Homeಕರ್ನಾಟಕಉತ್ತರ ಕನ್ನಡ: ವಿಭಿನ್ನ ಜನ - ಜಾತಿ: ವೈವಿದ್ಯ ಭಾಷೆ

ಉತ್ತರ ಕನ್ನಡ: ವಿಭಿನ್ನ ಜನ – ಜಾತಿ: ವೈವಿದ್ಯ ಭಾಷೆ

ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ನೆಲಮೂಲದ ಸಂಸ್ಕೃತಿಯ ಧ್ವನಿಯಿದೆ. ಮುಗ್ಧತೆ-ನಿಯತ್ತು ಮತ್ತು ಶ್ರಮ ಸಂಸ್ಕೃತಿಯ ಈ ಜನಾಂಗ ಉತ್ತರ ಕನ್ನಡದ ಕರಾವಳಿಗುಂಟದ ಕಾಡಿನಂಚಿನಲ್ಲಿ ಹೆಚ್ಚಿದೆ.

- Advertisement -
- Advertisement -

ಭೋರ್ಗರೆವ ಅರಬ್ಬೀಸಮುದ್ರಕ್ಕೆ ಸಮಾನಾಂತರವಾಗಿ ಹಬ್ಬಿರುವ ಹಸಿರು ಸಹ್ಯಾದ್ರಿಗಿರಿ ಶ್ರೇಣಿಯ ಮಡಿಲಲ್ಲಿರುವ ಉತ್ತರಕನ್ನಡ ಅಸಂಖ್ಯ ಜನ, ಜಾತಿ ಮತ್ತು ವೈವಿಧ್ಯಮಯ ಭಾಷೆಯ ನೆಲೆವೀಡು. ಅನನ್ಯ ಪ್ರಕೃತಿ ಸೊಬಗು ಮತ್ತು ಅಪಾರ ನೈಸರ್ಗಿಕ ಸಂಪತ್ತಿನ ಈ ಜಿಲ್ಲೆ ಭೌಗೋಳಿಕವಾಗಿಯೂ ವಿಭಿನ್ನ. ಕರಾವಳಿ, ಮಲೆನಾಡು ಮತ್ತು ಅರೆಬಯಲು ಸೀಮೆ ಪ್ರದೇಶದ ಉತ್ತರ ಕನ್ನಡದಲ್ಲಿರುವಷ್ಟು ಜಾತಿ-ಜನಾಂಗ ಹಾಗೂ ಭಾಷೆ ಬಹುಶಃ ದೇಶದ ಬೇರೆಲ್ಲಿಯೂ ಕಾಣಿಸದೆಂಬ ವಾದವೂ ಇದೆ. ಬರೋಬ್ಬರಿ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿರುವ ಉತ್ತರ ಕನ್ನಡದಲ್ಲಿ ಹದಿನೈದೂವರೆ ಲಕ್ಷದಷ್ಟು ಜನಸಂಖ್ಯೆಯಿದೆ.

ಒಂದು ಅಂದಾಜಿನಂತೆ ಶೇಕಡಾ 55.50ರಷ್ಟು ಮಂದಿಗೆ ಕನ್ನಡ ಮಾತೃಭಾಷೆ. ಕೊಂಕಣಿಯನ್ನು ಶೇ.20ರಷ್ಟು ಜನರಾಡುತ್ತಾರೆ. ಶೇ.11.83ರಷ್ಟು ಜನರದು ಉರ್ದುದಲ್ಲಿ ಸಂವಹನ ನಡೆಸುತ್ತಾರೆ. ನವಾಯಿತಿ, ತೆಲಗು, ಲಂಬಾಣಿ, ಬ್ಯಾರಿ, ಗುಜರಾತಿ ಭಾಷೆಯವರೂ ಇಲ್ಲಿದ್ದಾರೆ. ಕನ್ನಡ ಮತ್ತು ಕೊಂಕಣಿ ಎರಡು ಪ್ರಮುಖ ಭಾಷೆ. ಈ ಎರಡೂ ಭಾಷೆಯಲ್ಲಿ ವ್ಯವಹರಿಸುವ ಒಂದೊಂದು ಜಾತಿಯದು ಒಂದೊಂದು ಧ್ವನಿ-ಶೈಲಿ. ಮೇಲ್ವರ್ಗದ ಬ್ರಾಹ್ಮಣರು ಮತ್ತು ಕೊಂಕಣಿಗರು ಬಳಸುವ ಕನ್ನಡ ಹಾಗೂ ಕೊಂಕಣಿ ಶಿಷ್ಟ ಭಾಷೆ ಎನ್ನುವವರು. ಹಿಂದುಳಿದವರು-ಬುಡಕಟ್ಟು ಜನಾಂಗದವರು ಆಡುವ ಕನ್ನಡ-ಕೊಂಕಣಿಯನ್ನು ಕಚ್ಚಾ ಅಂತಾರೆ. ಇದು ಪುರೋಹಿತಶಾಹಿ ಪರಿಕಲ್ಪನೆಯ ಕುತರ್ಕ. ಒಟ್ಟಿನಲ್ಲಿ ಉತ್ತರ ಕನ್ನಡ ನಾನಾ ನಮೂನೆಯ ಕೊಂಕಣಿ-ಕನ್ನಡಕ್ಕೆ ಅದರದೇ ಆದ ಸೊಗಡು-ಪ್ರಬಲ ಸಂವಹನ ಶಕ್ತಿಯಿದೆ! ಕುಲಶಾಸ್ತ್ರೀಯ ತತ್ವವಿದೆ!!

ಕಾರವಾರ, ಜೋಯಿಡಾ, ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕಲ್ಲಿ ಪಕ್ಕದ ಗೋವಾದ ಕೊಂಕಣಿ ಪ್ರಭಾವವಿದೆ. ಇವತ್ತಿಗೂ ಜಿಲ್ಲಾಕೇಂದ್ರ ಕಾರವಾರದಲ್ಲಿ ಕೊಂಕಣಿಯೇ ಪ್ರಮುಖ ವ್ಯಾವಹಾರಿಕ ಮತ್ತು ಮನೆ ಭಾಷೆ. ಕನ್ನಡ ಅರ್ಥವಾಗದವರೂ ಇಲ್ಲಿದ್ದಾರೆ. ಜೋಯಿಡಾದ ಕಾಡು-ಮೇಡುಗಳ ಬುಡಕಟ್ಟು ಗೌಳಿ-ಕಣವಿ-ಕುಂಬ್ರಿ ಮರಾಠಿಗಳಲ್ಲಿ ಕನ್ನಡದ ಪರಿಚಯ ಇಲ್ಲದವರಿದ್ದಾರೆ. ಕನ್ನಡ ಅಭಿವೃದ್ಧಿ ಮಂಡಳಿ, ಗಡಿ ಅಭಿವೃದ್ಧಿ ಮಂಡಳಿಗಳ ಪ್ರಭೃತಿಗಳಿಂದಲೂ ಇವರಿಗೆಲ್ಲಾ ಕನ್ನಡ ಕಲಿಸಲಾಗಿಲ್ಲ ಎಂಬುದು ದೊಡ್ಡ ದುರಂತ. ಕರಾವಳಿ ಮತ್ತು ಘಟ್ಟದ ಮೇಲಿನ ಹವ್ಯಕರ ಭಾಷೆಯಲ್ಲಿ ಸಣ್ಣ ವ್ಯತ್ಯಾಸವಿದೆ. ಆದರೆ ಘಟ್ಟದ ಬ್ರಾಹ್ಮಣರ ಕನ್ನಡ, ನಾಡವರ ಕನ್ನಡದಷ್ಟೇ ಕಸುವು. ಬುಡಕಟ್ಟು, ಹಾಲಕ್ಕಿ ಒಕ್ಕಲಿಗರ, ದಲಿತ ಮುಕ್ರಿಗಳ ಕನ್ನಡಕ್ಕೂ ವ್ಯತ್ಯಾಸವಿದೆ. ಘಟ್ಟದ ಕೆಳಗಿನ ಹಾಗೂ ಘಟ್ಟದ ಮೇಲಿನ ದೀವರ ಭಾಷೆಯಲ್ಲೂ ಪ್ರತ್ಯೇಕ “ಧ್ವನಿ”ಗಳಿವೆ. ಸೇರುಗಾರ, ಸೊನಗಾರ, ಭಂಡಾರಿ, ಕೊಂಕಣಿ ಮರಾಠ, ಕೋಮಾರಪಂತ… ಹೀಗೆ ಬೇರೆ ಬೇರೆ ಜಾತಿಯವರ ಕೊಂಕಣಿ ಬಳಕೆಯಲ್ಲಿ ವಿಭಿನ್ನತೆಯಿದೆ. ಶಬ್ದಗಳಲ್ಲೂ ವ್ಯತ್ಯಾಸವಿದೆ; ಆಡುವ ಶೈಲಿಯಲ್ಲಿ ಬದಲಾವಣೆಯಿದೆ.

ಕ್ರಿಶ್ಚಿಯನ್ ಕೊಂಕಣಿಯ ಛಾಪು ವಿಶಿಷ್ಟ. ಆ ಭಾಷೆ ಕೇಳಿದಾಕ್ಷಣವೇ ಕ್ರಿಶ್ಚಿಯನ್ನರನ್ನು ಗುರುತಿಸಿಬಿಡಬಹುದು. ಮುಸ್ಲಿಮರು ಉರ್ದು ಮಾತಾಡಿದರೆ, ಭಟ್ಕಳ ಮತ್ತು ಹೊನ್ನಾವರದ ಹೊಳೆಸಾಲಿನಲ್ಲಿರುವ ನವಾಯತ ಮುಸ್ಲಿಮರು “ನವಾಯಿತಿ” ಮಾತಾಡುತ್ತಾರೆ. ಇದು ಕೊಂಕಣಿಮಿಶ್ರಿತ ಭಾಷೆ. ಕೇರಳ-ಮಂಗಳೂರು ಕಡೆಯಿಂದ ವಲಸೆಬಂದ ಬ್ಯಾರಿಗಳೂ ಕರಾವಳಿಯಲ್ಲಿದ್ದಾರೆ. ಉತ್ತರ ಕನ್ನಡದಲ್ಲಿ ಬೇರೆ-ಬೇರೆ ಜನಾಂಗದವರು ವ್ಯವಹರಿಸುವ ಭಾಷೆ ಮೇಲಿಂದಲೇ ಆ ಜಾತಿ ಹೆಸರೇಳಿ ಬಿಡಲಾಗುತ್ತಿದೆ. ಉದಾ: ಗೌಡಸಾರಸ್ವತ ಬ್ರಾಹ್ಮಣ(ಜಿಎಸ್‍ಬಿ)ಗಳದು ಒಂಥರಾ ಪಾಲಿಶ್ಡ್ ಕೊಂಕಣಿಯಾದರೆ ಬುಡಕಟ್ಟು ಕುಂಬ್ರಿ ಮರಾಠಿಗಳದು ಅವರಿಗಷ್ಟೇ ಅರ್ಥವಾಗಬಲ್ಲಷ್ಟು ಸಂಕೀರ್ಣವಾಗಿದೆ.

ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ನೆಲಮೂಲದ ಸಂಸ್ಕೃತಿಯ ಧ್ವನಿಯಿದೆ. ಮುಗ್ಧತೆ-ನಿಯತ್ತು ಮತ್ತು ಶ್ರಮ ಸಂಸ್ಕೃತಿಯ ಈ ಜನಾಂಗ ಉತ್ತರ ಕನ್ನಡದ ಕರಾವಳಿಗುಂಟದ ಕಾಡಿನಂಚಿನಲ್ಲಿ ಹೆಚ್ಚಿದೆ. ಇವರ ಉಡುಗೆ-ತೊಡುಗೆ-ಸಂಪ್ರದಾಯದಂತೆಯೇ ಮಾತುಗಾರಿಕೆಯಲ್ಲೂ ವಿಶಿಷ್ಟತೆಯಿದೆ. ಜಿಲ್ಲೆಯ ಮಲೆನಾಡಿನ ಭಾಗದಲ್ಲಿರುವ ಗೌಳಿಗರು ಗೋವಾ-ಮಹಾರಾಷ್ಟ್ರ ಗಡಿಯ ರತ್ನಗಿರಿ ಮೂಲದವರು. ಹೀಗಾಗಿ ಈ ಜನಾಂಗದ ಭಾಷೆಯಲ್ಲಿ ಕೊಂಕಣಿ ಜತೆಗೆ ಮರಾಠಿ ಬೆರೆತಿದೆ. ಆದರೆ ಕುಣಬಿ, ಕುಂಬ್ರಿ ಮರಾಠಿ ಸಮುದಾಯದ್ದು ಅವರದೇ ಆದ ಕೊಂಕಣಿ. ಸಿದ್ದಿ ಜನಾಂಗವೂ ಕುಣಬಿಗಳಂತೆ ಗೋವಾ ಕಡೆಯಿಂದ ಉತ್ತರಕನ್ನಡದ ಕಾಡುಮೇಡು ಸೇರಿಕೊಂಡಿದೆ. ಈ ಸಿದ್ದಿಗಳಲ್ಲಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ವರ್ಗವಿದೆ. ಹೆಚ್ಚಿನವರದು ಕೊಂಕಣಿ ಆಡುಭಾಷೆ. ಆದರೆ ಹಿಂದೂಗಳಲ್ಲಿ ಕನ್ನಡ, ಕ್ರಿಶ್ಚಿಯನ್ನರಲ್ಲಿ ಕೊಂಕಣಿ ಮತ್ತು ಮುಸ್ಲಿಮರಲ್ಲಿ ಉರ್ದು ಪ್ರಭಾವ ಜಾಸ್ತಿ.

ಕುಂಬ್ರಿ ಮರಾಠಿಗರು ವ್ಯವಸಾಯಗಾರರು. ಗೌಳಿ-ಕುಣಬಿಗಳು ಹೈನುಗಾರಿಕೆ ಮೇಲೆ ಅವಲಂಬಿಸಿದ್ದಾರೆ. ಸಿದ್ದಿಗಳು ಕೃಷಿಕ ಕೃಷಿ ಕೂಲಿಯಾಗಿ ದುಡಿಯುತ್ತಿದ್ದಾರೆ. ಅವರ ಕಸುಬು ಬದುಕಿನ ಸಂಪ್ರದಾಯವೂ ಭಾಷೆಯನ್ನು ಪ್ರಭಾವಿಸಿದೆ. ಗೋಕರ್ಣದಲ್ಲಿ ವಲಸಿಗ ಬ್ರಾಹ್ಮಣರಿದ್ದಾರೆ. ಮರಾಠೀ ಬ್ರಾಹ್ಮಣರು ಮತ್ತು ಕೋಟಬ್ರಾಹ್ಮಣರು ಗೋಕರ್ಣ ಮಹಾಬಲೇಶ್ವರನ ಪೂಜೆ-ಪೌರೋಹಿತ್ಯ ಮಾಡಿಕೊಂಡು ಬದುಕುತ್ತಿದ್ದಾರೆ. ಮರಾಠಿ ಬ್ರಾಹ್ಮಣರ ಆಡುಭಾಷೆ ಮರಾಠಿಯಾದರೆ, ಕೋಟ ಬ್ರಾಹ್ಮಣರದು ಕನ್ನಡ. ಮಹಾರಾಷ್ಟ್ರ ಮೂಲದ “ಜೋಗಳೇಕರ್” ಎಂಬ ಮರಾಠಿ ಬ್ರಾಹ್ಮಣರು ಸುಮಾರು 80 ವರ್ಷದಿಂದ ಪಾತ್ರೆ-ಪಗಡೆ ಮಾರಾಟ ಮಾಡುತ್ತ ಇಲ್ಲೇ ನೆಲೆನಿಂತಿದೆ. ಉತ್ತರ ಕನ್ನಡದಲ್ಲಿನ ಅಸಂಖ್ಯ ಜಾತಿ-ಜನಾಂಗದಂತೆ ಅದರ ಭಾಷೆ-ಸಂಸ್ಕೃತಿ ಸಂಪ್ರದಾಯವೂ ಬೆರಗು ಹುಟ್ಟಿಸುವಂತದ್ದು.


ಇದನ್ನು ಓದಿ: ಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ… ನಾವೇನು ಮಾಡಬೇಕು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...