ ನಿಂತ ಆ ಘನಘನ ಶಂಬಾ, ಶಂಬಾ ಜೋಷಿ. ಮತ್ತು, ಅಣ್ಣ ಬಸವಣ್ಣನ ಒಕ್ಕಲು ತಾವೆಂಬವರ ವಿದ್ಯಾಕಾಶಿ.
ಕೋಲಾರ ಎಂದರೆ ಮಾಗಿದ ಮಾತು: ಮಾಸ್ತಿಯ ಅಯ್ಯ, ಡಿವಿಜಿ. ಕೋಲಾರ ಎಂದರೆ ಎದೆಮೀಟೊ ಹಾಡು: ಕೈವಾರ ತಾತಯ್ಯ.
ಇನ್ನು ಮೇಲುಕೋಟೆ ಎಂದರೆ, ಅದೇ… ಅಹಲ್ಯೆ, ಗೋಕುಲನಿರ್ಗಮನ, ಮಲೆದೇಗುಲ, ಯದುಗಿರಿಯ ಮೌನವಿಕಾಸ, ಶರ್ವರೀ ಸುಷಮೆ ಬರೆದ ಆರ್ದ್ರತೆ, ರಸಿಕತೆಯ ಮೂರುತಿ – ಪು. ತಿ. ನ.

ಆದರೆ ಈಗ, ಕಡಲ ತೀರದ ಆ ಜಿಲ್ಲೆಗಳಲ್ಲಿ, ಶಿವಮೊಗ್ಗ ಸುತ್ತಿನ ಊರೂರಲ್ಲಿ, ಧಾರವಾಡದ ನುಗ್ಗಿಕೇರಿಯಲ್ಲಿ, ಕೋಲಾರದ ಮುಳಬಾಗಿಲಲ್ಲಿ, ಮೇಲುಕೋಟೆಯ ಚೆಲುವನ ಗುಡಿಯ ಮಂದಿಯಲ್ಲಿ – ಎಲ್ಲೆಲ್ಲೂ, ಎಲ್ಲೆಲ್ಲೋ – ಆಗಿರುವುದು, ಆಗುತ್ತಿರುವುದು, ಮತ್ತು ಆಗಲಿರುವುದನ್ನು ಕಂಡು ಅಲ್ಲಿ, ಯಾವ ದಿವ್ಯಲೋಕದಲ್ಲೋ, ಗೋಷ್ಠಿ ನಡೆಸುತ್ತಿರಬಹುದಾದ ಆ ನಮ್ಮ ಹಿರಿಯರಿಗೆಲ್ಲ ಹೇಗಾಗುತ್ತಿರಬೇಕು, ಕೇಳಿಕೊಳ್ಳುವುದು ಬೇಡ: ಆ ಲೋಕದಲ್ಲೂ ವಿಲಿವಿಲಿ ಒದ್ದಾಡುತ್ತಿರಬೇಕು ಅವರು.
ಆ ಅಂಥವರನ್ನು ಓದಿ, ಮೆಚ್ಚಿಕೊಂಡ ಜನರಿದ್ದೇವಲ್ಲ ನಾವು, ನೀವು… ಮಾತುಮಾತಿಗೆ ಅವರನ್ನು ನೆನೆಯುವ… ಅವರು ಆಡಿದ್ದನ್ನು, ಮಾಡಿದ್ದನ್ನು, ಬರೆದದ್ದನ್ನು ಎತ್ತಿ ಆಡುವ, ನಮ್ಮನಮ್ಮಲ್ಲೇ ಗುನುಗಿಕೊಳ್ಳುವ, ಮೆಲುಕು ಹಾಕುವ, ಭಾಷಣ ಬಿಗಿಯುವ, ಬರೆಯುವ, ಪಾಠಮಾಡುವ, ಪರೀಕ್ಷೆ ಪಾಸುಮಾಡಲು ಓದುವ… ಅವರೆಲ್ಲ ಬೆಳೆಸಿದ ಜನ ನಾವು, ನಾವಿದ್ದೇವಲ್ಲ… ಅವರ ಹೆಸರುಗಳನ್ನು ಹೇಳಿ ಬೀಗುವ ನಾವು, ಈ ನಾನು, ಈ ನೀವು… ನಾವು ಈಗ ಏನು ಮಾಡಬೇಕು, ಯೋಚಿಸೋಣ ಕನ್ನಡಿಗರೇ, ಕರುನಾಡಿಗರೇ…
ಜನಿವಾರ ಹಾಕಿಕೊಂಡೋ ಹಾಕಿಕೊಳ್ಳದೆಯೋ ಗಾಯತ್ರಿ ಮಂತ್ರವನ್ನು ಬಲುಶ್ರದ್ಧೆಯಿಂದ ಮನನ ಮಾಡುವ, ಮಣಮಣಿಸುವ ನಾವು; ಶಿವದಾರ, ಕರಡಿಗೆ ಹಾಕಿಯೋ ಹಾಕಿಕೊಳ್ಳದೆಯೋ ಬಸವ ಬಳಗ, ಅಕ್ಕನ ಬಳಗ ಎಂದೆಲ್ಲ ಕಟ್ಟಿಕೊಂಡು ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದೆಲ್ಲ ಗಳಹುವ ನಾವು; ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಮುಂತಾದ್ದೆಲ್ಲ ಓದಿಕೊಂಡವರು, ಪಾಠ ಮಾಡುವವರು, ಹೇಳಿಸಿಕೊಂಡವರು ಎನ್ನುತ್ತ, ಎಂದುಕೊಳ್ಳುತ್ತ ಉಬ್ಬುವ ನಾವು; ಬಾಳ್ವೆಯೇ ಬೆಳಕು ಎಂದು ಒದರುವ ನಾವು; ವಿಶ್ವಮಾತೆಯ ಗರ್ಭಕಮಲಜಾತ ಪರಾಗ ಪರಮಾಣು ಕೀರ್ತಿ ನಾನು ಎಂದು ನಾಟಕೀಯವಾಗಿ ಹೇಳುವ, ಹೇಳಿಸುವ ನಾವು — ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ, ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ? ಈ ನಮ್ಮವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬೇಕಾದ ಧೈರ್ಯದ ಮಾತತ್ತಿರಲಿ, ಯೋಗ್ಯತೆಯನ್ನೂ ಕಳೆದುಕೊಳ್ಳುತ್ತಿದ್ದೇವಲ್ಲ ನಾವು…
ಅಡಿಗರ ಇಂದು ನಮ್ಮೀ ನಾಡು ಕವನ ಹೇಳುವಂತೆ, ಇಲ್ಲಿ:
ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ ಮೈ
ಭಕ್ತಿ ತುಳುಕಾಡಿದ್ದ ಅಂತರಂಗ
ಈಗ ನರಕಕ್ಕೆ ಕೈಮರ, ಕರಡಿಗುಹೆ, ಘೋರ
ರಾಕ್ಷಸತೆ ಭೋರಿಡುವ ನಾಟ್ಯರಂಗ
ಅದು ಬೇಡ, ಬೇಡ. ಒಮ್ಮೆ ನಮ್ಮನಮ್ಮ ಮುಖವನ್ನು ನಮ್ಮನಮ್ಮ ಒಳಗನ್ನಡಿಯಲ್ಲಿ ನಾವೇ ನೋಡಿಕೊಳ್ಳೋಣ… ಲಂಕೇಶರ ದೇಶಭಕ್ತ… ಗದ್ಯಗೀತೆ ಯನ್ನು ಉಸುರಿಕೊಳ್ಳುತ್ತ ನಮ್ಮನಮ್ಮ ಮುಸುಡಿಗೆ ನಾವೇ ಥೂ ಥೂ ಎನ್ನೋಣ… ಚೊಕ್ಕವಾಗೋಣ. ಆಗಿ, ಮನೆಮಂದಿಯ ತಬ್ಬಿ ನಿಲ್ಲೋಣ.
ಕಡೆಯ ಮಾತು. ಕನ್ನಡಕ್ಕೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ, ಕರುನಾಡಿಗೆ ಸಂದ ಗೌರವ ಅದು, ಸವಿಗನ್ನಡಕ್ಕೆ ಸಂದ ಮನ್ನಣೆ ಎಂದೆಲ್ಲ ಹಿಗ್ಗುತ್ತೇವಲ್ಲ ನಾವು. ಯೋಚಿಸೋಣ, ಆ ಪ್ರಶಸ್ತಿ ಪಡೆದ ಮೊದಲ ಏಳು ಜನ ಈಗ ಇಲ್ಲಿ ಇದ್ದಿದ್ದರೆ ಒದ್ದಾಡುತ್ತಿದ್ದರು, ಆದರೆ ಖಂಡಿತಾ ಸುಮ್ಮನಿರುತ್ತಿರಲಿಲ್ಲ: ನಮ್ಮನಿಮ್ಮ ಆ ಮನೆಮಂದಿಯನ್ನು ಅಪ್ಪಿಕೊಂಡು, ಇಂದಿನ ಫ್ಯಾಶಿಸ್ಟರಿಗೆ ಖಂಡಿತಾ ಅಡ್ಡ ನಿಲ್ಲುತ್ತಿದ್ದರು ಅವರು.

ಈಗ ನಮ್ಮ ನಡುವೆ ಇರುವ ಜ್ಞಾನಪೀಠಸ್ಥರು ಒಬ್ಬರು ಮಾತ್ರ. ಆ ಹಿರಿಯರಿಂದ, ಮನೆಮಂದಿಯ ಕಾಯುವ ಸೊಲ್ಲೇ ಇಲ್ಲ, ಏಕೆ?
- ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)
*******
ಇದನ್ನೂ ಓದಿ: ಅಧ್ಯಾಪನದ ಧರ್ಮ



ನೀವು ಹೇಳಿದ ಮಾತುಗಳು ೧೦೦ಕ್ಕೆ ೧೦೦%ಸತ್ಯ ಸರ್ ಇದರ ಬಗ್ಗೆ ನಾವೆಲ್ಲ ಯೋಚಿಸಲೇ ಬೇಕು, ತಡೆಯಬೇಕು