ಉತ್ತರ ಪ್ರದೇಶದ ಇಟಾವಾದ ಬಿಜೆಪಿ ಸಂಸದ, ಆರೆಸ್ಸೆಸ್ನ ಮಾಜಿ ಪ್ರಚಾರಕ ರಾಮ್ ಶಂಕರ್ ಕಥೇರಿಯಾಗೆ 12 ವರ್ಷಗಳ ಹಿಂದಿನ ಹಲ್ಲೆ ಮತ್ತು ಗಲಭೆ ಪ್ರಕರಣದಲ್ಲಿ ಆಗ್ರಾದ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೂ ಅವರು ಭಾನುವಾರ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ!
ಇಟಾವಾ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ವೇಳೆ ಸಭೆಯನ್ನು ಉದ್ದೇಶಿಸಿ ಕೂಡ ಅವರು ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅಡಿಪಾಯ ಹಾಕಲಾಗುತ್ತಿದೆ. ಇಟಾವಾ ಕೂಡ ಇದರ ಭಾಗವಾಗಿದೆ.
2011 ರ ಪ್ರಕರಣದಲ್ಲಿ ಮೂರು ಬಾರಿ ಸಂಸದರಾಗಿರುವ ಕಥೇರಿಯಾ ಅವರು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಅವರ ರಾಜಕೀಯ ಭವಿಷ್ಯದ ಬಗ್ಗೆ ಇಟಾವಾ ಸಮಾರಂಭದಲ್ಲಿ ಹಾಜರಿದ್ದ ಕೆಲವು ಬಿಜೆಪಿ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದರು. ಅವರನ್ನು 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 (3) ರ ಅಡಿಯಲ್ಲಿ ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವ ಸಾಧ್ಯತೆ ಇದೆ.
58ರ ಹರೆಯದ ಕಥೇರಿಯಾ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷೆಗೆ ಗುರಿಯಾದ ವಿಷಯದ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ ನಂತರ ಅವರು ನೀರಾವರಿ ಇಲಾಖೆಯ ಅತಿಥಿ ಗೃಹದಲ್ಲಿ ತಮ್ಮ ಬೆಂಬಲಿಗರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ತಿಳಿಸಿ ನ್ಯಾಯಾಲಯದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರು ಎನ್ನಲಾಗಿದೆ.
ಪ್ರಕರಣವು ನವೆಂಬರ್ 16, 2011ರ ಹಿಂದಿನದಾಗಿದೆ. ಕಥೇರಿಯಾ ಮತ್ತು ಅವರ ಬೆಂಬಲಿಗರ ಗುಂಪು ಆಗ್ರಾದಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಿ ನೀಡಿದ್ದಾರೆಂದು ದೂರು ಬಂದ ಬಳಿಕ ಟೊರೆಂಟ್ ಪವರ್ ಲಿಮಿಟೆಡ್ನ ಕೆಲವು ಉದ್ಯೋಗಿಗಳನ್ನು ಥಳಿಸಿದ್ದರು.
ಮಾಯಾವತಿ ನೇತೃತ್ವದ ಬಿಎಸ್ಪಿ ಸರ್ಕಾರದ ಅವಧಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಶಂಕರ್ ಕಥೇರಿಯಾ “ರಾಜಕೀಯ ಸೇಡಿನ” ಪ್ರಕರಣ ಎಂದು ಹೇಳಿದ್ದು, ನಾನು ದಲಿತ ನಾಯಕರಾಗಿ ಹೊರಹೊಮ್ಮುತ್ತಿರುವ ಕಾರಣ ಮತ್ತು ಬಿಎಸ್ಪಿಯ ಭದ್ರಕೋಟೆಯಾದ ಆಗ್ರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಗೆದ್ದಿರುವುದಕ್ಕೆ ಈ ರೀತಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕಥೇರಿಯಾ ಅವರು 1984 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೊಂದಿಗೆ ಸ್ವಯಂಸೇವಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ನಾಲ್ಕು ವರ್ಷಗಳಲ್ಲಿ ಅವರನ್ನು ಅವರ ತವರು ಜಿಲ್ಲೆ ಇಟಾವಾದಲ್ಲಿ RSS ನ ನಗರ ಪ್ರಚಾರಕರಾಗಿ ನೇಮಿಸಲಾಗಿತ್ತು. ನಂತರ ಅವರು ಬುಲಂದ್ಶಹರ್ ಮತ್ತು ಆಗ್ರಾದಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿ ಕೆಲಸ ಮಾಡಿದ್ದರು. ಅವರು ಆರ್ಎಸ್ಎಸ್-ಸಂಬಂಧಿತ ಸಂಘಟನೆಗಳಾದ ಸಾಮಾಜಿಕ ಸಮ್ರಸ್ತಾ ಸಂಘದಲ್ಲೂ ಕೆಲಸ ಮಾಡಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆ ರದ್ದು: ಇಂದಿನಿಂದ ಕಲಾಪದಲ್ಲಿ ಭಾಗಿ


