Homeಚಳವಳಿಇಂದು ನಮ್ಮೀ ನಾಡು…

ಇಂದು ನಮ್ಮೀ ನಾಡು…

ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ?

- Advertisement -
- Advertisement -

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೆಲ ಶಿವರಾಮ ಕಾರಂತ, ಕೋ. ಲ. ಕಾರಂತ,  ಬಿ. ವಿ. ಕಾರಂತ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣಭಟ್ಟ ಅವರ ತವರು ನೆಲ; ಪಂಜೆ ಮಂಗೇಶರಾಯರ ತವರು ಆ ನೆಲ; ಗೊಲ್ಗೊಥಾ ಮತ್ತು ವೈಶಾಖಿ ಖಂಡಕಾವ್ಯಗಳನ್ನು ಬರೆದ ಗೋವಿಂದ ಪೈ ಅವರ ನೆಲ; ಲಕ್ಷ್ಮೀಶ ತೋಳ್ಪಾಡಿಯವರ  ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಮತ್ತು ಬೆಳಕಿಗೆ ನೆರಳಿತ್ತ ಸಂಗಾತಿ ಪುಸ್ತಕಗಳಿಂದಾಗಿ ನನ್ನಂಥವರ ಮನಮೀಟಿದ ಪುತ್ತೂರಿನ ಅಜ್ಜಂದಿರು ರಾಮಚಂದ್ರ ಭಟ್ಟ ಮತ್ತು ಇಸ್ಮಾಯಿಲ್ ಕುಂಞಪ್ಪ ಅವರ ಕರುಳ ಬೇರಿನ ಬೀಡು.

ರಾಮಚಂದ್ರ ಭಟ್ಟರು ಮತ್ತು ಇಸ್ಮಾಯಿಲ್ ಕುಂಞಪ್ಪ
Photo Courtesy: mysorepoetWordPress.com

ಶಿವಮೊಗ್ಗ ಜಿಲ್ಲೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಮತ್ತು ಕೆ. ವಿ. ಸುಬ್ಬಣ್ಣ ಅವರು ಹುಟ್ಟಿ, ಬೆಳಗಿದ ನೆಲ. ನಿತ್ಯೋತ್ಸವ ಎಂಬ ಹಾಡನ್ನು ಬರೆದು ಕರ್ನಾಟಕದ ನೆಲವನ್ನು ಕೀರ್ತಿಸಿದ ನಿಸಾರ್ ಅಹಮದ್ ಅವರು ನೆಲೆಸಿ, ಒಲಿದು, ಒಲಿಸಿಕೊಂಡ ನೆಲ ಅದು, ಬೆಣ್ಣೆ ಕದ್ದ ನಮ್ಮ ಕೃಷ್ಣದಂಥ ಮುಪ್ಪಿಲ್ಲದ ಹಾಡುಗಳನ್ನು ಅವರು ಬರೆದ ನೆಲೆವೀಡು. ಪ್ರಭುದೇವ ಅಲ್ಲಮ ಹುಟ್ಟಿ, ಸಿದ್ಧನಾದದ್ದು, ಮಹದೇವಿಯಕ್ಕ ಹುಟ್ಟಿ, ಸಿದ್ಧಳಾದದ್ದು, ಅಲ್ಲಿ.

ಧಾರವಾಡ ಎಂದರೆ ನನ್ನಂಥವರಿಗೆ ಬೇಂದ್ರೆ, ಬೇಂದ್ರೆ, ಬೇಂದ್ರೆಯೇ. ಜೊತೆಗೆ, ಸಾತ್ತ್ವಿಕ ಹರಿಹರಿತ ಸವಾಲಿಗೆ ನಿಂತ ಆ ಘನಘನ ಶಂಬಾ, ಶಂಬಾ ಜೋಷಿ. ಮತ್ತು, ಅಣ್ಣ ಬಸವಣ್ಣನ ಒಕ್ಕಲು ತಾವೆಂಬವರ ವಿದ್ಯಾಕಾಶಿ.

ಕೋಲಾರ ಎಂದರೆ ಮಾಗಿದ ಮಾತು: ಮಾಸ್ತಿಯ ಅಯ್ಯ, ಡಿವಿಜಿ. ಕೋಲಾರ ಎಂದರೆ ಎದೆಮೀಟೊ ಹಾಡು:  ಕೈವಾರ ತಾತಯ್ಯ.

ಇನ್ನು ಮೇಲುಕೋಟೆ ಎಂದರೆ, ಅದೇ… ಅಹಲ್ಯೆ, ಗೋಕುಲನಿರ್ಗಮನ, ಮಲೆದೇಗುಲ, ಯದುಗಿರಿಯ ಮೌನವಿಕಾಸ, ಶರ್ವರೀ ಸುಷಮೆ ಬರೆದ ಆರ್ದ್ರತೆ, ರಸಿಕತೆಯ ಮೂರುತಿ – ಪು. ತಿ. ನ.

 

ಆದರೆ ಈಗ, ಕಡಲ ತೀರದ ಆ ಜಿಲ್ಲೆಗಳಲ್ಲಿ, ಶಿವಮೊಗ್ಗ ಸುತ್ತಿನ ಊರೂರಲ್ಲಿ, ಧಾರವಾಡದ ನುಗ್ಗಿಕೇರಿಯಲ್ಲಿ, ಕೋಲಾರದ ಮುಳಬಾಗಿಲಲ್ಲಿ, ಮೇಲುಕೋಟೆಯ ಚೆಲುವನ ಗುಡಿಯ ಮಂದಿಯಲ್ಲಿ – ಎಲ್ಲೆಲ್ಲೂ, ಎಲ್ಲೆಲ್ಲೋ – ಆಗಿರುವುದು, ಆಗುತ್ತಿರುವುದು, ಮತ್ತು ಆಗಲಿರುವುದನ್ನು ಕಂಡು ಅಲ್ಲಿ, ಯಾವ ದಿವ್ಯಲೋಕದಲ್ಲೋ, ಗೋಷ್ಠಿ ನಡೆಸುತ್ತಿರಬಹುದಾದ ಆ ನಮ್ಮ ಹಿರಿಯರಿಗೆಲ್ಲ ಹೇಗಾಗುತ್ತಿರಬೇಕು, ಕೇಳಿಕೊಳ್ಳುವುದು ಬೇಡ: ಆ ಲೋಕದಲ್ಲೂ ವಿಲಿವಿಲಿ ಒದ್ದಾಡುತ್ತಿರಬೇಕು ಅವರು.

ಆ ಅಂಥವರನ್ನು ಓದಿ, ಮೆಚ್ಚಿಕೊಂಡ ಜನರಿದ್ದೇವಲ್ಲ ನಾವು, ನೀವು… ಮಾತುಮಾತಿಗೆ ಅವರನ್ನು ನೆನೆಯುವ… ಅವರು ಆಡಿದ್ದನ್ನು, ಮಾಡಿದ್ದನ್ನು, ಬರೆದದ್ದನ್ನು ಎತ್ತಿ ಆಡುವ, ನಮ್ಮನಮ್ಮಲ್ಲೇ ಗುನುಗಿಕೊಳ್ಳುವ, ಮೆಲುಕು ಹಾಕುವ, ಭಾಷಣ ಬಿಗಿಯುವ, ಬರೆಯುವ, ಪಾಠಮಾಡುವ, ಪರೀಕ್ಷೆ ಪಾಸುಮಾಡಲು ಓದುವ… ಅವರೆಲ್ಲ ಬೆಳೆಸಿದ ಜನ ನಾವು, ನಾವಿದ್ದೇವಲ್ಲ… ಅವರ ಹೆಸರುಗಳನ್ನು ಹೇಳಿ ಬೀಗುವ ನಾವು, ಈ ನಾನು, ಈ ನೀವು… ನಾವು  ಈಗ ಏನು ಮಾಡಬೇಕು, ಯೋಚಿಸೋಣ ಕನ್ನಡಿಗರೇ, ಕರುನಾಡಿಗರೇ…

ಜನಿವಾರ ಹಾಕಿಕೊಂಡೋ ಹಾಕಿಕೊಳ್ಳದೆಯೋ ಗಾಯತ್ರಿ ಮಂತ್ರವನ್ನು ಬಲುಶ್ರದ್ಧೆಯಿಂದ ಮನನ ಮಾಡುವ, ಮಣಮಣಿಸುವ ನಾವು; ಶಿವದಾರ, ಕರಡಿಗೆ ಹಾಕಿಯೋ ಹಾಕಿಕೊಳ್ಳದೆಯೋ ಬಸವ ಬಳಗ, ಅಕ್ಕನ ಬಳಗ ಎಂದೆಲ್ಲ ಕಟ್ಟಿಕೊಂಡು ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದೆಲ್ಲ ಗಳಹುವ ನಾವು; ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಮುಂತಾದ್ದೆಲ್ಲ ಓದಿಕೊಂಡವರು, ಪಾಠ ಮಾಡುವವರು, ಹೇಳಿಸಿಕೊಂಡವರು ಎನ್ನುತ್ತ, ಎಂದುಕೊಳ್ಳುತ್ತ ಉಬ್ಬುವ ನಾವು; ಬಾಳ್ವೆಯೇ ಬೆಳಕು ಎಂದು ಒದರುವ ನಾವು; ವಿಶ್ವಮಾತೆಯ ಗರ್ಭಕಮಲಜಾತ ಪರಾಗ ಪರಮಾಣು ಕೀರ್ತಿ ನಾನು ಎಂದು ನಾಟಕೀಯವಾಗಿ ಹೇಳುವ, ಹೇಳಿಸುವ ನಾವು — ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ? ಈ ನಮ್ಮವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬೇಕಾದ ಧೈರ್ಯದ ಮಾತತ್ತಿರಲಿ, ಯೋಗ್ಯತೆಯನ್ನೂ ಕಳೆದುಕೊಳ್ಳುತ್ತಿದ್ದೇವಲ್ಲ ನಾವು…

ಅಡಿಗರ ಇಂದು ನಮ್ಮೀ ನಾಡು ಕವನ ಹೇಳುವಂತೆ, ಇಲ್ಲಿ:

ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ ಮೈ
ಭಕ್ತಿ ತುಳುಕಾಡಿದ್ದ ಅಂತರಂಗ
ಈಗ ನರಕಕ್ಕೆ ಕೈಮರ, ಕರಡಿಗುಹೆ, ಘೋರ
ರಾಕ್ಷಸತೆ ಭೋರಿಡುವ ನಾಟ್ಯರಂಗ

ಅದು ಬೇಡ, ಬೇಡ. ಒಮ್ಮೆ ನಮ್ಮನಮ್ಮ ಮುಖವನ್ನು  ನಮ್ಮನಮ್ಮ ಒಳಗನ್ನಡಿಯಲ್ಲಿ ನಾವೇ ನೋಡಿಕೊಳ್ಳೋಣಲಂಕೇಶರ ದೇಶಭಕ್ತಗದ್ಯಗೀತೆ ಯನ್ನು ಉಸುರಿಕೊಳ್ಳುತ್ತ ನಮ್ಮನಮ್ಮ ಮುಸುಡಿಗೆ ನಾವೇ ಥೂ ಥೂ ಎನ್ನೋಣಚೊಕ್ಕವಾಗೋಣ. ಆಗಿ, ಮನೆಮಂದಿಯ ತಬ್ಬಿ ನಿಲ್ಲೋಣ.

ಕಡೆಯ ಮಾತು. ಕನ್ನಡಕ್ಕೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ, ಕರುನಾಡಿಗೆ ಸಂದ ಗೌರವ ಅದು, ಸವಿಗನ್ನಡಕ್ಕೆ ಸಂದ ಮನ್ನಣೆ ಎಂದೆಲ್ಲ ಹಿಗ್ಗುತ್ತೇವಲ್ಲ ನಾವು. ಯೋಚಿಸೋಣ, ಆ ಪ್ರಶಸ್ತಿ ಪಡೆದ ಮೊದಲ ಏಳು ಜನ ಈಗ ಇಲ್ಲಿ ಇದ್ದಿದ್ದರೆ ಒದ್ದಾಡುತ್ತಿದ್ದರು, ಆದರೆ ಖಂಡಿತಾ ಸುಮ್ಮನಿರುತ್ತಿರಲಿಲ್ಲ: ನಮ್ಮನಿಮ್ಮ ಆ ಮನೆಮಂದಿಯನ್ನು ಅಪ್ಪಿಕೊಂಡು, ಇಂದಿನ ಫ್ಯಾಶಿಸ್ಟರಿಗೆ ಖಂಡಿತಾ ಅಡ್ಡ ನಿಲ್ಲುತ್ತಿದ್ದರು ಅವರು.

ಈಗ ನಮ್ಮ ನಡುವೆ ಇರುವ ಜ್ಞಾನಪೀಠಸ್ಥರು ಒಬ್ಬರು ಮಾತ್ರ. ಆ ಹಿರಿಯರಿಂದ, ಮನೆಮಂದಿಯ ಕಾಯುವ ಸೊಲ್ಲೇ ಇಲ್ಲ, ಏಕೆ?

  • ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)

*******


ಇದನ್ನೂ ಓದಿ: ಅಧ್ಯಾಪನದ ಧರ್ಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನೀವು ಹೇಳಿದ ಮಾತುಗಳು ೧೦೦ಕ್ಕೆ ೧೦೦%ಸತ್ಯ ಸರ್ ಇದರ ಬಗ್ಗೆ ನಾವೆಲ್ಲ ಯೋಚಿಸಲೇ ಬೇಕು, ತಡೆಯಬೇಕು

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...