ಉತ್ತರಾಖಂಡ್ನ ಸರ್ಕಾರಿ ಶಾಲೆಯೊಂದರಲ್ಲಿ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆಯೊಬ್ಬರು ನೇಮಕವಾದ ಬಳಿಕ ಸವರ್ಣೀಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದ್ದು ಸುದ್ದಿಯಾದ ಬೆನ್ನಲ್ಲೇ ನೇಮಕಾತಿಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ನಿರ್ಧರಿಸಿರುವ ಅಧಿಕಾರಿಗಳು ದಲಿತ ಮಹಿಳೆಯನ್ನು ಬುಧವಾರ ಕೆಲಸದಿಂದ ತೆಗೆದಿದ್ದಾರೆ.
ಸುಖಿಧಾಂಗ್ ಸರ್ಕಾರಿ ಅಂತರ ಕಾಲೇಜಿನ (ಜಿಐಸಿ) ಪ್ರಾಂಶುಪಾಲರಾದ ಪ್ರೇಮ್ ಸಿಂಗ್ ಅವರು ದಲಿತ ಮಹಿಳೆ ಸುನೀತಾ ದೇವಿ ಅವರನ್ನು ಭೋಜನ್ ಮಾತಾ (ಮಧ್ಯಾಹ್ನದ ಅಡುಗೆ ಮಾಡುವವರು) ಆಗಿ ನೇಮಕ ಮಾಡಿದ್ದರು. ಕಾಲೇಜಿನ ಪ್ರಾಂಶುಪಾಲರು ನೇಮಕಾತಿಯಲ್ಲಿ ನಿಯಮಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ನಾವು ವಿಚಾರಣೆಯ ಸಮಯದಲ್ಲಿ ಕಂಡುಕೊಂಡಿದ್ದೇವೆ. ಇದಾದ ನಂತರ ನಾವು ದಲಿತ ಭೋಜನ್ ಮಾತಾ ನೇಮಕಾತಿಯನ್ನು ಸರ್ವಾನುಮತದಿಂದ ರದ್ದುಗೊಳಿಸಿದ್ದೇವೆ ಎಂದು ಚಂಪಾವತ್ ಜಿಲ್ಲೆಯ ಮುಖ್ಯ ಶಿಕ್ಷಣ ಅಧಿಕಾರಿ (ಸಿಇಒ) ಆರ್.ಸಿ.ಪುರೋಹಿತ್ ಹೇಳಿದ್ದಾರೆ.
ಸವರ್ಣೀಯ ಮಹಿಳೆ ಶಕುಂತಲಾ ದೇವಿ ಅವರ ಸ್ಥಾನಕ್ಕೆ ಸುನೀತಾ ದೇವಿ ಅವರನ್ನು ಡಿಸೆಂಬರ್ 13ರಂದು ಭೋಜನ್ ಮಾತೆಯಾಗಿ ನೇಮಿಸಲಾಗಿತ್ತು. ದೇವಿಯವರು ನೇಮಕವಾದ ಮೊದಲ ದಿನ, ಎಲ್ಲಾ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಒಟ್ಟಿಗೆ ಸೇವಿಸಿದರು. ಆದರೆ ಮಾರನೇ ದಿನ 6ರಿಂದ 8ನೇ ತರಗತಿಯ ಸುಮಾರು 40 ಮೇಲ್ಜಾತಿ ವಿದ್ಯಾರ್ಥಿಗಳು ಊಟಕ್ಕೆ ಬರಲಿಲ್ಲ. ಮನೆಯಿಂದ ಟಿಫಿನ್ ತರಲು ಪ್ರಾರಂಭಿಸಿದರು.
ತಮ್ಮ ಮಕ್ಕಳು ಬಹಿಷ್ಕಾರ ಹಾಕಿದ್ದನ್ನು ಸವರ್ಣೀಯ ಪೋಷಕರು ಬೆಂಬಲಿಸಿದರು. “ಹೆಚ್ಚು ಅರ್ಹ ಅಭ್ಯರ್ಥಿಯಾದ ಬ್ರಾಹ್ಮಣ ಸಮುದಾಯದ ಪುಷ್ಪಾ ಭಟ್ ಅವರನ್ನು ಕಡೆಗಣಿಸಿ ಸುನೀತಾ ದೇವಿ ಅವರನ್ನು ಭೋಜನ್ ಮಾತಾ ಆಗಿ ಆಯ್ಕೆ ಮಾಡಲಾಗಿದೆ” ಎಂದು ಆರೋಪಿಸಿದ್ದರು. ಈ ಘಟನೆಯು ಪ್ರತಿಭಟನೆಯ ಸ್ವರೂಪ ಪಡೆದು ತನಿಖೆಯನ್ನು ಮಾಡಲಾಯಿತು.
ಇದನ್ನೂ ಓದಿ: ಕೆ.ಆರ್ ಪೇಟೆ: ದಲಿತರ ಮೇಲೆ ದೌರ್ಜನ್ಯ – ದೂರು ನೀಡಿದ್ದಕ್ಕೆ ಅಂಗಡಿ ಮುಚ್ಚಿ ಸವರ್ಣೀಯರಿಂದ ಸಾಮಾಜಿಕ ಬಹಿಷ್ಕಾರ
ಉಪ ಶಿಕ್ಷಣಾಧಿಕಾರಿ (ಡಿಇಒ) ಅಂಶು ಬಿಷ್ತ್ ಅವರು ಮಂಗಳವಾರ ಇಂಟರ್ ಕಾಲೇಜಿಗೆ ಭೇಟಿ ನೀಡಿ ಶಾಲಾ ಆಡಳಿತ ಸಮಿತಿ (ಎಸ್ಎಂಸಿ), ಪೋಷಕ ಶಿಕ್ಷಕರ ಸಂಘ (ಪಿಟಿಎ) ಮತ್ತು ಗ್ರಾಮದ ಮುಖಂಡರ ಜೊತೆ ಸಭೆ ನಡೆಸಿದರು.
“ಪ್ರಾಂಶುಪಾಲರು ನೇಮಕಾತಿಯ ಮೊದಲು ಅನುಮೋದನೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಅವರು ನಿಯಮಗಳನ್ನು ಅನುಸರಿಸಲು ವಿಫಲರಾಗಿದ್ದಾರೆ. ನಿಯಮಗಳ ಪ್ರಕಾರ, ನೇಮಕಾತಿಯ ಮೊದಲು ಡಿಇಒಯಿಂದ ಅನುಮೋದನೆ ಪಡೆಯಬೇಕು. ಹೀಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಮತ್ತೆ ನಡೆಸಲಾಗುವುದು. ದಲಿತ ಭೋಜನ್ ಮಾತಾ ಮತ್ತೆ ಅರ್ಜಿ ಸಲ್ಲಿಸಬಹುದು” ಎಂದು ಪುರೋಹಿತ್ ಹೇಳಿದರು.
“ಹೊಸ ಅಡುಗೆಯವರನ್ನು ನೇಮಿಸುವವರೆಗೆ, ಇನ್ನೊಬ್ಬ ಭೋಜನ್ ಮಾತೆ ಅಂದರೆ ಸವರ್ಣೀಯ ಮಹಿಳೆ ಮಧ್ಯಾಹ್ನದ ಅಡುಗೆಯನ್ನು ಮಾಡುತ್ತಾರೆ. ನಾನು ಪ್ರತಿ ಜಾತಿಯ ಮಕ್ಕಳೊಂದಿಗೆ ಕುಳಿತು ಮಂಗಳವಾರ ಮಧ್ಯಾಹ್ನದ ಊಟವನ್ನು ಮಾಡಿದ್ದೇನೆ. ಈಗ ಪೋಷಕರು ಮತ್ತು ಮಕ್ಕಳ ನಡುವೆ ಯಾವುದೇ ಸಮಸ್ಯೆ ಇಲ್ಲ” ಎಂದು ಸಿಇಒ ತಿಳಿಸಿದ್ದಾರೆ.
“ನಮ್ಮ ಉನ್ನತ ಅಧಿಕಾರಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳನ್ನು ಕಂಡು ದಲಿತ ಭೋಜನ್ ಮಾತಾ ನೇಮಕಾತಿಯನ್ನು ರದ್ದುಗೊಳಿಸಿದ್ದಾರೆ. ನಾವು ಪ್ರಕ್ರಿಯೆಯನ್ನು ಮತ್ತೆ ಪ್ರಾರಂಭಿಸುತ್ತೇವೆ. ಎಲ್ಲಾ ಮಕ್ಕಳು ಇಂದಿನಿಂದ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ತಿನ್ನಲು ಪ್ರಾರಂಭಿಸಿದ್ದಾರೆ” ಎಂದು ಪ್ರೇಮ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
“ಮೇಲ್ವರ್ಗದ ವಿದ್ಯಾರ್ಥಿಗಳ ಪೋಷಕರು ಸರ್ಕಾರದ ನಿರ್ಧಾರದಿಂದ ಖುಷಿಯಾಗಿದ್ದಾರೆ. ಶಿಕ್ಷಣ ಅಧಿಕಾರಿಗಳ ವಿಚಾರಣೆ ಮತ್ತು ನಿರ್ಧಾರದಿಂದ ಪೋಷಕರು ತೃಪ್ತರಾಗಿದ್ದಾರೆ. ನೇಮಕಾತಿ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸಬೇಕು. ಭೋಜನ್ಮಾತೆಯ ನೇಮಕಾತಿಯಲ್ಲಿ ಎಲ್ಲಾ ಮಾನದಂಡಗಳನ್ನು ಅನುಸರಿಸಲಾಗುವುದು. ಸವರ್ಣೀಯ ಮಕ್ಕಳು ಬಹಿಷ್ಕಾರವನ್ನು ಕೈಬಿಟ್ಟು ಹಿಂದಿನಂತೆಯೇ ಮಧ್ಯಾಹ್ನದ ಊಟ ಮಾಡುತ್ತಿದ್ದಾರೆ” ಎಂದು ಪಿಟಿಎ ಅಧ್ಯಕ್ಷ ನರೇಂದ್ರ ಜೋಶಿ ಹೇಳಿದ್ದಾರೆ.
ಇದನ್ನೂ ಓದಿರಿ: ಹರಿಹರಪುರ ಅಟ್ರಾಸಿಟಿ ಪ್ರಕರಣ: ದಲಿತ ಮುಖಂಡರನ್ನು ಬಳಸಿ ಪ್ರಕರಣ ಮುಚ್ಚಲು ಯತ್ನ?
ದೇವಿಯನ್ನು ವಜಾಗೊಳಿಸುವ ಕ್ರಮವನ್ನು ಅನೇಕ ಕಾರ್ಯಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಕಟುವಾಗಿ ಟೀಕಿಸಿದ್ದಾರೆ. ಇದು ಜಾತಿ ತಾರತಮ್ಯ ಮತ್ತು ಪಕ್ಷಪಾತವನ್ನು ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ದಲಿತ ಮಹಿಳೆ ಮಾಡಿದ ಮಧ್ಯಾಹ್ನದ ಊಟವನ್ನು ಸವರ್ಣೀಯ ವಿದ್ಯಾರ್ಥಿಗಳು ಬಹಿಷ್ಕರಿಸುವುದು ಸಾಮಾಜಿಕ ಅನಿಷ್ಟ. ಈ ಸಂದರ್ಭದಲ್ಲಿ, ಅಧಿಕಾರಿಗಳು ಮತ್ತೊಮ್ಮೆ ಅವರನ್ನು ನೇಮಿಸಬೇಕು” ಎಂದು ಉತ್ತರಾಖಂಡ್ ಪರಿವರ್ತನ್ ಪಕ್ಷದ ಅಧ್ಯಕ್ಷ ಪಿ.ಸಿ.ತಿವಾರಿ ಆಗ್ರಹಿಸಿದ್ದಾರೆ.
ನವೆಂಬರ್ 25 ರಂದು ದಲಿತ ಸಮುದಾಯದ ಸುನಿತಾ ಅವರು ’ಭೋಜನ್ ಮಾತಾ’ (ಅಡುಗೆಯವರು) ಆಗಿ ಕೆಲಸ ಪಡೆದರು. ಅವರ ಮಾಸಿಕ ವೇತನವು 3,000 ರೂ. ಆಗಿತ್ತು. ತನ್ನ ಇಬ್ಬರು ಮಕ್ಕಳು ಮತ್ತು ಅನಾರೋಗ್ಯಕ್ಕೆ ತುತ್ತಾಗಿರುವ ನಿರುದ್ಯೋಗಿ ಪತಿಯನ್ನು ಪೋಷಿಸಲು ಈ ಕೆಲಸ ತುಂಬಾ ಮುಖ್ಯವಾಗಿತ್ತು ಎಂದು ವರದಿಗಳಾಗಿವೆ.
ಸುನೀತಾ ಅವರು ಡಿಸೆಂಬರ್ 14ರಂದು ಶಾಲೆಯಲ್ಲಿ ಅಡುಗೆ ಮಾಡಿದ ಬಳಿಕ ಬಹಿಷ್ಕಾರ ಮಾಡಲಾಯಿತು. ಸುನೀತಾ ತಮ್ಮ ಮಕ್ಕಳಿಗೆ ಅಡುಗೆ ಮಾಡಿದ್ದರಿಂದ ಸವರ್ಣೀಯ ವಿದ್ಯಾರ್ಥಿಗಳ ಪೋಷಕರು ಆಕ್ರೋಶಗೊಂಡಿದ್ದರು.
“ಡಿಸೆಂಬರ್ 13 ರಂದು ನಾನು ಶಾಲೆಗೆ ಸೇರಿದಾಗ, ಎಲ್ಲಾ ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಊಟವನ್ನು ಸೇವಿಸಿದ್ದರು. ಆದರೆ, ಮಾರನೇ ದಿನ ನಾನು ತಯಾರಿಸಿದ ಆಹಾರವನ್ನು ತಿನ್ನಲು ಮಕ್ಕಳು ನಿರಾಕರಿಸಿದಾಗ ನನಗೆ ಆಘಾತವಾಯಿತು. ಊಟ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಪೋಷಕರು ಹೇಳಿದ್ದರು. ನಾನು ದಲಿತ ಸಮುದಾಯದವಳು ಎಂಬ ಕಾರಣಕ್ಕೆ ಮಕ್ಕಳಿಗೆ ಅಡುಗೆ ಮಾಡಬೇಡಿ ಎಂದು ಹೇಳಲಾಗಿತ್ತು. ಇದು ತುಂಬಾ ಅವಮಾನಕರವಾಗಿತ್ತು. ನಾನು ನ್ಯಾಯ ಕೇಳೀ ಮತ್ತೆ ಎಲ್ಲಿಗೂ ಹೋಗುವುದಿಲ್ಲ” ಎಂದು ಸುನೀತಾ ನೋವು ತೋಡಿಕೊಂಡಿದ್ದರು.
ಸ್ಥಳೀಯ ‘ಸವರ್ಣೀಯ’ ಗ್ರಾಮಸ್ಥರಿಂದ ಅವಮಾನಕ್ಕೊಳಗಾದ ನಂತರ ದಲಿತ ಮಹಿಳೆ ಸುನೀತಾ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. “ಸವರ್ಣೀಯರು ಶಕ್ತಿಶಾಲಿಗಳಾಗಿದ್ದು, ನನಗೆ ಶಾಲೆಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ನನ್ನ ನೇಮಕಾತಿಯನ್ನು ಅಸಿಂಧುಗೊಳಿಸಿ ಸವರ್ಣೀಯ ಮಹಿಳೆಗೆ ಕೆಲಸ ಕೊಟ್ಟರೂ ಆಶ್ಚರ್ಯವಿಲ್ಲ” ಎಂದು ದೇವಿಯವರು ಘಟನೆ ನಡೆದ ಬಳಿಕ ಹೇಳಿಕೆ ನೀಡಿದ್ದು, ಅವರ ಆತಂಕ ಈಗ ನಿಜವಾಗಿದೆ.
ಉತ್ತರಾಖಂಡದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಗಾಗಿ, ಮಹಿಳೆಯರನ್ನು ಅಡುಗೆ ಮಾಡಲು ನೇಮಿಸಲಾಗುತ್ತದೆ ಮತ್ತು ಅವರನ್ನು “ಭೋಜನ್ ಮಾತಾಗಳು” ಎಂದು ಕರೆಯಲಾಗುತ್ತದೆ.