ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲಿತ ಸಂಘಟನೆಗಳಾದ ಬಜರಂಗ ದಳ ಮತ್ತು ವಿಎಚ್ಪಿ ವಿರುದ್ಧದ ವಾಗ್ದಾಳಿಯನ್ನು ಮತ್ತೆ ಮುಂದುವರೆಸಿದ್ದು, “ಜನರನ್ನು ಒಡೆಯುವುದಕ್ಕೆ ಮಾತ್ರ ಬಜರಂಗದಳ ಮತ್ತು ವಿಹೆಚ್ಪಿಯವರು ಬೀದಿಗೆ ಬರುತ್ತಾರೆ. ಹಾಗಾಗಿ ಅವರನ್ನು ದೇಶದ್ರೋಹಿಗಳು ಎಂದು ಹೇಳದೆ, ಮತ್ತೇನು ಹೇಳಲು ಸಾಧ್ಯ” ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ, ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, “ಡೀಸೆಲ್-ಪೆಟ್ರೋಲ್ ಬೆಲೆ ಪ್ರತಿನಿತ್ಯ ಷೇರು ಬೆಲೆಯಂತೆ ಏರುತ್ತಲೇ ಇದೆ. ದೇಶವನ್ನೇ ಬಂಡವಾಳಶಾಹಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಭಜರಂಗದಳ ಮತ್ತು ವಿಹೆಚ್ಪಿಯವರು ಕೇಸರಿ ಟವೆಲ್ ಹಾಕಿಕೊಂಡು ರಸ್ತೆಗಿಳಿದು ಜನರ ಪರ ಹೋರಾಟ ನಡೆಸಿದ್ದನ್ನು ಒಂದೇ ಒಂದು ದಿನವೂ ನಾನು ಕಂಡಿಲ್ಲ. ಜನರ ಪರ ದನಿ ಎತ್ತುವುದಿಲ್ಲ, ಜನರನ್ನು ಒಡೆಯುವುದಕ್ಕೆ ಮಾತ್ರ ಬೀದಿಗೆ ಬರುತ್ತಾರೆ. ಹಾಗಾಗಿ ಅವರನ್ನು ದೇಶದ್ರೋಹಿಗಳು ಎಂದು ಹೇಳದೆ, ಮತ್ತೇನು ಹೇಳಲು ಸಾಧ್ಯ” ಎಂದು ಹೇಳಿದ್ದಾರೆ.
“ಬೆಲೆ ಏರಿಕೆಯಿಂದ ಜನ ನರಳುತ್ತಿದ್ದಾರೆ. ನೀವು ಬೆಲೆ ಏರಿಕೆ ವಿರುದ್ಧ ಹೋರಾಡಿ. ನಿಮಗೆ ಬೆಂಬಲ ನೀಡುತ್ತೇನೆ. ಜನಪರ ಹೋರಾಟ ಮಾಡುವುದಿಲ್ಲ ಎಂದರೆ ನೀವೇ ನಿಜವಾದ ದೇಶದ್ರೋಹಿಗಳು ಅಲ್ಲವೆ?” ಎಂದು ಕುಮಾರಸ್ವಾಮಿ ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಬಜರಂಗದಳ, VHPಯವರು ಸಮಾಜಘಾತುಕರು: ಎಚ್.ಡಿ ಕುಮಾರಸ್ವಾಮಿ
“ಕರಾವಳಿಯ ಒಂದು ಶಾಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ ಇಂದು ಹಲಾಲ್ ಮಾಂಸ, ಮುಸ್ಲಿಮರ ವಿರುದ್ಧ ಆರ್ಥಿಕ ಜಿಹಾದ್, ಆಜಾನ್ ಬ್ಯಾನ್ವರೆಗೆ ಬಂದು ನಿಂತಿದೆ. ನಾಡಿನ ಕೋಮು ಸಾಮರಸ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ಮತ ಬ್ಯಾಂಕ್ಗಾಗಿ ಉರಿವ ಮನೆಯ ಗಳ ಹಿರಿಯಬೇಡಿ. ನಿಮ್ಮ ಚುನಾವಣಾ ರಾಜಕಾರಣಕ್ಕೆ ಸಮಾಜದಲ್ಲಿ ಹಿಂದೂ-ಮುಸ್ಲಿಂ ದ್ವೇಷವನ್ನು ಬಿತ್ತಿ ಸಾಮರಸ್ಯ ಕೆಡಿಸಬೇಡಿ” ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧವು ಕಿಡಿಕಾರಿರುವ ಕುಮಾರಸ್ವಾಮಿ, “ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಹಿಜಾಬ್ ವಿವಾದವನ್ನು ಒಂದೇ ದಿನದಲ್ಲಿ ಮುಗಿಸಬಹುದಿತ್ತು. ಹಲಾಲ್ ವಿಚಾರ ವಿವಾದವಾಗದಂತೆ ತಡೆಯಬಹುದಿತ್ತು. ಆದರೆ, ಬಿಜೆಪಿ ನಾಯಕರು ಕೋಮು ದ್ವೇಷ ಬಿತ್ತಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಸ್ವತಃ ಹಿಂದೆ ನಿಂತು ಭಜರಂಗದಳ ಮತ್ತು ವಿಹೆಚ್ಪಿ ಸಂಘಟನೆಗಳ ಮೂಲಕ ಸಮಾಜವನ್ನೇ ಒಡೆಯುವ ಹೇಯ ರಾಜಕಾರಣ ಮಾಡುತ್ತಿದೆ. ಯಾವ ಸರ್ಕಾರವೂ ತನ್ನ ಸ್ವಯಂ ಲಾಭಕ್ಕಾಗಿ ಈ ಹಂತಕ್ಕೆ ಇಳಿಬಾರದಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಶಾಲೆಗಳಲ್ಲಿ ಮಕ್ಕಳ ಬಾಯಲ್ಲಿ ನಾಡಗೀತೆ ಹಾಡಿಸಿ ಶಾಲೆಯ ಹೊರಗೆ ಕೋಮು ಪ್ರಚೋದನೆ ಮಾಡುವುದು ಎಷ್ಟು ಸರಿ? ದಯವಿಟ್ಟು ನಾಡಿನಲ್ಲಿ ಕುವೆಂಪು ಆಶಯವನ್ನು ಕಾಪಾಡಿ ಇಲ್ಲವೇ ನಾಡಗೀತೆಯನ್ನೇ ತೆಗೆದುಬಿಡಿ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
“ಪೊಲೀಸರು ನಟ ಚೇತನ್ ಟ್ವೀಟ್ ಮಾಡಿದರು ಎಂಬ ಕಾರಣಕ್ಕೆ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಆದರೆ, ಮಟನ್ ಸ್ಟಾಲ್ಗಳಿಗೆ ಹೋಗಿ ಮುಸ್ಲಿಂ ಬಾಂಧವರ ಮೇಲೆ ಹಲ್ಲೆ ಮಾಡುವ, ಮುಸ್ಲಿಮರ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಸಮಾಜ ವಿರೋಧಿಗಳನ್ನು ಏಕೆ ಬಂಧಿಸುವುದಿಲ್ಲ? ರಾಜ್ಯ ಪೊಲೀಸರಿಗೆ ತಾಕತ್ ಇದ್ದರೆ ಇಂಥವರನ್ನು ಬಂಧಿಸಲಿ” ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿಲ್ಲವೆಂದ ಯುಪಿ ಸರ್ಕಾರ
ಹಲಾಲ್ ಕಟ್ ವಿರುದ್ಧ ಆರಂಭವಾಗಿರುವ ಅಭಿಯಾನದ ವಿರುದ್ಧವೂ ಕಿಡಿಕಾರಿರುವ ಕುಮಾರಸ್ವಾಮಿ, “ಹಲಾಲ್ ಕಟ್ಟೋ-ಜಟ್ಕಾ ಕಟ್ಟೋ? ಜನ ಏನ್ ತಿಂದ್ರೆ ನಿಮಗೇನು? ಮೊನ್ನೆ ಮೊನ್ನೆ ಯಾರೋ ಜಟ್ಕಾ ಕಟ್ ಮಾಡ್ತೀನಿ ಅಂತ ಕುರಿ ಹಿಡಿದವನ ತಲೆಗೆ ಮಚ್ಚು ಬೀಸಿದ್ದರು. ಈಗ ಜಟ್ಕಾ ಕಟ್ ಎಂದು ಮಾತನಾಡುತ್ತಿರುವವರ ತಲೆ ಹುಷಾರು. ಇಷ್ಟಕ್ಕೂ ಜನ ಏನ್ ತಿಂದರೆ ನಿಮಗೇನು?” ಎಂದು ಹೇಳಿದ್ದಾರೆ.
“ಹಳ್ಳಿ-ನಗರಗಳಲ್ಲಿ ಈಗಲೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಈ ಹಿಂದುತ್ವವಾದಿಗಳಿಗೆ ಸಮಸ್ಯೆ ಎದುರಾದಾಗ ಮಾತ್ರ ನಾವು ಹಿಂದುಗಳು ಎಂಬುದು ನೆನಪಾಗುತ್ತಾ? ಶ್ರೀಕೃಷ್ಣ ಮಠದಲ್ಲಿ ಕನಕದಾಸರನ್ನು ಇವರು ಹೇಗೆ ನಡೆಸಿಕೊಂಡರು ಎಂಬುದನ್ನು ಇತಿಹಾಸ ಇನ್ನೂ ಮರೆತಿಲ್ಲ. ಸಮಸ್ಯೆ ಎದುರಾದಾಗ ’ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎನ್ನುವುದು. ಕೆಲಸ ಮುಗಿದ ಮೇಲೆ ದಲಿತನೆಂದು ಜರಿಯುವುದು ಯಾವ ಸೀಮೆಯ ರಾಜಕಾರಣ” ಎಂದು ಅವರು ಬಿಜೆಪಿ ಬೆಂಬಲಿತ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ಕಾಂಗ್ರೆಸ್ ನಾಯಕರು ಮಾತೆತ್ತಿದರೆ ’ಜೆಡಿಎಸ್ ಬಿಜೆಪಿ ಪಕ್ಷದ ಬಿ ಟೀಮ್’ ಎಂದು ಹೇಳುತ್ತಾರೆ. ಆದರೆ, ಬಿಜೆಪಿಯವರು ಸಮಾಜದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ದ್ವೇಷ ಬಿತ್ತುತ್ತಿದ್ದಾಗ ಕಾಂಗ್ರೆಸ್ಸಿನವರೇಕೆ ಮೌನವಾಗಿದ್ದರು ಎಂಬುದು ಜಗತ್ತಿಗೆ ಗೊತ್ತಿದೆ. ಹಿಂದೂಗಳ ಮತಗಳು ಎಲ್ಲಿ ಕೈಬಿಟ್ಟು ಹೋಗುತ್ತವೋ? ಎಂಬ ಭಯದಲ್ಲಿ ಕಾಂಗ್ರೆಸ್ ಮೌನಕ್ಕೆ ಶರಣಾಗಿತ್ತು” ಎಂದು ಹೇಳಿದ್ದಾರೆ.
“ಸ್ವತಃ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿ ’ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಾತನಾಡಬೇಕಿದೆ’ ಎಂದು ಹೇಳುವವರೆಗೆ ಇವರುಗಳು ಬಾಯಿಗೆ ಬೀಗ ಜಡಿದು ಕೂತಿದ್ದರು. ಈಗ ಈ ಬಗ್ಗೆ ಸರಣಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಜೆಡಿಎಸ್ ಈ ರೀತಿ ಎಂದೂ ಮತಕ್ಕಾಗಿ ರಾಜಕಾರಣ ಮಾಡಿಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ಮೈಸೂರು: ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯ ಹಲಾಲ್ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹದೇವ


