ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಮ್ಪಿಎಲ್ಬಿ) ಮಾರ್ಚ್ 10 ರಂದು ಸಂಸತ್ತಿನ ಬಳಿಯ ಐತಿಹಾಸಿಕ ಜಂತರ್ ಮಂತರ್ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೃಹತ್ ಹೋರಾಟ ನಡೆಸುವ ಯೋಜನೆಯನ್ನು ಘೋಷಿಸಿದ ಕೆಲವು ದಿನಗಳ ನಂತರ, ಹಿಂದೂ ರಕ್ಷಾ ದಳದ ಮುಖ್ಯಸ್ಥೆ ಪಿಂಕಿ ಚೌಧರಿ ಕೂಡ ಅದೇ ಸ್ಥಳದಲ್ಲಿ ಮಸೂದೆಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುವ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ವಕ್ಫ್ ಸಂಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸಿ ತಮ್ಮ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಚೌಧರಿ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಚೌಧರಿ, “ದೆಹಲಿ ಪೊಲೀಸರು ವಕ್ಫ್ ಮಸೂದೆಯ ವಿರುದ್ಧ ಪ್ರತಿಭಟಿಸಲು ಮುಸ್ಲಿಮರಿಗೆ ಅನುಮತಿ ನೀಡಿದ್ದಾರೆ ಎಂದು ಹೇಳುತ್ತಾರೆ. ಹಿಂದೂಗಳು ಆ ಸ್ಥಳದಲ್ಲಿ ಮುಸ್ಲಿಮರು ಸೇರದಂತೆ ನೋಡಿಕೊಳ್ಳಬೇಕು” ಎಂದು ಅವರು ಕರೆ ನೀಡಿದ್ದಾರೆ.
“ನಾವೆಲ್ಲರೂ ಹಿಂದೂ ಸಹೋದರರು ಒಟ್ಟಾಗಿ ಹೋರಾಡಿದರೆ, ವಕ್ಫ್ ಮಂಡಳಿಯನ್ನು ಮುಗಿಸಬಹುದು. ಇತರರು ಅದನ್ನು ಮಾಡಲು ಸಾಧ್ಯವಿಲ್ಲ, ಮಾರ್ಚ್ 10 ರಂದು ವಕ್ಫ್ ಸಂಸ್ಥೆಯನ್ನು ವಿರೋಧಿಸಲು ನಾವು ಪೂರ್ಣ ಬಲದಿಂದ ಜಂತರ್ ಮಂತರ್ಗೆ ಆಗಮಿಸುತ್ತೇವೆ ಎಂದು ನಾನು ಎlfl ಹಿಂದೂ ಸಹೋದರರಿಗೆ ಹೇಳಲು ಬಯಸುತ್ತೇನೆ” ಎಂದು ಅವರು ಹೇಳಿದರು.
ಸರ್ಕಾರವು ವಕ್ಫ್ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ ಅವರು, ಮತ್ತು ದೇಶಾದ್ಯಂತ ಅದರ ವಿರುದ್ಧ ಪ್ರತಿಭಟನೆಗಳನ್ನು ನಡೆಸುವಂತೆ ತಮ್ಮ ಬೆಂಬಲಿಗರನ್ನು ಕೇಳಿಕೊಂಡರು.
ಜಂತರ್ ಮಂತರ್ನಲ್ಲಿ ಮುಸ್ಲಿಂ ಪ್ರತಿಭಟನಾಕಾರರೊಂದಿಗೆ ದೈಹಿಕ ಘರ್ಷಣೆಗೆ ತಮ್ಮ ಬೆಂಬಲಿಗರು ಹಿಂಜರಿಯುವುದಿಲ್ಲ. ವಕ್ಫ್ ಮಂಡಳಿಯನ್ನು ಬೆಂಬಲಿಸಲು ಈ ಮುಲ್ಲಾಗಳು ಒಟ್ಟುಗೂಡಲು ನಾವು ಅನುಮತಿಸುವುದಿಲ್ಲ ಎಂದು ಚೌಧರಿ ಪ್ರಚೋಧನಾತ್ಮಕ ಹೇಳಕೆ ನೀಡಿದ್ದಾರೆ.
ಮುಸ್ಲಿಮರು ಪ್ರತಿಭಟಿಸದಿದ್ದರೆ ಜನರ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸುತ್ತಾರೆ ಎಂದು ಸುಳ್ಳು ಹೇಳುವ ಮೂಲಕ ಅವರು ಭಯ ಹುಟ್ಟಿಸುವ ಪ್ರಚಾರವನ್ನು ಸಹ ಮಾಡಿದರು.
ಮಾರ್ಚ್ 1 ರಂದು, ಎಐಎಮ್ಪಿಎಲ್ಬಿ ವಕ್ತಾರ ಡಾ. ಸೈಯದ್ ಖಾಸಿಂ ರಸೂಲ್ ಇಲ್ಯಾಸ್, ಆ ದಿನ ಸಂಸತ್ತಿನಲ್ಲಿ ಮಂಡಿಸಲಿರುವ ವಕ್ಫ್ ಮಸೂದೆಯ ವಿರುದ್ಧ ಮಂಡಳಿಯು ಪ್ರತಿಭಟನೆಯನ್ನು ಆಯೋಜಿಸುತ್ತದೆ ಎಂದು ಹೇಳಿದರು.
ಮಂಡಳಿಯು ಹಲವಾರು ಮುಸ್ಲಿಂ ಸಂಘಟನೆಗಳು ಮತ್ತು ಸಾಮಾನ್ಯ ಮುಸ್ಲಿಂ ಸಮುದಾಯದೊಂದಿಗೆ ಕೇಂದ್ರ ಸರ್ಕಾರ, ಅದರ ಮಿತ್ರ ಪಕ್ಷಗಳು ಮತ್ತು ವಿಶೇಷವಾಗಿ ಸಂಬಂಧಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮುಂದೆ ತನ್ನ ನಿಲುವನ್ನು ಬಲವಾಗಿ ಮಂಡಿಸಿದೆ ಎಂದು ಅವರು ಹೇಳಿದರು. ಪ್ರಸ್ತಾವಿತ ಮಸೂದೆಯು ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವ, ಅದನ್ನು ನಾಶಮಾಡುವ ಒಂದು ದುಷ್ಟ ಪಿತೂರಿಯಾಗಿದ್ದು, ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಒತ್ತಿ ಹೇಳಿದರು. ಆದರೆ, ಕೇಂದ್ರ ಸರ್ಕಾರವು ಈ ಕಳವಳಗಳಿಗೆ ಕಿವಿಗೊಡಲಿಲ್ಲ.
“ಸರ್ಕಾರವು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಯೋಜಿಸುತ್ತಿರುವುದರಿಂದ, ಮಂಡಳಿಯ ಕಾರ್ಯಕಾರಿ ಸಮಿತಿಯು ಮಾರ್ಚ್ 10 ರಂದು ಸಂಸತ್ತಿನ ಮುಂದೆ ಜಂತರ್ ಮಂತರ್ನಲ್ಲಿ ಧರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಲು ಹಾಗೂ ಅವರ ಪ್ರತಿಭಟನೆಯನ್ನು ನೋಂದಾಯಿಸಲು. ವಿವಿಧ ಧಾರ್ಮಿಕ, ರಾಷ್ಟ್ರೀಯ ಮತ್ತು ಸಾಮಾಜಿಕ ಸಂಘಟನೆಗಳ ಕೇಂದ್ರ ನಾಯಕತ್ವದೊಂದಿಗೆ ಎಐಎಮ್ಪಿಎಲ್ಬಿಯ ಸಂಪೂರ್ಣ ನಾಯಕತ್ವವು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತದೆ. ಎಲ್ಲ ವಿರೋಧ ಪಕ್ಷಗಳು, ನಾಗರಿಕ ಸಮಾಜ ಚಳುವಳಿಗಳನ್ನು ಈ ಧರಣಿ ಪ್ರತಿಭಟನೆಯಲ್ಲಿ ಸೇರುವಂತೆ ಹಾಗೂ ಈ ಅನ್ಯಾಯ, ದಬ್ಬಾಳಿಕೆಯ ವಿರುದ್ಧ ನಿಲ್ಲುವಂತೆ ಎಐಎಮ್ಪಿಎಲ್ಬಿ ಒತ್ತಾಯಿಸಿದೆ.
ಈ ಪ್ರತಿಭಟನೆಯಲ್ಲಿ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಸಾಮಾಜಿಕ ಮತ್ತು ರಾಜಕೀಯ ನಾಯಕತ್ವ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಧಾರ್ಮಿಕ ಮುಖಂಡರು ಸಹ ಭಾಗವಹಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಮಾರ್ಚ್ 7 ರಂದು, ವಿಜಯವಾಡ (ಆಂಧ್ರಪ್ರದೇಶ) ಮತ್ತು ಪಾಟ್ನಾ (ಬಿಹಾರ) ದಲ್ಲಿನ ರಾಜ್ಯ ಸಭೆಗಳ ಮುಂದೆ ಪ್ರತಿಭಟನೆಗಳು ನಡೆಯಲಿವೆ.
ದೇಶದ ಮುಖ್ಯವಾಹಿನಿಯ ಮಾಧ್ಯಮಗಳು ಕೋಮು ಶಕ್ತಿಗಳಿಂದ ನಡೆಸಲ್ಪಡುವ ಆಧಾರರಹಿತ, ದಾರಿತಪ್ಪಿಸುವ ನಿರೂಪಣೆಗಳನ್ನು ಪ್ರಚಾರ ಮಾಡುತ್ತಿರುವುದರ ಬಗ್ಗೆಯೂ ಮಂಡಳಿಯು ಆಕ್ರೋಶ ವ್ಯಕ್ತಪಡಿಸಿದೆ. ಮಿಲಿಟರಿ ಮತ್ತು ರೈಲ್ವೆಗಳ ನಂತರ, ವಕ್ಫ್ ಆಸ್ತಿಗಳು ದೇಶದಲ್ಲಿ ಅತಿ ದೊಡ್ಡದಾಗಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿರುವ ಹಿಂದೂ ವಕ್ಫ್ ಆಸ್ತಿಗಳು ಹಾಗೂ ಒಡಿಶಾದಲ್ಲಿನ ದೇವಾಲಯ ಆಸ್ತಿಗಳು ಒಟ್ಟು ವಕ್ಫ್ ಆಸ್ತಿಗಳಿಗಿಂತ ಹೆಚ್ಚಿನದಾಗಿದೆ.
“ಇನ್ನೊಂದು ನಿರ್ಣಾಯಕ ಅಂಶವೆಂದರೆ, ಈ ಎಲ್ಲ ವಕ್ಫ್ ಆಸ್ತಿಗಳು ಮೂಲತಃ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಮುಸ್ಲಿಂ ಪೂರ್ವಜರು ದಾನ ಮಾಡಿದ ವೈಯಕ್ತಿಕ ಆಸ್ತಿಗಳಾಗಿದ್ದವು. ವಕ್ಫ್ ಕಾನೂನು ಅವುಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಅವುಗಳ ದುರುಪಯೋಗವನ್ನು ತಡೆಯುತ್ತದೆ” ಎಂದು ಡಾ. ಇಲ್ಯಾಸ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


