Homeಕರ್ನಾಟಕಉಡುಪಿ: ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನೂ ಪ್ರವೇಶ ನೀಡದ ಕಾಲೇಜು

ಉಡುಪಿ: ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನೂ ಪ್ರವೇಶ ನೀಡದ ಕಾಲೇಜು

- Advertisement -
- Advertisement -

ಹಿಜಾಬ್‌ ಧರಿಸಿ ಕಾಲೇಜಿಗೆ ಬರುತ್ತಿರುವ 6 ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಳೆದ 15 ದಿನಗಳಿಂದ ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ಮಾತ್ರವಲ್ಲದೆ, ಡಿಸೆಂಬರ್‌ 31 ರಿಂದ ಹಾಜರಾತಿಯಲ್ಲಿ ಗೈರು ಎಂದು ನಮೂದಿಸಲಾಗುತ್ತಿದೆ.

ಈ ಕುರಿತು ಬಾಲಕಿಯರ ಪೋಷಕರು ಹಾಗೂ ಮುಸ್ಲಿಂ ಸಂಘಟನೆಗಳ ಮುಖಂಡರು, ಪ್ರಿನ್ಸಿಪಲ್‌ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಮಾತನಾಡಿದರೂ ವಿದ್ಯಾರ್ಥಿಗಳಿಗೆ ತರಗತಿಯೊಳಗೆ ಪ್ರವೇಶ ನೀಡಿಲ್ಲ. ಈ ಕುರಿತಂತೆ ಸಿಎಫ್‌ಐ ಹಾಗೂ ಪಿಎಫ್‌ಐ ಸಂಘಟನೆಗಳ ಮುಖ್ಯಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕಾಲೇಜು ಸೂಚಿಸಿರುವ ಸಮವಸ್ತ್ರವನ್ನಷ್ಟೇ ಧರಿಸಿ ಬರುವಂತೆ ಮಾರ್ಗದರ್ಶನ ನೀಡಿದ್ದು, ಹಿಜಾಬ್‌ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಪ್ರವೇಶವಿರುವುದಿಲ್ಲವೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ, ವಾರದ ಹಿಂದೆ ಬಲಪಂಥೀಯ ಕಾರ್ಯಕರ್ತರೊಂದಿಗೆ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸಿ ಮಂಗಳೂರಿನ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿತ್ತು. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಲಗಡಿ ಗ್ರಾಮದ ಸರ್ಕಾರಿ ಕಾಲೇಜಿನಲ್ಲೂ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು, ಹಿಜಾಬ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಅಸ್ಸಾಂ: ಬುರ್ಖಾ ಧರಿಸಿಲ್ಲ ಎಂದು ಆಕ್ಷೇಪ: ಜೀನ್ಸ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರದಬ್ಬಿದ ಮಾಲೀಕ

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವಂತೆ ನಾವು ಸಹ ಕೇಸರಿ ಶಾಲು ಧರಿಸಿ ತರಗತಿಗೆ ಬರುವುದಾಗಿ ವಿದ್ಯಾರ್ಥಿಗಳು ಸಮಜಾಯಿಷಿ ನೀಡಿದ್ದರು. ಆದರೆ, ನಾವು ಸಮವಸ್ತ್ರದ ಜೊತೆಗೆ ನೀಡಲಾಗುವ ದುಪ್ಪಟ್ಟವನ್ನು ಹಿಜಾಬ್ ರೀತಿಯಲ್ಲಿ ಧರಿಸಿಕೊಂಡು ಬರುತ್ತೇವೆ. ಬೇರೆ ವಸ್ತ್ರಗಳನ್ನು ಬಳಸುತ್ತಿಲ್ಲ. ದುಪ್ಪಟ್ಟವನ್ನು ಕೆಲವರು ಹೆಗಲ ಮೇಲೆ ಧರಿಸಿ ಬರುವಂತೆ, ನಾವು ಅದನ್ನು ತಲೆಮೇಲಿಂದ ಹಾಕಿಕೊಳ್ಳುತ್ತೇವೆ ಅಷ್ಟೇ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.

ವಿವಾದದ ಬಗ್ಗೆ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು, “ವಿದ್ಯಾರ್ಥಿನಿಯರು ತಲೆಗೆ ಶಾಲು ಸುತ್ತಿಕೊಳ್ಳುವುದರ ಬಗ್ಗೆ ಕೇಳುತ್ತಿದ್ದಾರೆ. ಅದು ಅವರ ಧಾರ್ಮಿಕ ಆಚರಣೆ, ಅದರಲ್ಲಿ ತಪ್ಪೇನಿದೆ. ಸಂವಿಧಾನದಲ್ಲಿ ಧಾರ್ಮಿಕ ಆಚರಣೆಯನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ” ಎಂದು ಹೇಳಿದ್ದಾರೆ.

“ಈ ಹಿಂದೆ ಯಾವುದೇ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಹಾಕಿ ಬರುತ್ತಿರಲಿಲ್ಲ ಎಂಬ ವಾದವಿದೆ. ಆದರೆ ಅವರು ಧರಿಸುತ್ತಿರಲಿಲ್ಲ ಎಂದರೆ, ಈಗಿರುವ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆಯ ಹಕ್ಕುಗಳನ್ನು ಕೇಳಬಾರದೇ? ಹೀಗೆಯೆ ಬೇರೆ ವಿದ್ಯಾರ್ಥಿನಿಯರು ಅವರ ಧಾರ್ಮಿಕ ಆಚರಣೆಗಳಾದ ಕೈಗೆ ಬಳೆ ಧರಿಸುವುದು, ಹಣೆಗೆ ಕುಂಕುಮ ಹಚ್ಚುವುದು, ತಲೆಗೆ ಹೂವು ಮುಡಿದುಕೊಳ್ಳುವುದನ್ನು ನಿರಾಕರಿಸಲು ಆಗುತ್ತದೆಯೆ? ಅಥವಾ ಅವರು ಹೊಸದಾಗಿ ಈ ಆಚರಣೆಯನ್ನು ಶುರು ಮಾಡಿದರೆ ತಪ್ಪು ಎನ್ನಲು ಸಾಧ್ಯವೆ?” ಎಂದು ಪ್ರಶ್ನಿಸಿದ್ದಾರೆ.

ಇತ್ತ ಈ ಪರಿಸ್ಥಿತಿ ನಿರ್ವಹಿಸಲು ಚಿಕ್ಕಮಗಳೂರು, ಮಂಗಳೂರು ಕಾಲೇಜು ಪ್ರಾಂಶುಪಾಲರು ಹಿಜಾಬ್ ಹಾಗೂ ಕೇಸರಿ ಶಾಲು ಎರಡನ್ನೂ ಧರಿಸಿ ಕಾಲೇಜಿಗೆ ಬರುವುದನ್ನು ನಿಷೇಧಿಸಿದ್ದು, ಕಾಲೇಜು ಸೂಚಿಸಿರುವ ಸಮವಸ್ತ್ರ ಮಾತ್ರ ಧರಿಸಿ ಬರುವಂತೆ ಸೂಚಿಸಿದ್ದಾರೆ.


ಇದನ್ನೂ ಓದಿ: ಉಡುಪಿ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕದಂತೆ ನಿರ್ಬಂಧ; ವಿದ್ಯಾರ್ಥಿನಿಯರ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -