Homeಕರ್ನಾಟಕಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

- Advertisement -
- Advertisement -

ಉತ್ತರ ಪ್ರದೇಶದ ಸಾಮಾಜಿಕ ಸನ್ನಿವೇಶಕ್ಕೂ, ಅಲ್ಲಿನ ರಾಜಕೀಯ ಪಕ್ಷಗಳ ಸ್ಥಿತಿಗತಿಗೂ ಕರ್ನಾಟಕದ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜೊತೆಗೆ ಉ.ಪ್ರದೇಶವು ಕರ್ನಾಟಕದ ಸುಮಾರು ನಾಲ್ಕು ಪಟ್ಟು ಇರುವ ದೊಡ್ಡ ರಾಜ್ಯ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಅಲ್ಲಿನ ವಿಧಾನಸಭೆಯಲ್ಲಿ ನಾಲ್ಕರಲ್ಲಿ ಮೂರರಷ್ಟು ಬಹುಮತ ಪಡೆದಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತವೇ ಇರಲಿಲ್ಲ; ಅದು ಅಕ್ರಮ ಮಾರ್ಗದಿಂದ ಅಧಿಕಾರ ಕಬಳಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಮತಪ್ರಮಾಣದಲ್ಲಿ ಬಿಜೆಪಿಗೂ ಅದರ ಸಮೀಪ ಸ್ಫರ್ಧಿ ಎಸ್‌ಪಿಗೂ ದೊಡ್ಡ ವ್ಯತ್ಯಾಸವಿದೆ. ಆದರೆ ಕರ್ನಾಟಕದಲ್ಲಿ 2018ರಲ್ಲಿ ಸೋತ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚೇ ಮತ ಬಂದಿತ್ತು. ಹೀಗಿರುವಾಗ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್‌ಗೆ ಎಚ್ಚರಿಕೆಯ ವಿಚಾರ ಹೇಗಾದೀತು?

ನಿಸ್ಸಂದೇಹವಾಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜನ ಮೆಚ್ಚಿಕೊಂಡ ಆಡಳಿತ ನೀಡಿದ ಸರ್ಕಾರವಾಗಿರಲಿಲ್ಲ. ಇಂದು ಹಿಂತಿರುಗಿ ನೋಡಿ ಆ ವಿಚಾರದಲ್ಲಿ ಒಳ್ಳೆಯ ಆಳ್ವಿಕೆಯಿತ್ತು; ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮವಾದ ಆಡಳಿತ ನೀಡಿದ್ದರಿಂದಲೇ ಜನರು ಮೆಚ್ಚಿ ಮತ ಹಾಕಿದ್ದಾರೆ ಎಂದು ಯಾರಾದರೂ ಹೇಳಿದರೆ ಅದು ವಾಸ್ತವವಲ್ಲ. ಕೋವಿಡ್ ನಿರ್ವಹಣೆ ಮಾತ್ರವಲ್ಲದೇ ಕಳೆದ ಚುನಾವಣೆಯಲ್ಲಿ ಚರ್ಚೆಗೆ ಬಂದ ಹಲವಾರು ಸಂಗತಿಗಳಲ್ಲಿ ಸದರಿ ಸರ್ಕಾರದ ಸಾಧನೆ ಅತ್ಯಂತ ಕಳಪೆಯಾಗಿತ್ತು. ಕರ್ನಾಟಕದಲ್ಲೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಸಾಧನೆಯೂ ಕಳಪೆಯೇ ಆಗಿದೆ. ಅಲ್ಲಿ ಒಬ್ಬರೇ ಮುಖ್ಯಮಂತ್ರಿ ಆಡಳಿತ ನಡೆಸಿದ್ದರೆ, ಇಲ್ಲಿ ಇಬ್ಬಿಬ್ಬರು ಬಂದೂ ಏನೂ ಪ್ರಯೋಜನವಾಗಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಆದಂತೆ ಇಲ್ಲಿಯೂ ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರಿಗೆ ಅನ್ನಿಸುತ್ತಿಲ್ಲ. ಬಹಳ ಮುಖ್ಯವಾಗಿ ಸರ್ಕಾರದ ವೈಫಲ್ಯದ ಕುರಿತು ವ್ಯಕ್ತವಾದ ಅಥವಾ ಅವ್ಯಕ್ತವಾದ ಸಿಟ್ಟು ಜನರಲ್ಲಿರಬೇಕು. ಅದು ಉತ್ತರ ಪ್ರದೇಶದಲ್ಲಿ ಕಂಡಷ್ಟೂ ಕರ್ನಾಟಕದಲ್ಲಿ ಕಾಣುತ್ತಿಲ್ಲ ಎಂಬುದನ್ನು ಗಮನಿಸಬೇಕು. ಏಕೆಂದರೆ ಜನರು ಗಮನ ಹರಿಸಲು ಬೇಕಾದ ಬೇರೆ (ಅವುಗಳ ಬಗ್ಗೆ ಬಿಜೆಪಿ ವಿರೋಧಿಗಳ ಅಭಿಪ್ರಾಯವೇನೇ ಇರಬಹುದು) ಇಶ್ಯೂಗಳನ್ನು ಬಿಜೆಪಿಯು ರಾಶಿರಾಶಿ ತಂದು ಹಾಕುತ್ತದೆ.

ಯೋಗಿ ಆದಿತ್ಯನಾಥ್

ಇಂತಹ ಸನ್ನಿವೇಶ ಇದ್ದಾಗ, ಇನ್ನೊಬ್ಬರು ಬಂದರೆ ಇವರಿಗಿಂತ ಒಳ್ಳೆಯ ಅಧಿಕಾರ ನೀಡುತ್ತಾರೆ ಎಂಬ ಭರವಸೆ ಹುಟ್ಟಿಸುವಂತಹ ಪಕ್ಷ ಹಾಗೂ ನಾಯಕತ್ವ ಇರಬೇಕು. ನಿಸ್ಸಂದೇಹವಾಗಿ ಎಚ್‌ಡಿಕೆ, ಬಿಎಸ್‌ವೈ ಮತ್ತು ಬೊಮ್ಮಾಯಿಯವರಿಗಿಂತ ಇದರ ಹಿಂದಿನ ಐದು ವರ್ಷಗಳ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಹಲವು ವಿಧಗಳಲ್ಲಿ ಉತ್ತಮವಾದುದಾಗಿತ್ತು. ಆದರೂ ಅದು 2018ರ ಚುನಾವಣೆಯಲ್ಲಿ ಸೋತಿತ್ತು. ಅಂದರೆ ಕಾಂಗ್ರೆಸ್‌ನ ಆಡಳಿತದ ಒಳ್ಳೆಯ ಅಂಶಗಳನ್ನು ಆಗಲೇ ನೆನಪಿಸಿಕೊಳ್ಳದ ಜನರು ಈಗ ನೆನಪಿಸಿಕೊಳ್ಳಬೇಕೆಂದರೆ, ಅದಕ್ಕಿಂತ ಈಗಿನ ಸರ್ಕಾರ ಕಡು ಜನವಿರೋಧಿ ಎನ್ನಿಸಬೇಕು. ಅದಾಗುತ್ತಿಲ್ಲ. ಇನ್ನು ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿಯೆಂತಲೂ, ಡಿ.ಕೆ.ಶಿವಕುಮಾರ್‌ರನ್ನು ರೌಡಿ ಎಂತಲೂ ಬಿಂಬಿಸಲು ಬೇಕಾದ್ದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ವಿಶೇಷವಾಗಿ ಒಕ್ಕಲಿಗ ವಿರೋಧಿ ಎಂದೂ ಯಶಸ್ವಿಯಾಗಿ ಬಿಂಬಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ದೀರ್ಘಕಾಲ ನಿದ್ರೆಯಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿಗಿಂತ ಕರ್ನಾಟಕದ ವಿರೋಧ ಪಕ್ಷ ಕಾಂಗ್ರೆಸ್ ಸಕ್ರಿಯವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಕೋವಿಡ್ ಸಂದರ್ಭದ ದುರಾಡಳಿತ, ಭ್ರಷ್ಟಾಚಾರದ ವಿಷಯದಂತಹ ಕೆಲವು ಸಂಗತಿಗಳನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿತ್ತು ಅನ್ನುವುದೂ ನಿಜ. ಆದರೂ, ಜನರ ಕಣ್ಣಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲು ಎನ್ನುವಂತಹ ಭಾವನೆ ಮೂಡುವಲ್ಲಿ ಇವು ಸಾಕಾಗಿಲ್ಲ. ಇಲ್ಲೇ ಎರಡಕ್ಕೂ ಸಾಮ್ಯತೆ ಇರುವುದು. ಬಿಜೆಪಿಯ ಕುರಿತು (ಕೋಮುವಾದೀ ಪ್ರೊಪಗಾಂಡಾದ ಪರಿಣಾಮದಿಂದ ಪೂರಾ ಒಮ್ಮುಖವಾಗಿರುವವರನ್ನು ಬಿಟ್ಟು) ಕರ್ನಾಟಕದ ಜನರಿಗೆ ವಿಶೇಷ ಪ್ರೇಮವೂ ಇಲ್ಲ; ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಕೆಲವು ಸಮುದಾಯಗಳಲ್ಲಿ ಕಂಡಷ್ಟು ಸಿಟ್ಟೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ಪರವಾದ ಭಾವನೆಯೂ ಇಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಯಾದವರಿಗಿದ್ದ ಎಸ್‌ಪಿ ಪ್ರೇಮದಂಥದ್ದು ಇಲ್ಲಿ ಕಾಂಗ್ರೆಸ್‌ನ ಕುರಿತಾಗಿ ಮುಸ್ಲಿಮರಿಗೆ ಬಿಟ್ಟರೆ ಬೇರಾರಿಗೂ ಇಲ್ಲ. ಮುಸ್ಲಿಮರಿಗಿರುವುದೂ ಪ್ರೇಮವಲ್ಲ; ಅನಿವಾರ್ಯತೆ.

ಹೀಗಿದ್ದೂ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ಚುನಾವಣೆಯಲ್ಲಿ ನಾವು ಗೆದ್ದುಬಿಡುವ ಸಾಧ್ಯತೆ ಅಪಾರವಾಗಿದೆ ಎಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬರುವವರೆಗೂ ನಂಬಿಕೊಂಡಿದ್ದರು. ಉತ್ತರ ಪ್ರದೇಶಕ್ಕಿಂತ ಭಿನ್ನವಾಗಿ ಇಲ್ಲಿ ತಮಗೆ ಹೆಚ್ಚಿನ ಓಟ್‌ಬೇಸ್ ಇದೆ ಎಂಬ ಅಂಶವನ್ನು ಅವರುಗಳು ಹೇಳಬಹುದಾದರೂ, 2018ರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬಂದಿದೆ ಎಂಬ ವಿಚಾರದಲ್ಲಿ ಅವರು ಖುಷಿ ಪಟ್ಟುಕೊಳ್ಳಲು ಏನೂ ಇಲ್ಲ. ಅದು ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ಮತ. ಕನಿಷ್ಠ 50 ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ತಿತ್ವ ಅಷ್ಟಾಗಿ ಇಲ್ಲವಾದ್ದರಿಂದ, ಆದರೆ ತಾನಿರುವ 175 ಕ್ಷೇತ್ರಗಳಲ್ಲಿ ಅದು ಬಲಾಢ್ಯವಾಗಿರುವುದರಿಂದ, ಬಿಜೆಪಿಗೆ ಕಡಿಮೆ ಮತ ಬಂದರೂ ಕಾಂಗ್ರೆಸ್‌ಗಿಂತ ಹೆಚ್ಚಿನ ಸೀಟು ಪಡೆಯುತ್ತದೆ.

ಅಖಿಲೇಶ್ ಯಾದವ್

ಹಾಗೆಯೇ ಬಿಎಸ್‌ಪಿ ಹಾಗೂ ಎಂಐಎಂ ಉ.ಪ್ರದೇಶದಲ್ಲಿ ವಹಿಸಿದ ಪಾತ್ರವನ್ನು ಕರ್ನಾಟಕದಲ್ಲಿ ಜೆಡಿಎಸ್ ವಹಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಾದದಲ್ಲಿ ಎರಡು ಸಮಸ್ಯೆಗಳಿವೆ. ಒಂದು ಬಿಎಸ್‌ಪಿ ಅಥವಾ
ಎಂಐಎಂ ಕುರಿತಾಗಿ ಮುಂದಿಡುತ್ತಿರುವ ವಾದವೇ ಅಸಂಬದ್ಧ. ಒಂದು ಕೋಟಿಗೂ ಹೆಚ್ಚು ಮತ ಗಳಿಸಿರುವ ಬಿಎಸ್‌ಪಿಯಿಂದ ಎಸ್‌ಪಿ ಬೆಂಬಲ ನಿರೀಕ್ಷಿಸುವುದಾದಲ್ಲಿ ತಾನೇ ಮುಂದಾಗಬೇಕಿತ್ತು. ಅದೇನೂ ಪುಟ್ಟ ಪಕ್ಷವಲ್ಲ. ಎರಡನೆಯದಾಗಿ ಈ ಪಕ್ಷಗಳು ಸ್ಪರ್ಧಿಸದೇ ಇದ್ದಲ್ಲಿ ಆ ಮತಗಳು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಬಿಎಸ್‌ಪಿಯ ಮತಗಳು ಬಿಜೆಪಿಗೆ ಹೋಗಿವೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಈ ದೇಶದಲ್ಲಿ ಸೆಕ್ಯುಲರ್ ಮತಗಳು ಎಂಬುದು ಬಹುತೇಕ ಕಡಿಮೆ. ಎರಡು ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಅವೆರಡರ ಮತಗಳೂ ಜೊತೆಯಾಗಿಬಿಡುತ್ತವೆ ಎಂಬ ತಿಳುವಳಿಕೆ ರಾಜಕೀಯ ಅಮಾಯಕತನದಿಂದ ಮಾತ್ರ ಬರಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವಾದಿಗಳು ಪಕ್ಷ ಮಾಡಿಕೊಳ್ಳಬಹುದು, ಯಾದವರು ಪಕ್ಷ ಮಾಡಿಕೊಳ್ಳಬಹುದು, ವಿವಿಧ ಹಿಂದುಳಿದ ಜಾತಿಗಳು ಪಕ್ಷ ಮಾಡಿಕೊಳ್ಳಬಹುದು, ದಲಿತರು ಮತ್ತು ಮುಸ್ಲಿಮರು ಮಾತ್ರ ತಮ್ಮದೇ ಪಕ್ಷ ಮಾಡಿಕೊಳ್ಳಬಾರದು ಎಂದು ಹೇಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಇದೇ ಮಾತು ಕರ್ನಾಟಕದಲ್ಲಿ ಜೆಡಿಎಸ್‌ಗೂ ಅನ್ವಯಿಸುತ್ತದೆ. ಜೆಡಿಎಸ್ ತನ್ನ ರಾಜಕಾರಣವನ್ನು ತಾನು ಮಾಡುತ್ತಿದೆ. ಅದರ ಹೆಸರಲ್ಲಿ ಜಾತ್ಯತೀತ ಎಂಬ ಪದ ಇದ್ದ ಮಾತ್ರಕ್ಕೆ ಅದು ಪಕ್ಷವನ್ನು ವಿಸರ್ಜಿಸಿ ಕಾಂಗ್ರೆಸ್ ಸೇರಲಾಗುವುದಿಲ್ಲ. ಜೆಡಿಎಸ್ ಅಸ್ತಿತ್ವದಲ್ಲಿರುವ ಬಹುತೇಕ ಕಡೆ ಅದರ ವಿರೋಧಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಒಂದು ವೇಳೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ಸಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ, ಆ ಭಾಗದ ಅರ್ಧದಷ್ಟು ಜನರು ಬಿಜೆಪಿಯ ಕಡೆಗೇ ಹೊರಳುತ್ತಾರೆ. ಕರ್ನಾಟಕಕ್ಕೆ ಜೆಡಿಎಸ್, ಕೇಂದ್ರದಲ್ಲಾದರೆ ನರೇಂದ್ರ ಮೋದಿ ಎಂದು ಹೇಳುವ ಜೆಡಿಎಸ್ ಮತದಾರರು ಇದ್ದಾರಷ್ಟೇ ಅಲ್ಲ; ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಮಂಡ್ಯ ಹಾಗೂ ತುಮಕೂರುಗಳಲ್ಲಿ ಬಿಜೆಪಿಗೆ ಮತ ಹಾಕಿದವರಲ್ಲಿ ಕಾಂಗ್ರೆಸ್‌ನ ಮತದಾರರೂ ಮುಂದಾಗಿದ್ದರು. ಹಾಸನದಲ್ಲಂತೂ ಸಮಾಜವಾದಿಗಳು, ದಲಿತ ಸಂಘಟನೆಯವರೂ ಸಹಾ ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಬಿಜೆಪಿಗೆ ಮತ ಹಾಕಿ ಎಂದು ಪತ್ರಿಕಾಗೋಷ್ಠಿ ಮಾಡಿ ಕರೆ ನೀಡಿದ್ದರು.

ಸ್ಥಳೀಯ ರಾಜಕಾರಣದ ಒಳಸುಳಿಯನ್ನು ಆಧರಿಸಿ ರಾಜಕೀಯ ಅಸ್ತಿತ್ವದ ಲೆಕ್ಕಾಚಾರ ಕಾಂಗ್ರೆಸ್‌ಗೆ ಮಾತ್ರ ಇರಬೇಕೆಂದು ಹಲವರು ಏಕೆ ಬಯಸುತ್ತಾರೋ ಅರ್ಥವಾಗುವುದಿಲ್ಲ. ಇದೇ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡದೇ ಎಸ್‌ಪಿ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲಿಸಬೇಕಿತ್ತು.

ಕುಮಾರಸ್ವಾಮಿ

ಇದೆಲ್ಲದರ ಅರ್ಥ ಇಷ್ಟೇ. ಜೆಡಿಎಸ್ ಎಂಬ ಪಕ್ಷದ ಅಸ್ತಿತ್ವ ಇದೆ. ಅದನ್ನು ಒಪ್ಪಿ ಕಾಂಗ್ರೆಸ್ ತನ್ನ ರಾಜಕಾರಣವನ್ನು ತಾನು ಮಾಡಬೇಕು. ಒಂದರ್ಥದಲ್ಲಿ ಆ ಪಕ್ಷ ಇರುವುದೂ ಕಾಂಗ್ರೆಸ್‌ಗೆ ಒಳ್ಳೆಯದೇ. ಈ ಭಾಗದಲ್ಲಿ ತಾನು ಗೆಲ್ಲಲಾಗದು ಎನಿಸಿದ ಕೂಡಲೇ ಬಿಜೆಪಿಯು ಜೆಡಿಎಸ್‌ಅನ್ನು ಒಳಗಿಂದೊಳಗೇ ಬೆಂಬಲಿಸುತ್ತದೆ. ಕಳೆದ ಸಾರಿ ಮಾಡಿದಂತೆ. ಇದಕ್ಕೆ ಕಾರಣವೇನೆಂದರೆ ಬಿಜೆಪಿಯು ಪ್ರತಿ ಕ್ಷೇತ್ರದ ಕುರಿತು ಲೆಕ್ಕ ಹಾಕಿ ತನ್ನ ಕಾರ್ಯತಂತ್ರವನ್ನು ರೂಪಿಸುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದಂತೆ. ಇದೂ ಸಹಾ ಕಾಂಗ್ರೆಸ್‌ಗೆ ಒಂದು ಪಾಠವೇ.

ಆದರೆ ಇದರಿಂದ ಪಾಠವನ್ನೇನೂ ಕಾಂಗ್ರೆಸ್ ಕಲಿಯುವಂತೆ ತೋರುವುದಿಲ್ಲ. ಇಂದಿಗೂ ಕಾಂಗ್ರೆಸ್‌ಗೆ ಸರಿಯಾದ ಅಭ್ಯರ್ಥಿ ಇಲ್ಲದ ಸುಮಾರು 75 ಕ್ಷೇತ್ರಗಳು ಕರ್ನಾಟಕದಲ್ಲಿವೆ. ಉಳಿದ 150ರ ಪೈಕಿ 100ರಲ್ಲಾದರೂ ಗೆದ್ದೇ ಬಿಡಬಹುದು ಎಂದು ಹೇಳುವ ಸ್ಥಿತಿಯಿಲ್ಲ. ಈ ಸಾರಿಯಂತೂ ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡುವಂತಹ ನೆರೆಟಿವ್ ಏನೂ ಇಲ್ಲ; ಬದಲಿಗೆ ಇಲ್ಲಿನ ಲೀಡರ್‌ಗಳ ವಿರುದ್ಧದ ಸತತ ಅಪಪ್ರಚಾರ ಹಾಗೂ ಲೀಡರ್‌ಗಳ ನಡುವಿನ ಸಾಮರಸ್ಯದ ಕೊರತೆಯು ಇನ್ನೂ ದೊಡ್ಡ ಪೆಟ್ಟೇ ಕೊಡಬಹುದು.

ಹಾಗೆ ನೋಡಿದರೆ ಕಾಂಗ್ರೆಸ್ ಬಗ್ಗೆಯೂ ಪ್ರೇಮವಿಲ್ಲದ, ಬಿಜೆಪಿಯ ಬಗ್ಗೆ ತಿರಸ್ಕಾರವಾಗಲೀ ಒಲವಾಗಲೀ ಇಲ್ಲದ ಗಣನೀಯ ಸಂಖ್ಯೆಯ ಯುವ ಹಾಗೂ ಇತರ ಸಮುದಾಯಗಳ ಮತಗಳನ್ನು ತೆಗೆದುಕೊಳ್ಳುವ ಹೊಸದೊಂದು ಪಕ್ಷವು ಹುಟ್ಟಿಕೊಂಡಲ್ಲದೇ ಕಾಂಗ್ರೆಸ್‌ಗೆ ಅನುಕೂಲಕರವಾದ ಸಂದರ್ಭ ಒದಗಿಬರುವುದು ಕಷ್ಟವೆಂದೇ ತೋರುತ್ತಿದೆ. ಏಕೆಂದರೆ ಎಷ್ಟೇ ದುರಾಡಳಿತ ನೀಡಿದರೂ, ಜನರು ಅದರ ಬಗ್ಗೆ ಯೋಚಿಸದಂತೆ ಮಾಡಲು, ವಿರೋಧಿಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಬಿಜೆಪಿಯ ಕೈಯ್ಯಲ್ಲಿ ಪ್ರಬಲ ಪ್ರಚಾರ ಯಂತ್ರಾಂಗ ಇದೆ. ಉತ್ತರ ಪ್ರದೇಶದಲ್ಲಿ ಆಗಿದ್ದು ಅದೇ. ಇದನ್ನು ಅರಿತು ಎಲ್ಲಾ ರೀತಿಯಿಂದಲೂ ಭಿನ್ನ ಕಾರ್ಯತಂತ್ರ ಮಾಡದೇ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲುವುದು ಬಹಳ ಕಷ್ಟ.

ಸಿಸುಮಗ


ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...