ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆ ಅಂಗವಾಗಿ 69 ವರ್ಷಗಳಿಂದ ಸರ್ಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು 50 ವರ್ಷಗಳ ಮಟ್ಟಿಗೆ ಅದಾನಿ ಸಮೂಹ ಸಂಸ್ಥೆಗೆ ಒಪ್ಪಿಸಲಾಗಿದೆ.
ವಿಮಾನ ನಿಲ್ದಾಣದ ಕಾರ್ಯಾಚರಣೆ ಬಗ್ಗೆ ಅದಾನಿ ಸಂಸ್ಥೆ ಹಲವು ತಿಂಗಳಿನಿಂದ ಅಧ್ಯಯನ ನಡೆಸಿದೆ ಎನ್ನಲಾಗಿದೆ. ನಿಲ್ದಾಣದ ನಿರ್ದೇಶಕ ಹುದ್ದೆ ಕೆಲವು ತಿಂಗಳು ಮಾತ್ರ ಇರಲಿದೆ, ಬಳಿಕ ಅದಾನಿ ಸಂಸ್ಥೆ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳಲು ಸಿಇಒ ನೇಮಕ ಮಾಡಲಿದೆ ಎಂದು ತಿಳಿಸಲಾಗಿದೆ.
Best wishes to Mangaluru Intl Airport on their journey!
In accordance to concession agreement executed on 14th Feb'2020, AAI handed over handling of Mangaluru @aaimlrairport to @AdaniOnline on lease for 50 yrs.
Exchange of symbolic key held at midnight 00:00 hrs on 30th Oct'2020. pic.twitter.com/ClnjDuf4lY— Airports Authority of India (@AAI_Official) October 31, 2020
ಅಧಿಕೃತವಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆಗೆ ನೀಡಲಾಗಿದೆ. ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಇದ್ದ ಹೆಸರನ್ನು ಆದಾನಿ ಏರ್ಪೋರ್ಟ್ಸ್ ಎಂದು ಸೇರಿಸಿ ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಫಲಕಗಳನ್ನು ಬದಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಆಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರು ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಹಲವು ಮಂದಿ ಸರ್ಕಾರದ ಕ್ರಮ ಮತ್ತು ನಾಡಿನ ಜನತೆಯನ್ನು ಟೀಕಿಸಿ ಫೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅದಾನಿಗೆ ವಿಮಾನ ನಿಲ್ದಾಣ ನಿರ್ವಹಣೆ ವಿರುದ್ದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ
“ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ಅಧಿಕೃತವಾಗಿ ನರೇಂದ್ರ ಮೋದಿ ಆಪ್ತ, ಗುಜರಾತ್ ಉದ್ಯಮಿ ಅದಾನಿಗೆ ಹಸ್ತಾಂತರಗೊಂಡಿದೆ. ಹಸ್ತಾಂತರ ಪ್ರಕ್ರಿಯೆ ಸಂದರ್ಭ ಸಾಂಕೇತಿಕ ಚಾವಿ ವಿತರಣೆ ಕಾರ್ಯಕ್ರಮದಲ್ಲಿ ಎಲ್ಲರ ಮುಖದಲ್ಲೂ ಸಂಭ್ರಮ ಮನೆ ಮಾಡಿತ್ತು. ಇನ್ನು ಇದು “ಮಂಗಳೂರು ಅದಾನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ”. ನೀವಿನ್ನು ಕೋಟಿ ಚೆನ್ನಯ್ಯ, ರಾಣಿ ಅಬ್ಬಕ್ಕ, ಕುದ್ಮಲ್ ರಂಗರಾವ್, ದೇಯಿ ಬೈದೆತಿ…. ಯಾರ ಹೆಸರಿಗಾಗಿ ಹೋರಾಟ ನಡೆಸಿದರೂ, ಯಾರ ಹೆಸರಿಟ್ಟರೂ ಅಷ್ಟೆ, ಅದಿನ್ನು ಮಾರ್ವಾಡಿ ಅದಾನಿಯ ಏರ್ ಪೋರ್ಟ್. ಅದೂ ಭರ್ತಿ ಐವತ್ತು ವರ್ಷ. ಇಂತಹ ಗುಲಾಮಿ ಸ್ಥಿತಿಯ ವಿರುದ್ದ ಧ್ವನಿ ಎತ್ತಲಾರದ ತುಳುನಾಡಿ ಜನತೆಗೆ ನಾಚಿಕೆಯಾಗಬೇಕು” ಎಂದು ಅಬ್ದುಲ್ ಮುನೀರ್ ಪೋಸ್ಟ್ ಮಾಡಿದ್ದಾರೆ.
ಇನ್ನೊಬ್ಬ ಫೇಸ್ಬುಕ್ ಬಳಕೆದಾರ ಜಗನ್ನಾಥ ರಾಮಸ್ವಾಮಿ, ತಮ್ಮ ಗೋಡೆಯ ಮೇಲೆ ’ಮಂಗಳೂರು ವಿಮಾನ ನಿಲ್ದಾಣವನ್ನು ಬಡವರ ಬಂಧು, ಅನಾಥ ರಕ್ಷಕ, ಶುಭ್ರ, ಸ್ವಚ್ಛ ವ್ಯಕ್ತಿತ್ವದ ಆದಾನಿ ಅಂತಹ ವ್ಯಕ್ತಿ ಕೈಗೆ ನಿಲ್ದಾಣವನ್ನು ಒಪ್ಪಿಸಿದ್ದು ನಿಜಕ್ಕೂ ಅಭಿನಂದನಾರ್ಹ’ ಎಂದು ವ್ಯಂಗ್ಯವಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ಮಂಗಳೂರಿನ ವಿಮಾನ ನಿಲ್ದಾಣವನ್ನು ಆದಾನಿ ಕೈಗೆ ಒಪ್ಪಿಸಿದ್ದು ಓಳ್ಳೆಯದು ಆಯಿತು, ಇಲ್ಲದೆ ಇದಿದ್ರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನೌಕರರು ಒಬ್ಬೊಬ್ಬರು ಒಂದೊಂದು ಏರೋಪ್ಲೇನ್ ತೆಗೆದುಕೊಂಡು ಬಿಡುವಷ್ಟು ಭ್ರಷ್ಟಾಚಾರ ಮಾಡಿ ಬಿಡ್ತಿದ್ದರು, ಸದ್ಯ ಕೇಂದ್ರ ಸರ್ಕಾರ ಆ ಭ್ರಷ್ಟ ನೌಕರರಿಂದ ಮಂಗಳೂರು ವಿಮಾನ ನಿಲ್ದಾಣವನ್ನು ರಕ್ಷಿಸಿ ಬಡವರ ಬಂಧು, ಅನಾಥ ರಕ್ಷಕ, ಶುಭ್ರ, ಸ್ವಚ್ಛ ವ್ಯಕ್ತಿತ್ವದ ಅದಾನಿ ಅಂತಹ ವ್ಯಕ್ತಿ ಕೈಗೆ ನಿಲ್ದಾಣವನ್ನು ಒಪ್ಪಿಸಿದ್ದು ನಿಜಕ್ಕೂ ಅಭಿನಂದನಾರ್ಹ !!” ಎಂದಿದ್ದಾರೆ.
ಇನ್ನು ಹಲವು ಮಂದಿ ತಮ್ಮ ಟ್ವಿಟರ್, ಫೇಸ್ಬುಕ್ ಗೊಡೆಗಳಲ್ಲಿ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಸಂಸ್ಥೆ ಜಹೊತೆಯಾಗಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಲಿವೆ. ನಂತರ ಆದಾನಿ ಸಂಸ್ಥೆ ಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ. ಈಗಿರುವ ಉದ್ಯೋಗಿಗಳು ಹಿಂದಿನಂತೆಯೇ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಒಂದು ವರ್ಷಗಳ ಬಳಿಕ ಸಂಸ್ಥೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳಲಿದೆ ಎಂದು ಅದಾನಿ ಸಮೂಹದ ಮೂಲಗಳು ತಿಳಿಸಿದ್ದವು.
ಅದಾನಿ ಗ್ರೂಪ್ ನವೆಂಬರ್ 2 ರಂದು ಲಕ್ನೋ ವಿಮಾನ ನಿಲ್ದಾಣ ಮತ್ತು ನವೆಂಬರ್ 7 ರಂದು ಅಹಮದಾಬಾದ್ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.