ಶುಕ್ರವಾರ ಬೆಳಿಗ್ಗೆ ಉತ್ತರಪ್ರದೇಶದ ಕುಖ್ಯಾತ ಕ್ರಿಮಿನಲ್ ವಿಕಾಸ್ ದುಬೆಯನ್ನು ಪೊಲೀಸರು ಹತ್ಯೆ ಮಾಡಿದ ನಂತರ, ಪೋಲೀಸರು ಬಿಡುಗಡೆ ಮಾಡಿರುವ ವೀಡಿಯೋ ಸಾಕ್ಷಿಗಳ ಮೇಲೆ 5 ಪ್ರಶ್ನೆಗಳನ್ನು ಸಾರ್ವಜನಿಕರು ಕೇಳಿದ್ದಾರೆ.
ರಸ್ತೆ ಅಪಘಾತದ ನಂತರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ದರೋಡೆಕೋರ ವಿಕಾಸ್ ದುಬೆಯನ್ನು ಎನ್ಕೌಂಟರ್ ಮಾಡಲಾಯಿತು ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನಿನ್ನೆ ಬಂಧನಕ್ಕೊಳಗಾದ ನಂತರ ಕಾನ್ಪುರಕ್ಕೆ ಪೋಲಿಸ್ ಬೆಂಗಾವಲಿನಲ್ಲಿ ವಿಕಾಸ್ ದುಬೆಯನ್ನು ಕರೆತರಲಾಗುತ್ತಿತ್ತು. ಕಾನ್ಪುರದಿಂದ ಕೇವಲ 30 ಕಿ.ಮೀ ದೂರದಲ್ಲಿ, ಬೆಂಗಾವಲಿನಲ್ಲಿದ್ದ ಮೂರು ಕಾರುಗಳಲ್ಲಿ ಒಂದು ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಅದರಲ್ಲಿದ್ದ ದುಬೆ ಈ ಸಂದರ್ಭದ ಲಾಭ ಪಡೆದು, ತಪ್ಪಿಸಿಕೊಳ್ಳಲು ಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಪೊಲೀಸ್ ಎನ್ಕೌಂಟರ್ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ 5 ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳೆಂದರೆ
1. ದುಬೆಯನ್ನು ಬೇರೆ ಕಾರಿಗೆ ಶಿಫ್ಟ್ ಮಾಡಿದ್ದು ಏಕೆ? ಅಪಘಾತಕ್ಕೂ ಮೊದಲು ಬೆಳಿಗ್ಗೆ 4 ಗಂಟೆಗೆ ಟೋಲ್ ಪ್ಲಾಜಾದಲ್ಲಿನ ವಿಡಿಯೋ ತೋರಿಸುವಂತೆ ಪಲ್ಟಿಯಾದ ಕಾರಿನಲ್ಲಿ ದುಬೆ ಇರಲಿಲ್ಲ. ಬದಲಿಗೆ ಬೇರೆ ಕಾರಿನಲ್ಲಿದ್ದ. ಅಂದರೆ ನಂತರ ಆತನನ್ನು ಬೇರೆ ಕಾರಿಗೆ ಶಿಫ್ಟ್ ಮಾಡಿದ್ದಕ್ಕೆ ಕಾರಣಗಳೇನು? ಶಿಫ್ಟ್ ಮಾಡುವ ಅಗತ್ಯವಾದರೂ ಏನಿತ್ತು?
2. ಪೊಲೀಸರನ್ನು ಹಿಂಬಾಲಿಸುತ್ತಿದ್ದ ಮೀಡಿಯಾ ತಂಡಗಳನ್ನು ಎನ್ ಕೌಂಟರ್ ನಡೆದ ಸ್ಥಳದಿಂದ 2 ಕಿಮೀ ದೂರದಲ್ಲಿಯೇ ತಡೆದು ನಿಲ್ಲಸಿದ್ದು ಏಕೆ?
3. ಘಟನೆಗೆ ಸಾಕ್ಷಿಯಾದ ಕೆಲವರು ಗುಂಡಿನ ಸಪ್ಪಳ ಕೇಳಿದೆವು ಎನ್ನುತ್ತಿದ್ದಾರೆ ಹೊರತು ಕಾರ ಮಗುಚಿ ಬಿದ್ದ ಅಪಘಾತದ ಬಗ್ಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಅದಾಗಲೇ ಪೊಲೀಸರು ಸ್ಥಳೀಯರನ್ನು ಜಾಗ ಖಾಲಿ ಮಾಡಿಸಿದ್ದು ಏಕೆ?
4. ಕೊಲೆ ಸೇರಿ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಒಬ್ಬನಿಗೆ ಕೈಕೋಳ (ಹ್ಯಾಂಡ್ ಕಾಫ್) ಹಾಕಿರಲಿಲ್ಲವೇಕೆ? ಆತ ಗಾಯಗೊಂಡ ಪೊಲೀಸರೊಬ್ಬರ ಬಂದೂಕು ಕಿತ್ತುಕೊಂಡ ಎಂದು ಪೊಲೀಸರೇ ಹೇಳಿದ್ದಾರೆ. ಕೈಕೊಳ ಹಾಕಿದ್ದರು ಕಿತ್ತುಕೊಳ್ಳಲು ಹೇಗೆ ಸಾಧ್ಯ?
5. ಕಾರ್ ಬಿದ್ದ ಜಾಗದಲ್ಲಿ ಯಾವುದೇ ಬ್ಯಾರಿಕೇಡ್ ಇರಲಿಲ್ಲ. ಹೊಲಗಳತ್ತ ಸಾಗುವ ಒಂದು ಅಡ್ಡ ದಾರಿಯಿದೆ. ದುಬೆ ಅದರಲ್ಲೇ ಓಡಿ ಹೋಗಲು ಯತ್ನಿಸಿದ ಎಂಬ ಪೊಲೀಸರ ಹೇಳಿಕೆಯೂ ಅನುಮಾನಾಸ್ಪದವಾಗಿದೆ.
ದುಬೆಗಿದ್ದ ರಾಜಕೀಯ ನಂಟುಗಳು ಬಯಲಾಗಬಾರದು ಎಂಬ ಕಾರಣಕ್ಕೆ ಪೊಲೀಸರು ಎನ್ ಕೌಂಟರ್ ಕತೆ ಸೃಷ್ಟಿಸಿ, ಕಾನ್ಪುರದಿಂದ 30 ಕಿಮೀ ಇರುವಾಗಲೇ ದುಬೆಯನ್ನು ಕೊಂದರೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ಓಡಾಡುತ್ತಿದೆ.
ನಿನ್ನೆಯಷ್ಟೇ ಸುಪ್ರೀಂಕೋರ್ಟಿನಲ್ಲಿ ಸಲ್ಲಿಕೆಯಾದ ಅರ್ಜಿಯಲ್ಲಿ ಕಾನ್ಪುರ್ ತಲುಪುವ ಮೊದಲೇ ದುಬೆಯನ್ನ ಪೊಲೀಸರು ಕೊಲ್ಲಬಹುದಾಗಿದ್ದು, ಆತನನ್ನು ಜೀವಂತ ತರುವಂತೆ ಆದೇಶಿಸಬೇಕು ಎಂದು ಕೇಳಲಾಗಿತ್ತು.
ಇದನ್ನೂ ಓದಿ: ಯುಪಿ ಸರ್ಕಾರ ಕುಸಿಯದಂತೆ ತಡೆಯಲು ವಿಕಾಸ್ ದುಬೆ ಹತ್ಯೆ: ವಿರೋಧ ಪಕ್ಷಗಳ ಆರೋಪ