Homeಕರ್ನಾಟಕಮೇ 20ಕ್ಕೆ ದೇಶಾದ್ಯಂತ ಮುಷ್ಕರ: ಕೇಂದ್ರವು ಜಾರಿಗೆ ತರಲು ಹೊರಟಿರುವ 4 ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸುತ್ತಿರುವುದೇಕೆ?

ಮೇ 20ಕ್ಕೆ ದೇಶಾದ್ಯಂತ ಮುಷ್ಕರ: ಕೇಂದ್ರವು ಜಾರಿಗೆ ತರಲು ಹೊರಟಿರುವ 4 ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸುತ್ತಿರುವುದೇಕೆ?

- Advertisement -
- Advertisement -

ಬೆಂಗಳೂರು: ಕೇಂದ್ರ ಸರಕಾರವು ಕಾರ್ಮಿಕ ವಿರೋಧಿ ನಾಲ್ಕು ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದು, ಇವುಗಳ ಜಾರಿಯಿಂದ ಕಾರ್ಮಿಕರ ಬದುಕೇ ಛಿದ್ರಗೊಳ್ಳಲಿದ್ದು  ಇದನ್ನು ವಿರೋಧಿಸಿ ದೇಶಾದ್ಯಂತ ಮುಷ್ಕರ ನಡೆಯಲಿದೆ. ರಾಜ್ಯದಲ್ಲಿಯೂ ಆಯ್ದ 100 ಕೇಂದ್ರಗಳಲ್ಲಿ ರೈತರು ಮತ್ತು ಕಾರ್ಮಿಕರು ಜಂಟಿಯಾಗಿ ಮುಷ್ಕರ ನಡೆಸಲಿದ್ದಾರೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜೆಸಿಟಿಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.

ಕೇಂದ್ರವು ಜಾರಿಗೆ ತರಲೊರಟಿರುವ ಈ ಹೊಸ ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸುತ್ತಿರುವುದೇಕೆ ಎಂದು ಪತ್ರಿಕಾ ಪ್ರಕಟನೆ ಹೊರಡಿಸಿರುವ ಕಾರ್ಮಿಕ ಮತ್ತು ರೈತ ಸಂಘಟನೆಗಳ ಈ ಜಂಟಿ ವೇದಿಕೆಯು, ಕಾರ್ಪೋರೇಟ್‌ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಶ್ರಮ ವಿರೋಧಿ ಈ ಕಾಯ್ದೆಗಳನ್ನು ಕೇಂದ್ರವು ಜಾರಿಗೆ ತರಲು ಹೊರಟಿದೆ. ಈ ಕಾಯ್ದೆಗಳ ಜಾರಿ ವಿರೋಧಿಸಿ ಮೇ 20ರಂದು ಜೆಸಿಟಿಯು [ಜಾಯಿಂಟ್‌ ಕಮಿಟಿ ಆಫ್‌ ಟ್ರೇಡ್‌ ಯೂನಿಯನ್] ಮತ್ತು ಎಸ್‌ಕೆಎಂ [ಸಂಯುಕ್ತ ಕಿಸಾನ್‌ ಮೋರ್ಛಾ]‌ ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ 4 ಲೇಬರ್‌ ಕೋಡ್‌ ಗಳು ಜಾರಿಯಾದಲ್ಲಿ ಸಂಘಟಿತ ಕ್ಷೇತ್ರದ ಶೇ.70ರಷ್ಟು ಕಾರ್ಮಿಕರಿಗೂ ಭದ್ರತಾ ಕಾಯ್ದೆಗಳು ಅನ್ವಯವಾಗುವುದಿಲ್ಲ.  ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗಂತೂ “ಸಾಮಾಜಿಕ ಭದ್ರತೆ”ಯ ಹೆಸರಿನಲ್ಲಿ ಒಣಗಿದ ತುಟಿಗೆ ನೀರು ಒರೆಸುವುದು ಬಿಟ್ಟರೆ, ಯಾವುದೇ ಹಕ್ಕುಗಳು ಇರುವುದಿಲ್ಲ. ಒಂದು ದಿನದ ಕನಿಷ್ಟ ಕೂಲಿ ದರ 600 ರೂ. ಸಹ ಅಲ್ಲ. ಕೇವಲ 187 ರೂ ಮಾತ್ರ. ದಿನದ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸುವ ಸ್ವಾತಂತ್ರ್ಯ ಮಾಲೀಕರಿಗೆ ಅನಾಹುತಕಾರಿ ಕಾರ್ಖಾನೆಗಳಲ್ಲೂ ಮಹಿಳೆಯರನ್ನು ದುಡಿಸಬಹುದು. ಮಹಿಳಾ ಕಾರ್ಮಿಕರು ರಾತ್ರಿ ಪಾಳಿಯಲ್ಲೂ ದುಡಿಯಬೇಕು. ಕಾರ್ಮಿಕರಿಗೆ ಪೆನ್ಷನ್‌, ಪಿಎಫ್‌, ಇಎಸ್‌ಐ ಯಾವುದೂ ಕಡ್ಡಾಯವಲ್ಲ, ಎಲ್ಲವೂ ಮಾಲೀಕರ ಮರ್ಜಿಗೆ ಬಿಟ್ಟದ್ದು. ಕಂಪನಿಗಳು ಯಾವುದೇ ಅನುಮತಿ ಪಡೆಯದೆ ಉದ್ಯೋಗಿಗಳನ್ನು ತೆಗೆದುಹಾಕಬಹುದು ಅಥವಾ ಕಂಪನಿಯನ್ನೇ ಮುಚ್ಚಬಹುದು. ಇವೆಲ್ಲದರಿಂದಾಗಿ ದೇಶದ ಆರ್ಥಿಕತೆ ಅಸ್ತವ್ಯಸ್ತವಾಗಿ ಕಾರ್ಮಿಕರು ಬೀದಿಪಾಲಾಗಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಈ ಕಾಯ್ದೆಗಳು ಜಾರಿಯಾದಲ್ಲಿ ಕಾರ್ಮಿಕರು ಯೂನಿಯನ್‌ ಕಟ್ಟಿಕೊಳ್ಳುವುದು ಸುಲಭವಿಲ್ಲ. ಕಟ್ಟಿಕೊಂಡರೂ ಅದನ್ನು ಮಾನ್ಯ ಮಾಡುವುದು ಅಥವಾ ಮಾಡದೇ ಇರುವುದು ಮಾಲೀಕರಿಗೆ ಬಿಟ್ಟದ್ದು. ಮುಷ್ಕರ ಹೂಡಲು ಮೂರು ತಿಂಗಳ ಮೊದಲೇ ನೋಟೀಸ್‌ ಕೊಡಬೇಕು. ಸಂಧಾನ ಶುರುವಾದರೆ ಹೋರಾಟಕ್ಕೆ ಇಳಿಯುವಂತಿಲ್ಲ. ಒಟ್ಟಾರೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಲಾಗಲಿ, ತಮ್ಮ ಮೇಲಿನ ಮಾಲಕರ ದೌರ್ಜನ್ಯವನ್ನು ಪ್ರಶ್ನಿಸಿ, ಪೊಲೀಸ್, ಕೋರ್ಟ್ ಮೆಟ್ಟಿಲು ಹತ್ತುವುದಾಗಲಿ ಸಾಧ್ಯವಿಲ್ಲ. ಇದು ಈ ಕಾಯ್ದೆಗಳ ಜಾರಿಯಿಂದಾಗುವ ಭಯಾನಕತೆಯಾಗಿದೆ ಎಂದು  ಮೇ 20ರಂದು ಮುಷ್ಕರಕ್ಕೆ ಕರೆ ನೀಡಿರುವ ರೈತ ಮತ್ತು ಕಾರ್ಮಿಕ ಸಂಘಟನೆಗಳು ಹೇಳಿವೆ.

ಭಾರತದ ಕಾರ್ಮಿಕರೆಂದರೆ ಯಾವುದೇ ಭದ್ರತೆ ಇಲ್ಲದೆ, ಮಾಲೀಕರಿಗೆ ಯಾವುದೇ ಹೊಣೆಗಾರಿಕೆ ಇಲ್ಲದೆ, ಅಗ್ಗದ ಕೂಲಿ ದರದಲ್ಲಿ ಅತಿ ಹೆಚ್ಚು ಗಂಟೆ ದುಡಿಯುವ, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಕೆಲಸ ಮಾಡುವ ನವ ಗುಲಾಮರನ್ನಾಗಿ ಮಾಡುವುದು. ಮನಬಂದಂತೆ ಕಾರ್ಮಿಕರನ್ನು ದುಡಿಸಿಕೊಳ್ಳುವ, ಬೇಡವಾದರೆ ಬಿಸಾಕುವ ಸಂಪೂರ್ಣ ಸ್ವಾತಂತ್ರ್ಯ ಮಾಲೀಕರಿಗೆ ನೀಡುತ್ತವೆ. ಇಷ್ಟು ಮಾತ್ರವಲ್ಲದೆ ಕಾರ್ಖಾನೆಗಳ ಮಾಲಿಕರಿಗೆ ಅಗ್ಗದ ದರದಲ್ಲಿ ಭೂಮಿ, ಉಚಿತ ಕರೆಂಟು – ನೀರು ಒದಗಿಸಿ, ತೆರಿಗೆಯಲ್ಲಿ ಸಬ್ಸಿಡಿ ನೀಡಿ, ಬ್ಯಾಂಕ್‌ ಲೋನ್‌ ಮನ್ನಾ ಮಾಡಿ, ಹೊಸ ಕಂಪನಿಗಳಿಗೆ 20 ಲಕ್ಷ ಕೋಟಿಯವರೆಗೂ ಉತ್ತೇಜನ ನಿಧಿ ಕೊಟ್ಟು ಪ್ರೋತ್ಸಾಹಿಸುತ್ತದೆ. ಸರ್ಕಾರದ ಒಡೆತನದಲ್ಲಿದ್ದ ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸೆಲ್‌, ಗ್ಯಾಸ್‌, ಮಿಲಿಟರಿ ಉತ್ಪಾದನೆ, ವಿಮಾನ, ರೈಲ್ವೆ, ಸ್ಟೀಲ್‌ – ಉಕ್ಕು – ಕಲ್ಲಿದ್ದಲನ್ನು ತಯಾರಿಸುವ ಕೈಗಾರಿಕೆಗಳು, ಬ್ಯಾಂಕ್‌ – ಎಲ್‌ ಐ ಸಿ, ಎಲ್ಲವುಗಳನ್ನೂ ಖಾಸಗೀಕರಣ ಮಾಡಿ ಖಾಸಗೀ ಖದೀಮರಿಗೆ ಅರ್ಪಿಸುವುದು ಈ ಕಾಯ್ದೆ ಜಾರಿಯಿಂದಾಗುವ ದುಷ್ಪರಿಣಾಮಗಳಾಗಿವೆ. ಸರ್ವಂ ಕಾರ್ಪೋರೇಟ್‌ ಮಯಂ. ಕಾರ್ಮಿಕರ ಪಾಲಿಗೆ ಸರ್ವಂ ಸರ್ವನಾಶಂ. ಸಾರ್ವಜನಿಕರ ಮತ್ತು ದೇಶದ ಸಕಲ ಸಂಪತ್ತು ಅದಾನಿ – ಅಂಬಾನಿ ಸ್ವಾಹಂ ಸ್ವಾಹಂ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಹೀಗಾಗಿಯೇ,  ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಾದ ಜಿಸಿಟಿಯು ಮತ್ತು ರೈತ ಸಂಘಟನೆಗಳ ಐಕ್ಯ ವೇದಿಕೆಯಾದ ಸಂಯುಕ್ತ ಕಿಸಾನ್‌ ಮೋರ್ಛಾಗಳು ಜುಂಟಿಯಾಗಿ ಮೇ 20ರಂದು ದೇಶವ್ಯಾಪಿಯಾಗಿ ಸಾರ್ವತ್ರಿಕ ಮುಷ್ಕರ ನಡೆಸಲು ಕರೆ ನೀಡಿವೆ. ಈ ಮುಷ್ಕರವನ್ನು ನಾವು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕಿದೆ. ನಮ್ಮ ರಾಜ್ಯದ ಎಲ್ಲ ಜಿಲ್ಲೆಯ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ – ಯುವಜನ ಸಂಘಟನೆಗಳನ್ನೆಲ್ಲಾ ಜೊತೆಗೂಡಿಸಿಕೊಂಡು ಆಯ್ದ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಪ್ರಮಾಣದ ಪ್ರತಿಭಟನೆಗಳನ್ನು ಸಂಘಟಿಸುತ್ತೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ಹಕ್ಕೊತ್ತಾಯಗಳಿಗೆ ಸ್ಪಂದಿಸದೇ ಹೋದರೆ ರಸ್ತೆಗಳನ್ನು ಬಂದ್‌ ಮಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಜೈಲ್‌ ಭರೋ ನಡೆಸಿ ನಮ್ಮ ಪ್ರತಿರೋಧವನ್ನು ದಾಖಲಿಸುತ್ತೇವೆ. ಮೇ 20ರ ಹೋರಾಟ ರೈತ, ಕಾರ್ಮಿಕರು ಕೂಡಿ ಸರ್ಕಾರಗಳಿಗೆ ಕೊಡುತ್ತಿರುವ ಮೊದಲ ಎಚ್ಚರಿಕೆಯಾಗಿದೆ. ಸರ್ಕಾರಗಳು ಸ್ಪಂದಿಸದೇ ಹೋದಲ್ಲಿ ದೇಶದ ಆಗುಹೋಗುಗಗಳನ್ನೇ ಸ್ಥಬ್ದಗೊಳಿಸಬಲ್ಲ ಶಕ್ತಿ ನಮಗಿದೆ ಎಂಬ ಸಂದೇಶವನ್ನೂ ನಾವು ಕಳುಹಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.

ಕೇಂದ್ರ ಸರ್ಕಾರವು ಜಾರಿ ಮಾಡಲು ಬಯಸುತ್ತಿರುವ “4 ಲೇಬರ್‌ ಕೋಡ್‌” ಗಳನ್ನು ಈ ಕೂಡಲೇ ಹಿಂಪಡೆಯಬೇಕು. ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸುವ ನಿಯಮ”ವನ್ನು ಈ ಕೂಡಲೇ ಹಿಂಪಡೆಯಬೇಕು. ಕಾರ್ಮಿಕರಿಗೆ ಕನಿಷ್ಟ 30 ಸಾವಿರ ವೇತನ, ಉದ್ಯೋಗ ಭದ್ರತೆ, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ʼಸಾಮಾಜಿಕ ಭದ್ರತಾ ಮಂಡಳಿಗಳು”, ಯುವಜನರಿಗೆ ಉದ್ಯೋಗ ಖಾತ್ರಿ ಕಾಯ್ದೆಗಳಂತಹ ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ರೈತ ಮತ್ತು ಕಾರ್ಮಿಕ ಸಂಘಟನೆಗಳ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸಭೆ ಕರೆಯಬೇಕು ಎಂದು ಸಂಯುಕ್ತ ಹೋರಾಟ–ಕರ್ನಾಟಕ ಮತ್ತು  ಜೆಸಿಟಿಯು (ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ)ಗಳು ಒತ್ತಾಯಿಸಿವೆ.

ಜಮ್ಮು ಕಾಶ್ಮೀರದಲ್ಲಿ ಶಾಂತ ರಾತ್ರಿ, ಯಾವುದೇ ಘಟನೆಗಳು ವರದಿಯಾಗಿಲ್ಲ: ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -