ದೆಹಲಿಯ ವಸಂತ್ ಕುಂಜ್ನಲ್ಲಿರುವ ಜೈ ಹಿಂದ್ ಕ್ಯಾಂಪ್ ನಿವಾಸಿಗಳು ಹತಾಶೆಯ ಕಂದಕದಲ್ಲಿ ಸಿಲುಕಿದ್ದಾರೆ. ಜೂನ್ 8ರಂದು ಅಧಿಕಾರಿಗಳು ವಿದ್ಯುತ್ ಕಡಿತಗೊಳಿಸಿದ ನಂತರ, ರಾಷ್ಟ್ರ ರಾಜಧಾನಿಯ ಸುಡುವ ಬಿಸಿಲು ಮತ್ತು ಆರ್ದ್ರತೆಯು ಅವರ ಬದುಕನ್ನು ದುಸ್ತರಗೊಳಿಸಿದೆ. 1,400ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಕ್ಯಾಂಪ್ನ ಮನೆಗಳನ್ನು ಮೇ 30ರ ನ್ಯಾಯಾಲಯದ ಆದೇಶದ ಮೇರೆಗೆ ನೆಲಸಮಗೊಳಿಸಲು ನಿರ್ಧರಿಸಲಾಗಿದೆ ಎಂದು ದಿ ವೈರ್, ಇಂಡಿಯಾ ಟುಡೆ ಪತ್ರಿಕೆಗಳು ವರದಿ ಮಾಡಿವೆ.
ದಶಕಗಳ ಹಿಂದೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಿಂದ ವಲಸೆ ಬಂದಿರುವ ಬಹುಪಾಲು ನಿವಾಸಿಗಳು, ಇದು ತಮ್ಮನ್ನು ಗುರಿಯಾಗಿಸಿಕೊಂಡಿರುವ ನಡೆಯೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 40 ವರ್ಷಗಳಷ್ಟು ಹಳೆಯದಾದ ಈ ಕ್ಯಾಂಪ್ ಅನ್ನು ರಾಜ್ಯ ಸರ್ಕಾರ “ಅಕ್ರಮ” ಎಂದು ಘೋಷಿಸಿದೆ. ಪೊಲೀಸರು “ದಾಖಲೆಗಳಿಲ್ಲದ ಬಾಂಗ್ಲಾದೇಶಿಯರು” ಇಲ್ಲಿ ಅಡಗಿಕೊಂಡಿದ್ದಾರೆಂದು ಆರೋಪಿಸಿದ್ದಾರೆ, ಆದರೆ ಸಮುದಾಯವು ಈ ಆರೋಪಗಳನ್ನು “ದುರುದ್ದೇಶಪೂರಿತ” ಎಂದು ಸಂಪೂರ್ಣವಾಗಿ ತಳ್ಳಿಹಾಕಿದೆ.
“ನಾವು ಭಾರತೀಯರು, ಆದರೆ ಕೆಲವರಲ್ಲಿ ದಾಖಲೆಗಳಿಲ್ಲದಿರಬಹುದು. ಆದರೂ ಯಾವುದೇ ಸೂಚನೆ ಇಲ್ಲದೆ ನಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಈ ಧಗೆಯಲ್ಲಿ ನಮ್ಮನ್ನು ನರಳುವಂತೆ ಮಾಡಲಾಗಿದೆ” ಎಂದು ಆಯುದ್ದೀನ್ ಹುಸೇನ್ ಹೇಳಿದ್ದಾರೆ. ಚಾಲಕರಾಗಿ ಕರ್ತವ್ಯದಲ್ಲಿದ್ದಾಗ ವಿದ್ಯುತ್ ಕಡಿತದ ಸುದ್ದಿ ಕೇಳಿ ಆಘಾತಗೊಂಡ ಹುಸೇನ್, “ವಿದ್ಯುತ್ ಮಂಡಳಿ, ದೆಹಲಿ ಪೊಲೀಸ್ ಮತ್ತು ಸಿಆರ್ಪಿಎಫ್ ಜೊತೆ ಬಂದು ತಂತಿಗಳನ್ನು ಕಟ್ ಮಾಡಿದರು. ನ್ಯಾಯಾಲಯದ ಆದೇಶ ಎಂದರೇ ಹೊರತು, ಯಾವುದೇ ಮುನ್ಸೂಚನೆ ಇರಲಿಲ್ಲ. ಅವರು ನಮ್ಮ ಬದುಕಿನ ಅಸರೆಯನ್ನೇ ಕಿತ್ತುಕೊಂಡರು” ಎಂದು ಅಳಲು ತೋಡಿಕೊಂಡರು.
ಯೋಜಿತ ನೆಲಸಮದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಆಯುದ್ದೀನ್ ಹುಸೇನ್ ಸ್ಪಷ್ಟಪಡಿಸುತ್ತಾರೆ. “ನಮ್ಮ ಮನೆಗಳು ಕೆಡವಲ್ಪಟ್ಟರೆ ನಾವೇನು ಮಾಡಬಹುದು?” ಎಂದು ಪ್ರಶ್ನಿಸುವ ಅವರ ಮಾತಿನಲ್ಲಿ ಆಳವಾದ ಹತಾಶೆ ಇದೆ. “ಈಗಿನ ಮುಖ್ಯ ಚಿಂತೆ ವಿದ್ಯುತ್. ಚಿಕ್ಕ ಮಕ್ಕಳು, ಗರ್ಭಿಣಿಯರು, ವೃದ್ಧರಿರುವಾಗ ಈ ಬಿಸಿಲಿನಲ್ಲಿ ಒಂದು ಕ್ಷಣವೂ ಇರುವುದು ಕಷ್ಟ. ವಿದ್ಯುತ್ ಏಕೆ ಕಡಿತಗೊಳಿಸಿದರು ಮತ್ತು ಅದನ್ನು ಪುನಃಸ್ಥಾಪಿಸಲಿ ಎಂದು ಮಾತ್ರ ನಾವು ಬೇಡುತ್ತಿದ್ದೇವೆ” ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ. “ನಾನು ಈ ಬೀದಿಗಳಲ್ಲೇ ಬೆಳೆದಿದ್ದೇನೆ, 30 ವರ್ಷಗಳಿಂದ ಇದೇ ನೆಲದಲ್ಲಿ ಬೇರೂರಿದ್ದೇನೆ. ಜೈ ಹಿಂದ್ ಕ್ಯಾಂಪ್ ಕೇವಲ ಆಶ್ರಯತಾಣವಲ್ಲ; ಅದು ನನ್ನ ಬದುಕಿನ ಸಮಸ್ತ ಅಸ್ತಿತ್ವ” ಎಂದು ಹುಸೇನ್ ಭಾವುಕರಾಗಿ ನುಡಿಯುತ್ತಾರೆ.
ಸುಡುವ ಬೇಸಿಗೆಯ ಬಿಸಿಲಿನಲ್ಲಿ, ನಿವಾಸಿಗಳು ಅಸಹಾಯಕವಾಗಿ ತಮ್ಮ ಮನೆಗಳ ಹೊರಗೆ ಕೈಪಂಖಗಳನ್ನು ಬೀಸುತ್ತಾ ಕುಳಿತಿದ್ದಾರೆ. ಕಳೆದ 22 ವರ್ಷಗಳಿಂದ ಲಖನೌದಿಂದ ವಲಸೆ ಬಂದು ಇದೇ ಕ್ಯಾಂಪ್ನಲ್ಲಿ ವಾಸಿಸುತ್ತಿರುವ ಲಲಿತ್ ಕುಮಾರ್ ತಮ್ಮ ಅಳಲನ್ನು ತೋಡಿಕೊಂಡರು: “ನಮ್ಮ ವಿದ್ಯುತ್ ಸಂಪರ್ಕವನ್ನು ನಿನ್ನೆ ಬೆಳಿಗ್ಗೆ 10 ಗಂಟೆಗೆ ಕಡಿತಗೊಳಿಸಿದರು. ಒಂದು ಸಂಪೂರ್ಣ ವಿಡಿಯೋ ತಂಡವೇ ಅಧಿಕಾರಿಗಳೊಂದಿಗೆ ಬಂದು ನಮ್ಮನ್ನು ಚಿತ್ರೀಕರಿಸುತ್ತಿತ್ತು. ಏನಾಗುತ್ತಿದೆ ಎಂದು ನಮಗೆ ಕನಿಷ್ಠ ಸುಳಿವೂ ಇಲ್ಲ. ನಾನು ಪ್ರತಿ ತಿಂಗಳು ಸರಿಯಾಗಿ ವಿದ್ಯುತ್ ಬಿಲ್ಗಳನ್ನು ಪಾವತಿಸುತ್ತಿದ್ದೇನೆ, ಹಾಗಿದ್ದರೂ ಅವರು ಏಕೆ ಹೀಗೆ ಮಾಡುತ್ತಿದ್ದಾರೆ?” ಅವರ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು. “24 ಗಂಟೆಗಳಿಗಿಂತ ಹೆಚ್ಚಾಗಿದೆ. ಫ್ಯಾನ್ಗಳಿಲ್ಲ, ಕೂಲರ್ಗಳಿಲ್ಲ, ಏನೂ ಇಲ್ಲ. ಈ ಬಿಸಿಲಿನಲ್ಲಿ ಒಂದು ಗಂಟೆ ಕೂಡ ಇರಲು ಆಗುತ್ತಿಲ್ಲ. ನಾವಿಲ್ಲಿ 2,000 ಜನರಿದ್ದೇವೆ, ಈಗ ಎಲ್ಲಿಗೆ ಹೋಗಬೇಕು?” ಎಂದು ಅವರು ಹತಾಶೆಯಿಂದ ಪ್ರಶ್ನಿಸಿದರು.

ಮುಸ್ಲಿಂ ನಿವಾಸಿಗಳಿಗೆ ಈ ಪರಿಸ್ಥಿತಿಯು ಆಳವಾದ ಅವಮಾನವನ್ನುಂಟು ಮಾಡಿದೆ. “ನಾವು ಬಂಗಾಳದಿಂದ ಬಂದವರು ಎಂಬ ಒಂದೇ ಕಾರಣಕ್ಕೆ ನಮ್ಮನ್ನು ಬಾಂಗ್ಲಾದೇಶಿಯರು ಎಂದು ಹಣೆಪಟ್ಟಿ ಕಟ್ಟುತ್ತಾರೆ” ಎಂದು ಹುಸೇನ್ ತೀವ್ರ ನೋವಿನಿಂದ ಹೇಳುತ್ತಾರೆ. “ದೆಹಲಿ ಪೊಲೀಸರೇ ನಮ್ಮ ದಾಖಲೆಗಳನ್ನು ಪರಿಶೀಲಿಸಲು ಬಂಗಾಳದಲ್ಲಿರುವ ನಮ್ಮ ಹಳ್ಳಿಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಪಂಚಾಯತ್ಗಳು ಮತ್ತು ಸಂಸದರು ಸಹ ನಮ್ಮ ಭಾರತೀಯ ಪೌರತ್ವವನ್ನು ದೃಢಪಡಿಸಿದ್ದಾರೆ. ನಾವೆಲ್ಲರೂ ಭಾರತೀಯರು, ಆದರೂ ನಮ್ಮನ್ನು ಪದೇ ಪದೇ ಅದನ್ನು ಸಾಬೀತುಪಡಿಸಲು ಒತ್ತಾಯಿಸಲಾಗುತ್ತಿದೆ” ಎಂದು ಅವರ ಧ್ವನಿಯಲ್ಲಿ ಆಕ್ರೋಶ ಮನೆಮಾಡಿದೆ.
ವಿದ್ಯುತ್ ಕಡಿತವು ಗರ್ಭಿಣಿಯರು, ಮಕ್ಕಳು, ಅಸ್ವಸ್ಥರು ಮತ್ತು ವೃದ್ಧರಂತಹ ದುರ್ಬಲ ವರ್ಗದವರನ್ನು ಹೆಚ್ಚು ಬಾಧಿಸಿದೆ. ಅಸ್ವಸ್ಥ ಪೋಷಕರು, ಕುರುಡು ಸಹೋದರಿ ಮತ್ತು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ವಿಧವೆ ಫಾತಿಮಾ ಅವರ ಆಕ್ರೋಶ ಸ್ಪಷ್ಟವಾಗಿದೆ: “ನಾವು ಮಾನವರಲ್ಲವೇ? ದಶಕಗಳಿಂದ ಇಲ್ಲಿ ವಾಸಿಸಿದ್ದೇವೆ, ಆದರೆ ಈಗ ನಮ್ಮನ್ನು ‘ಅಕ್ರಮ’ ಎನ್ನುತ್ತಾರೆ! ಚುನಾವಣೆ ಬಂದಾಗ ಇದೇ ರಾಜಕಾರಣಿಗಳು ನಮ್ಮ ಮತಕ್ಕಾಗಿ ಭಿಕ್ಷೆ ಬೇಡಲು ಮೊದಲಿಗರಾಗಿದ್ದರು.” ತಮ್ಮ ಹೋರಾಟವನ್ನು ವಿವರಿಸುತ್ತಾ, “ನಾವು ಗೌರವಯುತ ಜೀವನಕ್ಕಾಗಿ ಇಲ್ಲಿಗೆ ಬಂದಿದ್ದೇವೆ, ಆದರೆ ಅವರು ಅದನ್ನೂ ನಮಗೆ ಮಾಡಲು ಬಿಡುತ್ತಿಲ್ಲ. ಎಲ್ಲವನ್ನೂ ಕೋಮುವಾದಿ ಮಾಡುತ್ತಾರೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು – ನಾವೆಲ್ಲರೂ ಇಲ್ಲಿ ಒಟ್ಟಾಗಿ ವಾಸಿಸುತ್ತೇವೆ” ಎಂದು ಫಾತಿಮಾ ತಮ್ಮ ನೋವು ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದರು.
ಅಡುಗೆಯವರಾದ ರಶೀದಾ ಕಣ್ಣೀರಿಡುತ್ತಾ ತಮ್ಮ ಹೃದಯದ ನೋವನ್ನು ಹಂಚಿಕೊಂಡರು: “ಉತ್ತಮ ಬದುಕಿನ ಆಸೆ ಹೊತ್ತು ಇಲ್ಲಿಗೆ ಬಂದೆವು. ಮೂರು ದಶಕಗಳಿಂದ ಇದೇ ನಮ್ಮ ಮನೆ, ನಮ್ಮ ನೆಲೆ. ಈಗ ನಾವು ಎಲ್ಲಿಗೆ ಹೋಗುವುದು? ಇಲ್ಲಿಂದ ಕದಲುವುದು ಎಂದರೆ ನಮ್ಮ ಬೇರುಗಳನ್ನೇ ಕಿತ್ತುಹಾಕಿದಂತೆ. ನಾವಿಲ್ಲಿಯೇ ಉಳಿಯುತ್ತೇವೆ.” ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ, ರಾತ್ರಿಯಿಡೀ ನಿವಾಸಿಗಳು ಬೀದಿಗಳಲ್ಲಿ ಮಲಗಲು ಒತ್ತಾಯಿಸಲ್ಪಟ್ಟಿದ್ದಾರೆ. ಫೋನ್ಗಳಿಗೆ ಚಾರ್ಜ್ ಮಾಡಲು ಸಮೀಪದ ಅಂಗಡಿಗಳನ್ನು ಆಶ್ರಯಿಸುವುದು ಅವರಿಗೆ ಅನಿವಾರ್ಯವಾಗಿದೆ.
ವಿದ್ಯುತ್ ಸಂಪರ್ಕವು ಕ್ಯಾಂಪಿನ ಮಸೀದಿ ಮತ್ತು ದೇವಸ್ಥಾನದ ಮೂಲಕ ಸಾಗುತ್ತಿತ್ತು. ಅಧಿಕಾರಿಗಳು ಎರಡೂ ಧಾರ್ಮಿಕ ಕೇಂದ್ರಗಳ ಮೀಟರ್ಗಳಿಂದ ತಂತಿಗಳನ್ನು ಕಡಿತಗೊಳಿಸಿದಾಗ, ಇಡೀ ಪ್ರದೇಶವು ಕ್ಷಣಾರ್ಧದಲ್ಲಿ ಕತ್ತಲಲ್ಲಿ ಮುಳುಗಿತು. ಈ ಕ್ರಿಯೆಯು ನಿವಾಸಿಗಳ ಹೃದಯವನ್ನು ತಟ್ಟಿದೆ. “ನಾವು ಬಿಟ್ಟು ಹೋಗುವ ಮೊದಲು ಇಲ್ಲಿಯೇ ಸಾಯುತ್ತೇವೆ” ಎಂದು ಮುಷರಫ್ ಆಕ್ರೋಶದಿಂದ ಪ್ರತಿಜ್ಞೆ ಮಾಡಿದರು. ಫಾತಿಮಾ ಕೂಡ ಗಟ್ಟಿದನಿಯಲ್ಲಿ “ನಮಗೆ ಬೇರೆ ಎಲ್ಲಿಗೂ ಹೋಗಲು ಸ್ಥಳವಿಲ್ಲ. ನಾವು ನಮ್ಮ ಜೀವವನ್ನು ಕೊಡುತ್ತೇವೆ, ಆದರೆ ಇಲ್ಲಿಂದ ಕದಲುವುದಿಲ್ಲ” ಎಂದು ಆ ದೃಢ ಸಂಕಲ್ಪವನ್ನು ಪುನರುಚ್ಚರಿಸಿದರು.
ಅಸಹನೀಯ ಬಿಸಿಲಿನಿಂದಾಗಿ, ಹಲವರು ತಾತ್ಕಾಲಿಕವಾಗಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಲು ಒತ್ತಾಯಿಸಲ್ಪಟ್ಟಿದ್ದಾರೆ. ತಮ್ಮ ಕೂಲರ್ಗಳು ಮತ್ತು ರೆಫ್ರಿಜರೇಟರ್ಗಳನ್ನು ಗಾಡಿಗಳಿಗೆ ಲೋಡ್ ಮಾಡುತ್ತಾ, ಉಳಿಸಬಹುದಾದದ್ದನ್ನು ಉಳಿಸಿಕೊಳ್ಳಲು ಅವರು ಹತಾಶ ಪ್ರಯತ್ನ ಮಾಡುತ್ತಿದ್ದರು. “ಹೊರಗಡೆ ಬಾಡಿಗೆ ಕೂಡ ನಮಗೆ ತುಂಬಾ ಹೆಚ್ಚು. ಬಿಟ್ಟು ಹೋಗುವುದು ನಮಗೊಂದು ಆಯ್ಕೆಯಲ್ಲ” ಎಂದು ರಶೀದಾ ಸ್ಪಷ್ಟಪಡಿಸಿದರು, ಇದು ಅವರ ಅಸಹಾಯಕತೆಯನ್ನು ಬಿಂಬಿಸುತ್ತದೆ. ಇಂತಹ ಪರಿಸ್ಥಿತಿಯಲ್ಲೂ, ನಾಗರಿಕ ಸಮಾಜ ಗುಂಪುಗಳು ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ತಿಳಿಸಿವೆ ಮತ್ತು ನೆಲಸಮಕ್ಕೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿ, ಕಾನೂನು ಹೋರಾಟವನ್ನು ಮುಂದುವರೆಸಿವೆ.


