ಇಸ್ಲಾಮಾಬಾದ್ನಲ್ಲಿ ಆಯೋಜಿಸಿದ್ದ ಅಮೆರಿಕ-ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಹಾರ್ಮುಝ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮಾತುಕತೆ ವಿಫಲವಾದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಝ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ಹೊರಹೋಗುವ ಎಲ್ಲಾ ಹಡಗುಗಳನ್ನು ತಡೆಯಲು ಅಮೆರಿಕ ನೌಕಾಪಡೆಗೆ ಸೂಚಿಸಿದ್ದಾರೆ. ಈ ದಿಗ್ಬಂಧನವು ಇರಾನ್ನ ಬಂದರುಗಳಿಗೆ ಹೋಗುವ ಅಥವಾ ಅಲ್ಲಿಂದ ಬರುವ ಹಡಗುಗಳಿಗೆ ಅನ್ವಯಿಸುತ್ತದೆ.
ಇರಾನ್ಗೆ ‘ಕಾನೂನುಬಾಹಿರ ಸುಂಕ’ ಪಾವತಿಸಿ ಪ್ರಯಾಣಿಸುವ ಯಾವುದೇ ಹಡಗುಗಳಿಗೆ ಸುರಕ್ಷಿತ ಮಾರ್ಗ ನೀಡುವುದಿಲ್ಲ ಎಂದು ಅಮೆರಿಕ ಘೋಷಿಸಿದೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಇಂತಹ ಹಡಗುಗಳನ್ನು ತಡೆಹಿಡಿಯಲು ನೌಕಾಪಡೆಗೆ ಆದೇಶಿಸಲಾಗಿದೆ.
ಅಮೆರಿಕದ ಈ ನಡೆಯನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಹಾರ್ಮುಝ್ ಜಲಸಂಧಿಯತ್ತ ಬರುವ ಯಾವುದೇ ಮಿಲಿಟರಿ ಹಡಗುಗಳನ್ನು ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಎಚ್ಚರಿಸಿದೆ.
ಜಲಸಂಧಿಯ ನೀರಿನಾಳದಲ್ಲಿ ಇರಾನ್ ಅಳವಡಿಸಿರುವ ಸ್ಪೋಟಕಗಳನ್ನು ನಾಶಪಡಿಸುವ ಪ್ರಕ್ರಿಯೆಯನ್ನು ಅಮೆರಿಕದ ನೌಕಾಪಡೆ ಆರಂಭಿಸಿದೆ. ಎರಡು ಅಮೆರಿಕನ್ ಯುದ್ಧನೌಕೆಗಳು ಈಗಾಗಲೇ ಜಲಸಂಧಿಯನ್ನು ದಾಟಿ ತೆರವು ಕಾರ್ಯದಲ್ಲಿ ತೊಡಗಿವೆ ಎಂದು ವರದಿಯಾಗಿದೆ.
ಐಆರ್ಜಿಸಿ ಹಾರ್ಮುಝ್ ಜಲಸಂಧಿಯು ತನ್ನ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸಿದೆ. ಶತ್ರು ನೌಕೆಗಳು ಯಾವುದೇ ‘ತಪ್ಪು ಹೆಜ್ಜೆ’ ಇಟ್ಟರೆ ಅವುಗಳನ್ನು ಮರಣ ಸುಳಿಯೊಳಗೆ ಸಿಲುಕಿಸುವುದಾಗಿ ಎಚ್ಚರಿಸಿದೆ.
ಜಲಸಂಧಿಯತ್ತ ಬರುವ ಅಮೆರಿಕದ ಯಾವುದೇ ಮಿಲಿಟರಿ ಹಡಗುಗಳನ್ನು ಏಪ್ರಿಲ್ 22ರವರೆಗೆ ಜಾರಿಯಲ್ಲಿರುವ ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಅವುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಜಲಸಂಧಿಯು ಕೇವಲ ನಾಗರಿಕ ಮತ್ತು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮಾತ್ರ ಮುಕ್ತವಾಗಿದೆ, ಆದರೆ ಅವುಗಳು ಇರಾನ್ನ ನಿಯಮಗಳಿಗೆ ಒಳಪಟ್ಟಿರಬೇಕು ಎಂದು ಸ್ಪಷ್ಟಪಡಿಸಿದೆ.
ಇರಾನ್ನ ಸಂಸತ್ತಿನ ಉಪ ಸಭಾಪತಿ ಹಾಜಿ ಬಾಬಾಯಿ ಅವರು ಹಾರ್ಮುಝ್ ಜಲಸಂಧಿಯನ್ನು ಬಳಸುವ ಹಡಗುಗಳು ಇರಾನ್ನ ಕರೆನ್ಸಿಯಾದ ರಿಯಾಲ್’ನಲ್ಲಿ ಸುಂಕ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಮೆರಿಕದ ನೌಕಾಪಡೆ ಈಗಾಗಲೇ ಜಲಸಂಧಿಯನ್ನು ದಾಟಿ ಸ್ಪೋಟಕ ತೆರವು ಕಾರ್ಯಾಚರಣೆ ಆರಂಭಿಸಿದೆ ಎಂಬ ವರದಿಗಳನ್ನು ಇರಾನ್ ಸುಳ್ಳು ಎಂದು ತಳ್ಳಿಹಾಕಿದೆ.
ಇರಾನ್ ಸಂಸತ್ತಿನ ಸಭಾಪತಿ ಮೊಹಮ್ಮದ್ ಬಾಘರ್ ಘಾಲಿಬಾಫ್ ಅವರು ಅಮೆರಿಕದ ದಿಗ್ಬಂಧನದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿವೆ ಮತ್ತು ಅಮೆರಿಕದ ಜನರೇ ಇದರ ಬಿಸಿ ಅನುಭವಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ವಿಶ್ವದ ಸುಮಾರು ಶೇ. 20ರಷ್ಟು ತೈಲ ಸಾಗಣೆಯಾಗುವ ಈ ಮಾರ್ಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗುವ ಮತ್ತು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಭೀತಿ ಎದುರಾಗಿದೆ.
ಇಸ್ಲಾಮಾಬಾದ್ನಲ್ಲಿ ಸುಮಾರು 21 ಗಂಟೆಗಳ ಕಾಲ ನಡೆದ ಶಾಂತಿ ಮಾತುಕತೆ ವಿಫಲವಾಗಲು, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಒಪ್ಪದಿದ್ದದ್ದು ಮತ್ತು ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲು ನಿರಾಕರಿಸಿದ್ದೇ ಮುಖ್ಯ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.


