“ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್ಗೆ ತಿಳಿಸಿದ್ದೆ” ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ (ಏ.4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ನಿರ್ಧಾರವನ್ನು ಗೌರವಿಸಿದ್ದಕ್ಕಾಗಿ ಪಕ್ಷದ ಹೈಕಮಾಂಡ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ತಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಬದಲಾಗಿ ಎನ್ಡಿಎ ಪರ ಪ್ರಚಾರ ಮಾಡುವುದಾಗಿ ಈಗಾಗಲೇ ಲಿಖಿತವಾಗಿ ಹೈಕಮಾಂಡ್ಗೆ ತಿಳಿಸಿದ್ದೇನೆ” ಎಂದಿದ್ದಾರೆ.
“ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬುವುದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ. ಹಾಗಾಗಿ, ನಾನು ಇಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಹೈಕಮಾಂಡ್ಗೆ ತಿಳಿಸಿದ್ದೆ. ನನಗೇ ಆಸಕ್ತಿ ಇಲ್ಲದಿರುವಾಗ ಹೈಕಮಾಂಡ್ ಟಿಕೆಟ್ ಕೊಡಲು ಹೇಗೆ ಸಾಧ್ಯ? ನಾನು ಸ್ಪರ್ಧಿಸಲು ಇಚ್ಚಿಸಿದ್ದರೆ ಎಲ್ಲಿಂದ ಬೇಕಾದರು ಸ್ಪರ್ಧಿಸಬಹುದಿತ್ತು. ಅಲ್ಲಿ ಯಾವ ಕ್ಷೇತ್ರ ಎಂಬ ವಿಚಾರ ಬರುತ್ತಿರಲಿಲ್ಲ” ಎಂದು ಅಣ್ಣಾಮಲೈ ಹೇಳಿದ್ದಾರೆ.
ಎಐಎಡಿಎಂಕೆ ಜೊತೆಗಿನ ಮೈತ್ರಿಯಿಂದಾಗಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂಬ ಚರ್ಚೆಗಳ ನಡುವೆ ಅಣ್ಣಾಮಲೈ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ಅಣ್ಣಾಮಲೈ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡಿನಲ್ಲಿ ಬಿಜೆಪಿ ಸೇರಿದವರು. 2021ರಲ್ಲಿ ಅಣ್ಣಾಮಲೈ ಅವರನ್ನು ಬಿಜೆಪಿ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಲಾಗಿತ್ತು. ಆ ಬಳಿಕ ಅವರು ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದರು.
2024ರ ಲೋಕಸಭೆ ಚುನಾವಣೆಗೆ ಮುನ್ನ ‘ಎನ್ ಮಣ್ಣ್ ಎನ್ ಮಕ್ಕಳು’ ಎಂಬ ಶೀರ್ಷಿಕೆಯಡಿ ರಾಜ್ಯದಾದ್ಯಂತ ಯಾತ್ರೆಯನ್ನೂ ನಡೆಸಿದ್ದರು. ಅದರೆ, ಇದು ಯಾವುದೂ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಸೋಲಾಯಿತು. ನಂತರ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜ್ಯಾಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡಿತು.
ಎನ್ಡಿಎ ಮೈತ್ರಿಕೂಟದೊಳಗೆ ಮಾತುಕತೆ ನಡೆಸಿದ ನಂತರ, ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಅದರಲ್ಲಿ ಅಣ್ಣಾಮಲೈ ಅವರ ಹೆಸರು ಇರಲಿಲ್ಲ. ಹಾಗಾಗಿ, ಬಿಜೆಪಿ ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡಿತು ಎಂಬ ಚರ್ಚೆಗಳು ಗರಿಗೆದರಿತ್ತು. ಅಣ್ಣಾಮಲೈಗೆ ಅತ್ತ ಐಪಿಎಸ್ ಹುದ್ದೆಯೂ ಇಲ್ಲ, ಇತ್ತ ಬಿಜೆಪಿಯಲ್ಲೂ ಮನ್ನಣೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿತ್ತು.


