ಬೆಳಗಾವಿ: ರಾಜ್ಯದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದು, ಇತರ ಜಿಲ್ಲೆಗಳಲ್ಲಿಯೂ ಶೀಘ್ರವೇ ಸರ್ವೇ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ ಸ್ಥಾಪಿಸಲಾದ 18 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಾಯಧನ ಚೆಕ್ ವಿತರಿಸಿ ಸುವರ್ಣ ವಿಧಾನಸೌಧದಲ್ಲಿ ಅವರು ಮಾತನಾಡಿದರು.
ಸರ್ವೇಯರುಗಳ ನೇಮಕಾತಿ ಪೂರ್ಣಗೊಂಡ ಕೂಡಲೇ ತಾಂಡಾಗಳ ಸರ್ವೇ ಪ್ರಕ್ರಿಯೆಯನ್ನು ಇತರ ಜಿಲ್ಲೆಗಳಲ್ಲಿಯೂ ಪ್ರಾರಂಭಿಸಲಾಗುವುದು. ನಿಗದಿತ ಅವಧಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ತಾಂಡ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದವರ ರೈತ ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ನಿಗಮದ ಅಲ್ಪ ಅನುದಾನದಲ್ಲಿ ಉತ್ಕೃಷ್ಟ ಉಪಯೋಗ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ನಿಗಮದ ವತಿಯಿಂದ ಬಂಜಾರ ಸಮುದಾಯದವರು ಇರುವ ಎಲ್ಲ ತಾಲ್ಲೂಕುಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಎಫ್.ಪಿ.ಓ.ಗಳಿಗೆ ಮತ್ತೆ 15 ಲಕ್ಷ ರೂ. ನೆರವು ನೀಡಿ, ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.
ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮೂಲಕ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ನಿಗಮವು ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡುವಂತೆ ಸೂಚಿಸಿದರು.
ಬಂಜಾರ ಸಮುದಾಯದವರ ಗಟ್ಟಿತನ, ಚೈತನ್ಯ, ಹುಮ್ಮಸ್ಸು, ಸಂಸ್ಕೃತಿ ಅದ್ಭುತವಾದುದು. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಕಾಣಸಿಗುವ ಕೆಲವೇ ಸಮುದಾಯಗಳಲ್ಲಿ ಬಂಜಾರ ಸಮುದಾಯ ಒಂದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಯೋಜನೆ ಮತ್ತು ತೋಟಗಾರಿಕೆ ಸಚಿವ ಮುನಿರತ್ನ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮತ್ತಿತರರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಿತ್ತೂರು ಅರಮನೆ ಪ್ರತಿರೂಪ ನಿರ್ಮಾಣ: ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವು ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಪರಿಕಲ್ಪನೆಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಡಿ.ಪಿ.ಆರ್., ಅಂದಾಜುಪಟ್ಟಿ, ನೀಲನಕ್ಷೆಗಳನ್ನು ಸಿದ್ಧಪಡಿಸಿ, ಅನುಮೋದನೆಗಾಗಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಈ ಯೋಜನೆಯ ಕುರಿತ ಪ್ರದರ್ಶಿಸಿದ ಪ್ರಾತ್ಯಕ್ಷಿಕೆಯನ್ನು ಸುವರ್ಣ ವಿಧಾನಸೌಧದಲ್ಲಿ ಅವರು ವೀಕ್ಷಿಸಿದರು. ಕಿತ್ತೂರು ಕೋಟೆಯ ಆವರಣದಲ್ಲಿರುವ ಅರಮನೆಯ ಅವಶೇಷಗಳನ್ನು ಸಂರಕ್ಷಿಸುವಂತೆಯೂ ಈ ಸಂದರ್ಭದಲ್ಲಿ ಸೂಚಿಸಿದರು.
ಈ ಉದ್ದೇಶಿತ ಅರಮನೆಯಲ್ಲಿ ಕಿತ್ತೂರು ಸಂಸ್ಥಾನದ ಇತಿಹಾಸ, ಚನ್ನಮ್ಮಳ ಹೋರಾಟ, ಸ್ಥಳೀಯ ಸಂಸ್ಕೃತಿ, ಜನಜೀವನ ಬಿಂಬಿಸಲು ಬಹುಮಾಧ್ಯಮ ಬಳಕೆ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಪ್ರಾಧಿಕಾರ ಸದಸ್ಯರುಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿರಿ: ಅಯೋಧ್ಯೆಯಲ್ಲಿ ಭೂಮಿ ಕಬಳಿಕೆ ಆರೋಪ; ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕಾ ವಾಗ್ದಾಳಿ