ಪ್ರಧಾನಿ ನರೇಂದ್ರ ಮೋದಿ ವಿರುದ್ಧ 2019ರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ವಿರೋಧ ಪಕ್ಷಗಳು ಭಾರತೀಯ ಚುನಾವಣಾ ಆಯೋಗಕ್ಕೆ ಕನಿಷ್ಠ 27 ದೂರುಗಳನ್ನು ನೀಡಿದೆ. ಆದರೆ ಇದ್ಯಾವುದೇ ಪ್ರಕರಣಗಳಲ್ಲಿ ಪ್ರಧಾನಿಯ ವಿರುದ್ಧ ಕ್ರಮವನ್ನು ತೆಗೆದುಕೊಂಡಿಲ್ಲ ಎನ್ನುವುದು ಪ್ರತಿಪಕ್ಷಗಳ ಆರೋಪವಾಗಿದೆ.
ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ನೀಡಿದ ದೂರುಗಳಲ್ಲಿ ದ್ವೇಷ ಭಾಷಣದ ಆರೋಪಗಳು, ಮತಗಳನ್ನು ಪಡೆಯಲು ಸಶಸ್ತ್ರ ಪಡೆಗಳ ಬಳಕೆ, ಧರ್ಮದ ಹೆಸರಿನಲ್ಲಿ ಮತಯಾಚಣೆ ಮತ್ತು ಪ್ರಧಾನ ಮಂತ್ರಿಯ ಚುನಾವಣಾ ರ್ಯಾಲಿಗಳಿಗೆ ಭಾಷಣಗಳನ್ನು ತಯಾರಿಸಲು ಸರ್ಕಾರಿ ಸಚಿವಾಲಯಗಳ ಬಳಕೆ ಸೇರಿದಂತೆ ಇತರ ಆರೋಪಗಳ ಮೇಲೆ ಪ್ರಧಾನಿ ವಿರುದ್ಧ ಪ್ರತಿಪಕ್ಷಗಳು 2019ರಿಂದ 27 ದೂರುಗಳನ್ನು ದಾಖಲಿಸಿದ್ದವು.
ಆದರೆ ಮೊದಲ ಬಾರಿಗೆ, ಚುನಾವಣಾ ಆಯೋಗವು ಏಪ್ರಿಲ್ 25 ರಂದು ಮೋದಿ ರಾಜಸ್ಥಾನದಲ್ಲಿ ಮಾಡಿದ್ದ ದ್ವೇಷದ ಭಾಷಣಕ್ಕೆ ಸಂಬಂಧಿಸಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನೊಟೀಸ್ನ್ನು ನೀಡಿದೆ. ನೋಟಿಸ್ನಲ್ಲಿ ಕಾಂಗ್ರೆಸ್, ಸಿಪಿಐ(ಎಂ), ಮತ್ತು ಸಿಪಿಐ(ಎಂ) ನೀಡಿದ ದೂರಿನ ಪ್ರತಿಯನ್ನು ಉಲ್ಲೇಖಿಸಿದೆ.
ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್ನ ಗ್ಯಾರಂಟಿ ಎಂದು ಹೇಳಿದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಈ ‘ನಗರ ನಕ್ಸಲ್’ ಮನಸ್ಥಿತಿಯಿಂದ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ‘ಮಂಗಲಸೂತ್ರ’ವನ್ನು ಸಹ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಹುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವರು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕುತ್ತಾರೆ, ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಅವರು ಅದನ್ನು ಯಾರಿಗೆ ಹಂಚುತ್ತಾರೆ? ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿತ್ತು. ಇದನ್ನು ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ? ಇದು ನಿಮಗೆ ಸ್ವೀಕಾರಾರ್ಹವೇ? ನೀವು ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸರ್ಕಾರಗಳಿಗೆ ಇದೆಯೇ? ತಾಯಂದಿರ ಮಂಗಳಸೂತ್ರದ ಮೌಲ್ಯವು ಚಿನ್ನ ಅಥವಾ ಅದರ ಬೆಲೆಯಲ್ಲಿಲ್ಲ, ಆದರೆ ಜೀವನದಲ್ಲಿ ಅವಳ ಕನಸುಗಳಿಗೆ ಸಂಬಂಧಿಸಿದೆ ಮತ್ತು ನೀವು ಅದನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು.
ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಅಥವಾ ಧರ್ಮಗಳು, ವಿಭಿನ್ನ ಭಾಷಿಗರ ನಡುವೆ ಉದ್ವಿಗ್ನತೆಗೆ ಪ್ರಚೋದಿಸುವ ಚಟುವಟಿಕೆಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ತೊಡಗಿಸಿಕೊಳ್ಳಬಾರದು ಎಂದು ಚುನಾವಣಾ ಆಯೋಗ ಹೇಳುತ್ತದೆ. ಮೋದಿಯ ಭಾಷಣಕ್ಕೆ ಸಂಬಂಧಿಸಿ ತನ್ನ ನೋಟಿಸ್ಗೆ ಏಪ್ರಿಲ್ 29ರೊಳಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗವು ಬಿಜೆಪಿಗೆ ಸೂಚಿಸಿದೆ.
2019ರಿಂದ ಪ್ರತಿಪಕ್ಷಗಳು ಪ್ರಧಾನಿ ವಿರುದ್ಧ ದಾಖಲಿಸಿದ ಕನಿಷ್ಠ 27 ದೂರುಗಳು ಈ ಕೆಳಗಿನ ಆರೋಪಕ್ಕೆ ಸಂಬಂಧಿಸಿದೆ.
ಇವುಗಳಲ್ಲಿ 12 ದೂರುಗಳನ್ನು ಕೋಮು ಭಾಷಣದ ಆರೋಪಕ್ಕೆ ಸಂಬಂಧಿಸಿ ನೀಡಲಾಗಿದೆ.
ಮತ ಕೇಳಲು ಸಶಸ್ತ್ರ ಪಡೆಗಳನ್ನು ಬಳಸಿದ್ದಕ್ಕೆ 8 ದೂರುಗಳನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ.
ರಾಜಕೀಯ ಜಾಹೀರಾತುಗಳಲ್ಲಿ ಸರ್ಕಾರದ ಯೋಜನೆಗಳನ್ನು ಬಳಸುವುದಕ್ಕಾಗಿ ದೂರನ್ನು ನೀಡಲಾಗಿದೆ.
ಧರ್ಮದ ಆಧಾರದ ಮೇಲೆ ಮತ ಕೇಳಿದ ಆರೋಪದಲ್ಲಿ ಒಂದು ಪ್ರಕರಣ ದಾಖಲಾಗಿದೆ
ಚುನಾವಣಾ ಭಾಷಣಗಳನ್ನು ಸಿದ್ಧಪಡಿಸಲು ಸರ್ಕಾರಿ ಸಚಿವಾಲಯಗಳನ್ನು ಬಳಕೆ ಆರೋಪದಲ್ಲಿ ದೂರನ್ನು ದಾಖಲಿಸಲಾಗಿದೆ.
ಪ್ರಚಾರದ ವೇಳೆ ಪ್ರಧಾನಿಯವರ ಹೆಲಿಕಾಪ್ಟರ್ನಲ್ಲಿ ಅನುಮಾನಾಸ್ಪದ ಕಪ್ಪು ಪೆಟ್ಟಿಗೆ ಇತ್ತೆಂದು ಎರಡು ದೂರುಗಳನ್ನು ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ನೀಡಲಾಗಿದೆ.
ಪ್ರಚಾರಗಳಲ್ಲಿ ಅಪ್ರಾಪ್ತರನ್ನು ಬಳಸುವುದಕ್ಕಾಗಿ ಒಂದು ದೂರು ದಾಖಲಾಗಿದೆ. ಆದರೆ ವಿರೋಧ ಪಕ್ಷಗಳ ಪ್ರಕಾರ, ಈ ಯಾವುದೇ ದೂರನ್ನು ಗಂಭೀರವಾಗಿ ಪರಿಗಣಿಸಿ ಪ್ರಧಾನಿ ವಿರುದ್ಧ ಚುನಾವಣಾ ಆಯೋಗ ಕ್ರಮವನ್ನು ಕೈಗೊಂಡಿಲ್ಲ. ಆದರೆ ಈ ಬಾರಿ ಮಾತ್ರ ರಾಜಸ್ಥಾನದಲ್ಲಿ ಮಾಡಿದ ಮೋದಿಯ ದ್ವೇಷ ಭಾಷಣಕ್ಕೆ ಸಂಬಂಧಿಸಿ ನೊಟೀಸ್ ನೀಡಿದೆ. ಅದು ಕೂಡ ಮೋದಿಗೆ ನೀಡದೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾಗೆ ನೊಟೀಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಚುನಾವಣಾ ಆಯೋಗ ಮೋದಿ ವಿಚಾರದಲ್ಲಿ ಜಾಗರೂಕರಾಗಿದೆ ಎಂದು ಟೀಕಿಸಿತ್ತು.
ಇದನ್ನು ಓದಿ: ತ್ರಿಪುರದಲ್ಲಿ ಬುಡಕಟ್ಟು ಜನರಿಂದ ಮತದಾನ ಬಹಿಷ್ಕಾರ


