ತನ್ನ ಗ್ರಾಮದಲ್ಲಿ ತೀವ್ರ ಜಾತಿ ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸಿದ ಅಪ್ರಾಪ್ತ ಬಾಲಕ ಆದಿತ್ಯ ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಘಟನೆಯ ನಂತರ, ರಾಜ್ಯ ಪೊಲೀಸರು ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸರ್ಕಲ್ ಆಫೀಸರ್ (ಸಿಒ) ಪ್ರದೀಪ್ ಕುಮಾರ್ ತ್ರಿಪಾಠಿ, “ಆದಿತ್ಯ ಎಂಬ ಬಾಲಕ ನೇಣು ಬಿಗಿದುಕೊಂಡಿದ್ದಾನೆ; ಪಿಎಸ್ ಕಪ್ತಂಗಂಜ್ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿತ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಸ್ಪರ ಭಿನ್ನಾಭಿಪ್ರಾಯ ಕಾರಣ ಎಂದು ಶಂಕಿಸಲಾಗಿದೆ” ಎಂದು ಹೇಳಿದ್ದಾರೆ.
ಆದರೆ, ಸಾವಿಗೂ ಮುನ್ನ ಆದಿತ್ಯನಿಗೆ ತೀವ್ರ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ.
ಆತನ ಚಿಕ್ಕಪ್ಪ ವಿಜಯ್ ಕುಮಾರ್ ಪ್ರಕಾರ, ಅಪ್ರಾಪ್ತ ಬಾಲಕನನ್ನು ಗ್ರಾಮದಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಲಾಗಿತ್ತು, ಅಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ.
“ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆತನನ್ನು ಆಹ್ವಾನಿಸಲಾಗಿತ್ತು, ಇದೆಲ್ಲ ಪೂರ್ವ ಯೋಜಿತವೋ ಗೊತ್ತಿಲ್ಲ. ಆದರೆ, ಆತನನ್ನು ವಿವಸ್ತ್ರಗೊಳಿಸಿ ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ನಮ್ಮ ದೂರು ದಾಖಲಿಸಿಕೊಂಡಿಲ್ಲ” ಎಂದು ಮೃತ ಬಾಲಕನ ಚಿಕ್ಕಪ್ಪ ಆರೋಪಿಸಿದ್ದಾರೆ.
ಔಪಚಾರಿಕವಾಗಿ ದೂರು ಸಲ್ಲಿಸಲು ತಮ್ಮ ಪ್ರಯತ್ನಗಳನ್ನು ಆರಂಭದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ವಿಜಯ್ ಆರೋಪಿಸಿದರು.
“ಡಿಸೆಂಬರ್ 20 ರಂದು ಘಟನೆ ಸಂಭವಿಸಿದೆ. ಆದರೆ, ಮರುದಿನ ನಮಗೆ ವಿಷಯ ತಿಳಿಯಿತು. ಆದಿತ್ಯ ತಡರಾತ್ರಿ ಮನೆಗೆ ಬಂದು ಮರುದಿನ ಬೆಳಿಗ್ಗೆ ಕಿರುಕುಳದ ಬಗ್ಗೆ ವಿವರಿಸಿದ್ದಾನೆ. ನಾವು ಪ್ರಯತ್ನಪಟ್ಟರೂ ಅಧಿಕಾರಿಗಳು ಮೂರು ದಿನಗಳಾದರೂ ನಮ್ಮ ದೂರು ದಾಖಲಿಸಲಿಲ್ಲ. ಅವರು ಮತ್ತೆ ಕಿರುಕುಳ ನೀಡಿದ್ದು, ಅದು ಬಾಲಕನ ಆತ್ಮಹತ್ಯೆಗೆ ಕಾರಣವಾಯಿತು” ಎಂದು ಹೇಳಿದರು.
ಇದನ್ನೂ ಓದಿ; ಬಿಹಾರ | ಮುಸ್ಲಿಂ ಯುವಕನಿಗೆ ಥಳಿಸಿ, ಉಗುಳು ನೆಕ್ಕುವಂತೆ ಬಲವಂತ ; ಎಫ್ಐಆರ್ ದಾಖಲು


