Homeಮುಖಪುಟಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ 'ಇರಾನ್‌ಗೆ ಹೋಗಿ' ಎಂದ ಪೊಲೀಸ್‌ ಅಧಿಕಾರಿ :...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

- Advertisement -
- Advertisement -

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ ಶುಕ್ರವಾರ (ಮಾ.13) ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪೊಲೀಸರು ಶಾಂತಿ ಸಭೆ ಆಯೋಜಿಸಿದ್ದರು. ಈ ಸಭೆಯಲ್ಲಿ ಸಂಭಾಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಒ) ಕುಲದೀಪ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಕೆಲವರು ‘ಅತಿಯಾದ ಕಾಳಜಿ’ ಹೊಂದಿರುವಂತೆ ಕಾಣಿಸುತ್ತಿದೆ ಎಂದು ಕುಮಾರ್ ಹೇಳಿದ್ದಾರೆ. ಅಲ್ಲದೆ, ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಘೋಷಣೆಗಳನ್ನು ಕೂಗುವುದು, ಪ್ರತಿಭಟನೆಗಳನ್ನು ಸಂಘಟಿಸುವುದು ಅಥವಾ ಪೋಸ್ಟರ್‌ಗಳನ್ನು ಪ್ರದರ್ಶಿಸುವುದು ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಿದರೆ, ಅಂತಹವರ ವಿರುದ್ಧ ಕಠಿಣ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

ಮುಂದುವರಿದು, ಅಂತಾರಾಷ್ಟ್ರೀಯ ಸಂಘರ್ಷಗಳು ಸ್ಥಳೀಯ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರಬಾರದು ಎಂದು ಕುಮಾರ್ ಹೇಳಿದ್ದಾರೆ.

ಇಲ್ಲಿ ಕೆಲವರು ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾ, ಅದರ ಬಗ್ಗೆ ಎದೆ ಬಡಿದುಕೊಳ್ಳುತ್ತಿದ್ದಾರೆ, ಅವರು ವಿಮಾನ ಹತ್ತಿ ಇರಾನ್‌ಗೆ ಹೋಗಲಿ. ಅಂತಹ ವಿಷಯಗಳನ್ನು ಸರ್ಕಾರಗಳು ನಿರ್ವಹಿಸಬೇಕೇ ಹೊರತು ಸ್ಥಳೀಯ ನಾಗರಿಕರಲ್ಲ ಎಂದಿದ್ದಾರೆ.

ಯುದ್ಧದ ಯಾವುದೇ ಒಂದು ಪಕ್ಷವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುವುದು, ವಿಷಯಕ್ಕೆ ಸಂಬಂಧಿಸಿದ ಪೋಸ್ಟರ್‌ಗಳು ಅಥವಾ ಬ್ಯಾನರ್‌ಗಳನ್ನು ಪ್ರದರ್ಶಿಸುವುದು ಮತ್ತು ಈದ್ ಪ್ರಾರ್ಥನೆಯ ಸಮಯದಲ್ಲಿ ಅಡಚಣೆ ಉಂಟುಮಾಡುವುದು ಕಟ್ಟುನಿಟ್ಟಾದ ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ ಎಂದು ಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.

ಮತ್ತೊಂದು ವೈರಲ್ ವಿಡಿಯೋ ಪ್ರಕಾರ, ಮಸೀದಿಗಳಲ್ಲಿ ಸ್ಥಳದ ಕೊರತೆಯಿದೆ ಎಂಬ ಕಾರಣಕ್ಕೆ ರಸ್ತೆಗಳ ಮೇಲೆ ನಮಾಝ್ ಮಾಡಿದರೆ, ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುವುದಾಗಿ ಕುಮಾರ್ ಎಚ್ಚರಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಮಸೀದಿಯಲ್ಲಿ ಸ್ಥಳವಿಲ್ಲದಿದ್ದಾಗ ಪ್ರಾರ್ಥನೆ ಮಾಡುವವರು ಧಾವಿಸಿ ರಸ್ತೆಯ ಮೇಲೆ ನಮಾಝ್ ಮಾಡಲು ಶುರು ಮಾಡುತ್ತಾರೆ. ಹೀಗಾದರೆ, ನಾವು ಒಂದು ನಿಮಿಷದವರೆಗೆ ಏನನ್ನೂ ಹೇಳುವುದಿಲ್ಲ, ಆನಂತರ ಅವರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ಯಾರಾದರೂ ಇರಾನ್-ಇಸ್ರೇಲ್ ಯುದ್ಧಕ್ಕೆ ಬೆಂಬಲ ಸೂಚಿಸಿದರೆ ಅಥವಾ ಘೋಷಣೆಗಳನ್ನು ಕೂಗಿದರೆ, ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ನಾವು ಹಿಂದುಸ್ತಾನಿಗಳು. ನಾವು ಭಾರತೀಯರು. ಅಂತಾರಾಷ್ಟ್ರೀಯ ವಿಷಯಗಳನ್ನು ಸರ್ಕಾರಗಳು ನಿಭಾಯಿಸಬೇಕು. ಒಂದು ವೇಳೆ ಬೇರೆ ದೇಶದ ವಿವಾದಗಳು ನಮ್ಮ ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಿದರೆ, ಪೊಲೀಸರು ಅಂತಹವರಿಗೆ ‘ಅತಿ ಉತ್ತಮ ಚಿಕಿತ್ಸೆ’ (ಕಠಿಣ ಕ್ರಮ) ನೀಡುತ್ತಾರೆ ಎಂದು ಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.

ಯುದ್ಧದ ಬಗ್ಗೆ ವೈರಲ್ ರೀಲ್ಸ್‌ಗಳನ್ನು ಮಾಡುವ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೂಡ ಅಧಿಕಾರಿ ಟೀಕಿಸಿದ್ದು, ಆನ್‌ಲೈನ್‌ನಲ್ಲಿ ವದಂತಿಗಳನ್ನು ಅಥವಾ ಪ್ರಚೋದನಕಾರಿ ವಿಷಯಗಳನ್ನು ಹರಡುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಇನ್‌ಸ್ಪೆಕ್ಟರ್ ವಿರುದ್ಧ ಕಿಡಿಕಾರಿದ ಓವೈಸಿ

ಸರ್ಕಲ್ ಇನ್‌ಸ್ಪೆಕ್ಟರ್ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಅಥವಾ ಬೆದರಿಕೆ ಹಾಕಲು ಅಧಿಕಾರಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.

ಈ ದೇಶವು ಇನ್‌ಸ್ಪೆಕ್ಟರ್ ಕುಲದೀಪ್ ಕುಮಾರ್ ಅವರ ತಂದೆಯದ್ದಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್ ಪರ ರ್‍ಯಾಲಿಗಳನ್ನು ಬೆಂಬಲಿಸುವ ಮೂಲಕ ಇರಾನ್ ಸಂಘರ್ಷದ ಬಗ್ಗೆ ಪ್ರತಿಭಟಿಸುವ ಮುಸ್ಲಿಮರಿಗೆ ಬೆದರಿಕೆ ಹಾಕುವ ಮೂಲಕ ಅಧಿಕಾರಿ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದು, ಶಾಂತಿ ಕಾಪಾಡುವ ಹೆಸರಿನಲ್ಲಿ ಜನರನ್ನು ಭಯಭೀತಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯ ಮಾತುಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾಷೆಯಂತೆ ಕೇಳಿಸುತ್ತಿವೆ ಎಂದು ಓವೈಸಿ ಟೀಕಿಸಿದ್ದಾರೆ.

ಇಮ್ರಾನ್‌ ಪ್ರತಾಪ್‌ಗಢ ಟೀಕೆ

ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್‌ಗಢ ಅವರು ಸಂಭಾಲ್ ಪೊಲೀಸರ ವರ್ತನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಸ್ತೆಯಲ್ಲಿ ನಮಾಝ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ ಅಧಿಕಾರಿಯನ್ನು ಟೀಕಿಸಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಭಾಷೆ ‘ಸ್ವೀಕಾರ್ಹವಲ್ಲ’ ಎಂದು ಎಂದಿರುವ ಇಮ್ರಾನ್, ನಾಗರಿಕರ ಹಕ್ಕುಗಳಿಗೆ ಸಂವಿಧಾನವು ನೀಡಿರುವ ರಕ್ಷಣೆಯ ಬಗ್ಗೆ ಅಧಿಕಾರಿಗಳಿಗೆ ನೆನಪಿಸುವಂತೆ ಒತ್ತಾಯಿಸಿದ್ದಾರೆ.

ಇಸ್ರೇಲ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವವರು ಎಲ್ಲಿಗೆ ಹೋಗಬೇಕು? ಎಂದು ಇಮ್ರಾನ್ ಪ್ರಶ್ನಿಸಿದ್ದಾರೆ. ಇದು ಜವಾಬ್ದಾರಿಯುತ ಭಾಷೆಯಲ್ಲ. ಶಾಂತಿ ಸಮಿತಿ ಸಭೆಯು ಶಾಂತಿ ಮತ್ತು ಭ್ರಾತೃತ್ವದ ಮೇಲೆ ಗಮನ ಹರಿಸಬೇಕೇ ಹೊರತು, ಬೆದರಿಕೆಗಳ ಮೇಲಲ್ಲ ಎಂದಿದ್ದಾರೆ.

ಇದಾದ ಬೆನ್ನಲ್ಲೇ, ಎಐಎಂಐಎಂ ಉತ್ತರ ಪ್ರದೇಶದ ರಾಜ್ಯಾಧ್ಯಕ್ಷ ಶೌಕತ್ ಅಲಿ ಅವರು ಕೂಡ ಅಧಿಕಾರಿಯ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿದ್ದು, ಶಾಂತಿ ಕಾಪಾಡುವ ನೆಪದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೌಕತ್ ಅಲಿ ಅವರು ಸಭೆಯಲ್ಲಿ ಬಳಸಲಾದ ಭಾಷೆಯು ಮುಸ್ಲಿಂ ಸಮುದಾಯವನ್ನು ಬೆದರಿಸುವಂತಿದೆ ಎಂದು ಆರೋಪಿಸಿರುವ ಅವರು, ಅಧಿಕಾರಿಗಳು ಶಾಂತಿ ಕಾಪಾಡುವ ಬದಲು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.

ನಾವು ಅಸಂವಿಧಾನಿಕವಾಗಿ ಏನಾದರೂ ಮಾಡಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸಿ. ಆದರೆ ನೀವು ಶಾಂತಿ ಸಮಿತಿ ಸಭೆಯಲ್ಲಿ ಕುಳಿತು ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂದು ಹೇಳಿದ್ದಾರೆ. ಅಧಿಕಾರಿಯ ಈ ಮಾತುಗಳು ಕಾನೂನು ಜಾರಿ ಅಧಿಕಾರಿಗಳಿಂದ ನಿರೀಕ್ಷಿಸಲಾದ ಸಂವಿಧಾನಬದ್ಧ ಪ್ರಮಾಣ ವಚನವನ್ನು ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ.


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...

ಹೋರಾಟಗಾರ ಸೋನಮ್ ವಾಂಗ್ಚುಕ್ ಬಂಧನ ರದ್ದುಗೊಳಿಸಿದ ಕೇಂದ್ರ

ಲಡಾಖ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಮಾತುಕತೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ವರದಿಯಾಗಿದೆ. ಸರ್ಕಾರ...

‘ಭಾರತವನ್ನು ಬೆದರಿಸುವಲ್ಲಿ ತಿಂಗಳುಗಟ್ಟಲೆ ಕಳೆದ ಅಮೆರಿಕ ಈಗ ಜಗತ್ತನ್ನ ಬೇಡಿಕೊಳ್ಳುತ್ತಿದೆ’: ರಷ್ಯಾದ ತೈಲ ವಿಚಾರದ ಕುರಿತು ಇರಾನ್ ಟೀಕೆ

ಟೆಹ್ರಾನ್: ರಷ್ಯಾದ ತೈಲದ ವಿಷಯದಲ್ಲಿ ಅಮೆರಿಕವು ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಇರಾನ್ ಶನಿವಾರ ಆರೋಪಿಸಿದೆ. ವಾಷಿಂಗ್ಟನ್ ಈಗ ಒತ್ತಡ ಮತ್ತು ನಿರ್ಬಂಧಗಳ ಮೂಲಕ ನಿರ್ಬಂಧಿಸಲು ಪ್ರಯತ್ನಿಸಿದ ಅದೇ ಕಚ್ಚಾ ತೈಲವನ್ನು ಖರೀದಿಸಲು...

ಗಾಝಾ ನರಮೇಧ : ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್‌ ಪರ ಅಮೆರಿಕ ವಕಾಲತ್ತು

ಗಾಝಾ ನರಮೇಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಕ್ಷಿಣ ಆಫ್ರಿಕಾ ಹೂಡಿರುವ ಪ್ರಕರಣದಲ್ಲಿ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ಮಧ್ಯ ಪ್ರವೇಶಿಸಿದ್ದು, ಇಸ್ರೇಲ್ ಪರ ವಕಾಲತ್ತು ವಹಿಸಲು ಮುಂದಾಗಿವೆ ಎಂದು ವರದಿಯಾಗಿದೆ. ದಿ...