ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್ಎನ್ ಟ್ರಸ್ಟ್ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು, ಕಾರ್ಪೊರೇಟ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸುಮಾರು 170 ಪದಾಧಿಕಾರಿಗಳ ಸಂಪೂರ್ಣ ಮಂಡಳಿಯನ್ನು ವಜಾ ಮಾಡಿದೆ ಎಂದು ವರದಿಯಾಗಿದೆ.
ಕೇರಳದ ಪ್ರಭಾವಿ ಈಳವ ಸಮುದಾಯದ ಪ್ರಮುಖ ಸಾಮಾಜಿಕ ಸಂಘಟನೆಯಾದ ಎಸ್ಎನ್ಡಿಪಿ ಯೋಗಂ ಅನ್ನು ನಟೇಶನ್ ಕಳೆದ 25 ವರ್ಷಗಳಿಗೂ ಹೆಚ್ಚು ಸಮಯದಿಂದ ಮುನ್ನಡೆಸಿದ್ದಾರೆ.
ಬರಹಗಾರ ಎಂ.ಕೆ. ಸಾನು ಮತ್ತು ಎಸ್ಎನ್ಡಿಪಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎಸ್. ಚಂದ್ರಸೇನನ್ ಅವರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದೆ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್ ಅವರ ಪೀಠವು ಆದೇಶ ನೀಡಿದೆ. ಈ ಅರ್ಜಿದಾರರು ವ್ಯವಸ್ಥೆಯಲ್ಲಿನ ಗಂಭೀರ ಅಕ್ರಮಗಳನ್ನು ಎತ್ತಿ ತೋರಿಸಿದ್ದರು.
ನಟೇಶನ್ ಜೊತೆಗೆ ಮಂಡಳಿಯ ಉಪಾಧ್ಯಕ್ಷನಾಗಿರುವ ಅವರ ಮಗರ ತುಷಾರ್ ವೆಳ್ಳಾಪ್ಪಳ್ಳಿ, ಅಧ್ಯಕ್ಷ ಎಂ.ಎನ್. ಸೋಮನ್, ದೇವಸ್ವಂ ಕಾರ್ಯದರ್ಶಿ ಅರಾಯಕಂಡಿ ಸಂತೋಷ್ ಮತ್ತು ಇತರರು ಅನರ್ಹಗೊಂಡ ಪ್ರಮುಖರು.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಎಸ್ಎನ್ಡಿಪಿ ಯೋಗಂ, 2014 ರಿಂದ, ಅಂದರೆ ಸುಮಾರು ಒಂಬತ್ತು ವರ್ಷಗಳಿಂದ ತನ್ನ ವಾರ್ಷಿಕ ಹಣಕಾಸು ವರದಿಗಳನ್ನು ಸಲ್ಲಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಕಂಪನಿ ಕಾಯ್ದೆಯ ಪ್ರಕಾರ, ಸತತ ಮೂರು ವರ್ಷಗಳ ಕಾಲ ವರದಿ ಸಲ್ಲಿಸದಿದ್ದರೆ ನಿರ್ದೇಶಕರು ಅನರ್ಹರಾಗುತ್ತಾರೆ. ಅಲ್ಲದೆ, ಹಲವಾರು ನಿರ್ದೇಶಕರು ಕಡ್ಡಾಯವಾಗಿ ಹೊಂದಿರಬೇಕಾದ ನಿರ್ದೇಶಕರ ಗುರುತಿನ ಸಂಖ್ಯೆಯನ್ನು ಹೊಂದಿರಲಿಲ್ಲ ಎಂದು ನ್ಯಾಯಾಲಯ ಎತ್ತಿ ತೋರಿಸಿದೆ.
ಕಂಪನಿಗಳ ನೋಂದಣಾಧಿಕಾರಿಯ ವರದಿಯನ್ನು ಉಲ್ಲೇಖಿಸಿದ ಹೈಕೋರ್ಟ್, ಪ್ರಸ್ತುತ ಇರುವ ಎಲ್ಲಾ ಪದಾಧಿಕಾರಿಗಳನ್ನು ಅನರ್ಹಗೊಳಿಸಿದೆ ಮತ್ತು ಹೊಸ ಮಂಡಳಿಯನ್ನು ನೇಮಿಸುವಂತೆ ಆದೇಶಿಸಿದೆ. ಹೊಸ ಮಂಡಳಿಯು ನೇಮಕವಾಗುವವರೆಗೆ, ಒಂದು ತಾತ್ಕಾಲಿಕ ಮಂಡಳಿಯು ದೈನಂದಿನ ಕಾರ್ಯಕಲಾಪಗಳನ್ನು ನಿರ್ವಹಿಸಲಿದೆ ಮತ್ತು ಕಾನೂನುಬದ್ಧವಾಗಿ ಹೊಸ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳಲಿದೆ.
ವೆಳ್ಳಾಪಳ್ಳಿ ನಟೇಶನ್ ಅವರು ಈ ಸಂಪೂರ್ಣ ಅನರ್ಹತೆಯನ್ನು ಒಪ್ಪಿಕೊಂಡಿದ್ದು, ತೀರ್ಪಿನ ಪ್ರತಿಯನ್ನು ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಈ ತೀರ್ಪು ದಶಕಗಳ ಕಾಲ ಸಂಘಟನೆಯಲ್ಲಿ ಪ್ರಾಬಲ್ಯ ಹೊಂದಿದ್ದ ಅವರಿಗೆ ಕಾನೂನಾತ್ಮಕವಾಗಿ ಎದುರಾದ ಅತಿದೊಡ್ಡ ಹಿನ್ನಡೆಗಳಲ್ಲಿ ಒಂದಾಗಿದೆ.


