Homeಕರ್ನಾಟಕಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

- Advertisement -
- Advertisement -

ಉತ್ತರ ಪ್ರದೇಶದ ಸಾಮಾಜಿಕ ಸನ್ನಿವೇಶಕ್ಕೂ, ಅಲ್ಲಿನ ರಾಜಕೀಯ ಪಕ್ಷಗಳ ಸ್ಥಿತಿಗತಿಗೂ ಕರ್ನಾಟಕದ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜೊತೆಗೆ ಉ.ಪ್ರದೇಶವು ಕರ್ನಾಟಕದ ಸುಮಾರು ನಾಲ್ಕು ಪಟ್ಟು ಇರುವ ದೊಡ್ಡ ರಾಜ್ಯ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಅಲ್ಲಿನ ವಿಧಾನಸಭೆಯಲ್ಲಿ ನಾಲ್ಕರಲ್ಲಿ ಮೂರರಷ್ಟು ಬಹುಮತ ಪಡೆದಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತವೇ ಇರಲಿಲ್ಲ; ಅದು ಅಕ್ರಮ ಮಾರ್ಗದಿಂದ ಅಧಿಕಾರ ಕಬಳಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಮತಪ್ರಮಾಣದಲ್ಲಿ ಬಿಜೆಪಿಗೂ ಅದರ ಸಮೀಪ ಸ್ಫರ್ಧಿ ಎಸ್‌ಪಿಗೂ ದೊಡ್ಡ ವ್ಯತ್ಯಾಸವಿದೆ. ಆದರೆ ಕರ್ನಾಟಕದಲ್ಲಿ 2018ರಲ್ಲಿ ಸೋತ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚೇ ಮತ ಬಂದಿತ್ತು. ಹೀಗಿರುವಾಗ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್‌ಗೆ ಎಚ್ಚರಿಕೆಯ ವಿಚಾರ ಹೇಗಾದೀತು?

ನಿಸ್ಸಂದೇಹವಾಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜನ ಮೆಚ್ಚಿಕೊಂಡ ಆಡಳಿತ ನೀಡಿದ ಸರ್ಕಾರವಾಗಿರಲಿಲ್ಲ. ಇಂದು ಹಿಂತಿರುಗಿ ನೋಡಿ ಆ ವಿಚಾರದಲ್ಲಿ ಒಳ್ಳೆಯ ಆಳ್ವಿಕೆಯಿತ್ತು; ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮವಾದ ಆಡಳಿತ ನೀಡಿದ್ದರಿಂದಲೇ ಜನರು ಮೆಚ್ಚಿ ಮತ ಹಾಕಿದ್ದಾರೆ ಎಂದು ಯಾರಾದರೂ ಹೇಳಿದರೆ ಅದು ವಾಸ್ತವವಲ್ಲ. ಕೋವಿಡ್ ನಿರ್ವಹಣೆ ಮಾತ್ರವಲ್ಲದೇ ಕಳೆದ ಚುನಾವಣೆಯಲ್ಲಿ ಚರ್ಚೆಗೆ ಬಂದ ಹಲವಾರು ಸಂಗತಿಗಳಲ್ಲಿ ಸದರಿ ಸರ್ಕಾರದ ಸಾಧನೆ ಅತ್ಯಂತ ಕಳಪೆಯಾಗಿತ್ತು. ಕರ್ನಾಟಕದಲ್ಲೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಸಾಧನೆಯೂ ಕಳಪೆಯೇ ಆಗಿದೆ. ಅಲ್ಲಿ ಒಬ್ಬರೇ ಮುಖ್ಯಮಂತ್ರಿ ಆಡಳಿತ ನಡೆಸಿದ್ದರೆ, ಇಲ್ಲಿ ಇಬ್ಬಿಬ್ಬರು ಬಂದೂ ಏನೂ ಪ್ರಯೋಜನವಾಗಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಆದಂತೆ ಇಲ್ಲಿಯೂ ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರಿಗೆ ಅನ್ನಿಸುತ್ತಿಲ್ಲ. ಬಹಳ ಮುಖ್ಯವಾಗಿ ಸರ್ಕಾರದ ವೈಫಲ್ಯದ ಕುರಿತು ವ್ಯಕ್ತವಾದ ಅಥವಾ ಅವ್ಯಕ್ತವಾದ ಸಿಟ್ಟು ಜನರಲ್ಲಿರಬೇಕು. ಅದು ಉತ್ತರ ಪ್ರದೇಶದಲ್ಲಿ ಕಂಡಷ್ಟೂ ಕರ್ನಾಟಕದಲ್ಲಿ ಕಾಣುತ್ತಿಲ್ಲ ಎಂಬುದನ್ನು ಗಮನಿಸಬೇಕು. ಏಕೆಂದರೆ ಜನರು ಗಮನ ಹರಿಸಲು ಬೇಕಾದ ಬೇರೆ (ಅವುಗಳ ಬಗ್ಗೆ ಬಿಜೆಪಿ ವಿರೋಧಿಗಳ ಅಭಿಪ್ರಾಯವೇನೇ ಇರಬಹುದು) ಇಶ್ಯೂಗಳನ್ನು ಬಿಜೆಪಿಯು ರಾಶಿರಾಶಿ ತಂದು ಹಾಕುತ್ತದೆ.

ಯೋಗಿ ಆದಿತ್ಯನಾಥ್

ಇಂತಹ ಸನ್ನಿವೇಶ ಇದ್ದಾಗ, ಇನ್ನೊಬ್ಬರು ಬಂದರೆ ಇವರಿಗಿಂತ ಒಳ್ಳೆಯ ಅಧಿಕಾರ ನೀಡುತ್ತಾರೆ ಎಂಬ ಭರವಸೆ ಹುಟ್ಟಿಸುವಂತಹ ಪಕ್ಷ ಹಾಗೂ ನಾಯಕತ್ವ ಇರಬೇಕು. ನಿಸ್ಸಂದೇಹವಾಗಿ ಎಚ್‌ಡಿಕೆ, ಬಿಎಸ್‌ವೈ ಮತ್ತು ಬೊಮ್ಮಾಯಿಯವರಿಗಿಂತ ಇದರ ಹಿಂದಿನ ಐದು ವರ್ಷಗಳ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಹಲವು ವಿಧಗಳಲ್ಲಿ ಉತ್ತಮವಾದುದಾಗಿತ್ತು. ಆದರೂ ಅದು 2018ರ ಚುನಾವಣೆಯಲ್ಲಿ ಸೋತಿತ್ತು. ಅಂದರೆ ಕಾಂಗ್ರೆಸ್‌ನ ಆಡಳಿತದ ಒಳ್ಳೆಯ ಅಂಶಗಳನ್ನು ಆಗಲೇ ನೆನಪಿಸಿಕೊಳ್ಳದ ಜನರು ಈಗ ನೆನಪಿಸಿಕೊಳ್ಳಬೇಕೆಂದರೆ, ಅದಕ್ಕಿಂತ ಈಗಿನ ಸರ್ಕಾರ ಕಡು ಜನವಿರೋಧಿ ಎನ್ನಿಸಬೇಕು. ಅದಾಗುತ್ತಿಲ್ಲ. ಇನ್ನು ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿಯೆಂತಲೂ, ಡಿ.ಕೆ.ಶಿವಕುಮಾರ್‌ರನ್ನು ರೌಡಿ ಎಂತಲೂ ಬಿಂಬಿಸಲು ಬೇಕಾದ್ದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ವಿಶೇಷವಾಗಿ ಒಕ್ಕಲಿಗ ವಿರೋಧಿ ಎಂದೂ ಯಶಸ್ವಿಯಾಗಿ ಬಿಂಬಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ದೀರ್ಘಕಾಲ ನಿದ್ರೆಯಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿಗಿಂತ ಕರ್ನಾಟಕದ ವಿರೋಧ ಪಕ್ಷ ಕಾಂಗ್ರೆಸ್ ಸಕ್ರಿಯವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಕೋವಿಡ್ ಸಂದರ್ಭದ ದುರಾಡಳಿತ, ಭ್ರಷ್ಟಾಚಾರದ ವಿಷಯದಂತಹ ಕೆಲವು ಸಂಗತಿಗಳನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿತ್ತು ಅನ್ನುವುದೂ ನಿಜ. ಆದರೂ, ಜನರ ಕಣ್ಣಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲು ಎನ್ನುವಂತಹ ಭಾವನೆ ಮೂಡುವಲ್ಲಿ ಇವು ಸಾಕಾಗಿಲ್ಲ. ಇಲ್ಲೇ ಎರಡಕ್ಕೂ ಸಾಮ್ಯತೆ ಇರುವುದು. ಬಿಜೆಪಿಯ ಕುರಿತು (ಕೋಮುವಾದೀ ಪ್ರೊಪಗಾಂಡಾದ ಪರಿಣಾಮದಿಂದ ಪೂರಾ ಒಮ್ಮುಖವಾಗಿರುವವರನ್ನು ಬಿಟ್ಟು) ಕರ್ನಾಟಕದ ಜನರಿಗೆ ವಿಶೇಷ ಪ್ರೇಮವೂ ಇಲ್ಲ; ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಕೆಲವು ಸಮುದಾಯಗಳಲ್ಲಿ ಕಂಡಷ್ಟು ಸಿಟ್ಟೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ಪರವಾದ ಭಾವನೆಯೂ ಇಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಯಾದವರಿಗಿದ್ದ ಎಸ್‌ಪಿ ಪ್ರೇಮದಂಥದ್ದು ಇಲ್ಲಿ ಕಾಂಗ್ರೆಸ್‌ನ ಕುರಿತಾಗಿ ಮುಸ್ಲಿಮರಿಗೆ ಬಿಟ್ಟರೆ ಬೇರಾರಿಗೂ ಇಲ್ಲ. ಮುಸ್ಲಿಮರಿಗಿರುವುದೂ ಪ್ರೇಮವಲ್ಲ; ಅನಿವಾರ್ಯತೆ.

ಹೀಗಿದ್ದೂ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ಚುನಾವಣೆಯಲ್ಲಿ ನಾವು ಗೆದ್ದುಬಿಡುವ ಸಾಧ್ಯತೆ ಅಪಾರವಾಗಿದೆ ಎಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬರುವವರೆಗೂ ನಂಬಿಕೊಂಡಿದ್ದರು. ಉತ್ತರ ಪ್ರದೇಶಕ್ಕಿಂತ ಭಿನ್ನವಾಗಿ ಇಲ್ಲಿ ತಮಗೆ ಹೆಚ್ಚಿನ ಓಟ್‌ಬೇಸ್ ಇದೆ ಎಂಬ ಅಂಶವನ್ನು ಅವರುಗಳು ಹೇಳಬಹುದಾದರೂ, 2018ರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬಂದಿದೆ ಎಂಬ ವಿಚಾರದಲ್ಲಿ ಅವರು ಖುಷಿ ಪಟ್ಟುಕೊಳ್ಳಲು ಏನೂ ಇಲ್ಲ. ಅದು ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ಮತ. ಕನಿಷ್ಠ 50 ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ತಿತ್ವ ಅಷ್ಟಾಗಿ ಇಲ್ಲವಾದ್ದರಿಂದ, ಆದರೆ ತಾನಿರುವ 175 ಕ್ಷೇತ್ರಗಳಲ್ಲಿ ಅದು ಬಲಾಢ್ಯವಾಗಿರುವುದರಿಂದ, ಬಿಜೆಪಿಗೆ ಕಡಿಮೆ ಮತ ಬಂದರೂ ಕಾಂಗ್ರೆಸ್‌ಗಿಂತ ಹೆಚ್ಚಿನ ಸೀಟು ಪಡೆಯುತ್ತದೆ.

ಅಖಿಲೇಶ್ ಯಾದವ್

ಹಾಗೆಯೇ ಬಿಎಸ್‌ಪಿ ಹಾಗೂ ಎಂಐಎಂ ಉ.ಪ್ರದೇಶದಲ್ಲಿ ವಹಿಸಿದ ಪಾತ್ರವನ್ನು ಕರ್ನಾಟಕದಲ್ಲಿ ಜೆಡಿಎಸ್ ವಹಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಾದದಲ್ಲಿ ಎರಡು ಸಮಸ್ಯೆಗಳಿವೆ. ಒಂದು ಬಿಎಸ್‌ಪಿ ಅಥವಾ
ಎಂಐಎಂ ಕುರಿತಾಗಿ ಮುಂದಿಡುತ್ತಿರುವ ವಾದವೇ ಅಸಂಬದ್ಧ. ಒಂದು ಕೋಟಿಗೂ ಹೆಚ್ಚು ಮತ ಗಳಿಸಿರುವ ಬಿಎಸ್‌ಪಿಯಿಂದ ಎಸ್‌ಪಿ ಬೆಂಬಲ ನಿರೀಕ್ಷಿಸುವುದಾದಲ್ಲಿ ತಾನೇ ಮುಂದಾಗಬೇಕಿತ್ತು. ಅದೇನೂ ಪುಟ್ಟ ಪಕ್ಷವಲ್ಲ. ಎರಡನೆಯದಾಗಿ ಈ ಪಕ್ಷಗಳು ಸ್ಪರ್ಧಿಸದೇ ಇದ್ದಲ್ಲಿ ಆ ಮತಗಳು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಬಿಎಸ್‌ಪಿಯ ಮತಗಳು ಬಿಜೆಪಿಗೆ ಹೋಗಿವೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಈ ದೇಶದಲ್ಲಿ ಸೆಕ್ಯುಲರ್ ಮತಗಳು ಎಂಬುದು ಬಹುತೇಕ ಕಡಿಮೆ. ಎರಡು ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಅವೆರಡರ ಮತಗಳೂ ಜೊತೆಯಾಗಿಬಿಡುತ್ತವೆ ಎಂಬ ತಿಳುವಳಿಕೆ ರಾಜಕೀಯ ಅಮಾಯಕತನದಿಂದ ಮಾತ್ರ ಬರಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವಾದಿಗಳು ಪಕ್ಷ ಮಾಡಿಕೊಳ್ಳಬಹುದು, ಯಾದವರು ಪಕ್ಷ ಮಾಡಿಕೊಳ್ಳಬಹುದು, ವಿವಿಧ ಹಿಂದುಳಿದ ಜಾತಿಗಳು ಪಕ್ಷ ಮಾಡಿಕೊಳ್ಳಬಹುದು, ದಲಿತರು ಮತ್ತು ಮುಸ್ಲಿಮರು ಮಾತ್ರ ತಮ್ಮದೇ ಪಕ್ಷ ಮಾಡಿಕೊಳ್ಳಬಾರದು ಎಂದು ಹೇಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಇದೇ ಮಾತು ಕರ್ನಾಟಕದಲ್ಲಿ ಜೆಡಿಎಸ್‌ಗೂ ಅನ್ವಯಿಸುತ್ತದೆ. ಜೆಡಿಎಸ್ ತನ್ನ ರಾಜಕಾರಣವನ್ನು ತಾನು ಮಾಡುತ್ತಿದೆ. ಅದರ ಹೆಸರಲ್ಲಿ ಜಾತ್ಯತೀತ ಎಂಬ ಪದ ಇದ್ದ ಮಾತ್ರಕ್ಕೆ ಅದು ಪಕ್ಷವನ್ನು ವಿಸರ್ಜಿಸಿ ಕಾಂಗ್ರೆಸ್ ಸೇರಲಾಗುವುದಿಲ್ಲ. ಜೆಡಿಎಸ್ ಅಸ್ತಿತ್ವದಲ್ಲಿರುವ ಬಹುತೇಕ ಕಡೆ ಅದರ ವಿರೋಧಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಒಂದು ವೇಳೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ಸಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ, ಆ ಭಾಗದ ಅರ್ಧದಷ್ಟು ಜನರು ಬಿಜೆಪಿಯ ಕಡೆಗೇ ಹೊರಳುತ್ತಾರೆ. ಕರ್ನಾಟಕಕ್ಕೆ ಜೆಡಿಎಸ್, ಕೇಂದ್ರದಲ್ಲಾದರೆ ನರೇಂದ್ರ ಮೋದಿ ಎಂದು ಹೇಳುವ ಜೆಡಿಎಸ್ ಮತದಾರರು ಇದ್ದಾರಷ್ಟೇ ಅಲ್ಲ; ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಮಂಡ್ಯ ಹಾಗೂ ತುಮಕೂರುಗಳಲ್ಲಿ ಬಿಜೆಪಿಗೆ ಮತ ಹಾಕಿದವರಲ್ಲಿ ಕಾಂಗ್ರೆಸ್‌ನ ಮತದಾರರೂ ಮುಂದಾಗಿದ್ದರು. ಹಾಸನದಲ್ಲಂತೂ ಸಮಾಜವಾದಿಗಳು, ದಲಿತ ಸಂಘಟನೆಯವರೂ ಸಹಾ ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಬಿಜೆಪಿಗೆ ಮತ ಹಾಕಿ ಎಂದು ಪತ್ರಿಕಾಗೋಷ್ಠಿ ಮಾಡಿ ಕರೆ ನೀಡಿದ್ದರು.

ಸ್ಥಳೀಯ ರಾಜಕಾರಣದ ಒಳಸುಳಿಯನ್ನು ಆಧರಿಸಿ ರಾಜಕೀಯ ಅಸ್ತಿತ್ವದ ಲೆಕ್ಕಾಚಾರ ಕಾಂಗ್ರೆಸ್‌ಗೆ ಮಾತ್ರ ಇರಬೇಕೆಂದು ಹಲವರು ಏಕೆ ಬಯಸುತ್ತಾರೋ ಅರ್ಥವಾಗುವುದಿಲ್ಲ. ಇದೇ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡದೇ ಎಸ್‌ಪಿ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲಿಸಬೇಕಿತ್ತು.

ಕುಮಾರಸ್ವಾಮಿ

ಇದೆಲ್ಲದರ ಅರ್ಥ ಇಷ್ಟೇ. ಜೆಡಿಎಸ್ ಎಂಬ ಪಕ್ಷದ ಅಸ್ತಿತ್ವ ಇದೆ. ಅದನ್ನು ಒಪ್ಪಿ ಕಾಂಗ್ರೆಸ್ ತನ್ನ ರಾಜಕಾರಣವನ್ನು ತಾನು ಮಾಡಬೇಕು. ಒಂದರ್ಥದಲ್ಲಿ ಆ ಪಕ್ಷ ಇರುವುದೂ ಕಾಂಗ್ರೆಸ್‌ಗೆ ಒಳ್ಳೆಯದೇ. ಈ ಭಾಗದಲ್ಲಿ ತಾನು ಗೆಲ್ಲಲಾಗದು ಎನಿಸಿದ ಕೂಡಲೇ ಬಿಜೆಪಿಯು ಜೆಡಿಎಸ್‌ಅನ್ನು ಒಳಗಿಂದೊಳಗೇ ಬೆಂಬಲಿಸುತ್ತದೆ. ಕಳೆದ ಸಾರಿ ಮಾಡಿದಂತೆ. ಇದಕ್ಕೆ ಕಾರಣವೇನೆಂದರೆ ಬಿಜೆಪಿಯು ಪ್ರತಿ ಕ್ಷೇತ್ರದ ಕುರಿತು ಲೆಕ್ಕ ಹಾಕಿ ತನ್ನ ಕಾರ್ಯತಂತ್ರವನ್ನು ರೂಪಿಸುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದಂತೆ. ಇದೂ ಸಹಾ ಕಾಂಗ್ರೆಸ್‌ಗೆ ಒಂದು ಪಾಠವೇ.

ಆದರೆ ಇದರಿಂದ ಪಾಠವನ್ನೇನೂ ಕಾಂಗ್ರೆಸ್ ಕಲಿಯುವಂತೆ ತೋರುವುದಿಲ್ಲ. ಇಂದಿಗೂ ಕಾಂಗ್ರೆಸ್‌ಗೆ ಸರಿಯಾದ ಅಭ್ಯರ್ಥಿ ಇಲ್ಲದ ಸುಮಾರು 75 ಕ್ಷೇತ್ರಗಳು ಕರ್ನಾಟಕದಲ್ಲಿವೆ. ಉಳಿದ 150ರ ಪೈಕಿ 100ರಲ್ಲಾದರೂ ಗೆದ್ದೇ ಬಿಡಬಹುದು ಎಂದು ಹೇಳುವ ಸ್ಥಿತಿಯಿಲ್ಲ. ಈ ಸಾರಿಯಂತೂ ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡುವಂತಹ ನೆರೆಟಿವ್ ಏನೂ ಇಲ್ಲ; ಬದಲಿಗೆ ಇಲ್ಲಿನ ಲೀಡರ್‌ಗಳ ವಿರುದ್ಧದ ಸತತ ಅಪಪ್ರಚಾರ ಹಾಗೂ ಲೀಡರ್‌ಗಳ ನಡುವಿನ ಸಾಮರಸ್ಯದ ಕೊರತೆಯು ಇನ್ನೂ ದೊಡ್ಡ ಪೆಟ್ಟೇ ಕೊಡಬಹುದು.

ಹಾಗೆ ನೋಡಿದರೆ ಕಾಂಗ್ರೆಸ್ ಬಗ್ಗೆಯೂ ಪ್ರೇಮವಿಲ್ಲದ, ಬಿಜೆಪಿಯ ಬಗ್ಗೆ ತಿರಸ್ಕಾರವಾಗಲೀ ಒಲವಾಗಲೀ ಇಲ್ಲದ ಗಣನೀಯ ಸಂಖ್ಯೆಯ ಯುವ ಹಾಗೂ ಇತರ ಸಮುದಾಯಗಳ ಮತಗಳನ್ನು ತೆಗೆದುಕೊಳ್ಳುವ ಹೊಸದೊಂದು ಪಕ್ಷವು ಹುಟ್ಟಿಕೊಂಡಲ್ಲದೇ ಕಾಂಗ್ರೆಸ್‌ಗೆ ಅನುಕೂಲಕರವಾದ ಸಂದರ್ಭ ಒದಗಿಬರುವುದು ಕಷ್ಟವೆಂದೇ ತೋರುತ್ತಿದೆ. ಏಕೆಂದರೆ ಎಷ್ಟೇ ದುರಾಡಳಿತ ನೀಡಿದರೂ, ಜನರು ಅದರ ಬಗ್ಗೆ ಯೋಚಿಸದಂತೆ ಮಾಡಲು, ವಿರೋಧಿಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಬಿಜೆಪಿಯ ಕೈಯ್ಯಲ್ಲಿ ಪ್ರಬಲ ಪ್ರಚಾರ ಯಂತ್ರಾಂಗ ಇದೆ. ಉತ್ತರ ಪ್ರದೇಶದಲ್ಲಿ ಆಗಿದ್ದು ಅದೇ. ಇದನ್ನು ಅರಿತು ಎಲ್ಲಾ ರೀತಿಯಿಂದಲೂ ಭಿನ್ನ ಕಾರ್ಯತಂತ್ರ ಮಾಡದೇ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲುವುದು ಬಹಳ ಕಷ್ಟ.

ಸಿಸುಮಗ


ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...