ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನನ್ನು ವಿರೋಧಿಸಿ ಗಣರಾಜ್ಯೋತ್ಸವದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ದೆಹಲಿ ಪೊಲೀಸರು ಭಾನುವಾರ ಗಾಜಿಪುರ, ಸಿಂಗು, ಚಿಲ್ಲಾ ಮತ್ತು ಟಿಕ್ರಿ ಗಡಿಯಿಂದ ನಾಲ್ಕು ಮಾರ್ಗಗಗಳನ್ನು ಸೂಚಿಸಿದ್ದಾರೆ.
ಶನಿವಾರ, ರಾಜ್ಪಾತ್ನಲ್ಲಿ ಅಧಿಕೃತ ಮೆರವಣಿಗೆ ಮುಗಿದ ನಂತರವೇ ರೈತರ ಟ್ರಾಕ್ಟರ್ ರ್ಯಾಲಿ ಪ್ರಾರಂಭವಾಗಬೇಕು ಎಂಬ ಷರತ್ತಿನ ಮೇರೆಗೆ ದೆಹಲಿ ಪೊಲೀಸರು ಜನವರಿ 26 ರಂದು ರಾಜಧಾನಿಯೊಳಗೆ ಟ್ರಾಕ್ಟರ್ ಪೆರೇಡ್ ನಡೆಸಲು ರೈತರಿಗೆ ಅನುಮತಿ ನೀಡಿದ್ದರು ಎನ್ನಲಾಗಿತ್ತು. ಆದರೆ ಇಂದು ರೈತರು ದೆಹಲಿ ಪೊಲೀಸರಿಂದ ಲಿಖಿತ ಅನುಮತಿ ನೀಡುವಂತೆ ಕೋರಿದ್ದರು.
ರ್ಯಾಲಿಯಲ್ಲಿ ಭಾಗವಹಿಸಲು ಲಕ್ಷಾಂತರ ಟ್ರಾಕ್ಟರುಗಳು ದೆಹಲಿಗೆ ತೆರಳುತ್ತವೆ. “ರ್ಯಾಲಿಯು ಸಂಪೂರ್ಣ ಶಾಂತಿಯುತವಾಗಿರುತ್ತದೆ. ಸುಮಾರು 3 ಲಕ್ಷ ಟ್ರಾಕ್ಟರುಗಳು ರ್ಯಾಲಿಯಲ್ಲಿ ಭಾಗವಹಿಸಲಿದೆ” ಪಂಜಾಬ್ ಜಮ್ಹೂರಿ ಕಿಸಾನ್ ಸಭೆಯ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಹೇಳಿದ್ದಾರೆ.
ಗಣರಾಜ್ಯೋತ್ಸವದ ದೃಷ್ಟಿಯಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದರೂ ಸಹ, ದೆಹಲಿ ಪೊಲೀಸರು ರ್ಯಾಲಿಯನ್ನು ರದ್ದುಗೊಳಿಸುವಂತೆ ರೈತರನ್ನು ಪ್ರಯತ್ನಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು
— Naanu Gauri (@naanugauri) January 24, 2021
“ರೈತರಿಗೆ ಲಿಖಿತ ಅರ್ಜಿಯನ್ನು ಕಳುಹಿಸಲು ತಿಳಿಸಲಾಗಿದೆ, ಅವರ ಉದ್ದೇಶಿತ ಮಾರ್ಗಗಳು, ಟ್ರಾಕ್ಟರುಗಳು ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ರೈತರ ಸಂಖ್ಯೆ ಮತ್ತು ಸಮಯಗಳನ್ನು ನಿರ್ದಿಷ್ಟಪಡಿಸಲಾಗಿದೆ. ನಾಳೆ ಅವರೊಂದಿಗೆ ಚರ್ಚಿಸುತ್ತೇವೆ. ಆದರೆ ಅವರು ಪ್ರತಿಭಟನೆ ನಡೆಸುತ್ತಿರುವ ಗಡಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಟ್ರ್ಯಾಕ್ಟರ್ ಪೆರೇಡ್ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ಮೆರವಣಿಗೆಯಲ್ಲಿ ಅವರಿಗೆ ವೈದ್ಯಕೀಯ ನೆರವು ಮತ್ತು ಭದ್ರತೆ ಭರವಸೆ ನೀಡಲಾಗಿದೆ” ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಗಣರಾಜ್ಯೋತ್ಸವದ ಆಚರಣೆಯ ದೃಷ್ಟಿಯಿಂದ ದೆಹಲಿ ಪೊಲೀಸರು ನಗರ ಮತ್ತು ಸುತ್ತಮುತ್ತ ಐದು ಪದರಗಳ ಭದ್ರತೆಯನ್ನು ನಿಯೋಜಿಸಿದ್ದಾರೆ. ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ 40,000 ಕ್ಕೂ ಹೆಚ್ಚು ಪೊಲೀಸರು, ಐಟಿಬಿಪಿ ಮತ್ತು ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜ. 26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್; ರಾಜಧಾನಿಯತ್ತ 5000 ವಾಹನಗಳು!