ಪಶ್ಚಿಮ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮುಖಂಡ ಎನ್ನಲಾದ ವ್ಯಕ್ತಿ ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಥಳಿಸಿರುವ ಘಟನೆ ನಡೆದಿದೆ.
ಉತ್ತರ ದಿನಾಜ್ಪುರ ಜಿಲ್ಲೆಯ ಲಖೀಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘೆಮ್ಟಗಚ್ ಗ್ರಾಮದ ರಸ್ತೆಯಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಗೆ ಭೀಕರವಾಗಿ ಥಳಿಸುವಾಗ ನೂರಾರು ಜನರು ಸುತ್ತುವರಿದು ನೋಡುವ ದೃಶ್ಯವಿದೆ.
ಜೂನ್ 28ರಂದು ಘಟನೆ ನಡೆದರೂ ಬೆಳಕಿಗೆ ಬಂದಿರಲಿಲ್ಲ. ಜನರ ಮೊಬೈಲ್ನಲ್ಲಿ ವಿಡಿಯೋ ಹರಿದಾಡುತ್ತಿತ್ತು. ಆದರೆ, ಅವರು ಭಯದಿಂದ ಪೊಲೀಸರು ಮತ್ತು ಮಾಧ್ಯಮಗಳಿಗೆ ತಿಳಿಸಿರಲಿಲ್ಲ ಎಂದು ವರದಿಗಳು ಹೇಳಿವೆ.
ಘಟನೆ ಸಂಬಂಧ ಇಸ್ಲಾಂಪುರ ಪೊಲೀಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಜೋಬಿ ಥಾಮಸ್ ಕೆ ಅವರನ್ನು ನಾವು ಸಂಪರ್ಕಿಸಿದ್ದು, “ಚೋಪ್ರಾ ಪ್ರದೇಶದ ಘಟನೆಯೊಂದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ತನಿಖೆ ಮುಂದುವರಿಯುತ್ತದೆ.” ಎಂದು ತಿಳಿಸಿದ್ದಾರೆ ಎಂಬುವುದಾಗಿ ದಿ ವೈರ್ ವರದಿ ಮಾಡಿದೆ.
ಜೂನ್ 30ರಂದು ಸಂಜೆ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಎಕ್ಸ್ನಲ್ಲಿ ಬರೆದಿದ್ದಾರೆ. ಆದರೆ, ಆರೋಪಿಗಳ ಪಕ್ಷದ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.
ಹಲ್ಲೆಗೊಳಗಾದ ಮಹಿಳೆಯನ್ನು ಸುಲ್ತಾನಾ ಎಂದು ಗುರುತಿಸಲಾಗಿದ್ದು, ಈಕೆ ವಾರದ ಹಿಂದೆ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ರಾಜೀವ್ ಎಂಬ ವ್ಯಕ್ತಿಯೊಂದಿಗೆ ಸಿಲಿಗುರಿ ಬಳಿಯ ಮಟಿಗಾರ ಪ್ರದೇಶಕ್ಕೆ ತೆರಳಿದ್ದರು. ಜೂನ್ 28 ರಂದು ರಾಜೀವ್ ಮತ್ತು ಸುಲ್ತಾನಾ ಗ್ರಾಮಕ್ಕೆ ಮರಳಿದಾಗ ಥಳಿಸಲಾಗಿದೆ ಎಂದು ದಿ ವೈರ್ ಹೇಳಿದೆ.
ಟಿಎಂಸಿಯ ಸ್ಥಳೀಯ ಮುಖಂಡ ತಾಜಿಮುಲ್ ಅಲಿಯಾಸ್ ‘ಜೆಸಿಬಿ’ ಮಹಿಳೆಗೆ ಥಳಿಸಿದ್ದು, ಆಕೆ ತನ್ನ ಪತಿಯನ್ನು ಎರಡನೇ ಬಾರಿ ಮದುವೆಯಾಗಬೇಕಾದರೆ 3 ಲಕ್ಷ ರೂ. ಮತ್ತು ತಾಜಿಮುಲ್ಗೆ 2 ಲಕ್ಷ ರೂ. ಪಾವತಿಸಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ, ಸುಲ್ತಾನಾ ಹಣ ಪಾವತಿಸಲು ನಿರಾಕರಿಸಿದ್ದರು.
ಇದರಿಂದ ಕುಪಿತಗೊಂಡ ತಾಜಿಮುಲ್, ಮೊದಲು ಮಹಿಳೆಗೆ ಅವಮಾನಿಸಿ ಬಳಿಕ ಸುಮಾರು ಒಂದು ಗಂಟೆಗಳ ಕಾಲ ಭೀಕರವಾಗಿ ಥಳಿಸಿದ್ದಾನೆ. ಕೆಲ ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಜೀವ್ಗೂ ಥಳಿಸಲಾಗಿದೆ ಎನ್ನಲಾಗಿದೆ.
ಘಟನೆ ನಡೆದ ನಾಲ್ಕೈದು ಗಂಟೆಗಳ ನಂತರ ಚೋಪ್ರಾ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನರಾಗಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧನಕ್ಕೊಳಗಾದ ವ್ಯಕ್ತಿ ತಾಜಿಮುಲ್ ಜಾಮೀನು ಕೂಡ ಪಡೆದಿದ್ದಾನೆ ಎಂದು ದಿ ವೈರ್ ಖಚಿತಪಡಿಸಿದೆ.
ತಾಜಿಮುಲ್ ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಅವರ ಬಲಗೈ ಬಂಟ ಎಂದು ತಿಳಿದು ಬಂದಿದೆ. ಈತ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ವರದಿಯಾಗಿದೆ. ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಗುಂಡಿನ ದಾಳಿಯಿಂದ ಹತ್ಯೆಗೀಡಾದ ಯುವ ಸಿಪಿಐ(ಎಂ) ಕಾರ್ಯಕರ್ತ ಮನ್ಸೂರ್ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಈತನಾಗಿದ್ದಾನೆ.
ಮಾಜಿ ಸಂಸದ ಮತ್ತು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಎಕ್ಸ್ ಪೋಸ್ಟ್ನಲ್ಲಿ ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಈಗಾಗಲೇ ಗ್ರಾಮದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ. ದಿ ವೈರ್ ಇದನ್ನು ದೃಢಪಡಿಸಿವೆ. ವಿಡಿಯೋ ಹಂಚಿಕೆಯಲ್ಲಿ ಪಾತ್ರವಹಿಸಿದ ಇನ್ನೊಬ್ಬ ವ್ಯಕ್ತಿಗೆ 50,000 ರೂ “ದಂಡ” ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ನೀಟ್-ಯುಜಿ ಮರು ಪರೀಕ್ಷೆ: ಪರಿಷ್ಕೃತ ಶ್ರೇಣಿಯ ಪಟ್ಟಿ ಪ್ರಕಟಿಸಿದ ಎನ್ಟಿಎ


