ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನಜ್ಮಾ ನಜೀರ್ ಚಿಕ್ಕನೇರಳೆ ಬೆಂಗಳೂರಿನಲ್ಲಿ ಎಲ್ಲರಿಗೂ ಪರಿಚಯವಾಗಿದ್ದು, ಸಾಮಾಜಿಕ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಚುರುಕಾಗಿ ಓಡಾಡುವ ಚಿನಕುರಳಿಯಾಗಿ. ವೈದ್ಯಕೀಯ ವಿದ್ಯಾರ್ಥಿನಿಯಾದ ನಜ್ಮಾ ರೇಡಿಯೋ ಜಾಕಿಯಾಗಿ, ಕಂಠದಾನ ಕಲಾವಿದೆಯಾಗಿಯೂ ಕೆಲಸ ಮಾಡುತ್ತಾರೆ. ಆಕೆಯ ಪಿವೋಟ್ ಪದ್ಯಗಳು ಕೃತಿ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ.

ಮೊನ್ನೆ ನನ್ನ ಶಾಲಾದಿನಗಳ ಜೂನಿಯರ್ ಒಬ್ಬ ವಾಟ್ಸಾಪಿನಲ್ಲಿ ದನ ರಕ್ಷಣೆಯ ಬಗ್ಗೆ ಮೆಸೇಜೊಂದನ್ನ ಕಳುಹಿಸಿದ್ದ. ದನದ ಮಾಂಸ ತಿನ್ನುವವರೆಲ್ಲ ದೇಶದ್ರೋಹಿಗಳು ಎಂದು ನೇರವಾಗಿಯೆ ಬರೆದ ಮೆಸೇಜದು. ಇಂತಹುದ್ದೆ ಸ್ವರೂಪದ ಫ್ಯಾಸಿಸ್ಟ್ ಸಮರ್ಥನೆಯ ಮೆಸೇಜುಗಳನ್ನು ಕಳುಹಿಸಿದ್ದ ಹುಡುಗ ನಮ್ಮ ಮನೆಯಲ್ಲೆ ಅಡ್ಡಾಡಿಕೊಂಡು, ತಿಂದುಂಡುಕೊಂಡು ನಮ್ಮೊಟ್ಟಿಗೆಯೆ ಬೆಳೆದವನು. ಡಿಪ್ಲೊಮಾ ಮುಗಿಸಿ ಬೆಂಗಳೂರಿನ ಕಾರ್ಖಾನೆಯೊಂದರ ನೌಕರನಾಗಿದ್ದ ಆತನನ್ನು ಆರ್ಥಿಕ ಕುಸಿತದ ಕಾರಣ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಕೆಲಸದಿಂದ ತೆಗೆದಿದ್ದಾರೆ. ಕೆಲಸವಿಲ್ಲದ ಕಾರಣ ವಾಟ್ಸಾಪ್ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿ ಬಲ ಭಜನೆಯಲ್ಲಿ ಪ್ರತಿದಿನ ಮಿಂದೇಳುತ್ತಿದ್ದಾನೆ.
ಬಲಪಂಥೀಯ ಮೇನಿಯಾ ಈ ಮಟ್ಟಿಗೆ ಮಕ್ಕಳಿಂದ ಮುದಿಯರವರೆಗು ಹರಡಲು ಇವರು ಬಳಸಿಕೊಂಡ ಮುಖ್ಯವಾದ ಅಸ್ತ್ರ ‘ಧರ್ಮ’. ಭಾರತವಷ್ಟೆ ಅಲ್ಲ ಯುನೈಟೆಡ್ ಸ್ಟೇಟ್ಸ್ನ ಡೊನಾಲ್ಡ್ ಟ್ರಂಪ್ನಿಂದ ಹಿಡಿದು ಇಟಲಿಯ ಮ್ಯಾಟಿಯೊ ಸಾಲ್ವಿನಿ ಮತ್ತು ಬ್ರೆಜಿಲ್ನ ಜೈರ್ ಬೋಲ್ಸನಾರೊರವರೆಗೂ ಬಲಪಂಥೀಯವಾದಿಗಳು ಧರ್ಮ, ಏಕಸಂಸ್ಕೃತಿ, ಹುಸಿ ದೇಶಪ್ರೇಮದ ಸಿದ್ಧಾಂತಗಳನ್ನೆ ಪ್ರತಿಪಾದಿಸುತ್ತ ಜನರನ್ನು ಎಮೋಶನಲ್ ಬ್ಲಾಕ್ಮೇಲ್ ಮಾಡುತ್ತಲೆ ಎಂದಿಗಿಂತಲೂ ಉತ್ತಮವಾಗಿ ಚುನಾವಣಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೆ ಚಾಲಾಕಿತನದಿಂದ ಅಧಿಕಾರ ಪಡೆಯುತ್ತಿದ್ದಾರೆ. ಇಂತಹ ಈ ಸಂದರ್ಭದಲ್ಲಿ ಪ್ರಸಕ್ತ ಸರ್ಕಾರದ ಸ್ತುತಿಗೀತೆ ಹಾಡುತ್ತ ಕುಳಿತರೆ ಮಾತ್ರ ನೀವು ದೇಶದಲ್ಲಿ ಬದುಕಲು ಅರ್ಹ, ಒಂದೇ ಒಂದು ಮಾತು ತುಟಿಕ್ಪಿಟಿಕ್ ಎಂದರು ಸೆಕ್ಷನ್ ಮೇಲೆ ಸೆಕ್ಷನ್ ಹಾಕಿ ನಿಮ್ಮ ಅಭಿವ್ಯಕ್ತಿಯ ದಮನವನ್ನು ಮಾಡಲಾಗುತ್ತಿದೆ. ಹೆಚ್ಚು ಮಾತನಾಡಿದರೆ ಪ್ರಾಣ ತೆಗೆಯಲು ಸಿದ್ಧವಾಗಿ ಕುಂತಿದೆ ಬಲಪಂಥಿಯ ಫ್ಯಾಸಿಸ್ಟ್ ಶಕ್ತಿಗಳು.
ಗೋಲ್ವಾಲ್ಕರ್ ಮೊಘಲ್ ಆಳ್ವಿಕೆಯನ್ನು ಮುಸ್ಲಿಮ್ ಆಳ್ವಿಕೆಯೆಂದು ಪ್ರತಿಪಾದಿಸಿದ್ದ ಸಿದ್ಧಾಂತದ ಕಾಪಿ-ಪೇಸ್ಟ್ ಪ್ರಸಕ್ತ ಸರ್ಕಾರದ ಸಿದ್ಧಾಂತ. 2014ರ ಚುನಾವಣೆಯ ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ “ಸಾವಿರ ವರ್ಷಗಳ ಗುಲಾಮಗಿರಿಯಿಂದ ಭಾರತವನ್ನು ಸ್ವತಂತ್ರಗೊಳಿಸಿದ್ದೇನೆ” ಎಂದು ಹೇಳಿಕೆ ನೀಡಿದ್ದರು. ಮುಸಲ್ಮಾನರನ್ನು ಇಂದಿಗೂ ಪರಕೀಯರೆಂದೇ, ಆಕ್ರಮಣಕಾರರೆಂದೇ ಸರ್ಕಾರ ಬಿಂಬಿಸುತ್ತಿದೆ. ಮುಸಲ್ಮಾನರ ಆಡಳಿತವನ್ನು ದಬ್ಬಾಳಿಕೆಯ ಕಾಲವೆಂದೇ ನಂಬಿಸಲಾಗುತ್ತಿದೆ.
ಬಹುಸಂಖ್ಯಾತರ ನಡುವೆ ಬಲ ಸಿದ್ಧಾಂತವು ಮುಸಲ್ಮಾನರ ಬಗ್ಗೆ ಅಸಹನೆ ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಿಸಿದ್ದು, ಕೋಮುವಾದ ಸೃಷ್ಟಿಸಿದ ದ್ವೇಷಾಸೂಯೆ ಅಪಪ್ರಚಾರಗಳನ್ನು ತೀವ್ರರೀತಿಯಲ್ಲಿ ಮಾಡುತ್ತಿದೆ. ಇಂತಹುದರ ಫಲವಾಗಿಯೆ ಕಾಶ್ಮೀರದ ಆಸಿಫಾ ಅತ್ಯಾಚಾರ ಪ್ರಕರಣದಲ್ಲಿ ಶಾಸಕನೊಬ್ಬ ಜನರ ಹಿಂಡಿನೊಂದಿಗೆ ಆರೋಪಿಯ ಪರ ಬೀದಿಗಿಳಿದು ಹೋರಾಡುವ ಉದಾಹರಣೆಯನ್ನು ನಾವು ಕಣ್ಣಿಂದ ಕಾಣಬೇಕಾಯ್ತು.
ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಹಿಂಸೆ ಅಪಪ್ರಚಾರದ ನಾನಾ ಸ್ವರೂಪಗಳು ಪ್ರಕಟವಾಗುತ್ತಿವೆ. ಇಷ್ಟಪಡುವ ಆಹಾರ ತಿನ್ನುವಂತಿಲ್ಲ, ಮಾತನಾಡುವ ಸ್ವಾತಂತ್ರ್ಯವಿಲ್ಲ, ಸಮಾನತೆಯೊಂದಿಗೆ ಶಿಕ್ಷಣವಿಲ್ಲ, ಉತ್ತಮ ಉದ್ಯೋಗವಿಲ್ಲ. ಕಷ್ಟಪಟ್ಟು ಬದುಕಬೇಕೆಂದು ಹೊರಟರೆ ನೆಮ್ಮದಿಯ ವಾತಾವರಣವಿಲ್ಲ, ರಕ್ಷಣೆಯೂ ಇಲ್ಲ. ಘನತೆಯ ಬದುಕೊಂದನ್ನ ಬದುಕುವ ಹಾಗೂ ಇಲ್ಲ ಎಂಬಂಥ ಪರಿಸ್ಥಿತಿ ಮುಸಲ್ಮಾನ, ದಲಿತ ಮತ್ತು ಹಿಂದುಳಿದ ಸಮುದಾಯಗಳದ್ದಾಗಿದೆ.
ಹಿಂದೆ ಜರ್ಮನಿಯಲ್ಲಿ ಯಹೂದಿಗಳ ಮೇಲಾದಂತೆಯೆ ಇಂದು ಭಾರತದಲ್ಲಿಯೂ ಅಲ್ಪಸಂಖ್ಯಾತರು, ತಳಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ದಹನ ನಡೆಯುತ್ತಿರುವ ಈ ಹೊತ್ತು ಬಹು ಕಠಿಣವಾದ ಕಾಲ. ಅನ್ಅಫಿಶಿಯಲಿ ಎಮರ್ಜೆನ್ಸಿ ಘೋಷಣೆಯಾಗಿರುವ ಕಾಲ.
ಈಗ ಪ್ರಗತಿಪರ ಜಾತ್ಯತೀತವಾದಿಗಳೆಲ್ಲ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ದೇಶವನ್ನು ಕಾಪಾಡಲು ಒಂದಾಗಲೇಬೇಕಾದ ಹೊತ್ತು. ಕಷ್ಟಪಟ್ಟು ಸಂಪಾದಿಸಿರುವ ಸ್ವಾತಂತ್ರ್ಯ ಸಂವಿಧಾನ, ಪ್ರಜಾಪ್ರಭುತ್ವ ಎಲ್ಲವೂ ಮಣ್ಣು ಪಾಲಾಗುವುದನ್ನು ತಪ್ಪಿಸಲು ಚಳವಳಿಗಳು ಮನೆಮನಗಳಿಗೆ ತಲುಪಬೇಕಾಗಿದೆ. ಮಾಧ್ಯಮಗಳು ಮಾರಾಟವಾಗಿರುವ ಈ ಕಾಲದಲ್ಲಿ ನಾವೇ ನಮಗೆ ಮಾಧ್ಯಮವಾಗಬೇಕಾಗಿರುವ ಕಾಲವೂ ಹೌದು.


