ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳ ಮೇಲೆ ಈಗಾಗಲೇ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ ನಾಸಿಕ್ನ ಸರ್ಕಾರವಾಡಾ ಪೊಲೀಸರು ಶನಿವಾರ (ಮಾ.21) ಎರಡು ಹೊಸ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಖರಾತ್ನ ಮಾಜಿ ಉದ್ಯೋಗಿಯೊಬ್ಬರು ನೀಡಿದ ದೂರಿನ ಮೇರೆಗೆ ಒಂದು ಎಫ್ಐಆರ್ ದಾಖಲಾಗಿದ್ದು, ಆಧ್ಯಾತ್ಮಿಕ ಆಚರಣೆಗಳನ್ನು ಮಾಡುವ ನೆಪದಲ್ಲಿ ನವೆಂಬರ್ 2023ರಿಂದ ಡಿಸೆಂಬರ್ 2025ರ ಅವಧಿಯಲ್ಲಿ ನನ್ನ ಪತ್ನಿ ಮೇಲೆ ಖರಾತ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾಗಲೂ ಆಕೆಯ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2019ರಲ್ಲಿ ನಾನು ನಾಸಿಕ್ ನಗರದಲ್ಲಿರುವ ಖರಾತ್ನ ಆಸ್ತಿ ಅಭಿವೃದ್ಧಿ ಕಚೇರಿಗೆ ಕೆಲಸಕ್ಕೆ ಸೇರಿದ್ದೆ. ನಾನು ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆರೋಗ್ಯವಂತ ಮಗುವಿಗಾಗಿ ಆಶೀರ್ವದಿಸುವ ನೆಪದಲ್ಲಿ ಖರಾತ್ ನನ್ನ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪತ್ನಿಈ ವಿಷಯ ನನಗೆ ತಿಳಿಸಿದಾಗ ನಾನು ಆತನ ಚಟುವಟಿಕೆಗಳ ಬಗ್ಗೆ ಆಳವಾಗಿ ತನಿಖೆ ನಡೆಸಲು ನಿರ್ಧರಿಸಿದೆ. ಆತ ಮಹಿಳೆಯರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ವಿಡಿಯೋ ಸಾಕ್ಷ್ಯವನ್ನು ಸಂಗ್ರಹಿಸಲು ಕಚೇರಿ ಕ್ಯಾಬಿನ್ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೆ ಎಂದು ಮಾಜಿ ಉದ್ಯೋಗಿ ದೂರಿನಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ತನ್ನ ಕಚೇರಿಗೆ ಭೇಟಿ ನೀಡುವ ಮಹಿಳೆಯರಿಗೆ ಅಘೋರಿ ಆಚರಣೆಯ ಭಾಗವೆಂದು ಅಮಲು ಪದಾರ್ಥ ಬೆರೆಸಿದ ಪಾನೀಯಗಳನ್ನು ಕುಡಿಯಲು ಖರಾತ್ ಬಲವಂತಪಡಿಸುತ್ತಿದ್ದ. ಅದನ್ನು ಕುಡಿದು ಮಹಿಳೆಯರು ಪ್ರಜ್ಞೆ ಕಳೆದುಕೊಂಡಾಗ ಅಥವಾ ಅಸಹಾಯಕರಾದಾಗ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂಬುವುದು ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ ಎಂದು ಮಾಜಿ ಉದ್ಯೋಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ನಾನು ಖರಾತ್ನನ್ನು ಪ್ರಶ್ನಿಸಿದಾಗ ಕೆಲಸದಿಂದ ವಜಾಗೊಳಿಸಿದ್ದ. ನನ್ನ ಬಳಿ ಆತನ ಅಪರಾಧ ಕೃತ್ಯಗಳ ವಿಡಿಯೋ ಸಾಕ್ಷ್ಯವಿರುವುದು ತಿಳಿದಾಗ, ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಹಾಕಲು ಪ್ರಾರಂಭಿಸಿದ. ಆತನಿಗೆ ಹಿರಿಯ ರಾಜಕಾರಣಿಗಳೊಂದಿಗೆ ಇದ್ದ ಪ್ರಭಾವ ಮತ್ತು ಸಂಪರ್ಕದ ಕಾರಣದಿಂದ ನಾನು ಈ ಹಿಂದೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಇತ್ತೀಚೆಗೆ ನಾಸಿಕ್ ಪೊಲೀಸರು ಆತನನ್ನು ಬಂಧಿಸಿದ ವಿಷಯ ಗೊತ್ತಾಗಿ ನಾನೂ ದೂರು ದಾಖಲಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.
ಎರಡನೇ ಎಫ್ಐಆರ್ ಮಹಿಳೆಯೊಬ್ಬರ ದೂರಿನ ಮೇರೆಗೆ ದಾಖಲಾಗಿದೆ. ವಿಚ್ಛೇದನದ ನಂತರ ನನ್ನ ಭವಿಷ್ಯವನ್ನು ಉಜ್ವಲಗೊಳಿಸುವ ಭರವಸೆಯ ನೆಪದಲ್ಲಿ ಫೆಬ್ರವರಿ 2020ರಿಂದ ಈ ವರ್ಷದ ಮಾರ್ಚ್ವರೆಗೆ ಖರಾತ್ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಖರಾತ್ಗೆ ಮಹಿಳೆಗೆ ಅಮಲು ಪದಾರ್ಥ ನೀಡಿ ದೌರ್ಜನ್ಯವೆಸಗುತ್ತಿದ್ದ. ಆಕೆ ಗರ್ಭಿಣಿಯಾದ ವಿಷಯ ತಿಳಿಸಿದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಎಂದು ವರದಿಯಾಗಿದೆ.
ಸರ್ಕಾರವಾಡ ಪೊಲೀಸರು ಅತ್ಯಾಚಾರದ ಆರೋಪದ ಜೊತೆಗೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 (ಮಹಿಳೆಯ ನಮ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು ಸೆಕ್ಷನ್ 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ನರಬಲಿ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು ಹಾಗೂ ಮಾಟಮಂತ್ರ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆಯ ಸೆಕ್ಷನ್ 3(1) ಮತ್ತು 3(2) ಅನ್ನು ಸಹ ಈ ಪ್ರಕರಣದಲ್ಲಿ ಅನ್ವಯಿಸಲಾಗಿದೆ.


