‘ಎಲ್ಕೆಜಿ ಮಕ್ಕಳನ್ನು ಮೇಯರ್ ಮಾಡಲಾಗಿದೆ’ ಎಂದು ಬಿಜೆಪಿ ಕೌನ್ಸಿಲರ್ ನೀಡಿದ್ದ ಹೇಳಿಕೆಗೆ ಮತ್ತು ತನ್ನನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಜನರಿಗೆ, ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ತಕ್ಕುದಾದ ತಿರುಗೇಟು ನೀಡಿದ್ದಾರೆ. ಪ್ರಸ್ತುತ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವಾರು ಜನರು ‘ಆರ್ಯ’ ಅವರನ್ನು ಅಭಿನಂದಿಸಿದ್ದಾರೆ.
“ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದರೆ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ನನಗೆ ಗೊತ್ತು. ನನ್ನ ಪಕ್ವತೆಯನ್ನು ಅಳೆಯಲು ಬರಬೇಡಿ. ಅಂತಹ ಒಂದು ವ್ಯವಸ್ಥೆಯಲ್ಲೇ ನಾನು ಬೆಳೆದು ಬಂದಿದ್ದೇನೆ, ಅದರ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಅವರು ಖಾರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ದೇಶದ ಅತಿ ಕಿರಿಯ ಮೇಯರ್ ಆಗಿ ಕೇರಳ ಸಿಪಿಎಂನ ಆರ್ಯ ರಾಜೇಂದ್ರನ್ ಪ್ರಮಾಣ ವಚನ
ತನ್ನ 21ನೇ ವಯಸ್ಸಿನಲ್ಲಿ ತಿರುವನಂತಪುರಂ ಮೇಯರ್ ಆಗಿ ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ಕೀರ್ತಿಗೆ ಪಾತ್ರರಾಗಿದ್ದ ಆರ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ನಿರಂತರವಾಗಿ ಅಪಹಾಸ್ಯ ಮಾಡುತ್ತಲೆ ಬಂದಿದ್ದಾರೆ. ಇತ್ತೀಚೆಗೆ ಬಿಜೆಪಿ ಕೌನ್ಸಿಲರ್ ಕರಮನ ಅಜಿತ್ ಅವರು ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇದೆ ರೀತಿ ಬರೆದಿದ್ದರು.
ಅವರು ತನ್ನ ಫೇಸ್ಬುಕ್ನಲ್ಲಿ, “ಜನರ ತೆರಿಗೆ ಹಣವನ್ನು ಬಳಸಿಕೊಂಡು ಖರೀದಿಸುವ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಮೇಯರ್ ಕುರ್ಚಿಯಲ್ಲಿ ಕುಳಿತು ಆಟವಾಡುತ್ತಾ ‘ಎಕೆಜಿ ಕೇಂದ್ರದ ಎಲ್ಕೆಜಿ ಮಕ್ಕಳು’ ನಾಶಪಡಿಸಬಾರದು” ಎಂದು ಹೇಳಿದ್ದರು.
‘ಎಕೆಜಿ ಕೇಂದ್ರ’ ಎಂದರೆ ಮಾಕ್ರ್ಸ್ವಾದಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೇರಳದ ಪ್ರಧಾನ ಕಚೇರಿಯಾಗಿದೆ.
ಅಷ್ಟಕ್ಕೆ ನಿಲ್ಲಿಸದ ಕೌನ್ಸಿಲರ್, “ಕಾರ್ಪೊರೇಷನ್ ಮಕ್ಕಳ ಉದ್ಯಾನವನವಲ್ಲ. ಇದು ಜನರ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಸ್ಥಳವಾಗಿದೆ ಎಂದು ನಾನು ವಿನಮ್ರವಾಗಿ ನೆನಪಿಸುತ್ತೇನೆ” ಎಂದು ಹೇಳಿದ್ದರು.
ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಡಲು ನರ್ಸ್ ಆಗಿ ಬದಲಾದ ಮುಂಬೈ ಮೇಯರ್: ಭಾರೀ ಮೆಚ್ಚುಗೆ
ಇದಕ್ಕೆ ಕೌನ್ಸಿಲ್ ಸಭೆಯ ಸಂದರ್ಭದಲ್ಲಿ ಉತ್ತರಿಸಿದ ಮೇಯರ್ ಆರ್ಯ ರಾಜೇಂದ್ರನ್, “ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ಕಳೆದ ಆರು ತಿಂಗಳಿನಿಂದ ಅನೇಕ ಟೀಕೆಗಳು ಬಂದಿವೆ. ಈ ಸಭೆಯಲ್ಲಿ ಸಮರ್ಥನೀಯವಾದ ಯಾವ ವಿಷಯವನ್ನಾದರೂ ಹೇಳಬಹುದು. ಆದರೆ ನೀವೆಲ್ಲರೂ ನನ್ನ ವಯಸ್ಸಿನ ಬಗ್ಗೆ, ಪ್ರಭುದ್ದತೆಯ ಬಗ್ಗೆ ಅನೇಕ ಬಾರಿ ವೈಯಕ್ತಿಕವಾಗಿ ಟೀಕಿಸಿದ್ದೀರಿ. ನಾನು ಕೂಡಾ ಇಷ್ಟು ದಿನ ಅದಕ್ಕೆ ಉತ್ತರಿಸಿರಲಿಲ್ಲ, ಆದರೆ ಈಗ ಅದಕ್ಕೆ ಪ್ರತ್ಯುತ್ತರ ನೀಡಲೆ ಬೇಕಾದ ಕಾಲ ಬಂದಿದೆ
ಇಲ್ಲಿನ ಕೆಲವು ಸದಸ್ಯರು ಇಂತಹ ಟೀಕೆಗಳನ್ನು ಮಾಡಿದ್ದಾರೆ. ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ, ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದರೆ, ಅದಕ್ಕೆ ತಕ್ಕಂತೆ ಹೇಗೆ ಕೆಲಸ ಮಾಡಬೇಕೆಂದು ನನಗೆ ತಿಳಿದಿದೆ. ಅಂತಹ ವ್ಯವಸ್ಥೆಯ ಮೂಲಕ ನಾನು ಬೆಳೆದಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ” ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಚರ್ಚೆಯಗಳ ಬಗ್ಗೆ ಮೇಯರ್ ರಾಜೇಂದ್ರನ್ ಮಾತನಾಡುತ್ತಿರುವಾಗ, ಎದುರಾಳಿ ಪಕ್ಷದ ಸದಸ್ಯರು ಬೊಬ್ಬೆ ಹಾಕುತ್ತಲೆ ಇದ್ದರು. ಆದರೆ ಆರ್ಯ ಅವರು ತಮ್ಮ ಮಾತನ್ನು ನಿಲ್ಲಿಸದೆ ಮಾತನಾಡಿದ್ದಾರೆ. ಕೌನ್ಸಿಲರ್ ಅಜಿತ್ ಅವರ ಫೇಸ್ಬುಕ್ ಪೋಸ್ಟ್ಗೆ ಬಂದ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಕೂಡಾ ಉಲ್ಲೇಖಿಸಿದ್ದಾರೆ.
“ಯಾರು ಫೇಸ್ಬುಕ್ ಮತ್ತು ವಾಟ್ಸಪ್ನಲ್ಲಿ ಅಪಪ್ರಚಾರದ ಕಾಮೆಂಟ್ಗಳನ್ನು ಮಾಡುತ್ತಾರೆಯೊ ಆಗ ಈ ಮೇಯರ್ ಕೂಡಾ ತಮ್ಮ ಮನೆಯಲ್ಲಿರುವ ಸಹೋದರಿಯರು ಮತ್ತು ತಾಯಂದಿರಂತೆಯೆ ಎಂದು ನೆನಪಿರಲಿ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಾದ ಈ ಪಟ್ಟಣದ ಮೇಯರ್ ಫ್ರೆಂಚ್ ಬುಲ್ಡಾಗ್!
ಮೇಯರ್ ಆರ್ಯ ರಾಜೇಂದ್ರನ್ ತನ್ನ ಮಾತಿನ ಕೊನೆಯಲ್ಲಿ, “ಯಾರು ಮಹಿಳೆಯನ್ನು ಅವಮಾನಿಸುತ್ತಾರೋ ಅದು ತುಂಬಾ ಕೆಟ್ಟ ವಿಷಯ. ಅದು ಯಾವ ಪಕ್ಷವಾದರೂ ಸರಿ. ನೀವು ಯಾವುದನ್ನು ಕೊಡುತ್ತೀರೊ ಅದನ್ನೆ ಮರಳಿ ಪಡೆಯುತ್ತೀರಿ ಎಂಬುವುದನ್ನು ನೀವು ಮೊದಲು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಆರ್ಯ ರಾಜೇಂದ್ರನ್ ಅವರ ದಿಟ್ಟ ಪ್ರತ್ಯುತ್ತರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದ್ದು, ಪ್ರಸ್ತುತ ವೈರಲ್ ಆಗಿದೆ.
Trivandrum Mayor Arya Rajendran roasting BJP councillors who mocked and insulted her mentioning her age. Arya Rajendran is the youngest Mayor in India. She is from CPIM. @SAryaRajendran pic.twitter.com/FXbZdFbiPv
— The Saudade Guy (@thesaudadeguy) June 17, 2021
Ms. Arya Rajendran of Thiruvananthapuram (CPI(M) is the youngest Mayor in India. The BJP the main opposition in the Council has been running a personal vilification campaign against the young Mayor taunting her age and gender.Hear her response in the council the other day. pic.twitter.com/gxwHxcmPoi
— Thomas Isaac (@drthomasisaac) June 18, 2021
ಇದನ್ನೂ ಓದಿ: 86 ಮೇಯರ್/ಅಧ್ಯಕ್ಷ ಸ್ಥಾನಗಳಲ್ಲಿ 52 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟ ‘ಜಗನ್’ ಸರ್ಕಾರ!