Homeಮುಖಪುಟ"ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು" - ಜಿ. ರಾಜಶೇಖರ್ ಸಂದರ್ಶನ

“ಜನಪ್ರಿಯತೆಯನ್ನು ನಾವು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು” – ಜಿ. ರಾಜಶೇಖರ್ ಸಂದರ್ಶನ

The Hindu ಪತ್ರಿಕೆಗಾಗಿ 2010ರಲ್ಲಿ ಶಿವಸುಂದರ್ ಅವರು ನಡೆಸಿದ ಸಂದರ್ಶನವಿದು. ಈ ಸಂದರ್ಶನಕ್ಕೆ ಕೆ. ಫಣಿರಾಜ್ ನೆರವಾಗಿದ್ದಾರೆ. ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

- Advertisement -
- Advertisement -

ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ಲೇಖಕ, ಹೋರಾಟಗಾರ ಜಿ.ರಾಜಶೇಖರ್ ನಮ್ಮನ್ನು ಅಗಲಿದ್ದಾರೆ. 2010ರಲ್ಲಿ ಕನ್ನಡ ಸಾಹಿತ್ಯದ ಕುರಿತು ಅವರು ಚಿಂತಕ ಶಿವಸುಂದರ್‌ರವರಿಗೆ ಸಂದರ್ಶನ ನೀಡಿದ್ದರು. ರಾಜಶೇಖರ್‌ರವರ ಗೌರವಾರ್ಥ ಆ ಮಹತ್ವದ ಸಂದರ್ಶನವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. 

ಕನ್ನಡ ಸಾಹಿತ್ಯ ರಂಗವು ಅತ್ಯುನ್ನತ ಸೃಜನಶೀಲ ಪ್ರತಿಭೆಗಳು ಮತ್ತು ಮಹಾನ್ ಸಾಂಸ್ಕೃತಿಕ ವಿಮರ್ಶಕರ ಅಪರೂಪದ ಕೊಡುಗೆಯನ್ನೂ ಪಡೆದುಕೊಂಡಿದೆ. ಅದು ಕುವೆಂಪು, ಬೇಂದ್ರೆ, ಕಾರಂತ ಮುಂತಾದ ಮಹಾನ್ ಸಾಹಿತಿಗಳ ಪಡೆಯ ಜೊತೆಗೆ ನಂತರದ ತಾರೆಯರಾದ ಲಂಕೇಶ್, ಅನಂತಮೂರ್ತಿ, ತೇಜಸ್ವಿಯವರನ್ನೂ ಹೊಂದಿರುವಂತೆಯೇ, ಡಿ.ಆರ್. ನಾಗರಾಜ್, ಕಿ.ರಂ. ನಾಗರಾಜ್ ಮುಂತಾದ ಉನ್ನತ ಮಟ್ಟದ ಮತ್ತು ನಿಷ್ಟಾವಂತ ವಿಮರ್ಶಕರನ್ನೂ ಹೊಂದಿದೆ. ಇನ್ನೊಬ್ಬ ಬಹುಮುಖ್ಯ ಸಾಂಸ್ಕೃತಿಕ ಮತ್ತು ರಾಜಕೀಯ ವಿಮರ್ಶಕರಾದ ಜಿ. ರಾಜಶೇಖರ್ ಅವರು ಯಾವತ್ತೂ ಪ್ರಚಾರದಿಂದ ದೂರವೇ ಉಳಿದವರು. ಆದರೆ, ಅವರ ಸಾಹಿತ್ಯ, ರಾಜಕೀಯ ಮತ್ತು ಕೋಮುವಾದ ಇತ್ಯಾದಿಗಳ ಕುರಿತ ನಿರಂತರವಾದ ಚಿಂತನಶೀಲ ಬರಹಗಳು ನಮ್ಮ ಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಚಿಂತನೆಗಳನ್ನು ರೂಪುಗೊಳಿಸುವಲ್ಲಿ ಮಹತ್ತಾದ ದೇಣಿಗೆ ಸಲ್ಲಿಸಿವೆ. ಅವರ ಲೇಖನಗಳ ಸಂಗ್ರಹವಾದ “ಮೊದಲ ಓದು” ಸರಣಿಯ ಕೃತಿಯನ್ನು ಅಕ್ಷರ ಪ್ರಕಾಶನವು ಪ್ರಕಟಿಸಿದ್ದು, ಅದು ಒಂದು ರೀತಿಯ ಮೊದಲ ಪುಸ್ತಕವಾಗಿದೆ. ಈ ಸಂದರ್ಭದಲ್ಲಿ ಒಂದು ಸಂದರ್ಶನ ನೀಡಿ ಅವರ ಸಾಹಿತ್ಯಿಕ ಮತ್ತು ರಾಜಕೀಯ ಚಿಂತನೆಗಳು ಮತ್ತು ಪ್ರಭಾವಗಳ ಕುರಿತ ವಿಚಾರಗಳನ್ನು ಹಂಚಿಕೊಳ್ಳುವಂತೆ ಮನವೊಲಿಸಲಾಯಿತು. The Hindu ಪತ್ರಿಕೆಗಾಗಿ 2010ರಲ್ಲಿ ಶಿವಸುಂದರ್ ಅವರು ನಡೆಸಿದ ಸಂದರ್ಶನದ ಆಯ್ದ ಭಾಗಗಳು ಕೆಳಗಿವೆ. ಈ ಸಂದರ್ಶನಕ್ಕೆ ಕೆ. ಫಣಿರಾಜ್ ಅವರು ನೆರವಾಗಿದ್ದಾರೆ. ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

**

ಶಿವಸುಂದರ್: ಸಮಾಜದಲ್ಲಿ ಏನೆಲ್ಲಾ ನಡೆಯುತ್ತವೆಯೋ ಅವುಗಳಿಗೆಲ್ಲ ಪ್ರಖ್ಯಾತ ಬರಹಗಾರರ ಅಭಿಪ್ರಾಯಗಳನ್ನು ಅವಲಂಬಿಸುವ ವಿಶಿಷ್ಟ ಪರಂಪರೆಯೊಂದು ಕರ್ನಾಟಕದಲ್ಲಿದೆ- ಅದು ಸಾಹಿತ್ಯ ಕ್ಷೇತ್ರದಿಂದ ಹಿಡಿದು ರಾಜಕೀಯ, ಆರ್ಥಿಕ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ತನಕ ಇರಬಹುದು. ಈ ಪ್ರಕ್ರಿಯೆಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

ಜಿ. ರಾಜಶೇಖರ್: ಇದು ಕನ್ನಡ ಪರಂಪರೆಗೆ ಹೊಸದಲ್ಲ. ಕನ್ನಡ ಸಮಾಜವು ಸಾರ್ವಜನಿಕ ಅಥವಾ ಸಾಮಾಜಿಕ ಚಿಂತಕರ ಮಹಾನ್ ಪರಂಪರೆಯನ್ನೇ ಹೊಂದಿದ್ದು, ಇದು ವಚನಕಾರರಷ್ಟು ಹಿಂದಕ್ಕೆ ಹೋಗುತ್ತದೆ ಎಂದು ನಾನು ಹೇಳುತ್ತೇನೆ. ಕನ್ನಡ ಸಾಹಿತಿಗಳು ಬದಲಿ ವಿಶ್ವಾಸಾರ್ಹ ಮೂಲಗಳು ಇಲ್ಲದ ಸಂದರ್ಭದಲ್ಲಿ- ಹವ್ಯಾಸಿ- ಸೈದಿಯನ್ ಅರ್ಥದಲ್ಲಿ ಹವ್ಯಾಸಿ- ರಾಜಕೀಯ ಮತ್ತು ಸಮಾಜಶಾಸ್ತ್ರಜ್ಞರು, ಮುಂತಾದವರಾಗಿದ್ದಾರೆ. ಮೊದಲ ಕನ್ನಡ ಕಾದಂಬರಿಕಾರರಾದ ಗುಲ್ವಾಡಿ ವೆಂಕಟರಾಯರಿಂದ ಹಿಡಿದು ಕನ್ನಡ ಸಾಹಿತಿಗಳು ಸಾಮಾಜಿಕ ವಿಮರ್ಶಕರ ಪಾತ್ರವಹಿಸಿದ್ದಾರೆ. ಅವರ “ಇಂದಿರಾಬಾಯಿ” ಮತ್ತು “ಸದ್ಧರ್ಮ ವಿಜಯ” ಮುಂತಾದ ಕೃತಿಗಳು ಕೋಮುವಾದಿ ಶಕ್ತಿಗಳ ನಡುವೆ ಇಂದಿಗೂ ತಲ್ಲಣಗಳನ್ನು ಉಂಟುಮಾಡುತ್ತವೆ. ಈ ಪರಂಪರೆಯನ್ನು ಡಿವಿಜಿ, ಅನಕೃ, ಕಟ್ಟಿಮನಿ, ಚದುರಂಗ, ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ ಮತ್ತು ಉಳಿದೆಲ್ಲರೂ ಅನುಸರಿಸಿದ್ದಾರೆ. ಆದುದರಿಂದ, ಒಟ್ಟಾಗಿ ಹೇಳುವುದಾದರೆ, ಕನ್ನಡ ಸಾಹಿತ್ಯ ಪರಂಪರೆಯು ಯಾವತ್ತೂ ಸಾಮಾಜಿಕ ಒಲವು ಹೊಂದಿದ್ದು, ವಿಶಾಲವಾದ ಮಾನವೀಯತೆಯಿಂದ ಪ್ರೇರಿತವಾಗಿದೆ.

ಶಿವಸುಂದರ್: ಆದರೆ, ಅಡಿಗ ಮತ್ತು ಕಾರಂತರಂತ ಮಹಾನ್ ಲೇಖಕರ ಕೆಲವು ಕೃತಿಗಳು ಅಂತರ್ಗತವಾದ ಪಕ್ಷಪಾತ ಹೊಂದಿದ್ದವು ಮತ್ತು ಅವು ಅಭಿವ್ಯಕ್ತಗೊಳಿಸಿದ ರಾಜಕೀಯ ನಿಲುವುಗಳು ಉದಾರವಾದಿ ಮಾನವೀಯತೆಯಿಂದ ಪ್ರೇರಿತವಾದವುಗಳು ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಕೆಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ನಿಮ್ಮ ಅಭಿಪ್ರಾಯ ಏನು?

ಜಿ. ರಾಜಶೇಖರ್: ಇದು ನಿಜ. ಭಾರತ ಮತ್ತು ಕರ್ನಾಟಕದ 20ನೇ ಶತಮಾನದ ಬೆಳವಣಿಗೆಗಳು ಸಮಾಜದ ಎಲ್ಲಾ ರಂಗಗಳಲ್ಲೂ ಶೂದ್ರ ಶಕ್ತಿಗಳ ಹಕ್ಕೊತ್ತಾಯವನ್ನು ಗುರುತಿಸಿದಂತವುಗಳು. ಆದರೆ, ನಮ್ಮ ಮಹಾನ್ ಲೇಖಕರಾದ ಅಡಿಗ ಮತ್ತು ಕಾರಂತರು ನನ್ನ ಅಭಿಪ್ರಾಯದಲ್ಲಿ ಇದನ್ನೊಂದು ಪ್ರಗತಿಪರ ಬೆಳವಣಿಗೆ ಎಂಬುದಾಗಿ ಅರ್ಥಮಾಡಿಕೊಳ್ಳಲಿಲ್ಲ. ಅವರು ಈ ಶಕ್ತಿಗಳ ಬಗ್ಗೆ ಭಯಹೊಂದಿದ್ದರು ಮತ್ತು ತಾವು ಈ ತನಕ ಪವಿತ್ರ ಎಂದು ಭಾವಿಸಿದ್ಧ ವಲಯವನ್ನು ಅವು ಕಲುಷಿತಗೊಳಿಸುತ್ತವೆ ಎಂದು ಆತಂಕಗೊಂಡಿದ್ದರು ಎಂದು ನಾನು ಹೇಳುತ್ತೇನೆ. ಉದಾಹರಣೆಗೆ, ಅಡಿಗರ “ನೆಹರೂ ನಿವೃತ್ತರಾಗುವುದಿಲ್ಲ” ಅಥವಾ ಬಿಜಿಎಲ್ ಸ್ವಾಮಿಯವರ “ಕಾಲೇಜು ರಂಗ” ಇತ್ಯಾದಿಗಳು ಶೂದ್ರ ಪ್ರತಿಪಾದನೆಯ ಕುರಿತ ಭಯದಿಂದ ಹುಟ್ಟಿದ ಕೀಳು ವ್ಯಂಗ್ಯ ಮತ್ತು ಹಾಸ್ಯಗಳಾಗಿವೆ. ಗೋರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀರಂಗರಂತ ಕೆಲವರು ಇದಕ್ಕೆ ಅಪವಾದ. ಕಾರಂತರ ಕಾದಂಬರಿಗಳಲ್ಲಿ ಬರುವ ಎಲ್ಲಾ ಬ್ರಾಹ್ಮಣೇತರ ಪಾತ್ರಗಳು ಬರೇ ವ್ಯಂಗ್ಯಚಿತ್ರಣಗಳು. ಇದಕ್ಕೆ ಹೊರತಾಗಿ ಬಾಬ್ರಿ ಮಸೀದಿ ಧ್ವಂಸ ಮತ್ತು ಮುಂಬಯಿ ಗಲಭೆಗಳ ನಂತರವೂ ಬಿಜೆಪಿಯ ಜೊತೆ ಕಾರಂತರು ಮತ್ತು ಅಡಿಗರ ಮುಂದುವರಿದ ಸಂಬಂಧ ಇಂದಿಗೂ ನನಗೆ ಒಗಟಾಗಿ ಉಳಿದಿದೆ. ಕಾರಂತರು ಭಾಗವಹಿಸಿದ ಕೊನೆಯ ಕಾರ್ಯಕ್ರಮ ಒಂದು ಆರೆಸ್ಸೆಸ್ ಕಾರ್ಯಕ್ರಮವಾಗಿತ್ತು. ಆವರು ಮುಂಬಯಿಯ ಆತ್ಮವನ್ನು ಅರ್ಥಮಾಡಿಕೊಂಡಿದ್ದರು ಮತ್ತದು “ಅಳಿದ ಮೇಲೆ” ಕೃತಿಯಲ್ಲಿ ಸುಂದರವಾಗಿ ಮೂಡಿಬಂದಿದೆ. ಆದರೂ, ಮುಂಬಯಿ ಗಲಭೆಗಳು ಅವರನ್ನು ವಿಚಲಿತಗೊಳಿಸಲಿಲ್ಲ. ಇದು ಕೂಡಾ ನನಗೊಂದು ಬಹುದೊಡ್ಡ ಒಗಟು. ಇವೆಲ್ಲವುಗಳ ಹೊರತಾಗಿಯೂ ನಿಸ್ಸಂಶಯವಾಗಿ ಮಹಾನ್ ಎನಿಸುವ ಅವರ ಸಾಹಿತ್ಯ ಸೃಷ್ಟಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಹಾಗಾಗಿ ಅವರ ರಾಜಕೀಯವು ಬೇರೆಯಾಗಿದ್ದಿದ್ದರೆ, ಅವರ ಸಾಹಿತ್ಯವು ಬೇರೆಯಾಗಿರುತ್ತಿತ್ತೆ ಎಂದು ನನ್ನನ್ನು ಆಗಾಗ ಅಣಕಿಸಲಾಗುತ್ತದೆ.

ಶಿವಸುಂದರ್: ಕುವೆಂಪು ಕುರಿತು ಏನು? ರಹಮತ್ ತರೀಕೆರೆ ಅವರಂತ ವಿಮರ್ಶಕರು ಕುವೆಂಪು ಕಾದಂಬರಿಗಳ ಎಲ್ಲಾ ಮುಸ್ಲಿಂ ಪಾತ್ರಗಳು ವ್ಯಂಗ್ಯಚಿತ್ರಗಳಾಗಿವೆ ಎನ್ನುತ್ತಾರಲ್ಲ?

ಜಿ. ರಾಜಶೇಖರ್: ಅದು ಭಾಗಶಃ ನಿಜ. ಮುಸ್ಲಿಂ ಪಾತ್ರಗಳು ಅಣಕುಚಿತ್ರಗಳಾಗಿವೆ ಆದರೆ, ಅವು ನಾನು ಈಗಾಗಲೇ ಹೇಳಿದ ಲೇಖಕರ ಹಾಗೆ ಪ್ರಜ್ಞಾಪೂರ್ವಕವಾದ ನಂಬಿಕೆ ಮತ್ತು ರಾಜಕೀಯದ ಕಾರಣದಿಂದ ಅಲ್ಲ. ತೇಜಸ್ವಿಯವರ “ಡೇರ್ ಡೆವಿಲ್ ಮುಸ್ತಾಫ” ಹೊರತಾಗಿ, ಉಳಿದ ಮುಸ್ಲಿಮರು ಕೂಡಾ ಅಣಕುಚಿತ್ರಗಳೇ. ಆದರೆ, ಅದು ಮುಸ್ಲಿಮರ ಕುರಿತ ಭಯದಿಂದಾಗಿ ಅಲ್ಲ. ಬದಲಾಗಿ ಅದು ಒಂದು ರೀತಿಯ ಉಡಾಫೆಯ ಮೇಲು ಜಾತಿಯ ಪೂರ್ವಗ್ರಹವು ಅವರ ಕೃತಿಗಳಿಗೆ ವರ್ಗಾಯಿಸಿದ್ದಾಗಿದೆ. ನಾವು ಕುವೆಂಪು ಅವರ ಬಗ್ಗೆ ಮಾತನಾಡುವಾಗ, ಕುವೆಂಪು ಯಾವತ್ತೂ ಇತರ ಸಂಸ್ಕೃತಿಗಳಿಗೆ ಗೌರವ ತೋರಿದ್ದಾರೆ ಮತ್ತು ತಾನು ಸ್ವತಃ ಎಂದೂ ಗೋಮಾಂಸ ತಿನ್ನದೇ ಇದ್ದರೂ, ಸಹ ಮಾನವರು ಅನುಸರಿಸುವ ಆಹಾರವಾಗಿ ಗೋಮಾಂಸ ಸೇವನೆಯನ್ನು ಎತ್ತಿಹಿಡಿದಿದ್ದರು. ಇದನ್ನು ತೇಜಸ್ವಿಯವರ “ಅಣ್ಣನ ನೆನಪು” ಕೃತಿಯಲ್ಲಿ ಚೆನ್ನಾಗಿ ದಾಖಲಿಸಲಾಗಿದೆ. ಆದರೆ, ಕಾರಂತ ಮತ್ತು ಅಡಿಗರಿಗೆ ಜನರು ಒಂದು ಸಮುದಾಯ ಅಥವಾ ಸಮಾಜವಾಗಿ ಅರ್ಥವಾಗಿರಲಿಲ್ಲ. ಅವರಿಗೆ ಜನರೆಂದರೆ ಗುಂಪು ಅಥವಾ ಜನಸಂದಣಿ. ಆದರೆ, ಕೇವಲ ದೈಹಿಕ ಬಲವಿರುವ ಜನರು ರೋಡ್ ರೋಲರುಗಳಂತೆ ಬರುತ್ತಾರ ಮತ್ತು ನೆಲಸಮ ಸಮಾನತೆಯನ್ನು ತರುತ್ತಾರೆ ಎಂಬ ಭಯ ಅಡಿಗರಿಗೆ ಯಾವತ್ತೂ ಇತ್ತು. ಅದು ಬಿಟ್ಟರೆ ಅವರೆಲ್ಲರೂ ಉದಾರ ಪ್ರಜಾಪ್ರಭುತ್ವವಾದಿಗಳಾಗಿದ್ದರು. ನೀವು ಸ್ವಲ್ಪವೇ ಅವರ ಈ ಉದಾರತೆಯನ್ನು ಕೆರೆದು ನೋಡಿದರೆ ಸಮುದಾಯಗಳ ಕುರಿತ ಅವರ ಭಯ ಅವರನ್ನು ಕಾಡುತ್ತಿತ್ತು. ಈ ಮಿತಿಯನ್ನು ಮೀರಿ ಬೆಳೆದವರು ವಿಪರ್ಯಾಸ ಎಂಬಂತೆ ಲಂಕೇಶ್, ಅನಂತಮೂರ್ತಿ ಮತ್ತು ತೇಜಸ್ವಿ ಮುಂತಾದ ನವ್ಯ ಪರಂಪರೆ. ಲಂಕೇಶ್ ಅವರಿಗೆ ಜನರು ಒಂದು ಗುಂಪಾಗುವ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಆದುದರಿಂದಲೇ ಅವರು ಯಾವತ್ತೂ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯರಾದವರನ್ನು ಸಂಶಯದಿಂದಲೇ ನೋಡುತ್ತಿದ್ದರು. ತನ್ನ ಸಮಾಜವಾದಿ ಆದರ್ಶಗಳು ಜನಪ್ರಿಯವಾಗಬೇಕಾದರೆ, ತಾನೂ ಜನಪ್ರಿಯ ಆಗುವಂತ ಚಟುವಟಿಕೆಗಳಲ್ಲಿ ತೊಡಗಬೇಕು ಎಂಬ ಆಳವಾದ ತಿಳುವಳಿಕೆಯನ್ನು ಲಂಕೇಶ್ ಹೊಂದಿದ್ದರು. ಅದನ್ನು ಅವರು ಪತ್ರಿಕೋದ್ಯಮದಲ್ಲಿಯೂ ಅನುಸರಿಸುತ್ತಿದ್ದರು. ಲಂಕೇಶ್ ಅವರಿಗೆ ಅವರ ಎಲ್ಲಾ ಕೊಡುಗೆಗಳ ಶ್ರೇಯವನ್ನು ಅವರ ಮರಣದ ಬಳಿಕ ಕೊಡಲಾದರೆ, ತೇಜಸ್ವಿಯವರನ್ನು ಅದೇ ಸ್ಥಾಪಿತ ಹಿತಾಸಕ್ತಿಗಳು, ಅವರ ಇತರ ಸಮಾಜವಾದಿ ಕೆಲಸಗಳನ್ನು ಹೊರತುಪಡಿಸಿ ಕೇವಲ “ಮೊಬೈಲ್ ನ್ಯಾಷನಲ್ ಜಿಯೋಗ್ರಾಫಿಕಾ” ಎಂಬಂತೆ ಮಾತ್ರ ನೆನಪಿಟ್ಟವು.

ಶಿವಸುಂದರ್: ಈಗಿನ ಕನ್ನಡ ರಾಷ್ಟ್ರೀಯತೆಯ ಮುಖ್ಯ ವಾಹಿನಿಯು ಹೆಚ್ಚು ಒಳಗೊಳ್ಳುವಿಕೆಯನ್ನು ಹೊಂದಿರುವ ತಮಿಳು ಅಥವಾ ತೆಲುಗು ರಾಷ್ಟ್ರಿಯತೆಗಿಂತ ಹೆಚ್ಚು ತಿಲಕ್ ಶ್ರೀ ಮಾದರಿಯ ಹಿಂದೂ ರಾಷ್ಟ್ರೀಯತೆಯಾಗಿದೆ ಎಂಬ ಆರೋಪವಿದೆ.

ಜಿ. ರಾಜಶೇಖರ್: ಕನ್ನಡ ರಾಷ್ಟ್ರೀಯತೆಯ ಆರಂಭ ಕಾಲದ ಮುಂಗೋಳಿಗಳಾಗಿದ್ದ ಗಳಗನಾಥ ಮುಂತಾದವರು ಹಿಂದೂ ಬ್ರಾಂಡಿನ ಕನ್ನಡ ರಾಷ್ಟ್ರೀಯತೆಯನ್ನು ಪ್ರಚಾರ ಮಾಡಿದರು ಎಂಬುದು ನಿಜ. ಅವರ “ಕನ್ನಡಿಗರ ಕರ್ನಾಟಕತೆ”ಯು ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಆದರೆ, ಕನ್ಡಡ ರಾಷ್ಟ್ರೀಯತೆಯ ಮುಖ್ಯವಾಹಿನಿಯು ಗುಲ್ವಾಡಿ ವೆಂಕಟರಾಯ, ಎಂ.ಎಸ್. ಪುಟ್ಟಣ್ಣ ಮುಂತಾದವರ ಎಲ್ಲರನ್ನೂ ಒಳಗೊಂಡ ಕನ್ನಡ ರಾಷ್ಟ್ರೀಯತೆಯಾಗಿದೆ. ಆಲೂರು ವೆಂಕಟರಾಯರು ಕೂಡಾ ಎಲ್ಲರನ್ನೂ ಒಳಗೊಂಡ ಕನ್ನಡ ರಾಷ್ಟ್ರೀಯತೆಯ ದೃಷ್ಟಿಕೋನ ಹೊಂದಿದ್ದರು. ಆದರೆ, ಹಿಂದೂಯೇತರರು ಆರಾಮವಾಗಿರಬಹುದಾದ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ನಾನಿಲ್ಲಿ ಹೇಳಬೇಕು. ಈಗ ಪ್ರಬಲವಾಗಿರುವ ವಾಹಿನಿಯು ಹಿಂದೂಗಳಲ್ಲದ ಕನ್ನಡಿಗರ ಕುರಿತು ಅಸೂಕ್ಷ್ಮತೆ ಹೊಂದಿದೆ. ನಾವು ಪ್ರತೀ ವರ್ಷವೂ ಹೈದರಾಬಾದ್ ವಿಮೋಚನೆಯನ್ನು ಆಚರಿಸುತ್ತೇವೆ. ಆದರೆ, ತಥಾಕಥಿತ ಹೈದರಾಬಾದ್ ವಿಮೋಚನೆಯ ವೇಳೆ ಹಿಂದೂ ಗ್ಯಾಂಗುಗಳು ಆ ಪ್ರದೇಶದಲ್ಲಿ ಪೊಲೀಸರು ಮತ್ತು ನೆಹರೂ ಅವರ ಮಿಲಿಟರಿ ನೆರವಿನಿಂದ 50,000 ಮುಸ್ಲಿಮರ ಹತ್ಯಾಕಾಂಡ ನಡೆಸಿದವು ಎಂಬುದನ್ನು ಕನ್ನಡದ ಲೇಖಕರು ಮತ್ತು ಎಡದವರು ಅನುಕೂಲಶಾಸ್ತ್ರದಂತೆ ಹೇಗೆ ಮರೆತುಬಿಡಲು ಸಾಧ್ಯವಾಯಿತು ಎಂದು ನಾನು ಯಾವಾಗಲೂ ಅಚ್ಚರಿಪಡುತ್ತೇನೆ. ಕನ್ನಡಿಗನಾಗಿರಲು ಏನು ಬೇಕು? ಭಾರತೀಯನಾಗಿರಲು ಏನು ಬೇಕು? ಯಾವ ಬೆಲೆತೆತ್ತು, ರಕ್ತಪಾತ, ಸಂಕಷ್ಟ ಮತ್ತು ಹಿಂಸಾಚಾರದ ಮೂಲಕವೆ? ಈ ಪ್ರಶ್ನೆಗಳನ್ನು ಕನ್ನಡ ಲೇಖಕ ಎಂದೂ ಎದುರಿಸಿಲ್ಲ. ನಮ್ಮ ಲೇಖಕರ ಅಂತರರಾಷ್ಟ್ರೀಯತೆಯು ತುರ್ಕಿಯ ಓರಾನ್ ಪಾಮುಕ್ ಮತ್ತು ಅವರಂತ ಪ್ರಸಿದ್ಧ ಅಂತರರಾಷ್ಟ್ರೀಯ ಲೇಖಕರ ಬೌದ್ಧಿಕ ದಮನದ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುತ್ತದೆ. ಅದೇ ಹೊತ್ತಿಗೆ ಅವರಿಗೆ ತಾವು ವಾಸಿಸುವ ಸ್ಥಳದ ಬಗ್ಗೆಯೇ ಸಂಪೂರ್ಣ ಅಜ್ಞಾನವಿದೆ. ಅದೇ ಹೊತ್ತಿಗೆ ನಮ್ಮ ಲೇಖಕರ ದೇಶೀಯತೆಯು ಅವರನ್ನು ಆಂತರಿಕ ಮತ್ತು ಬಾಹ್ಯ ಎರಡಕ್ಕೂ ಕಟ್ಟಿಹಾಕುತ್ತದೆ. ನನಗೆ ಎರಡರ ಕುರಿತೂ ದೊಡ್ಡ ಗೌರವವಿಲ್ಲ.

ಫಣಿರಾಜ್: ಇದು ನಮ್ಮನ್ನು ಒಂದು ಮುಖ್ಯ ಪ್ರಶ್ನೆಗೆ ತಂದು ನಿಲ್ಲಿಸುತ್ತದೆ. ಅದೆಂದರೆ, ಇಂದು ಜನರ ಜೀವನವನ್ನು ಅರ್ಥ ಮಾಡಿಕೊಳ್ಳಲು ಯಾವುದೇ ರೀತಿಯ ಸಾಮಾಜಿಕ ಆಕ್ಟಿವಿಸಂನ ಹಿನ್ನೆಲೆಯ ಅಗತ್ಯವಿದೆಯೇ ಎಂಬುದು. ನಿಮ್ಮ ಬರಹಗಳು ಕೂಡಾ ಕಾರಂತ ಮತ್ತು ಅಡಿಗರಿಂದ ಪ್ರೇರೇಪಿತವಾಗಿವೆ. ಆದರೆ, ನಿಮ್ಮ ಬರಹಗಳ ತೀಕ್ಷ್ಣತೆಯನ್ನು ಕಾರಂತ ಮತ್ತು ಅಡಿಗರ ಬರಹಗಳಲ್ಲಿ ಕಾಣಲು ಸಾಧ್ಯವಿಲ್ಲ. ಅದು ಸಾಮಾಜಿಕ ಚಳುವಳಿಗಳಲ್ಲಿ ನಿಮ್ಮ ಭಾಗವಹಿಸುವಿಕೆಯ ಕಾರಣದಿಂದ ಅಲ್ಲವೆ?

ಜಿ. ರಾಜಶೇಖರ್: ಸಾಹಿತ್ಯ ಮತ್ತು ಸಾಹಿತಿಯನ್ನು ನಾವು ಆ ರೀತಿಯಲ್ಲಿ ನೋಡಬಹುದು ಎಂದು ನನಗನಿಸುವುದಿಲ್ಲ. ನೀವೊಬ್ಬ ಅರ್ಥಶಾಸ್ತ್ರಜ್ಞನನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು. ನೀವು ಅದೇ ಮಾನದಂಡವನ್ನು ಒಬ್ಬ ಲೇಖಕನಿಗೆ ಅನ್ವಯಿಸಲು ಸಾಧ್ಯವಿಲ್ಲ. ನಾನು ಕಾರಂತ ಮತ್ತು ಅಡಿಗರ ರಾಜಕೀಯವನ್ನು ಒಪ್ಪುವುದಿಲ್ಲ. ಅವರ ಸಾಹಿತ್ಯವನ್ನು ಓದುವಾಗ ಅವರ ರಾಜಕೀಯವನ್ನು ಮರೆತುಬಿಡಲೂ ನನಗೆ ಸಾಧ್ಯವಿಲ್ಲ. ಆದರೆ, ಅದು ಅವರ ಕೃತಿಗಳನ್ನು ಮೆಚ್ಚದಂತೆ ನನ್ನನ್ನು ತಡೆಯುವುದಿಲ್ಲ. ವಾಸ್ತವದಲ್ಲಿ ನಾನು ಕನ್ನಡ ಸಮಾಜದ ವಿಮರ್ಶೆ ಮಾಡುವುದನ್ನು ಆಕ್ಟಿವಿಸ್ಟ್ ಬರಹಗಾರ ನಿರಂಜನರಿಗಿಂತ ಹೆಚ್ಚಾಗಿ ಕಾರಂತ ಮತ್ತು ಅಡಿಗರಿಂದ ಕಲಿತೆ.

ಶಿವಸುಂದರ್: ಏನಿದ್ದರೂ, ತೇಜಸ್ವಿ, ಅನಂತಮೂರ್ತಿ ಮತ್ತು ಲಂಕೇಶ್ ಅವರ ಆಕ್ಟಿವಿಸ್ಟ್ ಪಾತ್ರಗಳು ಕೂಡಾ ಯಾವತ್ತೂ ಅಣಕುಚಿತ್ರಗಳಂತೆಯೇ ಚಿತ್ರಿತವಾಗಿವೆ. ಉದಾರವಾದ, ಖಾಸಗೀಕರಣ, ಎಸ್ಇಝಡ್ ಮುಂತಾದ ಜಾಗತೀಕರಣದ ಅಸ್ತ್ರಗಳ ಹೊಸ ರೀತಿಯ ಹೊರತುಪಡಿಸುವಿಕೆಯನ್ನು ಅವು ಹಿಡಿದಿಡುವುದಿಲ್ಲ. ಲಂಕೇಶ್, ತೇಜಸ್ವಿ ಮತ್ತು ಅನಂತಮೂರ್ತಿ ಕೂಡ ಈ ಸಮಸ್ಯೆಯನ್ನು ತಮ್ಮ ಕೃತಿಗಳಲ್ಲಿ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಇಂತಾ ಹೊರತುಪಡಿಸುವಿಕೆಯ ಕುರಿತ ಅವರ ನಿಲುವು ದೋಷಪೂರಿತವಾಗಿದೆ ಎಂದು ನಿಮಗೆ ಅನಿಸುವುದಿಲ್ಲವೇ?

ಜಿ. ರಾಜಶೇಖರ್: ಒಬ್ಬ ಸೃಜನಶೀಲ ಲೇಖಕ ಸಮಾಜದ ಕುರಿತು ಹೆಚ್ಚು ಸೂಕ್ಷ್ಮತೆ ಮತ್ತು ವಿವೇಚನೆ ಹೊಂದಿರಬೇಕು ಎಂದಷ್ಟೇ ನಾನು ಹೇಳಬಲ್ಲೆ. ನಮ್ಮ ಕಾಲದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನಾನು ಅರುಂಧತಿ, ಕಮೂ, ಕಾಫ್ಕ ಅಥವಾ ಮಾಂಟೋ ಮೇಲೆ ಕೂಡಾ ನಾನು ಹೆಚ್ಚು ಅವಲಂಬಿಸಿದ್ದೇನೆ ಎಂದೂ ಹೇಳಬಹುದು.

ಫಣಿರಾಜ್: ಇಂದಿನ ಹೊಸ ಲೇಖಕರು ತಾವು ಸಮಾಜಕ್ಕೆ ಏನನ್ನೂ ಕೊಡಬೇಕಾಗಿಲ್ಲ: ತಮ್ಮ ಸಾಹಿತ್ಯ ಕೃತಿಗಳು ಯಾವುದೇ ಸಾಮಾಜಿಕ ಬದ್ಧತೆಯಿಂದ ಸ್ವತಂತ್ರವಾಗಿರಬೇಕು ಎಂದು ಭಾವಿಸಿದ್ದಾರೆ. ನೀವು ಇಲ್ಲಿ ಏನು ಕಾಣುತ್ತೀರಿ?

ಜಿ. ರಾಜಶೇಖರ್: ಇಂದಿನ ಲೇಖಕರು ಹೆಚ್ಚು ಪ್ರತಿಭಾವಂತರು ಮತ್ತು ವೃತ್ತಿಪರರು. ಅವರು ಈ ಮಿತಿಯನ್ನು ಅರಿತುಕೊಂಡು ಅದನ್ನು ಮೀರಿ ಬೆಳೆಯುತ್ತಾರೆ ಎಂದು ಆಶಿಸುತ್ತೇನೆ.

ಶಿವಸುಂದರ್: ಇಂದು ಎಸ್. ಎಲ್. ಭೈರಪ್ಪನವರ “ಆವರಣ” ಕಾದಂಬರಿಯು ಅತ್ಯಂತ ಹೆಚ್ಚು ಮಾರಾಟವಾದ ಕೃತಿ ಎಂದು ಹೇಳಲಾಗುತ್ತದೆ. ಈ ಕುರಿತು ನಿಮಗೆ ಏನನಿಸುತ್ತದೆ?

ಜಿ. ರಾಜಶೇಖರ್: ಅಡ್ವಾಣಿ ರಥಯಾತ್ರೆಯಿಂದ ಪಡೆದ ಜನಪ್ರಿಯತೆಗೂ, “ಆವರಣ”ದ ಜನಪ್ರಿಯತೆಗೂ ಹೆಚ್ಚಿನ ವ್ಯತ್ಯಾಸ ನನಗೆ ಕಾಣುವುದಿಲ್ಲ. ನಾವು ಜನಪ್ರಿಯತೆಯನ್ನು ಸಾಹಿತ್ಯಿಕ ಅರ್ಹತೆಯೆಂದು ಗೊಂದಲಿಸಬಾರದು. ಹೀಗಿದ್ದರೂ ಜನಪ್ರಿಯತೆಯು ಒಂದು ತೀರಾ ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ. ಅದನ್ನು ಕುರಿತು ಎಡವು ಗಂಭೀರವಾಗಿ ಚಿಂತಿಸಬೇಕು. ಕರ್ನಾಟಕದಲ್ಲಿ ಎಡವು ತೀರಾ ಸರಳೀಕೃತವೂ ಮೊದಲೇ ಊಹಿಸಬಹುದಾದಂತದ್ದೂ, ಸುಲಭವಾಗಿ ತಳ್ಳಿಹಾಕಬಹುದಾದಂತದ್ದೂ ಆಗಿದೆ. ಇದು ಯುರೋಪಿನಲ್ಲಿ ಫ್ಯಾಸಿಸಮನ್ನು ಎದುರಿಸಿದ ಅಥವಾ ಚೆಟ್ಟಿನಾಡ್ ಮತ್ತು ಜಾರ್ಖಂಡ್‌ನಲ್ಲಿ ಸರಕಾರಿ ದಮನವನ್ನು ಎದುರಿಸಿದ ರೀತಿಯ ಎಡವಲ್ಲ. ಮೇಧಾ ಎದುರಿಸಿದ ಅಪಾಯವನ್ನು ಕೂಡಾ ಎದುರಿಸಿದಂತದ್ದೂ ಅಲ್ಲ. ಭೈರಪ್ಪ ಅವರು ಅವಲಂಬಿಸಿರುವುದು ನಕಲಿ. ಇದನ್ನು ಹೊರತಾಗಿ ಆ ಕಾದಂಬರಿಗೆ ತನ್ನಿಂದ ತಾನಾಗಿ ಯಾವ ಸಾಹಿತ್ಯಿಕ ಮೌಲ್ಯವೂ ಇಲ್ಲ. ಅದು ಕಾದಂಬರಿಯ ರೂಪಕ್ಕೆ ಹೊಂದುವಂತೆ ಕೂರಿಸಿಕೊಂಡ ಆರೆಸ್ಸೆಸ್ಸಿನ ಪ್ರಚಾರವಷ್ಟೇ. ಆದರೆ, ಕಾದಂಬರಿಯ ಪ್ರಕಾರಕ್ಕೆ ಅದರ ಪಾತ್ರಗಳು ಕಾಲ, ದೇಶ, ಜಾತಿ, ವರ್ಗ ಇತ್ಯಾದಿಗಳಲ್ಲಿ ಇರಬೇಕಾದ ಅಗತ್ಯವಿರುವುದರಿಂದ ಅವುಗಳೇ ಲೇಖಕರ ಮೇಲೆ ಸೇಡು ತೀರಿಸಿಕೊಂಡಿವೆ!

ಶಿವಸುಂದರ್: ಮೌಲ್ಯ ವ್ಯವಸ್ಥೆ, ವೈಯಕ್ತಿಕತೆ, ವೃತ್ತಿವಾದ, ಸಾಮಾಜಿಕ ಡಾರ್ವಿನ್‌ವಾದ, ವ್ಯಕ್ತಿಯ ಅಣುವೀಕರಣ, ನ್ಯಾಯ ಪ್ರಜ್ಞೆಯ ನಾಶ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇಂದಿನ ಲೇಖಕರ ಮೇಲೆ ಜಾಗತೀಕರಣ ಮತ್ತು ಹಿಂದೂತ್ವದ ಪ್ರಭಾವವನ್ನು ಗಮನಿಸಿದ್ದೀರಾ?

ಜಿ. ರಾಜಶೇಖರ್: ಈ ಅಂಶಗಳು ಖಂಡಿತವಾಗಿಯೂ ಮಾಧ್ಯಮದ ಮೇಲೆ ಪರಿಣಾಮ ಬೀರಿವೆ. ಮುದ್ರಿತ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳೆರಡೂ ವೀಕ್ಷಕರು ಮತ್ತು ಓದುಗರ ವಿವೇಚನೆಯ ಮೇಲೆ ನಿತ್ಯವೆಂಬಂತೆ ದಾಳಿ ನಡೆಸುತ್ತಿವೆ. ಪತ್ರಿಕೆಗಳು ಕೂಡಾ ಇಲೆಕ್ಟ್ರಾನಿಕ್ ಮಾಧ್ಯಮಗಳು ನಿಗದಿಪಡಿಸಿದ ಕಳಪೆ ಗುಣಮಟ್ಟವನ್ನು ಅನುಸರಿಸುತ್ತಿವೆ. ಆದರೆ, ಈ ಮೌಲ್ಯಗಳು ಇಂದಿನ ನಮ್ಮ ಸೃಜನಶೀಲ ಲೇಖಕರ ತನಕ ಕೆಳಗಿಳಿದಿವೆ ಎಂದು ನನಗನಿಸುವುದಿಲ್ಲ. ಕನಿಷ್ಟ ಇಲ್ಲಿಯ ತನಕವಂತೂ ಇಲ್ಲ.

ಕೃಪೆ: ದಿ ಹಿಂದೂ


ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...